ಭಕ್ತರ ಧನ್ಯತೆ 
 ೧೧೨
(ಕೀರ್ತ. 111) 
 ೧ ಯೆಹೋವನಿಗೆ ಸ್ತೋತ್ರ! 
ಯಾರು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ, 
ಆತನ ಆಜ್ಞೆಗಳಲ್ಲಿ ಅತ್ಯಾನಂದಪಡುವನೋ ಅವನೇ ಧನ್ಯನು. 
 ೨ ಅವನ ಸಂತಾನವು ಲೋಕದಲ್ಲಿ ಬಲಿಷ್ಠವಾಗುವುದು; 
ನೀತಿವಂತನ ವಂಶವು ಶುಭಹೊಂದುವುದು. 
 ೩ ಅವನ ಮನೆಯಲ್ಲಿ ಸಿರಿಸಂಪತ್ತುಗಳು ಇರುವವು; 
ಅವನ ನೀತಿಯು ಸದಾಕಾಲವೂ ಫಲಿಸುತ್ತಿರುವುದು. 
 ೪ ಯಥಾರ್ಥರಿಗೆ ಕತ್ತಲೆಯಲ್ಲಿಯೂ ಜ್ಯೋತಿ ಮೂಡುವುದು; 
ದಯೆಯೂ, ಕನಿಕರವೂ, ನೀತಿಯುಳ್ಳ ದೇವರೇ ಆ ಜ್ಯೋತಿ. 
 ೫ ದಯಾಳುವಾಗಿ ಧನಸಹಾಯ ಮಾಡುವವನೂ, 
ತನ್ನ ಕಾರ್ಯಗಳನ್ನು ನೀತಿಯಿಂದ ನಡೆಸುವವನೂ ಭಾಗ್ಯವಂತನು. 
 ೬ ಅವನು ಎಂದಿಗೂ ಕದಲುವುದಿಲ್ಲ; 
ನೀತಿವಂತನನ್ನು ಯಾವಾಗಲೂ ಸ್ಮರಿಸುವರು. 
 ೭ ಅವನಿಗೆ ಕೆಟ್ಟ ಸುದ್ದಿಯ ಭಯವಿರುವುದಿಲ್ಲ; 
ಯೆಹೋವನಲ್ಲಿ ಭರವಸವಿಟ್ಟಿರುವುದರಿಂದ, 
ಅವನ ಮನಸ್ಸು ಸ್ಥಿರವಾಗಿರುವುದು. 
 ೮ ದುಷ್ಟರಿಗಾಗುವ ಶಿಕ್ಷೆಯನ್ನು ಕಣ್ಣಾರೆ ಕಾಣುವೆನೆಂಬ ಭರವಸೆ ಇರುವುದರಿಂದ 
ಅವನ ಮನಸ್ಸು ದೃಢವಾಗಿದೆ, ಹೆದರುವುದಿಲ್ಲ. 
 ೯ ಬಡವರಿಗೆ ಉದಾರವಾಗಿ ಕೊಡುತ್ತಾನೆ; 
ಅವನ ನೀತಿಯ ಫಲವು ಸದಾಕಾಲವೂ ಇರುವುದು. 
ಮಹಿಮೆಯೊಡನೆ ಅವನ ಕೊಂಬು ಎತ್ತಲ್ಪಡುವುದು. 
 ೧೦ ದುಷ್ಟನು ನೋಡಿ ವ್ಯಥೆಪಡುವನು; 
ಅವನು ಹಲ್ಲುಕಡಿಯುತ್ತಾ ನಾಶವಾಗುವನು. 
ದುಷ್ಟರ ನಿರೀಕ್ಷೆಯು ಭಂಗವಾಗುವುದು.