ಯೆಹೋವನು ತನ್ನ ಭಕ್ತರನ್ನು ಶತ್ರುಗಳಿಂದ ಬಿಡಿಸುವನೆಂಬ ನಿರೀಕ್ಷೆ 
 ೧೨೯
ಯಾತ್ರಾಗೀತೆ. 
(ಕೀರ್ತ. 124) 
 ೧ “ನಮ್ಮ ಯೌವನ ಕಾಲದಿಂದ ಶತ್ರುಗಳು ನಮ್ಮನ್ನು ಹಲವು ಸಾರಿ ಬಾಧಿಸಿದ್ದಾರೆ” 
ಎಂದು ಇಸ್ರಾಯೇಲರು ಹೇಳಲಿ. 
 ೨ “ನಾವು ಯೌವನ ಕಾಲದಿಂದ ಎಷ್ಟೋ ಸಾರಿ ಬಾಧೆ ಹೊಂದಿದರೂ, 
ಅವರು ನಮ್ಮನ್ನು ಜಯಿಸಲಿಲ್ಲ. 
 ೩ ಉಳುವವರು ನಮ್ಮ ಬೆನ್ನಿನ ಮೇಲೆ ಉಳುತ್ತಾ, 
ಉದ್ದವಾದ ಗೆರೆಗಳನ್ನು ಹಾಕಿದರು.” 
 ೪ ಆದರೆ ನೀತಿಸ್ವರೂಪನಾದ ಯೆಹೋವನು, 
ದುಷ್ಟರು ಹಾಕಿದ ಬಂಧನಗಳನ್ನು ಛೇದಿಸಿಬಿಟ್ಟನು. 
 ೫ ಚೀಯೋನನ್ನು ದ್ವೇಷಿಸುವವರೆಲ್ಲರೂ ಅವಮಾನದಿಂದ ಹಿಂದಿರುಗಲಿ. 
 ೬ ಅವರು ಮಾಳಿಗೆಯ ಮೇಲಣ ಹುಲ್ಲಿನಂತಾಗಲಿ; 
ಅದು ಹೂವು ಬಿಡುವುದಕ್ಕೆ ಮೊದಲೇ ಒಣಗಿಹೋಗುತ್ತದೆ; 
 ೭ ಅದನ್ನು ಕೊಯ್ಯುವವನ ಹಿಡಿಯೂ, 
ಸಿವುಡು ಕಟ್ಟುವವನ ಉಡಿಲೂ ತುಂಬುವುದಿಲ್ಲ. 
 ೮ ಹಾದುಹೋಗುವವರು, “ಯೆಹೋವನು ನಿಮ್ಮನ್ನು ಆಶೀರ್ವದಿಸಲಿ ಎಂದು, 
ಯೆಹೋವನ ನಾಮದಲ್ಲಿ ನಿಮ್ಮನ್ನು ಆಶೀರ್ವದಿಸುತ್ತೇವೆ” ಎಂದೂ ಹೇಳುವುದಿಲ್ಲ.