ದೇವರು ಸದಾಚಾರವನ್ನೇ ಮೆಚ್ಚುವನು 
 ೫೦
ಆಸಾಫನ ಕೀರ್ತನೆ. 
 ೧ ಬಲಿಷ್ಠ ದೇವರಾದ ಯೆಹೋವನು 
ಪೂರ್ವದಿಂದ ಪಶ್ಚಿಮ ದಿಕ್ಕಿನವರೆಗೂ ಇರುವ ಭೂನಿವಾಸಿಗಳೆಲ್ಲರನ್ನೂ, 
ತನ್ನ ಸನ್ನಿಧಿಯಲ್ಲಿ ಬರಬೇಕೆಂದು ಕರೆಯುತ್ತಾನೆ. 
 ೨ ಅತ್ಯಂತ ರಮಣೀಯವಾದ ಚೀಯೋನಿನಲ್ಲಿರುವ, 
ದೇವರು ಪ್ರಕಾಶಿಸುತ್ತಾನೆ. 
 ೩ ನಮ್ಮ ದೇವರು ಪ್ರತ್ಯಕ್ಷನಾಗುವನು, 
ಎಷ್ಟು ಮಾತ್ರವೂ ಸುಮ್ಮನಿರುವುದಿಲ್ಲ; 
ಆತನ ಮುಂಭಾಗದಲ್ಲಿ ಬೆಂಕಿ ಪ್ರಜ್ವಲಿಸುತ್ತದೆ; 
ಆತನ ಸುತ್ತಲು ಬಿರುಗಾಳಿ ಬೀಸುತ್ತದೆ. 
 ೪ ಆತನು ತನ್ನ ಪ್ರಜೆಗಳ ನ್ಯಾಯವಿಚಾರಣೆಯಲ್ಲಿ ಭೂಮ್ಯಾಕಾಶಗಳನ್ನು 
ಸಾಕ್ಷಿಗಳನ್ನಾಗಿ ನೇಮಿಸುತ್ತಾನೆ. 
 ೫ “ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆಯನ್ನು ಮಾಡಿಕೊಂಡ ನನ್ನ ಭಕ್ತರನ್ನು 
ನನ್ನ ಬಳಿಗೆ ಕರೆದುಕೊಂಡು ಬನ್ನಿರಿ” ಎಂದು ಆಜ್ಞಾಪಿಸುತ್ತಾನೆ. 
 ೬ ದೇವರು ತಾನೇ ನ್ಯಾಯಾಧಿಪತಿ; 
ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುತ್ತದೆ. 
ಸೆಲಾ 
  ೭ ಆತನು ಆಜ್ಞಾಪಿಸುವುದು ಏನೆಂದರೆ, “ಪ್ರಜೆಗಳಿರಾ, ಇಸ್ರಾಯೇಲ್ಯರೇ, 
ದೇವರಾದ ನಾನೇ ನಿಮ್ಮ ದೇವರು; 
ನಿಮಗೆ ಖಂಡಿತವಾಗಿ ಹೇಳುತ್ತೇನೆ” ಕೇಳಿರಿ. 
 ೮ ನಾನು ನಿಮ್ಮ ಯಜ್ಞದ ವಿಷಯದಲ್ಲಿ ತಪ್ಪೆಣಿಸುವುದಿಲ್ಲ; 
ಸರ್ವಾಂಗಹೋಮಗಳನ್ನು ನೀವು ನಿತ್ಯವೂ ನನಗೆ ಸಮರ್ಪಿಸುತ್ತೀರಲ್ಲಾ. 
 ೯ ಆದರೂ ನಿಮ್ಮ ಮನೆಗಳಿಂದ ನನಗೆ ಹೋರಿ ಬೇಕಾಗಿಲ್ಲ; 
ನಿಮ್ಮ ದೊಡ್ಡಿಗಳಿಂದ ಹೋತ ಬೇಕಿಲ್ಲ. 
 ೧೦ ಕಾಡಿನಲ್ಲಿರುವ ಸರ್ವಮೃಗಗಳೂ, 
ಗುಡ್ಡಗಳಲ್ಲಿರುವ ಸಾವಿರಾರು ಪಶುಗಳೂ ನನ್ನವೇ. 
 ೧೧ ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆ; 
ಅಡವಿಯ ಜೀವಜಂತುಗಳೆಲ್ಲಾ ನನಗೆ ಗೊತ್ತುಂಟು. 
 ೧೨ ನನಗೆ ಹಸಿವೆಯಿದ್ದರೆ ನಿಮಗೆ ತಿಳಿಸುವುದಿಲ್ಲ; 
ಏಕೆಂದರೆ ಲೋಕವೂ ಅದರಲ್ಲಿರುವುದೆಲ್ಲವೂ ನನ್ನದಲ್ಲವೇ. 
 ೧೩ ನಾನು ಹೋರಿಗಳ ಮಾಂಸವನ್ನು ತಿನ್ನುವುದೂ, 
ಹೋತಗಳ ರಕ್ತವನ್ನು ಕುಡಿಯುವುದೂ ಉಂಟೇ? 
 ೧೪ ಸ್ತುತಿಯಜ್ಞವನ್ನೇ ದೇವರಿಗೆ ಸಮರ್ಪಿಸಿರಿ; 
ವಾಗ್ದಾನ ಮಾಡಿದ ಹರಕೆಗಳನ್ನು ಪರಾತ್ಪರನಿಗೆ ಸಲ್ಲಿಸಿರಿ. 
 ೧೫ ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ, ಬಿಡಿಸುವೆನು; 
ಆಗ ನನ್ನನ್ನು ಕೊಂಡಾಡುವಿರಿ. 
 ೧೬ ದುಷ್ಟರಿಗಾದರೋ ದೇವರು ಹೇಳುವುದು ಏನೆಂದರೆ, 
“ನನ್ನ ವಿಧಿಗಳನ್ನು ಹೇಳುವುದಕ್ಕೆ ನಿಮಗೇನು ಬಾಧ್ಯತೆ ಉಂಟು? 
ನನ್ನ ಒಡಂಬಡಿಕೆಯನ್ನು ನಿಮ್ಮ ಬಾಯಲ್ಲಿ ಉಚ್ಚರಿಸುವುದೇಕೆ? 
 ೧೭ ನೀವೋ ನನ್ನ ಸುಶಿಕ್ಷಣವನ್ನು ಹಗೆಮಾಡುತ್ತೀರಲ್ಲಾ; 
ನನ್ನ ಆಜ್ಞೆಯನ್ನು ಉಲ್ಲಂಘಿಸುತ್ತೀರಿ. 
 ೧೮ ನೀವು ಕಳ್ಳರೊಡನೆ ಸೇರಿ ಅವರಿಗೆ ಸಮ್ಮತಿ ನೀಡುತ್ತೀರಿ; 
ಜಾರರ ಒಡನಾಟದಲ್ಲಿ ನೀವು ಸಂತೋಷದಿಂದ ಇರುತ್ತೀರಿ. 
 ೧೯ ನಿಮ್ಮ ಬಾಯಿಯನ್ನು ಕೇಡಿಗೆ ಒಪ್ಪಿಸುತ್ತೀರಿ; 
ನಾಲಿಗೆಯು ಮೋಸವನ್ನು ನೇಯುತ್ತದೆ. 
 ೨೦ ನೀವು ಕುಳಿತುಕೊಂಡು ನಿಮ್ಮ ಸಹೋದರರ ವಿರುದ್ಧವಾಗಿ ಮಾತನಾಡುತ್ತೀರಿ; 
ನಿಮ್ಮ ಒಡಹುಟ್ಟಿದವರನ್ನು ದೂರುತ್ತೀರಿ. 
 ೨೧ ನೀವು ಹೀಗೆ ಮಾಡಿದರೂ ನಾನು ಮೌನವಾಗಿದ್ದೆನು. 
ಆದುದರಿಂದ, ‘ದೇವರೂ ನಮ್ಮಂಥವನೇ’ ಎಂದು ತಿಳಿದುಕೊಂಡಿರಿ. 
ಈಗಲಾದರೋ ನಾನು ಎಲ್ಲವನ್ನು, 
ನಿಮ್ಮ ಮುಂದೆ ವಿವರಿಸಿ ನಿಮ್ಮನ್ನು ಅಪರಾಧಿಗಳೆಂದು ಸ್ಥಾಪಿಸುವೆನು. 
 ೨೨ ದೇವರನ್ನು ಬಿಟ್ಟವರೇ, ಇದನ್ನು ಮನದಟ್ಟು ಮಾಡಿಕೊಳ್ಳಿರಿ; 
ಇಲ್ಲವಾದರೆ ನಿಮ್ಮನ್ನು ಹರಿದುಬಿಟ್ಟೇನು. 
ನಿಮ್ಮನ್ನು ತಪ್ಪಿಸುವವರು ಯಾರೂ ಇರುವುದಿಲ್ಲ. 
 ೨೩ ಯಾರು ಸ್ತುತಿಯಜ್ಞವನ್ನು ಸಮರ್ಪಿಸುತ್ತಾರೋ ಅವರೇ ನನ್ನನ್ನು ಗೌರವಿಸುವವರು; 
ತಮ್ಮ ನಡತೆಯನ್ನು ಸರಿಪಡಿಸಿಕೊಳ್ಳುವವರಿಗೆ ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು.”