ಶತ್ರುಗಳಿಂದ ಕಾಪಾಡಬೇಕೆಂಬ ನಿರಪರಾಧಿಯ ಬೇಡಿಕೆ 
 ೧೭
ದಾವೀದನ ಪ್ರಾರ್ಥನೆ. 
 ೧ ಯೆಹೋವನೇ, ನ್ಯಾಯವಾದುದನ್ನು ಆಲೈಸು; 
ನನ್ನ ಮೊರೆಗೆ ಲಕ್ಷ್ಯವಿಡು. ನನ್ನ ಪ್ರಾರ್ಥನೆಗೆ ಕಿವಿಗೊಡು; 
ಅದು ಕಪಟವಾದ ಬಾಯಿಂದ ಬಂದದ್ದಲ್ಲ. 
 ೨ ನಿನ್ನಿಂದ ನನಗೆ ನ್ಯಾಯವಾದ ತೀರ್ಪು ಉಂಟಾಗಲಿ; 
ನೀನು ನೀತಿಗನುಸಾರವಾಗಿ ನೋಡುವವನಲ್ಲವೇ. 
 ೩ ನೀನು ನನ್ನ ಹೃದಯವನ್ನು ಪರೀಕ್ಷಿಸಿದರೂ, ರಾತ್ರಿಯ ವೇಳೆ ವಿಚಾರಿಸಿದರೂ, 
ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದರೂ, 
ಯಾವ ದುರಾಲೋಚನೆಯಾದರೂ ನನ್ನಲ್ಲಿ ದೊರೆಯುವುದಿಲ್ಲ; 
ನನ್ನ ಬಾಯಿ ಮಾತುಗಳಲ್ಲಿಯೂ ತಪ್ಪಿಲ್ಲ. 
 ೪ ನಾನಂತೂ ಲೋಕವ್ಯವಹಾರಗಳಲ್ಲಿ ಬಲಾತ್ಕಾರಿಗಳಂತೆ ನಡೆಯದೆ 
ನಿನ್ನ ಮಾತನ್ನೇ ಅನುಸರಿಸಿದ್ದೇನೆ. 
 ೫ ನಿನ್ನ ಮಾರ್ಗದಲ್ಲೇ ಹೆಜ್ಜೆಯಿಟ್ಟು ನಡೆಯುತ್ತಾ ಇದ್ದೇನೆ; 
ನನ್ನ ಕಾಲು ಜಾರಲಿಲ್ಲ. 
 ೬ ದೇವರೇ, ನನಗೆ ಸದುತ್ತರವನ್ನು ದಯಪಾಲಿಸುವಿಯೆಂದು ಮೊರೆಯಿಡುತ್ತೇನೆ, 
ಕಿವಿಗೊಟ್ಟು ಕೇಳು. 
 ೭ ಭುಜಬಲವನ್ನು ಪ್ರಯೋಗಿಸಿ, 
ಶರಣಾಗತರನ್ನು ವಿರೋಧಿಗಳಿಂದ ರಕ್ಷಿಸುವಾತನೇ, 
ನಿನ್ನ ಪ್ರೀತಿಯನ್ನು ವಿಶೇಷವಾಗಿ ತೋರಿಸು. 
 ೮ ನನ್ನನ್ನು ಸುತ್ತಿಕೊಂಡು ಬಾಧಿಸುತ್ತಿರುವ ದುಷ್ಟರಿಂದಲೂ, 
ಪ್ರಾಣವೈರಿಗಳಿಂದಲೂ ತಪ್ಪಿಸಿದ್ದಿ. 
 ೯ ನಿನ್ನ ರೆಕ್ಕೆಗಳ ಮರೆಯಲ್ಲಿಟ್ಟುಕೊಂಡು ನನ್ನನ್ನು ದುಷ್ಟರಿಂದ ಕಾಯಿ; 
ಕಣ್ಣು ಗುಡ್ಡಿನಂತೆಯೇ ಕಾಪಾಡು. 
 ೧೦ ಅವರು ತಮ್ಮ ಹೃದಯವನ್ನು ಕಠಿಣಮಾಡಿದ್ದಾರೆ; 
ಅಹಂಕಾರದಿಂದ ಮಾತನಾಡುತ್ತಾರೆ. 
 ೧೧ ನಾವು ಎಲ್ಲಿ ಕಾಲಿಟ್ಟರೂ ಅಲ್ಲೆಲ್ಲಾ ನಮ್ಮನ್ನು ಸುತ್ತಿಕೊಳ್ಳುತ್ತಾರೆ; 
ನಮ್ಮನ್ನು ನೆಲಕ್ಕೆ ಬೀಳಿಸಬೇಕೆಂದು ಸಮಯನೋಡುತ್ತಾರೆ. 
 ೧೨ ನನ್ನ ಶತ್ರುವು ಸೀಳಿಬಿಡಲಾಶಿಸುವ ಸಿಂಹದಂತೆಯೂ, 
ಮರೆಯಲ್ಲಿ ಹೊಂಚುಹಾಕಿರುವ ಪ್ರಾಯದ ಸಿಂಹದಂತೆಯೂ ಇದ್ದಾನೆ. 
 ೧೩ ಯೆಹೋವನೇ, ನೀನು ಅವನಿಗೆ ಎದುರಾಗಿ ನಿಂತು ಅವನನ್ನು ಕೆಡವಿಬಿಡು; 
ನಿನ್ನ ಕತ್ತಿಯಿಂದ ನನ್ನ ಪ್ರಾಣವನ್ನು ದುಷ್ಟರಿಗೆ ತಪ್ಪಿಸಿ ಕಾಪಾಡು. 
 ೧೪ ಯೆಹೋವನೇ, ಇಹಲೋಕವೇ ತಮ್ಮ ಪಾಲೆಂದು 
ನಂಬಿದ ನರರಿಗೆ ಸಿಕ್ಕದಂತೆ ನಿನ್ನ ಕೈಯಿಂದ ನನ್ನನ್ನು ತಪ್ಪಿಸು; 
ನಿನ್ನ ಐಶ್ವರ್ಯದಿಂದ ಅವರ ಹೊಟ್ಟೆಯನ್ನು ತುಂಬಿಸಿದ್ದೀಯಲ್ಲಾ. 
ಅವರು ಸಂತಾನವೃದ್ಧಿಹೊಂದಿ ಉಳಿದ ಆಸ್ತಿಯನ್ನು ತಮ್ಮ ಮಕ್ಕಳಿಗೆ ಬಿಡುತ್ತಾರೆ. 
 ೧೫ ನಾನಾದರೋ ನಿರಪರಾಧಿಯು; ನಿನ್ನ ಸಾನ್ನಿಧ್ಯವನ್ನು ಸೇರುವೆನು. 
ನಾನು ಎಚ್ಚತ್ತಾಗ ನಿನ್ನ ನೀತಿಸ್ವರೂಪ ದರ್ಶನದಿಂದ ತೃಪ್ತನಾಗಿರುವೆನು.