ಇಕ್ಕಟ್ಟಿನಲ್ಲಿದ್ದವನ ಪ್ರಾರ್ಥನೆ 
 ೧೪೨
ದಾವೀದನ ಪದ್ಯ, ಅವನು ಗುಹೆಯಲ್ಲಿ ಅಡಗಿಕೊಂಡಿದ್ದಾಗ ಮಾಡಿದ ಪ್ರಾರ್ಥನೆ. 
(ಕೀರ್ತ. 140; 1 ಸಮು. 22; 24) 
 ೧ ನಾನು ಯೆಹೋವನಿಗೆ ಮೊರೆಯಿಡುವೆನು, 
ಯೆಹೋವನಿಗೆ ಕೂಗಿ ಬಿನ್ನೈಸುವೆನು. 
 ೨ ನನ್ನ ಚಿಂತೆಗಳನ್ನು ಆತನ ಮುಂದೆ ಬಿಚ್ಚುವೆನು, 
ನನ್ನ ಕಷ್ಟವನ್ನು ಆತನಿಗೆ ಅರಿಕೆಮಾಡುವೆನು. 
 ೩ ನನ್ನ ಆತ್ಮವು ಕುಂದಿಹೋದಾಗ, 
ನೀನು ನನ್ನ ಮಾರ್ಗವನ್ನು ಬಲ್ಲವನಾಗಿರುತ್ತಿ, 
ನಾನು ಹೋಗಬೇಕಾದ ದಾರಿಯಲ್ಲಿ ಅವರು ಉರುಲನ್ನೊಡ್ಡಿದ್ದಾರೆ. 
 ೪ ನಾನು ನನ್ನ ಬಲಗಡೆಗೆ ನೋಡಲು, 
ಅಲ್ಲಿ ಸಹಾಯಕರು ಯಾರೂ ಇಲ್ಲ, 
ಆಶ್ರಯವೂ ನಾಶವಾಯಿತು, 
ನನ್ನ ಪ್ರಾಣಕ್ಕೆ ಹಿತಚಿಂತಕರು ಒಬ್ಬರೂ ಇಲ್ಲ. 
 ೫ ಯೆಹೋವನೇ, ನಾನು ನಿನಗೆ, “ನೀನೇ ನನ್ನ ಶರಣನೂ, 
ಜೀವಲೋಕದಲ್ಲಿ ನನ್ನ ಪಾಲೂ ಆಗಿದ್ದಿ” ಎಂದು ಕೂಗಿ ಮೊರೆಯಿಟ್ಟಿದ್ದೇನೆ. 
 ೬ ನನ್ನ ಕೂಗನ್ನು ಲಾಲಿಸು, ಬಲು ಕುಗ್ಗಿಹೋಗಿದ್ದೇನೆ. 
ಹಿಂಸಕರ ಕೈಯಿಂದ ನನ್ನನ್ನು ತಪ್ಪಿಸು, 
ಅವರು ನನಗಿಂತ ಬಲಿಷ್ಠರಾಗಿದ್ದಾರಲ್ಲಾ. 
 ೭ ಸೆರೆಯಿಂದ ನನ್ನನ್ನು ಬಿಡಿಸು, 
ನಿನ್ನ ನಾಮವನ್ನು ಕೀರ್ತಿಸುವೆನು. 
ನೀತಿವಂತರು ನಿನ್ನ ಮಹೋಪಕಾರಕ್ಕಾಗಿ, 
ನನ್ನನ್ನು ಸುತ್ತಿಕೊಂಡು ಉತ್ಸಾಹಗೊಳ್ಳುವರು.