ರಾಜಶ್ರೇಷ್ಠನ ಪ್ರತಿಜ್ಞೆ 
 ೧೦೧
ದಾವೀದನ ಕೀರ್ತನೆ. 
(ಕೀರ್ತ. 15; 24) 
 ೧ ಪ್ರೀತಿ, ನೀತಿಗಳನ್ನು ಕುರಿತು ಹಾಡುವೆನು; 
ಯೆಹೋವನೇ, ನಿನ್ನನ್ನು ಕೊಂಡಾಡುವೆನು. 
 ೨ ಸನ್ಮಾರ್ಗವನ್ನು ಲಕ್ಷಿಸಿ ನಡೆಯುವೆನು; 
ನನಗೆ ಯಾವಾಗ ದರ್ಶನಕೊಡುವಿ? 
ಮನೆಯೊಳಗೂ ಯಥಾರ್ಥ ಹೃದಯದಿಂದಲೇ ನಡೆದುಕೊಳ್ಳುವೆನು. 
 ೩ ಯಾವ ನೀಚವಾದ ಕಾರ್ಯವನ್ನೂ ದೃಷ್ಟಿಸುವುದಿಲ್ಲ; 
ದುರಾಚಾರವನ್ನು ಹಗೆಮಾಡುತ್ತೇನೆ, 
ಅದರ ಗೊಡವೆಯೇ ನನಗೆ ಬೇಡ. 
 ೪ ಮೂರ್ಖತನವು ನನ್ನನ್ನು ಬಿಟ್ಟು ಹೋಗಲಿ; 
ಕೆಟ್ಟತನವನ್ನು ಅರಿಯದಿರುವೆನು. 
 ೫ ಗುಪ್ತದಲ್ಲಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸಂಹರಿಸುವೆನು; 
ಸೊಕ್ಕಿನ ಕಣ್ಣೂ, ಉಬ್ಬಿದ ಮನಸ್ಸೂ ಉಳ್ಳವನನ್ನು ಸಹಿಸುವುದಿಲ್ಲ. 
 ೬ ದೇಶದಲ್ಲಿರುವ ನಂಬಿಗಸ್ತರನ್ನು ಆರಿಸಿಕೊಳ್ಳುವೆನು; 
ಅವರೇ ನನ್ನ ಸನ್ನಿಧಿಯಲ್ಲಿ ವಾಸಿಸಬೇಕು, 
ಸನ್ಮಾರ್ಗಿಯೇ ನನ್ನ ಸೇವೆಯಲ್ಲಿರಬೇಕು. 
 ೭ ಮೋಸಗಾರನು ನನ್ನ ಮನೆಯಲ್ಲಿ ಇರಲೇಬಾರದು; 
ಸುಳ್ಳುಗಾರನು ನನ್ನ ಮುಂದೆ ನಿಲ್ಲಕೂಡದು. 
 ೮ ಯೆಹೋವನ ಪಟ್ಟಣದಲ್ಲಿ ಕೆಡುಕರೇ ಉಳಿಯದಂತೆ, 
ಪ್ರತಿ ಮುಂಜಾನೆಯಲ್ಲಿ ದೇಶದ ದುಷ್ಟರನ್ನು ಸಂಹರಿಸುತ್ತಾ ಬರುವೆನು.