೧೧
ನೀರಿನ ಮೇಲೆ ರೊಟ್ಟಿ 
 ೧ ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು, 
ಬಹಳ ದಿನಗಳ ನಂತರ ಅದು ನಿನಗೆ ಸಿಕ್ಕುವುದು. 
 ೨ ನೀನು ಅದನ್ನು ಏಳು ಮತ್ತು ಎಂಟು ಮಂದಿಗೆ ಹಂಚಿಬಿಡು. 
ಲೋಕದಲ್ಲಿ ಮುಂದೆ ಸಂಭವಿಸುವ ಕೇಡು ನಿನಗೆ ಗೊತ್ತಿಲ್ಲ. 
 ೩ ಮಳೆ ತುಂಬಿದ ಮೋಡಗಳು, 
ತಾವಾಗಿಯೇ ಭೂಮಿಯ ಮೇಲೆ ಸುರಿದುಬಿಡುವವು, 
ಮರವು ಉತ್ತರಕ್ಕಾಗಲಿ, ದಕ್ಷಿಣಕ್ಕಾಗಲಿ, 
ಬಿದ್ದರೆ ಬಿದ್ದ ಸ್ಥಳದಲ್ಲಿಯೇ ಇರುವುದು. 
 ೪ ಗಾಳಿಯನ್ನು ನೋಡುತ್ತಲೇ ಇರುವವನು ಬೀಜವನ್ನು ಬಿತ್ತುವುದಿಲ್ಲ, 
ಮೋಡಗಳನ್ನು ಗಮನಿಸುತ್ತಲೇ ಇರುವವನು ಪೈರನ್ನು ಕೊಯ್ಯವುದಿಲ್ಲ. 
 ೫ ಗಾಳಿಯ ಮಾರ್ಗವನ್ನೂ, 
ಗರ್ಭಿಣಿಯ ಗರ್ಭದಲ್ಲಿ ಎಲುಬುಗಳು ಬೆಳೆಯುವ ರೀತಿಯನ್ನೂ, 
ನೀನು ಹೇಗೆ ತಿಳಿಯುವುದಿಲ್ಲವೋ ಹಾಗೆಯೇ, 
ಸರ್ವಶಕ್ತನಾದ ದೇವರ ಕಾರ್ಯವನ್ನು ಅರಿಯುವುದಿಲ್ಲ. 
 ೬ ಮುಂಜಾನೆ ಬೀಜ ಬಿತ್ತು; 
ಸಂಜೆಯ ತನಕ ಕೈಯನ್ನು ಹಿಂದಕ್ಕೆ ತೆಗೆಯಬೇಡ, 
ಇದು ಸಫಲವಾಗುವುದೋ ಅಥವಾ ಅದು ಸಫಲವಾಗುವುದೋ, 
ಇಲ್ಲವೇ ಒಂದು ವೇಳೆ ಎರಡೂ 
ಒಳ್ಳೆಯದಾಗುವುದೋ ನಿನಗೆ ತಿಳಿಯದು. 
ಯೌವನದಲ್ಲಿ ಸುಷ್ಟಿ ಕರ್ತನನ್ನು ಸ್ಮರಿಸು 
 ೭ ನಿಜವಾಗಿ ಬೆಳಕು ಇಂಪಾಗಿಯೂ, 
ಮತ್ತು ಸೂರ್ಯನನ್ನು ಕಾಣುವುದು ಕಣ್ಣಿಗೆ ಹಿತವಾಗಿಯೂ ಇರುವುದು. 
 ೮ ಬಹಳ ವರುಷ ಬದುಕುವವನು, 
ಅವುಗಳಲ್ಲೆಲ್ಲಾ ಆನಂದಿಸಲಿ, 
ಆದರೆ ಅಂಧಕಾರದ ದಿನಗಳನ್ನು ನೆನಪಿಗೆ ತರಲಿ, 
ಏಕೆಂದರೆ ಅವು ಬಹಳವಾಗಿರುವವು. 
ಮುಂದಾಗುವುದೆಲ್ಲ ವ್ಯರ್ಥವೇ. 
 ೯ ಯೌವನಸ್ಥನೇ, ಯೌವನಪ್ರಾಯದಲ್ಲಿ ಆನಂದಿಸು, 
ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ. 
ಮನಸ್ಸಿಗೆ ತಕ್ಕಂತೆಯೂ, 
ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೋ. 
ಆದರೆ ಈ ಎಲ್ಲಾ ವಿಷಯಗಳಲ್ಲಿಯೂ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವನೆಂದು ತಿಳಿದಿರು. 
 ೧೦ ನಿನ್ನ ಹೃದಯದಿಂದ ದುಃಖವನ್ನೂ, 
ದೇಹದಿಂದ ಶ್ರಮೆಯನ್ನೂ ತೊಲಗಿಸು, 
ಏಕೆಂದರೆ ಬಾಲ್ಯವೂ, ಯೌವನವೂ ವ್ಯರ್ಥವಷ್ಟೆ.