ದುಷ್ಟಾಧಿಕಾರಿಯ ದುಸ್ವಭಾವದ ಖಂಡನೆ 
 ೫೨
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನು ಅಹೀಮೆಲೆಕನ ಮನೆಗೆ ಬಂದ ವರ್ತಮಾನವನ್ನು ಎದೋಮ್ಯನಾದ ದೋಯೇಗನು ಸೌಲನಿಗೆ ತಿಳಿಸಿದಾಗ ದಾವೀದನು ರಚಿಸಿದ ಪದ್ಯ. 
 ೧ ದುಷ್ಟಾಧಿಕಾರಿಯೇ, ನೀನು ಕೆಡುಕುಮಾಡಿ ಹಿಗ್ಗುವುದೇನು? 
ದೇವರ ಕೃಪೆಯು ಯಾವಾಗಲೂ ಇರುವುದು. 
 ೨ ಮೋಸಗಾರನೇ, ನಿನ್ನ ನಾಲಿಗೆಯು ಹರಿತವಾದ ಕ್ಷೌರಕತ್ತಿಯಂತೆ 
ಅಪಾಯಗಳನ್ನೇ ಕಲ್ಪಿಸುತ್ತದೆ. 
 ೩ ಉಪಕಾರಕ್ಕಿಂತಲೂ ಅಪಕಾರವೇ ನಿನಗೆ ಇಷ್ಟ; 
ನೀತಿಯನ್ನು ಬಿಟ್ಟು ಅನೀತಿಯನ್ನು ಸ್ಥಾಪಿಸುವುದೇ ನಿನಗೆ ಸಂತೋಷ. 
ಸೆಲಾ 
  ೪ ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ. 
 ೫ ದೇವರು ನಿನ್ನನ್ನು ಎಂದಿಗೂ ಏಳದಂತೆ ಕೆಡವಿಬಿಡುವನು; 
ನಿನ್ನನ್ನು ಹಿಡಿದು ಗುಡಾರದೊಳಗಿಂದ ಕಿತ್ತು ಬೀಸಾಡುವನು; 
ಆತನು ನಿನ್ನನ್ನು ಜೀವಲೋಕದಿಂದ ಬೇರು ಸಹಿತವಾಗಿ ಕಿತ್ತುಹಾಕುವನು. 
 ೬ ನೀತಿವಂತರು ಅದನ್ನು ನೋಡಿ ಭಯಪಡುವರು; 
ಅವರು ಪರಿಹಾಸ್ಯಮಾಡುತ್ತಾ, 
 ೭ “ನೋಡಿರಿ, ದೇವರನ್ನು ಆಶ್ರಯಿಸಿಕೊಳ್ಳದೆ, ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು, 
ತನ್ನ ದುಷ್ಟತ್ವವೇ ತನಗೆ ಬಲವೆಂದು ನಂಬಿಕೊಂಡ ಮೂಢನು ಇವನೇ” ಎಂದು ಹೇಳುವರು. 
 ೮ ಆದರೆ ನಾನು ದೇವಾಲಯದ ಸೊಗಸಾದ ಎಣ್ಣೇ ಮರದಂತಿರುವೆನು; 
ದೇವರ ಕೃಪೆಯನ್ನು ಯುಗಯುಗಾಂತರಗಳಲ್ಲಿಯೂ ನಂಬಿಕೊಂಡಿರುವೆನು. 
 ೯ ದೇವರೇ, ನಿನ್ನ ಉಪಕಾರಕ್ಕಾಗಿ ಯಾವಾಗಲೂ ನಿನ್ನನ್ನು ಸ್ತುತಿಸುವೆನು; 
ನಿನ್ನ ನಾಮವು ಸರ್ವೋತ್ತಮವೆಂದು ನಿನ್ನ ಭಕ್ತರ ಮುಂದೆ ಹೊಗಳುವೆನು.