ಟೈಗ್ರಿಸ್ ನದಿಯ ದಡದಲ್ಲಿ ದಾನಿಯೇಲನ ದರ್ಶನ
1ಕೋರೆಷನು ಪಾರಸಿಯ ರಾಜನಾಗಿದ್ದನು. ಕೋರೆಷನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ದಾನಿಯೇಲನಿಗೆ ಒಂದು ಸಂಗತಿಯು ಪ್ರಕಟವಾಯಿತು. (ದಾನಿಯೇಲನ ಇನ್ನೊಂದು ಹೆಸರು ಬೇಲ್ತೆಶಚ್ಚರ.) ಈ ಸಂಗತಿ ಸತ್ಯವಾದುದು; ಆದರೆ ತಿಳಿದುಕೊಳ್ಳಲು ಬಹಳ ಕಷ್ಟಕರವಾಗಿತ್ತು. ದಾನಿಯೇಲನು ಈ ಸಂಗತಿಯನ್ನು ತಿಳಿದುಕೊಂಡನು. ಒಂದು ದರ್ಶನದಲ್ಲಿ ಅದರ ಬಗ್ಗೆ ಅವನಿಗೆ ವಿವರಿಸಲಾಯಿತು.
2ದಾನಿಯೇಲನು ಹೇಳುವುದೇನೆಂದರೆ: ಆ ಸಮಯದಲ್ಲಿ ದಾನಿಯೇಲನೆಂಬ ನಾನು ಮೂರು ವಾರ ಶೋಕದಲ್ಲಿದ್ದೆನು. 3ಆ ಮೂರು ವಾರಗಳಲ್ಲಿ ನಾನು ಇಷ್ಟಪಡುತ್ತಿದ್ದ ಆಹಾರವನ್ನು ತಿನ್ನಲಿಲ್ಲ; ಮಾಂಸಾಹಾರವನ್ನು ಸೇವಿಸಲಿಲ್ಲ; ದ್ರಾಕ್ಷಾರಸವನ್ನು ಕುಡಿಯಲಿಲ್ಲ; ತಲೆಗೆ ಎಣ್ಣೆಯನ್ನು ಹಾಕಿಕೊಳ್ಳಲಿಲ್ಲ. ಮೂರು ವಾರಗಳವರೆಗೆ ಇದೆಲ್ಲವನ್ನು ನಾನು ನಿಲ್ಲಿಸಿಬಿಟ್ಟೆ.
4ವರ್ಷದ ಮೊದಲನೆ ತಿಂಗಳ ಇಪ್ಪತ್ನಾಲ್ಕನೆಯ ದಿನದಲ್ಲಿ ನಾನು ಟೈಗ್ರಿಸ್ ಮಹಾನದಿಯ, ದಡದಲ್ಲಿ ನಿಂತುಕೊಂಡಿದ್ದೆ. 5ಅಲ್ಲಿ ನಿಂತುಕೊಂಡಿದ್ದಾಗ ನಾನು ಮುಖವೆತ್ತಿ ನೋಡಿದೆ. ನನ್ನ ಎದುರಿಗೆ ಒಬ್ಬ ವ್ಯಕ್ತಿಯು ನಿಂತಿದ್ದನ್ನು ಕಂಡೆ. ಅವನು ನಾರುಬಟ್ಟೆಯನ್ನು ಧರಿಸಿಕೊಂಡಿದ್ದನು. ಅವನು ಊಫಜಿನ ಅಪರಂಜಿಯ ಪಟ್ಟಿಯನ್ನು ಸೊಂಟಕ್ಕೆ ಬಿಗಿದುಕೊಂಡಿದ್ದನು. 6ಅವನ ಶರೀರವು ಪ್ರಕಾಶಮಾನವಾದ ವಜ್ರದಂತೆ ಇತ್ತು. ಅವನ ಮುಖವು ಕೋಲ್ಮಿಂಚಿನಂತೆ ಹೊಳೆಯುತ್ತಿತ್ತು. ಅವನ ಕಣ್ಣುಗಳು ಬೆಂಕಿಯ ಪಂಜುಗಳಂತಿದ್ದವು. ಅವನ ಕೈಕಾಲುಗಳು ಉಜ್ಜಿದ ಹಿತ್ತಾಳೆಯಂತೆ ಝಗಝಗಿಸುತ್ತಿದ್ದವು. ಅವನ ಧ್ವನಿಯು ಜನಜಂಗುಳಿಯ ಧ್ವನಿಯಂತೆ ದೊಡ್ಡದಾಗಿತ್ತು.
7ದಾನಿಯೇಲನೆಂಬ ನನಗೆ ಮಾತ್ರ ಆ ದರ್ಶನವಾಯಿತು. ನನ್ನ ಜೊತೆಯಲ್ಲಿದ್ದವರಿಗೆ ಆ ದರ್ಶನ ಕಾಣಿಸಲಿಲ್ಲವಾದರೂ ಅವರು ಭಯಪಟ್ಟರು. ಅವರು ಭಯದಿಂದ ಓಡಿಹೋಗಿ ಅಡಗಿಕೊಂಡರು. 8ನಾನೊಬ್ಬನೇ ಅಲ್ಲಿದ್ದೆ. ನಾನು ಆ ದರ್ಶನವನ್ನು ನೋಡುತ್ತಲೇ ಇದ್ದೆ. ಅದರಿಂದ ನನಗೆ ಭಯವಾಯಿತು. ನಾನು ದುರ್ಬಲನಾದೆ. ನನ್ನ ಮುಖವು ಸತ್ತವರ ಮುಖದಂತೆ ಬಿಳುಪೇರಿತು; ನಾನು ನಿಸ್ಸಹಾಯಕನಾದೆ. 9ದರ್ಶನದಲ್ಲಿ ಕಾಣಿಸಿಕೊಂಡ ಮನುಷ್ಯನು ಮಾತನಾಡುವದನ್ನು ನಾನು ಕೇಳಿದೆ. ಅವನ ಧ್ವನಿಯನ್ನು ಕೇಳಿದ ಕೂಡಲೇ ನಾನು ಬೋರಲುಬಿದ್ದು ಗಾಢವಾದ ನಿದ್ರೆಯಲ್ಲಿ ಮುಳುಗಿದೆ.
10ಆಗ ಒಂದು ಕೈ ನನ್ನನ್ನು ಮುಟ್ಟಿತು. ನಾನು ಮೊಣಕಾಲುಗಳನ್ನು ಮತ್ತು ಅಂಗೈಗಳನ್ನು ನೆಲಕ್ಕೆ ಊರಿ ಬಾಗಿ ನಿಂತುಕೊಂಡೆ. ನಾನು ಭಯದಿಂದ ನಡುಗುತ್ತಿದ್ದೆ. 11ದರ್ಶನದಲ್ಲಿ ಕಾಣಿಸಿಕೊಂಡ ಮನುಷ್ಯನು ನನಗೆ, “ದಾನಿಯೇಲನೇ, ದೇವರು ನಿನ್ನನ್ನು ತುಂಬ ಪ್ರೀತಿಸುತ್ತಾನೆ. ನಾನು ನಿನಗೆ ಈ ಮುಂದೆ ಹೇಳುವ ಮಾತುಗಳ ಬಗ್ಗೆ ಚೆನ್ನಾಗಿ ವಿಚಾರಮಾಡು. ಎದ್ದುನಿಲ್ಲು, ನನ್ನನ್ನು ನಿನ್ನ ಬಳಿಗೆ ಕಳುಹಿಸಲಾಗಿದೆ” ಎಂದು ಹೇಳಿದನು. ಆಗ ನಾನು ಎದ್ದುನಿಂತೆ. ನಾನು ಭಯದಿಂದ ಇನ್ನೂ ನಡುಗುತ್ತಿದ್ದೆ. 12ಆಮೇಲೆ ದರ್ಶನದಲ್ಲಿನ ಆ ಮನುಷ್ಯನು ಪುನಃ ಮಾತನಾಡಲು ಪ್ರಾರಂಭಿಸಿದನು. ಅವನು, “ದಾನಿಯೇಲನೇ, ಭಯಪಡಬೇಡ. ನೀನು ಜ್ಞಾನಸಂಪಾದನೆ ಮಾಡಬೇಕೆಂದೂ ದೇವರೆದುರಿಗೆ ಭಕ್ತಿವಿನಯಗಳಿಂದ ವರ್ತಿಸಬೇಕೆಂದೂ ತೀರ್ಮಾನಿಸಿದ ಮೊದಲ ದಿನದಿಂದಲೇ ಆತನು ನಿನ್ನ ಪ್ರಾರ್ಥನೆಗಳನ್ನು ಆಲಿಸುತ್ತಿದ್ದಾನೆ. ನೀನು ಪ್ರಾರ್ಥನೆ ಮಾಡಿದ್ದರಿಂದಲೇ ನಾನು ಇಲ್ಲಿಗೆ ಬಂದೆನು. 13ಆದರೆ ಪಾರಸಿಯ ರಾಜ್ಯದ ದಿವ್ಯಪಾಲಕನು ನನ್ನೊಂದಿಗೆ ಕಳೆದ ಇಪ್ಪತ್ತೊಂದು ದಿನಗಳಿಂದ ಹೋರಾಡುತ್ತಿದ್ದನು; ನನಗೆ ತೊಂದರೆ ಕೊಡುತ್ತಿದ್ದನು. ಆಗ ಪ್ರಧಾನ ದಿವ್ಯಪಾಲಕರಲ್ಲೊಬ್ಬನಾದ ಮಿಕಾಯೇಲನು ನನ್ನ ಸಹಾಯಕ್ಕೆ ಬಂದನು. ನಾನು ಅಲ್ಲಿ ಪಾರಸಿಯ ರಾಜನ ಹತ್ತಿರ ಸಿಕ್ಕಿಹಾಕಿಕೊಂಡಿದ್ದೆ. 14ದಾನಿಯೇಲನೇ, ಭವಿಷ್ಯದಲ್ಲಿ ನಿನ್ನ ಜನರಿಗೆ ಏನಾಗುವದೆಂಬುದನ್ನು ನಿನಗೆ ವಿವರಿಸಲು ನಾನು ಈಗ ಇಲ್ಲಿಗೆ ಬಂದೆನು. ಈ ಕನಸು ಭವಿಷ್ಯದ ಒಂದು ಕಾಲದ ಕುರಿತಾಗಿದೆ” ಎಂದು ಹೇಳಿದನು.
15ಆ ಪುರುಷನು ನನ್ನೊಂದಿಗೆ ಮಾತನಾಡುತ್ತಿದ್ದಾಗ ನಾನು ನೆಲವನ್ನು ನೋಡುತ್ತಾ ಬಾಗಿಕೊಂಡಿದ್ದೆ. ಮಾತನಾಡಲು ನನ್ನಿಂದ ಸಾಧ್ಯವಾಗಲಿಲ್ಲ. 16ಆಗ ಮನುಷ್ಯಕುಮಾರನಂತಿರುವವನು ನನ್ನ ತುಟಿಗಳನ್ನು ಸ್ಪರ್ಶಿಸಿದನು. ನಾನು ಬಾಯಿ ತೆರೆದು ಮಾತನಾಡಲು ಪ್ರಾರಂಭಿಸಿದೆ. ನನ್ನ ಎದುರಿಗೆ ನಿಂತುಕೊಂಡಿದ್ದವನಿಗೆ, “ಸ್ವಾಮಿ, ದರ್ಶನದಲ್ಲಿ ನೋಡಿದ ಸಂಗತಿಗಳಿಂದ ನಾನು ಚಿಂತಾಕ್ರಾಂತನಾಗಿದ್ದೇನೆ; ಅಂಜಿಕೊಂಡಿದ್ದೇನೆ; ನಿಸ್ಸಹಾಯಕನಾಗಿದ್ದೇನೆ. 17ಸ್ವಾಮೀ, ನಾನು ನಿಮ್ಮ ಸೇವಕನಾದ ದಾನಿಯೇಲ. ನಾನು ನಿಮ್ಮ ಸಂಗಡ ಹೇಗೆ ಮಾತನಾಡಲಿ. ನನಗೆ ಶಕ್ತಿಯೇ ಇಲ್ಲದಂತಾಗಿದೆ. ಉಸಿರಾಡುವುದೂ ಕಷ್ಟವಾಗಿದೆ” ಎಂದೆ.
18ಆ ಮನುಷ್ಯಕುಮಾರನಂತಿರುವವನು ಪುನಃ ನನ್ನನ್ನು ಸ್ಪರ್ಶಿಸಿದನು. ಆತನು ನನ್ನನ್ನು ಸ್ಪರ್ಶಿಸಿದಾಗ ನನಗೆ ಉಪಶಮನವಾಯಿತು. 19ಆಗ ಆತನು “ದಾನಿಯೇಲನೇ, ಭಯಪಡಬೇಡ. ದೇವರು ನಿನ್ನನ್ನು ತುಂಬ ಪ್ರೀತಿಸುತ್ತಾನೆ. ಸಮಾಧಾನ ತಂದುಕೊ. ಈಗ ನೀನು ಬಲಗೊಳ್ಳು, ಬಲಗೊಳ್ಳು” ಎಂದು ಹೇಳಿದನು.
ಆತನು ನನ್ನೊಂದಿಗೆ ಮಾತನಾಡಿದ ಮೇಲೆ ನನಗೆ ಬಲಬಂದಿತು. ಆಗ ನಾನು, “ಸ್ವಾಮೀ, ನೀವು ನನಗೆ ಬಲವನ್ನು ನೀಡಿದಿರಿ. ಈಗ ನೀವು ಮಾತನಾಡಬಹುದು” ಎಂದು ಹೇಳಿದೆ.
20ಆಗ ಅವನು, “ದಾನಿಯೇಲನೇ, ನಾನು ಏಕೆ ಬಂದಿದ್ದೇನೆಂಬುದು ನಿನಗೆ ಗೊತ್ತಿಲ್ಲವೇ? ತಕ್ಷಣ ನಾನು ಪಾರಸಿಯ ರಾಜ್ಯದ ದಿವ್ಯಪಾಲಕನೊಂದಿಗೆ ಹೋರಾಡಲು ಹಿಂದಿರುಗಬೇಕು. ನಾನು ಹೋದಮೇಲೆ ಗ್ರೀಕ್ ರಾಜ್ಯದ ದಿವ್ಯಪಾಲಕನು ಬರುವನು. 21ದಾನಿಯೇಲನೇ, ನಾನು ಹೋಗುವ ಮುಂಚೆ ‘ಸತ್ಯಶಾಸನ’ದಲ್ಲಿ ಏನು ಬರೆದಿದೆ ಎಂಬುದನ್ನು ನಿನಗೆ ಹೇಳುವೆನು. ಆ ದುಷ್ಟದೂತರೊಂದಿಗೆ ಹೋರಾಡುವಲ್ಲಿ ಮಿಕಾಯೇಲನ ಹೊರತು ನನಗೆ ಬೆಂಬಲವಾಗತಕ್ಕವರು ಇನ್ಯಾರೂ ಇಲ್ಲ. ಮಿಕಾಯೇಲನು ನಿಮ್ಮ ಜನರ ಪಾಲಕನಾಗಿದ್ದಾನೆ.