19
ಅಮ್ಮೋನಿಯರು ದಾವೀದನ ಜನರನ್ನು ಅವಮಾನಪಡಿಸಿದ್ದು
ನಾಹಾಷನು ಅಮ್ಮೋನಿಯರ ಅರಸನಾಗಿದ್ದನು. ಅವನು ಸತ್ತ ಬಳಿಕ ಅವನ ಮಗನು ಪಟ್ಟಕ್ಕೆ ಬಂದನು. ದಾವೀದನು, “ನಾಹಾಷನು ನನಗೆ ದಯೆ ತೋರಿಸಿದ್ದನು. ಅವನ ಮಗನಾದ ಹಾನೂನನಿಗೆ ನಾನೂ ದಯೆತೋರುವೆನು” ಎಂದು ಹೇಳಿ ಹಾನೂನನನ್ನು ಸಂತೈಸಲು ಸೇವಕರನ್ನು ಕಳುಹಿಸಿದನು. ದಾವೀದನ ಸೇವಕರು ಅಮ್ಮೋನ್ ದೇಶಕ್ಕೆ ಹೋಗಿ ದುಃಖದಲ್ಲಿದ್ದ ಹಾನೂನನನ್ನು ಸಂತೈಸಿದರು.
ಆದರೆ ಅಮ್ಮೋನಿಯರ ನಾಯಕರು ಹಾನೂನನಿಗೆ, “ಮೋಸ ಹೋಗಬೇಡ, ದಾವೀದನು ನಿನ್ನ ತಂದೆಯನ್ನು ಗೌರವಿಸಿ ನಿನ್ನನ್ನು ಸಂತೈಸಲು ಸೇವಕರನ್ನು ಕಳುಹಿಸಿದನೆಂದು ಭಾವಿಸಿಕೊಂಡಿರುವೆಯಾ? ಇಲ್ಲ, ಅವನು ನಿನ್ನ ರಾಜ್ಯದಲ್ಲಿ ಹೊಂಚುಹಾಕಲೂ ವಿಷಯಗಳನ್ನು ಸಂಗ್ರಹಿಸಲೂ ಕಳುಹಿಸಿದ್ದಾನೆ” ಎಂದು ಹೇಳಿದರು. ಆಗ ಹಾನೂನನು ದಾವೀದನ ಸೇವಕರನ್ನು ಬಂಧಿಸಿ ಅವರ ಗಡ್ಡಗಳನ್ನು ಬೋಳಿಸಿ ಅವರ ವಸ್ತ್ರಗಳನ್ನು ಸೊಂಟದಿಂದ ಕೆಳಭಾಗದವರೆಗೆ ಕತ್ತರಿಸಿಬಿಟ್ಟು ಅವರನ್ನು ಹಿಂದಕ್ಕೆ ಕಳುಹಿಸಿದನು.
ದಾವೀದನ ಸೇವಕರು ತಮ್ಮ ಮನೆಗೆ ಹಿಂದಿರುಗಲು ನಾಚಿಕೆಪಟ್ಟರು. ಇದನ್ನು ಅರಿತ ಕೆಲವರು ದಾವೀದನ ಬಳಿಗೆ ಹೋಗಿ ನಡೆದದ್ದನ್ನು ತಿಳಿಸಿದರು. ಆಗ ದಾವೀದನು, “ನೀವು ನಿಮ್ಮ ಗಡ್ಡ ಬೆಳೆಯುವ ತನಕ ಜೆರಿಕೊ ಪಟ್ಟಣದಲ್ಲಿಯೇ ಇರಿ. ಅನಂತರ ನೀವು ಮನೆಗೆ ಬರಬಹುದು” ಎಂದು ತನ್ನ ಸೇವಕರಿಗೆ ಹೇಳಿಕಳುಹಿಸಿದನು.
ದಾವೀದನು ತಮಗೆ ಶತ್ರುವಾದನೆಂದು ಅಮ್ಮೋನಿಯರಿಗೆ ತಿಳಿದಾಗ ಹಾನೂನನು ಮೂವತ್ನಾಲ್ಕು ಸಾವಿರ ಕಿಲೋಗ್ರಾಂ ತೂಕದ ಬೆಳ್ಳಿಯನ್ನು ಕೊಟ್ಟು ಮೆಸೊಪೊಟೆಮಿಯಾದಿಂದ ರಥಗಳನ್ನೂ ರಾಹುತರನ್ನೂ ಕೊಂಡುಕೊಂಡನು. ಅಲ್ಲದೆ ಅರಾಮದ ಮಾಕ ಮತ್ತು ಚೋಬಾ ಪಟ್ಟಣಗಳಿಂದ ರಥಗಳನ್ನು ಮತ್ತು ರಾಹುತರನ್ನು ಕೊಂಡುಕೊಂಡನು. ಹೀಗೆ ಅಮ್ಮೋನಿಯರು ಮೂವತ್ತೆರಡು ಸಾವಿರ ರಥಗಳಿಂದ ಯುದ್ಧಕ್ಕೆ ಸಜ್ಜಾದರು. ಅಲ್ಲದೆ ಮಾಕಾದ ಅರಸನಿಗೆ ಹಣವನ್ನು ಕೊಟ್ಟು ಅವನ ಸೈನ್ಯವನ್ನೂ ತಮ್ಮ ಸಹಾಯಕ್ಕೆ ಬರಮಾಡಿದರು. ಮಾಕದ ಅರಸನೂ ಅವನ ಸೈನಿಕರೂ ಬಂದು ಮೇದೆಬ ಪಟ್ಟಣದ ಬಳಿ ಪಾಳೆಯ ಮಾಡಿಕೊಂಡರು. ಇತ್ತ ಅಮ್ಮೋನಿಯರೂ ಯುದ್ಧಸನ್ನದ್ಧರಾದರು.
ಇದನ್ನು ಕೇಳಿದ ದಾವೀದನು ಯೋವಾಬನನ್ನೂ ತನ್ನ ಸಮಸ್ತ ಸೈನ್ಯವನ್ನೂ ಅವರೊಂದಿಗೆ ಯುದ್ಧಮಾಡಲು ಕಳುಹಿಸಿದನು. ಅಮ್ಮೋನಿಯರು ತಮ್ಮ ಪಟ್ಟಣದಿಂದ ಹೊರಬಂದರು. ಅವರ ಸಹಾಯಕ್ಕಾಗಿ ಬಂದಿದ್ದ ಅರಸರು ಪ್ರತ್ಯೇಕವಾಗಿಯೇ ಇದ್ದರು.
10 ಯೋವಾಬನು ರಣರಂಗವನ್ನು ವೀಕ್ಷಿಸಿದಾಗ ಎರಡು ಗುಂಪಿನ ಸೈನ್ಯಗಳಿದ್ದದ್ದನ್ನು ಕಂಡನು. ಒಂದು ಗುಂಪು ಅವನ ಮುಂಭಾಗದಲ್ಲಿಯೂ ಇನ್ನೊಂದು ಗುಂಪು ಅವನ ಹಿಂಭಾಗದಲ್ಲಿಯೂ ಇದ್ದವು. ಆಗ ಯೋವಾಬನು ತನ್ನಲ್ಲಿದ್ದ ರಣವೀರರನ್ನು ಆರಿಸಿ ಅರಾಮ್ಯರ ವಿರುದ್ಧವಾಗಿ ಯುದ್ಧಮಾಡಲು ಕಳುಹಿಸಿದನು. 11 ಉಳಿದ ಸೈನಿಕರನ್ನು ಅಬ್ಷೈಯನ ನಾಯಕತ್ವದಲ್ಲಿ ಇರಿಸಿದನು. ಅಬ್ಷೈಯು ಯೋವಾಬನ ತಮ್ಮನು. ಈ ಸೈನಿಕರು ಅಮ್ಮೋನಿಯರ ವಿರುದ್ಧವಾಗಿ ಯುದ್ಧಕ್ಕೆ ಹೊರಟರು. 12 ಯೋವಾಬನು ಅಬ್ಷೈಗೆ, “ಅರಾಮ್ಯರ ಸೈನ್ಯವು ನನಗಿಂತ ಬಲಿಷ್ಠವಾಗಿದ್ದರೆ, ನೀನು ನನ್ನ ಸಹಾಯಕ್ಕೆ ಬರಬೇಕು. ಅಮ್ಮೋನಿಯರ ಸೈನ್ಯವು ನಿನಗಿಂತ ಬಲಿಷ್ಠವಾಗಿದ್ದರೆ ನಾನು ನಿನ್ನ ಸಹಾಯಕ್ಕೆ ಬರುವೆನು. 13 ನಾವು ಧೈರ್ಯಶಾಲಿಗಳಾಗಿದ್ದು ಅಂಜದೆ ನಮ್ಮ ಜನರಿಗಾಗಿಯೂ ನಮ್ಮ ದೇವರ ಪಟ್ಟಣಗಳಿಗಾಗಿಯೂ ಯುದ್ಧಮಾಡೋಣ. ಯೆಹೋವನು ತನ್ನ ಚಿತ್ತದಂತೆ ನಮ್ಮನ್ನು ನಡೆಸಲಿ” ಎಂದು ಹೇಳಿದನು.
14 ಯೋವಾಬನು ತನ್ನ ಸೈನ್ಯದೊಡನೆ ಅರಾಮ್ಯರ ಸೈನ್ಯದ ಮೇಲೆ ದಾಳಿ ಮಾಡಿದನು. ಅರಾಮ್ಯರ ಸೈನ್ಯವು ಅವನೆದುರಿನಿಂದ ಓಡಿಹೋಯಿತು. 15 ಅರಾಮ್ಯರ ಸೈನ್ಯವು ಓಡಿಹೋಗುವುದನ್ನು ನೋಡಿದ ಅಮ್ಮೋನಿಯರು ಸಹ ಇಸ್ರೇಲರ ಎದುರಿನಿಂದ ಹಿಂತಿರಿಗಿ ಓಡಿದರು. ಅಬ್ಷೈ ಮತ್ತು ಅವನ ಸೈನಿಕರಿಂದ ಅವರು ಪಲಾಯನಗೈದು ತಮ್ಮ ಪಟ್ಟಣದೊಳಗೆ ಸೇರಿಕೊಂಡರು. ಯೋವಾಬನು ಜೆರುಸಲೇಮಿಗೆ ಹೋದನು.
16 ಅರಾಮ್ಯರು ತಾವು ಇಸ್ರೇಲರಿಂದ ಸೋತುಹೋದದ್ದನ್ನು ನೋಡಿ ಯೂಫ್ರೇಟೀಸ್ ನದಿಯ ಪೂರ್ವದಲ್ಲಿದ್ದ ಅರಾಮ್ಯರನ್ನು ಸಹಾಯಕ್ಕಾಗಿ ಕರೆಯಿಸಿದರು. ಶೋಫಕನು ಹದದೆಜರನ ಸೇನಾಧಿಪತಿಯಾಗಿದ್ದನು.
17 ಅರಾಮ್ಯರು ಯುದ್ಧಕ್ಕೆ ಜನಕೂಡಿಸುತ್ತಾರೆಂಬ ಸುದ್ದಿಯು ದಾವೀದನಿಗೆ ಮುಟ್ಟಿದಾಗ ಅವನು ಇಸ್ರೇಲ್ ಸೈನ್ಯವನ್ನು ಒಟ್ಟುಗೂಡಿಸಿ ಜೋರ್ಡನ್ ನದಿಯನ್ನು ದಾಟಿ ಅರಾಮ್ಯರೊಂದಿಗೆ ಯುದ್ಧಮಾಡಿದನು. ಯುದ್ಧಸನ್ನದ್ಧರಾಗಿ ಕಾಳಗವನ್ನು ಆರಂಭಿಸಿಯೇ ಬಿಟ್ಟರು. 18 ಅರಾಮ್ಯರು ಇಸ್ರೇಲರ ಎದುರು ನಿಲ್ಲಲಾರದೆ ಬೆನ್ನುಹಾಕಿ ಓಡಿದರು. ಆ ದಿವಸ ದಾವೀದನೂ ಅವನ ಸೈನಿಕರೂ ಅರಾಮ್ಯರ ಏಳು ಸಾವಿರ ಮಂದಿ ರಾಹುತರನ್ನೂ ನಲವತ್ತು ಸಾವಿರ ಮಂದಿ ಕಾಲಾಳುಗಳನ್ನೂ ಕೊಂದರು. ಇವರಲ್ಲಿ ಅರಾಮ್ಯರ ಸೇನಾಪತಿಯಾದ ಶೋಫಕನೂ ಕೊಲ್ಲಲ್ಪಟ್ಟನು.
19 ಹದದೆಜರನು ತಾನು ದಾವೀದನ ಸೈನ್ಯದಿಂದ ಸೋಲಿಸಲ್ಪಟ್ಟನೆಂದು ಗೊತ್ತಾದಾಗ ದಾವೀದನೊಂದಿಗೆ ಸಂಧಾನ ಮಾಡಿ ಅವನ ಸೇವಕನಾದನು. ಅಂದಿನಿಂದ ಅರಾಮ್ಯರು ಅಮ್ಮೋನಿಯರಿಗೆ ಸಹಾಯ ಮಾಡುವುದನ್ನು ನಿರಾಕರಿಸಿದರು.