20
ಅಮ್ಮೋನಿಯರನ್ನು ಯೋವಾಬನು ನಾಶಮಾಡಿದ್ದು
ವಸಂತಕಾಲದಲ್ಲಿ ರಾಜರುಗಳು ಯುದ್ಧಕ್ಕೆ ಹೊರಡುವ ಸಮಯ. ಯೋವಾಬನೂ ತನ್ನ ಸೈನ್ಯದೊಂದಿಗೆ ಯುದ್ಧಕ್ಕೆ ಹೊರಟನು. ಆದರೆ ದಾವೀದನು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು. ಇಸ್ರೇಲಿನ ಸೈನ್ಯವು ಅಮ್ಮೋನ್ ದೇಶದೊಳಗೆ ನುಗ್ಗಿ ಅದನ್ನು ನಾಶಮಾಡಿದರು. ಆಮೇಲೆ ರಬ್ಬ ಪಟ್ಟಣಕ್ಕೆ ಮುತ್ತಿಗೆಹಾಕಿ ಸಂಪೂರ್ಣವಾಗಿ ನಾಶಮಾಡಿದರು.
ಅದರ ಅರಸನ ಕಿರೀಟವನ್ನು ದಾವೀದನು ತೆಗೆದುಕೊಂಡನು. ಅದು ಎಪ್ಪತ್ತೈದು ಪೌಂಡು ಭಾರವುಳ್ಳದ್ದಾಗಿತ್ತು ಮತ್ತು ಅಮೂಲ್ಯವಾದ ರತ್ನಗಳಿಂದ ಮಾಡಿದ್ದಾಗಿತ್ತು. ಆ ಕಿರೀಟವನ್ನು ದಾವೀದನು ತನ್ನ ತಲೆಯ ಮೇಲೆ ಇಟ್ಟು ಕೊಂಡನು. ಆ ಪಟ್ಟಣದಿಂದ ಇನ್ನೂ ಅನೇಕ ಬೆಲೆಬಾಳುವ ವಸ್ತುಗಳನ್ನು ಸೂರೆ ಮಾಡಿದರು. ದಾವೀದನು ರಬ್ಬದ ಜನರನ್ನು ಸೆರೆಹಿಡಿದುಕೊಂಡು ಬಂದು ಅವರನ್ನು ಮರಕಡಿಯುವುದಕ್ಕೂ ಕೊಡಲಿ ಮತ್ತು ಹಾರೆಗಳಿಂದ ಕೆಲಸ ಮಾಡುವದಕ್ಕೂ ನೇಮಿಸಿದನು. ಇದೇ ಪ್ರಕಾರ ದಾವೀದನು ಅಮ್ಮೋನಿಯರ ಎಲ್ಲಾ ಪಟ್ಟಣಗಳಲ್ಲಿಯೂ ಮಾಡಿದನು. ನಂತರ ದಾವೀದನು ತನ್ನ ಸೈನ್ಯದೊಂದಿಗೆ ಜೆರುಸಲೇಮಿಗೆ ಹಿಂತಿರುಗಿ ಬಂದನು.
ಫಿಲಿಷ್ಟಿಯರ ದೈತ್ಯರನ್ನು ಕೊಂದದ್ದು
ಇದಾದ ಬಳಿಕ ಇಸ್ರೇಲರು ಗೆಜೆರಿನಲ್ಲಿ ಫಿಲಿಷ್ಟಿಯರ ಜೊತೆಯಲ್ಲಿ ಯುದ್ಧಮಾಡಿದರು. ಹುಷಯದವನಾದ ಸಿಬ್ಬೆಕೈ ಎಂಬವನು, ದೈತ್ಯನ ಮಗನಾದ ಸಿಪ್ಪೈ ಎಂಬವನನ್ನು ಕೊಂದನು. ಇದರಿಂದಾಗಿ ಫಿಲಿಷ್ಟಿಯರು ಇಸ್ರೇಲರಿಗೆ ಸೇವೆಮಾಡುವವರಾದರು.
ಇನ್ನೊಂದು ಸಾರಿ, ಇಸ್ರೇಲರು ಫಿಲಿಷ್ಟಿಯರೊಂದಿಗೆ ತಿರುಗಿ ಯುದ್ಧಮಾಡುವಾಗ ಯಾಯೀರನ ಮಗನಾದ ಎಲ್ಹಾನಾನನು ಗೊಲ್ಯಾತನ ತಮ್ಮನಾದ ಲಹ್ಮೀಯನ್ನು ಕೊಂದನು. ಗೊಲ್ಯಾತನು ಗತ್ ಪಟ್ಟಣದವನಾಗಿದ್ದನು. ಲಹ್ಮೀಯ ಈಟಿಯು ಬಹು ಭಾರವಾಗಿತ್ತು. ಕೈಮಗ್ಗದ ದೊಡ್ಡ ಕುಂಟೆಯಂತಿತ್ತು.
ಇದಾದನಂತರ ಇನ್ನೊಂದು ಯುದ್ಧವನ್ನು ಇಸ್ರೇಲರು ಫಿಲಿಷ್ಟಿಯರೊಂದಿಗೆ ಗತ್ ಊರಿನಲ್ಲಿ ಮಾಡಿದರು. ಅಲ್ಲಿ ಒಬ್ಬ ಎತ್ತರವಾದ ಪುರುಷನಿದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನೂ ರೆಫಾಯನಾಗಿದ್ದನು. ಇವನು ಇಸ್ರೇಲರನ್ನು ಪರಿಹಾಸ್ಯ ಮಾಡಿದಾಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು.
ಗತ್ ಊರಿನ ರೆಫಾಯರನ್ನು ದಾವೀದನೂ ಅವನ ಜನರೂ ಕೊಂದುಹಾಕಿದರು.