16
ಆಗ ಯೆಹೋವನು ಹನಾನೀಯ ಮಗನಾದ ಯೇಹುವಿನೊಂದಿಗೆ ಮಾತನಾಡಿ ರಾಜನಾದ ಬಾಷನ ವಿರುದ್ಧವಾಗಿ ಹೀಗೆ ಹೇಳಿದನು: “ನಾನು ನಿನ್ನನ್ನು ಪ್ರಾಮುಖ್ಯ ವ್ಯಕ್ತಿಯನ್ನಾಗಿ ಮಾಡಿದೆ. ಇಸ್ರೇಲಿನ ಜನರಿಗೆ ನಿನ್ನನ್ನು ರಾಜನನ್ನಾಗಿ ನಾನು ಮಾಡಿದೆ. ಆದರೆ ನೀನು ಯಾರೊಬ್ಬಾಮನ ಮಾರ್ಗವನ್ನೇ ಅನುಸರಿಸಿದೆ. ಇಸ್ರೇಲಿನ ನನ್ನ ಜನರು ಪಾಪಮಾಡುವಂತೆ ನೀನು ಪ್ರೇರೇಪಿಸಿದೆ. ಅವರು ತಮ್ಮ ಪಾಪಗಳಿಂದ ನನ್ನನ್ನು ಕೋಪಗೊಳಿಸಿದರು. ಆದ್ದರಿಂದ ಬಾಷನೇ, ನಿನ್ನನ್ನೂ ನಿನ್ನ ಕುಟುಂಬವನ್ನೂ ನಾನು ನಾಶಪಡಿಸುತ್ತೇನೆ. ನೆಬಾಟನ ಮಗನಾದ ಯಾರೊಬ್ಬಾಮನ ಕುಟುಂಬಕ್ಕೆ ನಾನು ಮಾಡಿದಂತೆ ನಿನಗೂ ಮಾಡುತ್ತೇನೆ. ನಿನ್ನ ಕುಟುಂಬದ ಜನರು ನಗರದ ಬೀದಿಗಳಲ್ಲಿ ಸಾಯುತ್ತಾರೆ; ಅವರ ದೇಹಗಳನ್ನು ನಾಯಿಗಳು ತಿನ್ನುತ್ತವೆ. ನಿನ್ನ ಕುಟುಂಬದ ಕೆಲವು ಜನರು ಹೊಲಗಳಲ್ಲಿ ಸಾಯುತ್ತಾರೆ. ಅವರ ದೇಹಗಳನ್ನು ಪಕ್ಷಿಗಳು ತಿನ್ನುತ್ತವೆ.”
ಬಾಷನು ಮಾಡಿದ ಎಲ್ಲ ಕಾರ್ಯಗಳ ಬಗ್ಗೆ ಮತ್ತು ಅವನ ಮಹಾಕಾರ್ಯಗಳ ಬಗ್ಗೆ, “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಬಾಷನು ಸತ್ತುಹೋದನು. ಅವನನ್ನು ತಿರ್ಚದಲ್ಲಿ ಸಮಾಧಿಮಾಡಿದರು. ಅವನ ಮಗನಾದ ಏಲನು ಅವನ ನಂತರ ಹೊಸ ರಾಜನಾದನು.
ಯೆಹೋವನು ಪ್ರವಾದಿಯಾದ ಯೇಹುವಿಗೆ ಒಂದು ಸಂದೇಶವನ್ನು ನೀಡಿದನು. ಈ ಸಂದೇಶವು ಬಾಷನ ಮತ್ತು ಅವನ ಕುಟುಂಬದ ವಿರುದ್ಧವಾಗಿತ್ತು. ಬಾಷನು ಯೆಹೋವನ ವಿರುದ್ಧವಾಗಿ ದುರಾಚಾರವನ್ನೆಸಗಿದನು. ಇದು ಯೆಹೋವನಿಗೆ ಹೆಚ್ಚು ಕೋಪವನ್ನು ಉಂಟುಮಾಡಿತು. ಯಾರೊಬ್ಬಾಮನ ಕುಟುಂಬವು ಅವನಿಗಿಂತ ಮುಂಚೆ ಮಾಡಿದ ಕಾರ್ಯಗಳನ್ನೇ ಬಾಷನೂ ಮಾಡಿದನು. ಬಾಷನು ಯಾರೊಬ್ಬಾಮನ ಕುಟುಂಬದವರನ್ನೆಲ್ಲಾ ಕೊಂದುಹಾಕಿದ್ದಕ್ಕಾಗಿಯೂ ಯೆಹೋವನು ಕೋಪಗೊಂಡನು.
ಇಸ್ರೇಲಿನ ರಾಜನಾದ ಏಲ
ಆಸನು ಯೆಹೂದದ ರಾಜನಾದ ಇಪ್ಪತ್ತಾರನೆಯ ವರ್ಷದಲ್ಲಿ ಏಲನು ಇಸ್ರೇಲಿನ ರಾಜನಾದನು. ಏಲನು ಬಾಷನ ಮಗ. ಅವನು ತಿರ್ಚದಲ್ಲಿ ಎರಡು ವರ್ಷ ಆಳಿದನು.
ಜಿಮ್ರಿಯು ಏಲನ ಅಧಿಕಾರಿಗಳಲ್ಲಿ ಒಬ್ಬನಾಗಿದ್ದನು. ಏಲನ ರಥಬಲದ ಅರ್ಧಭಾಗಕ್ಕೆ ಜಿಮ್ರಿಯು ಅಧಿಪತಿ. ಆದರೆ ಏಲನ ವಿರುದ್ಧ ಜಿಮ್ರಿಯು ಸಂಚುಮಾಡಿದನು. ರಾಜನಾದ ಏಲನು ತಿರ್ಚದಲ್ಲಿದ್ದನು. ಅವನು ಅರ್ಚನ ಮನೆಯಲ್ಲಿ ಕುಡಿದು ಮತ್ತನಾದನು. ಅರ್ಚನು ತಿರ್ಚದಲ್ಲಿದ್ದ ಅರಮನೆಯ ಮೇಲ್ವಿಚಾರಕ. 10 ಜಿಮ್ರಿಯು ಆ ಮನೆಯೊಳಕ್ಕೆ ಹೋಗಿ ರಾಜನಾದ ಏಲನನ್ನು ಕೊಂದುಹಾಕಿದನು. ಆಸನು ಯೆಹೂದದ ರಾಜನಾಗಿದ್ದ ಇಪ್ಪತ್ತೇಳನೆಯ ವರ್ಷದಲ್ಲಿ ಇದು ನಡೆಯಿತು. ಏಲನ ನಂತರ ಜಿಮ್ರಿಯು ಇಸ್ರೇಲಿನ ಹೊಸ ರಾಜನಾದನು.
ಇಸ್ರೇಲಿನ ರಾಜನಾದ ಜಿಮ್ರಿ
11 ಜಿಮ್ರಿಯು ಹೊಸ ರಾಜನಾದ ಮೇಲೆ ಬಾಷನ ಕುಟುಂಬದವರನ್ನೆಲ್ಲಾ ಕೊಂದುಹಾಕಿದನು. ಅವನು ಬಾಷನ ಕುಟುಂಬದಲ್ಲಿ ಯಾವ ಗಂಡಸನ್ನೂ ಬಿಡಲಿಲ್ಲ. ಬಾಷನ ಸ್ನೇಹಿತರನ್ನೂ ಜಿಮ್ರಿಯು ಕೊಂದುಹಾಕಿದನು. 12 ಹೀಗೆ ಜಿಮ್ರಿಯು ಬಾಷನ ಕುಟುಂಬವನ್ನು ನಾಶಗೊಳಿಸಿದನು. ಬಾಷನ ವಿರುದ್ಧವಾಗಿ ಯೆಹೋವನು ಪ್ರವಾದಿಯಾದ ಯೇಹುವಿನ ಮೂಲಕ ತಿಳಿಸಿದಂತೆ ಇದು ಸಂಭವಿಸಿತು. 13 ಬಾಷನ ಮತ್ತು ಅವನ ಮಗನಾದ ಏಲನ ಪಾಪಗಳೇ ಅದಕ್ಕೆ ಕಾರಣ. ಅವರು ಪಾಪಗಳನ್ನು ಮಾಡಿದರು ಮತ್ತು ಪಾಪಗಳನ್ನು ಮಾಡುವಂತೆ ಇಸ್ರೇಲಿನ ಜನರನ್ನು ಪ್ರೇರೇಪಿಸಿದರು. ಅವರಲ್ಲಿ ಅನೇಕ ವಿಗ್ರಹಗಳಿದ್ದುದರಿಂದ ಯೆಹೋವನು ಕೋಪಗೊಂಡನು.
14 ಏಲನು ಮಾಡಿದ ಇತರ ಕಾರ್ಯಗಳ ಬಗ್ಗೆ, “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.
15 ಆಸನು ಯೆಹೂದದ ರಾಜನಾದ ಇಪ್ಪತ್ತೇಳನೆಯ ವರ್ಷದಲ್ಲಿ ಜಿಮ್ರಿಯು ಇಸ್ರೇಲಿನ ರಾಜನಾದನು. ಜಿಮ್ರಿಯು ತಿರ್ಚದಲ್ಲಿ ಏಳು ದಿನ ಆಳಿದನು. ಆಗ ಸಂಭವಿಸಿದ್ದೇನೆಂದರೆ: ಇಸ್ರೇಲಿನ ಸೈನ್ಯವು ಫಿಲಿಷ್ಟಿಯರಿಗೆ ಸೇರಿದ್ದ ಗಿಬ್ಬೆತೋನಿನ ವಿರುದ್ಧ ಮುತ್ತಿಗೆ ಹಾಕಿದ್ದರು. ಅವರು ಯುದ್ಧಕ್ಕೆ ಸಿದ್ಧರಾಗಿದ್ದರು. 16 ರಾಜನ ವಿರುದ್ಧ ಜಿಮ್ರಿಯು ರಹಸ್ಯಯೋಜನೆಗಳನ್ನು ಮಾಡಿದ್ದಾನೆಂಬುದು ಪಾಳೆಯದಲ್ಲಿದ್ದ ಜನರಿಗೆ ತಿಳಿಯಿತು. ಅವನು ರಾಜನನ್ನು ಕೊಂದುಹಾಕಿದನೆಂಬುದು ಅವರಿಗೆ ತಿಳಿಯಿತು. ಆದ್ದರಿಂದ ಇಸ್ರೇಲರೆಲ್ಲರೂ ಆ ದಿನವೇ ಪಾಳೆಯದಲ್ಲಿ ಒಮ್ರಿಯನ್ನು ಇಸ್ರೇಲಿನ ರಾಜನನ್ನಾಗಿ ಮಾಡಿದರು. ಒಮ್ರಿಯು ಸೈನ್ಯದ ಅಧಿಪತಿಯಾಗಿದ್ದನು. 17 ಒಮ್ರಿಯು ಇಸ್ರೇಲರೆಲ್ಲರೊಡನೆ ಗಿಬ್ಬೆತೋನನ್ನು ಬಿಟ್ಟು ತಿರ್ಚಕ್ಕೆ ಮುತ್ತಿಗೆ ಹಾಕಿದನು. 18 ಆ ನಗರವು ವಶವಾದುದನ್ನು ಜಿಮ್ರಿಯು ಕಂಡು ಅರಮನೆಯೊಳಕ್ಕೆ ಹೋಗಿ ಬೆಂಕಿಯನ್ನು ಹತ್ತಿಸಿದನು. ಅವನು ಅರಮನೆಯನ್ನು ಸುಟ್ಟುಹಾಕಿ ತಾನೂ ಸುಟ್ಟುಕೊಂಡನು. 19 ಜಿಮ್ರಿಯು ತಾನು ಮಾಡಿದ ಪಾಪದ ಕಾರಣದಿಂದಲೇ ಸತ್ತುಹೋದನು. ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನು ಜಿಮ್ರಿಯು ಮಾಡಿದನು. ಯಾರೊಬ್ಬಾಮನು ಪಾಪಮಾಡಿದಂತೆ ಅವನೂ ಪಾಪವನ್ನು ಮಾಡಿದನು. ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು.
20 ಜಿಮ್ರಿಯ ರಹಸ್ಯಯೋಜನೆಗಳ ಕುರಿತಾಗಿಯೂ ಅವನು ಮಾಡಿದ ಇತರ ಕಾರ್ಯಗಳ ಕುರಿತಾಗಿಯೂ “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ, ಜಿಮ್ರಿಯು ರಾಜನಾದ ಏಲಾಗೆ ವಿರುದ್ಧವಾಗಿ ತಿರುಗಿಬಿದ್ದಾಗ ಸಂಭವಿಸಿದ ಘಟನೆಗಳನ್ನೂ ಆ ಪುಸ್ತಕದಲ್ಲಿ ಬರೆಯಲಾಗಿದೆ.
ಇಸ್ರೇಲಿನ ರಾಜನಾದ ಒಮ್ರಿ
21 ಇಸ್ರೇಲಿನ ಜನರಲ್ಲಿ ಎರಡು ಪಕ್ಷಗಳಾದವು. ಗೀನತನ ಮಗನಾದ ತಿಬ್ನಿಯನ್ನು ಒಂದು ಪಕ್ಷದವರು ಅನುಸರಿಸಿ, ಅವನನ್ನು ತಮ್ಮ ರಾಜನನ್ನಾಗಿ ಮಾಡಲು ಅಪೇಕ್ಷೆಪಟ್ಟರು. ಮತ್ತೊಂದು ಪಕ್ಷದವರು ಒಮ್ರಿಯನ್ನು ಅನುಸರಿಸಿದರು. 22 ಆದರೆ ಗೀನತನ ಮಗ ತಿಬ್ನಿಯ ಹಿಂಬಾಲಕರಿಗಿಂತಲೂ ಒಮ್ರಿಯ ಹಿಂಬಾಲಕರು ಬಲಶಾಲಿಗಳಾಗಿದ್ದರು. ಆದ್ದರಿಂದ ತಿಬ್ನಿಯನ್ನು ಕೊಲ್ಲಲಾಯಿತು; ಒಮ್ರಿಯು ರಾಜನಾದನು.
23 ಆಸನು ಯೆಹೂದದ ರಾಜನಾಗಿದ್ದ ಮೂವತ್ತೊಂದನೇ ವರ್ಷದಲ್ಲಿ ಒಮ್ರಿಯು ಇಸ್ರೇಲಿನ ರಾಜನಾದನು. ಒಮ್ರಿಯು ಇಸ್ರೇಲನ್ನು ಹನ್ನೆರಡು ವರ್ಷ ಆಳಿದನು. ಆ ಹನ್ನೆರಡು ವರ್ಷಗಳಲ್ಲಿ ಆರು ವರ್ಷ ಅವನು ತಿರ್ಚದಲ್ಲಿ ಆಳಿದನು. 24 ಆದರೆ ಒಮ್ರಿಯು ಸಮಾರ್ಯ ಬೆಟ್ಟವನ್ನು ಶೆಮೆರನಿಂದ ಅರವತ್ತೆಂಟು ಕಿಲೋಗ್ರಾಂ ಬೆಳ್ಳಿಗೆ ಕೊಂಡುಕೊಂಡನು. ಒಮ್ರಿಯು ಆ ಬೆಟ್ಟದ ಮೇಲೆ ಒಂದು ನಗರವನ್ನು ಕಟ್ಟಿಸಿದನು. ಅವನು ಆ ನಗರಕ್ಕೆ ಸಮಾರ್ಯವೆಂದು ಅದರ ಒಡೆಯನಾದ ಶೆಮೆರನ ಹೆಸರನ್ನು ಇಟ್ಟನು.
25 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನೆಲ್ಲ ಒಮ್ರಿಯು ಮಾಡಿದನು. ಒಮ್ರಿಯು ಅವನಿಗಿಂತಲೂ ಮುಂಚೆ ಇದ್ದ ರಾಜರುಗಳಲ್ಲೆಲ್ಲಾ ಅತ್ಯಂತ ಕೆಟ್ಟವನು. 26 ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದಂತಹ ಪಾಪಗಳನ್ನೇ ಅವನೂ ಮಾಡಿದನು, ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಆದ್ದರಿಂದ ಅವರು ಇಸ್ರೇಲಿನ ದೇವರಾದ ಯೆಹೋವನನ್ನು ಹೆಚ್ಚು ಕೋಪಗೊಳಿಸಿದರು. ಅವರು ನಿಷ್ಪ್ರಯೋಜಕವಾದ ವಿಗ್ರಹಗಳನ್ನು ಆರಾಧಿಸಿದ್ದರಿಂದ ಯೆಹೋವನು ಕೋಪಗೊಂಡನು.
27 ಒಮ್ರಿಯ ಕುರಿತಾದ ಇತರ ಸಂಗತಿಗಳನ್ನೂ ಅವನ ಪರಾಕ್ರಮಗಳನ್ನೂ “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. 28 ಒಮ್ರಿಯು ಸತ್ತುಹೋದನು; ಅವನನ್ನು ಸಮಾರ್ಯದಲ್ಲಿ ಸಮಾಧಿಮಾಡಿದರು, ಅವನ ನಂತರ ಅವನ ಮಗನಾದ ಅಹಾಬನು ಹೊಸ ರಾಜನಾದನು.
ಇಸ್ರೇಲಿನ ರಾಜನಾದ ಅಹಾಬ
29 ಆಸನು ಯೆಹೂದದ ರಾಜನಾಗಿದ್ದ ಮೂವತ್ತೆಂಟನೇ ವರ್ಷದಲ್ಲಿ ಒಮ್ರಿಯ ಮಗನಾದ ಅಹಾಬನು ಇಸ್ರೇಲಿನ ರಾಜನಾದನು. ಅಹಾಬನು ಇಸ್ರೇಲನ್ನು ಸಮಾರ್ಯ ಪಟ್ಟಣದಲ್ಲಿ ಇಪ್ಪತ್ತೆರಡು ವರ್ಷ ಆಳಿದನು. 30 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಅಹಾಬನು ಮಾಡಿದನು. ಅವನಿಗಿಂತಲೂ ಮುಂಚೆ ಇದ್ದ ರಾಜರುಗಳಲ್ಲೆಲ್ಲಾ ಅಹಾಬನೇ ಅತ್ಯಂತ ಕೆಟ್ಟವನು. 31 ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದಂತಹ ಪಾಪಗಳನ್ನೇ ಅಹಾಬನು ಮಾಡಿದರೂ ಅವು ಅವನಿಗೆ ಸಾಕಾಗಲಿಲ್ಲ. ಆದ್ದರಿಂದ ಅಹಾಬನು ಎತ್ಬಾಳನ ಮಗಳಾದ ಈಜೆಬೆಲಳನ್ನು ಮದುವೆಯಾದನು. ಎತ್ಬಾಳನು ಚೀದೋನ್ಯರ ರಾಜನಾಗಿದ್ದನು. ನಂತರ ಅಹಾಬನು ಬಾಳ್ ದೇವರನ್ನು ಪೂಜಿಸಿ ಅದರ ಸೇವೆ ಮಾಡಲಾರಂಭಿಸಿದನು. 32 ಬಾಳನನ್ನು ಪೂಜಿಸಲು ಅಹಾಬನು ಸಮಾರ್ಯದಲ್ಲಿ ಒಂದು ಗುಡಿಯನ್ನು ಕಟ್ಟಿಸಿದನು. ಆ ಗುಡಿಯಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. 33 ಅಹಾಬನು ಅಶೇರ ದೇವತೆಯನ್ನು ಆರಾಧಿಸಲು ಒಂದು ವಿಶೇಷ ಸ್ತಂಭವನ್ನು ನೆಡಿಸಿದನು. ಹೀಗೆ ಎಷ್ಟೋ ಕೆಟ್ಟಕಾರ್ಯಗಳನ್ನು ಮಾಡಿ ತನ್ನ ಮುಂಚೆ ಇದ್ದ ಇಸ್ರೇಲ್ ರಾಜರುಗಳಿಗಿಂತಲೂ ಹೆಚ್ಚಾಗಿ ಇಸ್ರೇಲ್ ದೇವರಾದ ಯೆಹೋವನನ್ನು ರೇಗಿಸಿದನು.
34 ಅಹಾಬನ ಕಾಲದಲ್ಲಿ ಬೇತೇಲಿನ ಹೀಯೇಲನು ಜೆರಿಕೊ ಪಟ್ಟಣವನ್ನು ಮತ್ತೆ ನಿರ್ಮಿಸಿದನು. ಹೀಯೇಲನು ನಗರದಲ್ಲಿ ಈ ಕೆಲಸವನ್ನು ಮಾಡಲು ಆರಂಭಿಸಿದ ಕಾಲದಲ್ಲಿಯೇ ಅವನ ಹಿರಿಯ ಮಗನಾದ ಅಬೀರಾಮನು ಸತ್ತುಹೋದನು. ಹೀಯೇಲನು ನಗರದ ಬಾಗಿಲುಗಳನ್ನು ಕಟ್ಟಿಸಿದಾಗ, ಅವನ ಕಿರಿಯ ಮಗನಾದ ಸೆಗೂಬನು ಸತ್ತುಹೋದನು. ಯೆಹೋವನು ಹೇಳಿದಂತೆಯೇ ಇದು ಸಂಭವಿಸಿತು. ನೂನನ ಮಗನಾದ ಯೆಹೋಶುವನ ಮೂಲಕ ಯೆಹೋವನು ಇದನ್ನು ತಿಳಿಸಿದ್ದನು.* ನೂನನ … ತಿಳಿಸಿದ್ದನು ಯೆಹೋಶುವನು ಜೆರಿಕೊವನ್ನು ನಾಶಗೊಳಿಸಿದಾಗ, ಈ ನಗರವನ್ನು ಯಾರೇ ಆಗಲಿ ಮತ್ತೆ ಕಟ್ಟಿದರೆ ಅವರು ತಮ್ಮ ಹಿರಿಯ ಮಗನನ್ನು ಮತ್ತು ಕಿರಿಯ ಮಗನನ್ನು ಕಳೆದುಕೊಳ್ಳುತ್ತಾರೆಂದು ಅವನು ಹೇಳಿದ್ದನು.

*16:34: ನೂನನ … ತಿಳಿಸಿದ್ದನು ಯೆಹೋಶುವನು ಜೆರಿಕೊವನ್ನು ನಾಶಗೊಳಿಸಿದಾಗ, ಈ ನಗರವನ್ನು ಯಾರೇ ಆಗಲಿ ಮತ್ತೆ ಕಟ್ಟಿದರೆ ಅವರು ತಮ್ಮ ಹಿರಿಯ ಮಗನನ್ನು ಮತ್ತು ಕಿರಿಯ ಮಗನನ್ನು ಕಳೆದುಕೊಳ್ಳುತ್ತಾರೆಂದು ಅವನು ಹೇಳಿದ್ದನು.