22
ಅಹಾಬನಿಗೆ ಮೀಕಾಯೆಹುವಿನ ಎಚ್ಚರಿಕೆ
ಮುಂದಿನ ಎರಡು ವರ್ಷಗಳಲ್ಲಿ, ಇಸ್ರೇಲ್ ಮತ್ತು ಅರಾಮ್ಯರ ಮಧ್ಯೆ ಶಾಂತಿಯಿತ್ತು. ಮೂರನೆಯ ವರ್ಷದಲ್ಲಿ ಯೆಹೂದದ ರಾಜನಾದ ಯೆಹೋಷಾಫಾಟನು ಇಸ್ರೇಲಿನ ರಾಜನಾದ ಅಹಾಬನನ್ನು ಭೇಟಿಮಾಡಲು ಹೋದನು.
ಆ ಸಮಯದಲ್ಲಿ, ಅಹಾಬನು ತನ್ನ ಅಧಿಕಾರಿಗಳಿಗೆ, “ಅರಾಮ್ಯರ ರಾಜನು ಗಿಲ್ಯಾದಿನ ರಾಮೋತ್ ಪಟ್ಟಣವನ್ನು ನಮ್ಮಿಂದ ತೆಗೆದುಕೊಂಡದ್ದನ್ನು ಜ್ಞಾಪಿಸಿಕೊಳ್ಳಿರಿ? ರಾಮೋತನ್ನು ಹಿಂದಕ್ಕೆ ಪಡೆಯಲು ನಾವು ಏನನ್ನೂ ಮಾಡಲಿಲ್ಲವೇಕೆ? ಅದು ನಮ್ಮ ಪಟ್ಟಣ” ಎಂದು ಹೇಳಿದನು. ಆದ್ದರಿಂದ ಅಹಾಬನು ರಾಜನಾದ ಯೆಹೋಷಾಫಾಟನನ್ನು, “ಅರಾಮ್ಯರ ವಿರುದ್ಧವಾಗಿ ರಾಮೋತಿನಲ್ಲಿ ಹೋರಾಟ ಮಾಡುವುದಕ್ಕೆ ನೀನು ನಮ್ಮೊಂದಿಗೆ ಸೇರಿಕೊಳ್ಳುವೆಯಾ?” ಎಂದು ಕೇಳಿದನು.
ಯೆಹೋಷಾಫಾಟನು, “ಆಗಲಿ, ನಾನು ನಿನ್ನ ಜೊತೆ ಸೇರಿಕೊಳ್ಳುತ್ತೇನೆ. ನನ್ನ ಸೈನ್ಯಗಳು ಮತ್ತು ನನ್ನ ಕುದುರೆಗಳು ನಿನ್ನ ಸೈನ್ಯದ ಜೊತೆ ಸೇರಲು ಸಿದ್ಧವಾಗಿವೆ. ಆದರೆ ಯೆಹೋವನ ಸಲಹೆಯನ್ನು ನಾವು ಮೊದಲು ಕೇಳಬೇಕಾಗಿದೆ” ಎಂದನು.
ಅಹಾಬನು ಪ್ರವಾದಿಗಳ ಸಭೆಯೊಂದನ್ನು ಕರೆದನು. ಆ ಸಮಯದಲ್ಲಿ ನಾನೂರುಮಂದಿ ಪ್ರವಾದಿಗಳಿದ್ದರು. ಅಹಾಬನು ಪ್ರವಾದಿಗಳನ್ನು, “ಅರಾಮ್ಯರ ಸೇನೆಯ ವಿರುದ್ಧ ಹೋರಾಡಲು ನಾನು ರಾಮೋತಿಗೆ ಹೋಗಬೇಕೇ? ಅಥವಾ ನಾನು ಬೇರೊಂದು ಸಮಯಕ್ಕಾಗಿ ಕಾಯಬೇಕೇ?” ಎಂದು ಕೇಳಿದನು.
ಪ್ರವಾದಿಗಳು, “ನೀನು ಹೋಗಿ ಯುದ್ಧಮಾಡು. ನೀನು ಗೆಲ್ಲುವಂತೆ ಯೆಹೋವನು ಮಾಡುವನು” ಎಂದು ಹೇಳಿದರು.
ಆದರೆ ಯೆಹೋಷಾಫಾಟನು, “ಯೆಹೋವನ ಪ್ರವಾದಿಗಳು ಇಲ್ಲಿ ಬೇರೆ ಯಾರಾದರೂ ಇದ್ದಾರೆಯೇ? ಯಾರಾದರೂ ಇದ್ದರೆ, ದೇವರು ಏನು ಹೇಳುತ್ತಾನೆಂಬುದನ್ನು ನಾವು ಅವರನ್ನು ಕೇಳೋಣ” ಎಂದು ಹೇಳಿದನು.
ರಾಜನಾದ ಅಹಾಬನು, “ಬೇರೊಬ್ಬ ಪ್ರವಾದಿಯು ಇಲ್ಲಿದ್ದಾನೆ. ಅವನು ಇಮ್ಲನ ಮಗನಾದ ಮೀಕಾಯೆಹು ಎಂಬ ಹೆಸರಿನವನು. ಆದರೆ ನಾನು ಅವನನ್ನು ದ್ವೇಷಿಸುತ್ತೇನೆ. ಯೆಹೋವನ ಪ್ರತಿನಿಧಿಯಾಗಿ ಅವನು ಮಾತನಾಡುವಾಗ ಅವನೆಂದೂ ನನಗೆ ಒಳ್ಳೆಯವುಗಳನ್ನು ಪ್ರವಾದಿಸುವುದಿಲ್ಲ. ಅವನು ಯಾವಾಗಲೂ ನನಗೆ ಕೆಟ್ಟವುಗಳನ್ನೇ ಪ್ರವಾದಿಸುತ್ತಾನೆ” ಎಂದು ಉತ್ತರಿಸಿದನು.
ಯೆಹೋಷಾಫಾಟನು, “ರಾಜನಾದ ಅಹಾಬನೇ, ನೀನು ಆ ಸಂಗತಿಗಳನ್ನು ಹೇಳಲೇಬಾರದು!” ಎಂದು ಹೇಳಿದನು.
ರಾಜನಾದ ಅಹಾಬನು ತನ್ನ ಅಧಿಕಾರಿಗಳಲ್ಲಿ ಒಬ್ಬನಿಗೆ, “ಹೋಗಿ, ಮೀಕಾಯೆಹುವನ್ನು ಕಂಡುಹಿಡಿ” ಎಂದು ತಿಳಿಸಿದನು.
10 ಆ ಸಮಯದಲ್ಲಿ ಈ ಇಬ್ಬರು ರಾಜರು ತಮ್ಮ ರಾಜವಸ್ತ್ರಗಳನ್ನು ಧರಿಸಿದ್ದರು. ಸಮಾರ್ಯ ಪಟ್ಟಣದ ಹೆಬ್ಬಾಗಿಲಿನ ಬಳಿಯಲ್ಲಿದ್ದ ಸಿಂಹಾಸನಗಳ ಮೇಲೆ ಅವರು ಕುಳಿತಿದ್ದರು. ಅವರ ಎದುರಿನಲ್ಲಿ ಪ್ರವಾದಿಗಳೆಲ್ಲರೂ ನಿಂತಿದ್ದರು. ಪ್ರವಾದಿಗಳು ಪ್ರವಾದಿಸುತ್ತಿದ್ದರು. 11 ಪ್ರವಾದಿಗಳಲ್ಲಿ ಚಿದ್ಕೀಯ ಎಂಬ ಹೆಸರಿನವನೊಬ್ಬನಿದ್ದನು. ಅವನು ಕೆನಾನನ ಮಗ. ಚಿದ್ಕೀಯನು ಕೆಲವು ಕಬ್ಬಿಣದ ಕೊಂಬುಗಳನ್ನು* ಕಬ್ಬಿಣದ ಕೊಂಬುಗಳು ಉನ್ನತ ಶೌರ್ಯಕ್ಕೆ ಇವು ಸಂಕೇತಗಳು. ಮಾಡಿಸಿದ್ದನು. ಆಗ ಅವನು ಅಹಾಬನಿಗೆ, “ಯೆಹೋವನು ಹೀಗೆನ್ನುವನು: ‘ಅರಾಮ್ಯರ ಸೈನ್ಯದ ವಿರುದ್ಧ ಹೋರಾಡಲು ನೀನು ಈ ಕೊಂಬುಗಳನ್ನು ಬಳಸುವೆ. ನೀನು ಅವರನ್ನು ಸೋಲಿಸುವೆ ಮತ್ತು ನಾಶಗೊಳಿಸುವೆ’ ” ಎಂದು ಹೇಳಿದನು. 12 ಇತರ ಪ್ರವಾದಿಗಳೆಲ್ಲರೂ ಚಿದ್ಕೀಯನ ಮಾತನ್ನು ಬೆಂಬಲಿಸಿದರು. ಪ್ರವಾದಿಯು, “ನಿನ್ನ ಸೈನ್ಯವು ಈಗ ಹೊರಡಲಿ. ಅವರು ರಾಮೋತಿನಲ್ಲಿ ಅರಾಮ್ಯರ ಸೈನ್ಯದ ವಿರುದ್ಧ ಹೋರಾಡಲೇಬೇಕು. ನೀನು ಹೋರಾಟದಲ್ಲಿ ಜಯಗಳಿಸುವೆ. ನೀನು ಗೆಲ್ಲುವಂತೆ ಯೆಹೋವನು ಮಾಡುತ್ತಾನೆ” ಎಂದನು.
13 ಈ ಕಾರ್ಯಗಳು ನಡೆಯುತ್ತಿರುವಾಗ, ಮೀಕಾಯೆಹುವನ್ನು ಕಂಡುಹಿಡಿಯಲು ಅಧಿಕಾರಿಯೊಬ್ಬನು ಹೋದನು. ಅಧಿಕಾರಿಯು ಮೀಕಾಯೆಹುವನ್ನು ಕಂಡುಹಿಡಿದು, ಅವನಿಗೆ, “ರಾಜನಿಗೆ ಶುಭವಾಗುವುದೆಂದು ಪ್ರವಾದಿಗಳೆಲ್ಲರೂ ಹೇಳಿದ್ದಾರೆ. ಆದ್ದರಿಂದ ಅವರು ಹೇಳಿದಂತೆಯೇ ನೀನೂ ಹೇಳುವುದು ನಿನಗೇ ಒಳ್ಳೆಯದು” ಎಂದು ಹೇಳಿದನು.
14 ಆದರೆ ಮೀಕಾಯೆಹುವು, “ಇಲ್ಲ! ಯೆಹೋವನಾಣೆ, ಆತನು ತಿಳಿಸುವುದನ್ನೇ ನಾನು ಹೇಳುತ್ತೇನೆ” ಎಂದು ಉತ್ತರಿಸಿದನು.
15 ನಂತರ ರಾಜನಾದ ಅಹಾಬನ ಎದುರಿನಲ್ಲಿ ಮೀಕಾಯೆಹು ನಿಂತುಕೊಂಡನು. ರಾಜನು ಅವನನ್ನು, “ಮೀಕಾಯೆಹುವೇ, ರಾಜನಾದ ಯೆಹೋಷಾಫಾಟನು ಮತ್ತು ನಾನು ನಮ್ಮ ಸೈನ್ಯಗಳನ್ನು ಒಟ್ಟುಗೂಡಿಸಬಹುದೇ? ಅರಾಮ್ಯರ ಸೇನೆಯ ವಿರುದ್ಧ ಹೋರಾಡಲು ರಾಮೋತಿಗೆ ನಾವೀಗ ಹೋಗಬೇಕೆ?” ಎಂದು ಕೇಳಿದನು.
ಮೀಕಾಯೆಹು, “ಆಗಲಿ, ಈಗ ನೀವು ಹೋಗಿ, ಅವರ ವಿರುದ್ಧ ಯುದ್ಧಮಾಡಿ. ಯೆಹೋವನು ನಿಮಗೆ ಜಯವನ್ನು ಕೊಡುತ್ತಾನೆ” ಎಂದನು.
16 ಆದರೆ ಅಹಾಬನು, “ಯೆಹೋವನ ಶಕ್ತಿಯಿಂದ ನೀನು ಮಾತನಾಡುತ್ತಿಲ್ಲ. ನೀನು ನಿನ್ನ ಸ್ವಂತ ಮಾತುಗಳನ್ನು ಹೇಳುತ್ತಿರುವೆ. ನನಗೆ ನೀನು ನಿಜವನ್ನು ಹೇಳು! ನಾನು ನಿನಗೆ ಎಷ್ಟು ಸಲ ಹೇಳಬೇಕು? ಯೆಹೋವನು ತಿಳಿಸುವುದನ್ನೇ ನನಗೆ ಹೇಳು!” ಎಂದು ಕೇಳಿದನು.
17 ಮೀಕಾಯೆಹು, “ಮುಂದೆ ಸಂಭವಿಸುವುದು ನನಗೆ ಕಾಣುತ್ತಿದೆ. ಇಸ್ರೇಲಿನ ಸೈನ್ಯವು ಬೆಟ್ಟಗಳ ಮೇಲೆ ಚೆಲ್ಲಾಪಿಲ್ಲಿಯಾಗಿ ಕುರುಬನಿಲ್ಲದ ಕುರಿಗಳಂತಾಗಿದೆ. ಯೆಹೋವನು ಹೇಳುವುದು ಇದನ್ನೇ, ‘ಈ ಜನರಿಗೆ ನಾಯಕನಿಲ್ಲ. ಅವರು ಯುದ್ಧಮಾಡದೆ, ಮನೆಗೆ ಹೋಗಬೇಕು’ ” ಎಂದು ಹೇಳಿದನು.
18 ಆಗ ಅಹಾಬನು ಯೆಹೋಷಾಫಾಟನಿಗೆ, “ನೋಡಿದೆಯಾ! ನಾನು ನಿನಗೆ ಹೇಳಿದೆನಲ್ಲಾ! ಈ ಪ್ರವಾದಿಯು ಎಂದೂ ನನ್ನ ಬಗ್ಗೆ ಒಳ್ಳೆಯದೇನನ್ನೂ ಹೇಳುವುದಿಲ್ಲ. ನಾನು ಕೇಳಬಾರದ ಸಂಗತಿಗಳನ್ನು ಅವನು ಯಾವಾಗಲೂ ನನಗೆ ಹೇಳುತ್ತಾನೆ” ಎಂದು ಹೇಳಿದನು.
19 ಆದರೆ ಮೀಕಾಯೆಹು ಯೆಹೋವನಿಗಾಗಿ ಮಾತನಾಡುತ್ತಲೇ ಇದ್ದನು. ಮೀಕಾಯೆಹು, “ಕೇಳಿರಿ! ಈ ಮಾತುಗಳನ್ನು ಯೆಹೋವನು ತಿಳಿಸುತ್ತಾನೆ! ಯೆಹೋವನು ಪರಲೋಕದಲ್ಲಿ ತನ್ನ ಸಿಂಹಾಸನದ ಮೇಲೆ ಕುಳಿತಿರುವುದನ್ನು ನಾನು ನೋಡಿದೆನು. ಆತನ ಎಲ್ಲಾ ದೂತರು ಆತನ ಎಡಬಲಗಳಲ್ಲಿ ನಿಂತಿದ್ದರು. 20 ಯೆಹೋವನು ಅವರಿಗೆ, ‘ನಿಮ್ಮಲ್ಲಿ ಯಾರಾದರೂ ರಾಜನಾದ ಅಹಾಬನನ್ನು ಪ್ರೇರೇಪಿಸುವಿರಾ? ಅವನು ಅರಾಮ್ಯರ ಸೇನೆಯ ವಿರುದ್ಧ ಹೋರಾಡಲು ರಾಮೋತಿಗೆ ಹೋಗಬೇಕೆಂದು ನಾನು ಅಪೇಕ್ಷೆಪಟ್ಟಿದ್ದೇನೆ. ಅಲ್ಲಿ ಅವನು ಕೊಲ್ಲಲ್ಪಡುವನು’ ಎಂದು ಹೇಳಿದನು. ತಾವು ಏನು ಮಾಡಬೇಕೆಂಬುದರ ಬಗ್ಗೆ ದೂತರಲ್ಲಿ ಒಮ್ಮತದ ಅಭಿಪ್ರಾಯವುಂಟಾಗಲಿಲ್ಲ. 21 ಆಗ ಒಬ್ಬ ದೂತನು ಯೆಹೋವನ ಬಳಿಗೆ ಹೋಗಿ, ‘ನಾನು ಅವನನ್ನು ಪ್ರೇರೇಪಿಸುತ್ತೇನೆ’ ಎಂದನು. 22 ಯೆಹೋವನು, ‘ರಾಜನಾದ ಅಹಾಬನನ್ನು ನೀನು ಹೇಗೆ ಪ್ರೇರೇಪಿಸುವೆ?’ ಎಂದು ಉತ್ತರಿಸಿದಾಗ, ದೂತನು, ‘ಅಹಾಬನ ಎಲ್ಲಾ ಪ್ರವಾದಿಗಳು ಗಲಿಬಿಲಿಗೊಳ್ಳುವಂತೆ ಮಾಡುತ್ತೇನೆ. ರಾಜನಾದ ಅಹಾಬನಿಗೆ ಪ್ರವಾದಿಗಳು ಸುಳ್ಳುಹೇಳುವಂತೆ ನಾನು ಮಾಡುತ್ತೇನೆ. ಪ್ರವಾದಿಗಳ ಸಂದೇಶವೆಲ್ಲವೂ ಸುಳ್ಳಾಗಿರುವುದು’ ಎಂದನು. ಆದ್ದರಿಂದ ಯೆಹೋವನು, ‘ಸರಿ, ಹೋಗಿ ರಾಜನಾದ ಅಹಾಬನನ್ನು ಪ್ರೇರೇಪಿಸು. ನೀನು ಸಫಲನಾಗುವೆ’ ” ಎಂದು ಹೇಳಿದನು.
23 ಮೀಕಾಯೆಹು ಹೀಗೆ ಹೇಳಿದ ಮೇಲೆ, “ಇಲ್ಲಿ ನಡೆದದ್ದೂ ಇದೇ. ನಿನ್ನ ಪ್ರವಾದಿಗಳೇ ನಿನಗೆ ಸುಳ್ಳುಹೇಳುವಂತೆ ಯೆಹೋವನು ಮಾಡಿದ್ದಾನೆ. ನಿನಗೆ ಮಹಾಕೇಡು ಬರಲೆಂದು ಯೆಹೋವನು ತಾನೇ ತೀರ್ಮಾನಿಸಿದ್ದಾನೆ” ಎಂದು ಹೇಳಿದನು.
24 ಆಗ ಪ್ರವಾದಿಯಾದ ಚಿದ್ಕೀಯನು ಮೀಕಾಯೆಹುವಿನ ಹತ್ತಿರಕ್ಕೆ ಹೋಗಿ ಅವನ ಮುಖದ ಮೇಲೆ ಹೊಡೆದು, “ಯೆಹೋವನ ಆತ್ಮವು ನನ್ನನ್ನು ಬಿಟ್ಟುಹೋಗಿದೆ ಎಂಬುದನ್ನೂ ಈಗ ನಿನ್ನ ಮೂಲಕ ಮಾತನಾಡುತ್ತಿದ್ದಾನೆ ಎಂಬುದನ್ನೂ ನೀನು ನಿಜವಾಗಿಯೂ ನಂಬುವೆಯಾ?” ಎಂದು ಕೇಳಿದನು.
25 ಮೀಕಾಯೆಹು, “ಕೇಡು ಬೇಗನೆ ಬರಲಿದೆ. ಆಗ ನೀನು ಹೋಗಿ ಒಂದು ಚಿಕ್ಕ ಕೊಠಡಿಯಲ್ಲಿ ಅಡಗಿಕೊಳ್ಳುವೆ. ನಾನು ಸತ್ಯವನ್ನೇ ನುಡಿದೆನೆಂದು ಆಗ ನಿನಗೆ ತಿಳಿಯುತ್ತದೆ!” ಎಂದನು.
26 ಆಗ ರಾಜನಾದ ಅಹಾಬನು ಮೀಕಾಯೆಹುವನ್ನು ಬಂಧಿಸುವಂತೆ ತನ್ನ ಅಧಿಕಾರಿಯೊಬ್ಬನಿಗೆ ಆಜ್ಞೆ ಮಾಡಿದನು. ರಾಜನಾದ ಅಹಾಬನು, “ಅವನನ್ನು ಬಂಧಿಸಿ, ನಗರಾಧಿಕಾರಿಯಾದ ಆಮೋನ ಮತ್ತು ರಾಜಪುತ್ರನಾದ ಯೋವಾಷನ ಬಳಿಗೆ ತೆಗೆದುಕೊಂಡು ಹೋಗಿ. 27 ಮೀಕಾಯೆಹುವನ್ನು ಸೆರೆಮನೆಯಲ್ಲಿಡಬೇಕೆಂದು ಅವರಿಗೆ ತಿಳಿಸಿ. ಅವನಿಗೆ ತಿನ್ನಲ್ಲು ಸ್ವಲ್ಪ ರೊಟ್ಟಿ ಮತ್ತು ಕುಡಿಯಲು ಸ್ವಲ್ಪ ನೀರನ್ನು ಮಾತ್ರ ಕೊಡಿ. ನಾನು ಯುದ್ಧದಿಂದ ಮನೆಗೆ ಹಿಂದಿರುಗುವವರೆಗೆ ಅವನನ್ನು ಅಲ್ಲಿಯೇ ಇಡಿ” ಎಂದು ಹೇಳಿದನು.
28 ಮೀಕಾಯೆಹು ಗಟ್ಟಿಯಾದ ಧ್ವನಿಯಲ್ಲಿ, “ನಾನು ಏನು ಹೇಳುತ್ತೇನೆಂಬುದನ್ನು ಜನರೆಲ್ಲರೂ ಕೇಳಿರಿ! ರಾಜನಾದ ಅಹಾಬನೇ, ನೀನು ಈ ಹೋರಾಟದಿಂದ ಜೀವಸಹಿತ ಮನೆಗೆ ಬಂದರೆ, ಯೆಹೋವನು ನನ್ನ ಮೂಲಕ ಮಾತನಾಡಿಲ್ಲ” ಎಂದು ಹೇಳಿದನು.
29 ನಂತರ ರಾಜನಾದ ಅಹಾಬನು ಮತ್ತು ರಾಜನಾದ ಯೆಹೋಷಾಫಾಟನು ಅರಾಮ್ಯರ ಸೇನೆಯ ವಿರುದ್ಧ ಹೋರಾಡಲು ರಾಮೋತಿಗೆ ಹೋದರು. ಅದು ಗಿಲ್ಯಾದಿನ ಪ್ರದೇಶವೆಂಬಲ್ಲಿ ನಡೆಯಿತು. 30 ಅಹಾಬನು ಯೆಹೋಷಾಫಾಟನಿಗೆ, “ನಾವು ಹೋರಾಟಕ್ಕೆ ಸಿದ್ಧತೆಗಳನ್ನು ಮಾಡೋಣ. ನೋಡುವುದಕ್ಕೆ ರಾಜನಲ್ಲವೆಂದು ತೋರುವಂತಹ ವಸ್ತ್ರಗಳನ್ನು ನಾನು ಧರಿಸಿಕೊಳ್ಳುತ್ತೇನೆ. ಆದರೆ ನೀನು ರಾಜನಂತೆ ತೋರುವ ನಿನ್ನ ವಿಶೇಷ ವಸ್ತ್ರಗಳನ್ನು ಧರಿಸಿಕೊ” ಎಂದನು. ಇಸ್ರೇಲಿನ ರಾಜನು, ತಾನು ರಾಜನಲ್ಲವೆಂದು ತೋರುವಂತಹ ವಸ್ತ್ರಗಳನ್ನು ಧರಿಸಿಕೊಂಡು ಹೋರಾಟವನ್ನು ಆರಂಭಿಸಿದನು.
31 ಅರಾಮ್ಯರ ರಾಜನ ಬಳಿ ಮೂವತ್ತೆರಡು ರಥಬಲದ ಅಧಿಪತಿಗಳಿದ್ದರು. ಆ ರಾಜನು ಇಸ್ರೇಲಿನ ರಾಜನನ್ನು ಕಂಡು ಹಿಡಿಯುವಂತೆ ಈ ಮೂವತ್ತೆರಡು ರಥಬಲದ ಅಧಿಪತಿಗಳಿಗೆ ಆಜ್ಞಾಪಿಸಿದ್ದನು. ಅರಾಮ್ಯರ ರಾಜನು, ಇಸ್ರೇಲಿನ ರಾಜನನ್ನು ಕೊಂದುಹಾಕುವಂತೆ ಈ ಅಧಿಕಾರಿಗಳಿಗೆ ಆಜ್ಞಾಪಿಸಿದ್ದನು; 32 ಹೋರಾಟದ ಸಂದರ್ಭದಲ್ಲಿ ರಾಜನಾದ ಯೆಹೋಷಾಫಾಟನನ್ನು ಈ ಅಧಿಪತಿಗಳು ನೋಡಿದರು. ಆ ಅಧಿಕಾರಿಗಳು ಅವನನ್ನು ಇಸ್ರೇಲಿನ ರಾಜನೆಂದು ತಿಳಿದು ಅವನನ್ನು ಕೊಲ್ಲುವುದಕ್ಕೆ ಅವರು ಹೋದರು. ಯೆಹೋಷಾಫಾಟನು ಕೂಗಿಕೊಳ್ಳಲಾರಂಭಿಸಿದನು. 33 ಅವನು ರಾಜನಾದ ಅಹಾಬನಲ್ಲವೆಂಬುದನ್ನು ಆ ಅಧಿಕಾರಿಗಳು ತಿಳಿದು ಅವನನ್ನು ಕೊಲ್ಲಲಿಲ್ಲ.
34 ಆದರೆ ಒಬ್ಬ ಸೈನಿಕನು ಯಾರಿಗೂ ಗುರಿಯಿಡದೆ ಒಂದು ಬಾಣವನ್ನು ಗಾಳಿಯಲ್ಲಿ ಹೊಡೆದನು. ಆದರೆ ಅವನ ಬಾಣವು ಇಸ್ರೇಲಿನ ರಾಜನಾದ ಅಹಾಬನಿಗೆ ಬಡಿಯಿತು. ಆ ಬಾಣವು ರಾಜನ ದೇಹದ ಕವಚದ ಸಣ್ಣ ಸಂಧಿಯಲ್ಲಿ ತಾಕಿತು. ರಾಜನಾದ ಅಹಾಬನು ತನ್ನ ರಥದ ಸಾರಥಿಗೆ, “ಒಂದು ಬಾಣವು ನನಗೆ ತಾಕಿತು! ರಥವನ್ನು ಈ ಪ್ರದೇಶದಿಂದ ಹೊರಗೆ ಓಡಿಸು. ನಾವು ಯುದ್ಧದಿಂದ ಹೊರಟುಹೋಗಬೇಕಾಗಿದೆ” ಎಂದು ಹೇಳಿದನು.
35 ಸೈನಿಕರು ಹೋರಾಡುತ್ತಲೇ ಇದ್ದರು. ರಾಜನಾದ ಅಹಾಬನು ರಥದಲ್ಲಿಯೇ ಇದ್ದನು. ಅವನು ರಥದ ಒಂದು ಪಕ್ಕಕ್ಕೆ ಒರಗಿಕೊಂಡು ನಿಂತಿದ್ದನು. ಅವನು ಅರಾಮ್ಯರ ಸೇನೆಯ ಕಡೆಗೆ ನೋಡುತ್ತಲೇ ಇದ್ದನು. ಅವನ ದೇಹದಿಂದ ಹರಿದ ರಕ್ತವು, ರಥದ ತಳದಲ್ಲಿ ಮಡುಗಟ್ಟಿತು. ಸಾಯಂಕಾಲವಾದ ಮೇಲೆ ರಾಜನು ಸತ್ತುಹೋದನು. 36 ಸೂರ್ಯನು ಮುಳುಗುತ್ತಿರಲು, ಇಸ್ರೇಲಿನ ಸೈನ್ಯದ ಪ್ರತಿಯೊಬ್ಬನು ತನ್ನ ಊರಿಗೂ ತನ್ನ ನಾಡಿಗೂ ಹೋಗಬೇಕು! ಎಂಬ ಕೂಗು ಸೈನ್ಯದಲ್ಲೆಲ್ಲಾ (ಪಾಳೆಯದಲ್ಲಿ) ಹಬ್ಬಿತು.
37 ರಾಜನಾದ ಅಹಾಬನು ಈ ರೀತಿಯಲ್ಲಿ ಸತ್ತುಹೋದನು. ಅವನ ದೇಹವನ್ನು ಕೆಲವು ಜನರು ಸಮಾರ್ಯಕ್ಕೆ ತೆಗೆದುಕೊಂಡು ಹೋದರು. ಅವರು ಅವನನ್ನು ಅಲ್ಲಿ ಸಮಾಧಿಮಾಡಿದರು. 38 ಆ ಜನರು ಅಹಾಬನ ರಥವನ್ನು ಸಮಾರ್ಯದ ಕೊಳದ ನೀರಿನಲ್ಲಿ ತೊಳೆದರು. ರಥದಲ್ಲಿದ್ದ ರಾಜನಾದ ಅಹಾಬನ ರಕ್ತವನ್ನು ನಾಯಿಗಳು ನೆಕ್ಕಿದವು. ದೇವದಾಸಿಯರು ಆ ಕೊಳದ ನೀರನ್ನು ಸ್ನಾನಕ್ಕೆ ಉಪಯೋಗಿಸುತ್ತಿದ್ದರು. ಯೆಹೋವನು ಹೇಳಿದ್ದ ರೀತಿಯಲ್ಲಿಯೇ ಈ ಸಂಗತಿಗಳು ಸಂಭವಿಸಿದವು.
39 ರಾಜನಾದ ಅಹಾಬನು ತನ್ನ ಆಳ್ವಿಕೆಯ ಕಾಲದಲ್ಲಿ ಮಾಡಿದ ಸಂಗತಿಗಳನ್ನೆಲ್ಲಾ “ಇಸ್ರೇಲಿನ ರಾಜರುಗಳ ಇತಿಹಾಸ” ಪುಸ್ತಕದಲ್ಲಿ ಬರೆದಿದ್ದಾರೆ. ರಾಜನು ತನ್ನ ಅರಮನೆಯನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಲು ಬಳಸಿದ ದಂತದ ಕುರಿತಾಗಿಯೂ ಆ ಪುಸ್ತಕವು ತಿಳಿಸುತ್ತದೆ. ರಾಜನು ನಿರ್ಮಿಸಿದ ನಗರಗಳ ಬಗ್ಗೆಯೂ ಆ ಪುಸ್ತಕವು ತಿಳಿಸುತ್ತದೆ. 40 ಅಹಾಬನು ಸತ್ತಾಗ ಅವನನ್ನು ಅವನ ಪೂರ್ವಿಕರೊಡನೆ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಅಹಜ್ಯನು ರಾಜನಾದನು.
ಯೆಹೂದದ ರಾಜನಾದ ಯೆಹೋಷಾಫಾಟ
41 ಅಹಾಬನು ಇಸ್ರೇಲಿನ ರಾಜನಾಗಿದ್ದ ನಾಲ್ಕನೆಯ ವರ್ಷದಲ್ಲಿ ಯೆಹೋಷಾಫಾಟನು ಯೆಹೂದದ ರಾಜನಾದನು. ಯೆಹೋಷಾಫಾಟನು ಆಸನ ಮಗ. 42 ಯೆಹೋಷಾಫಾಟನು ರಾಜನಾದಾಗ ಅವನಿಗೆ ಮೂವತ್ತೈದು ವರ್ಷ ವಯಸ್ಸಾಗಿತ್ತು. ಯೆಹೋಷಾಫಾಟನು ಜೆರುಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಯೆಹೋಷಾಫಾಟನ ತಾಯಿಯು ಆಜೂಬಳೆಂಬ ಹೆಸರಿನವಳು. ಆಜೂಬಳು ಶಿಲ್ಹಿಯ ಮಗಳು. 43 ಯೆಹೋಷಾಫಾಟನು ಒಳ್ಳೆಯವನಾಗಿದ್ದನು. ಅವನು ತನ್ನ ತಂದೆಯ ಮಾರ್ಗವನ್ನು ಅನುಸರಿಸಿದನು. ಯೆಹೋವನು ಅಪೇಕ್ಷಿಸಿದವುಗಳಿಗೆಲ್ಲ ಅವನು ವಿಧೇಯನಾಗಿದ್ದನು. ಆದರೆ ಯೆಹೋಷಾಫಾಟನು ಉನ್ನತಸ್ಥಳಗಳನ್ನು ನಾಶಗೊಳಿಸಲಿಲ್ಲ. ಜನರು ಆ ಸ್ಥಳಗಳಲ್ಲಿ ಯಜ್ಞಗಳನ್ನು ಅರ್ಪಿಸುತ್ತಾ ಧೂಪಹಾಕುತ್ತಾ ಇದ್ದರು.
44 ಯೆಹೋಷಾಫಾಟನು ಇಸ್ರೇಲಿನ ರಾಜನೊಂದಿಗೆ ಒಂದು ಶಾಂತಿಒಪ್ಪಂದವನ್ನು ಮಾಡಿಕೊಂಡನು. 45 ಯೆಹೋಷಾಫಾಟನು ಬಹಳ ಧೈರ್ಯಶಾಲಿ. ಅವನು ಅನೇಕ ಯುದ್ಧಗಳಲ್ಲಿ ಹೋರಾಡಿದ್ದನು. ಅವನು ಮಾಡಿದ ಕಾರ್ಯಗಳನ್ನೆಲ್ಲಾ “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆಯಲಾಗಿದೆ.
46 ಲೈಂಗಿಕ ಸಂಬಂಧಕ್ಕಾಗಿ ತಮ್ಮ ದೇಹಗಳನ್ನು ಮಾರಾಟ ಮಾಡುತ್ತಿದ್ದ ಗಂಡಸರನ್ನು ಮತ್ತು ಹೆಂಗಸರನ್ನು, ಯೆಹೋಷಾಫಾಟನು ದೇಶದಿಂದ ಹೊರಗಟ್ಟಿದನು. ಅವನ ತಂದೆಯಾದ ಆಸನು ರಾಜನಾಗಿದ್ದ ಕಾಲದಲ್ಲಿ ಆ ಜನರು ಪೂಜಾಸ್ಥಳಗಳಲ್ಲಿ ಸೇವೆಯನ್ನು ಮಾಡುತ್ತಿದ್ದರು.
47 ಈ ಸಮಯದಲ್ಲಿ ಎದೋಮ್ ದೇಶದಲ್ಲಿ ರಾಜನಿರಲಿಲ್ಲ. ಆ ದೇಶವನ್ನು ಒಬ್ಬ ರಾಜ್ಯಪಾಲನು ಆಳುತ್ತಿದ್ದನು. ಈ ರಾಜ್ಯಪಾಲನನ್ನು ಯೆಹೂದದ ರಾಜನು ಆರಿಸಿದ್ದನು.
48 ರಾಜನಾದ ಯೆಹೋಷಾಫಾಟನು ಸರಕು ಸಾಗಿಸುವ ಹಡಗುಗಳನ್ನು ತಯಾರಿಸಿದನು. ಯೆಹೋಷಾಫಾಟನು ಓಫೀರ್ ದೇಶದಿಂದ ಬಂಗಾರವನ್ನು ತರುವುದಕ್ಕಾಗಿ ಈ ಹಡಗುಗಳನ್ನು ಕಳುಹಿಸಿದನು. ಆದರೆ ಆ ಹಡಗುಗಳು ತಮ್ಮ ಸ್ವಂತ ಬಂದರಾದ ಎಚ್ಯೋನ್ಗೆಬೆರಿನಲ್ಲಿ ನಾಶವಾದವು. ಅವು ಓಫೀರ್ ದೇಶವನ್ನು ಮುಟ್ಟಲೇ ಇಲ್ಲ. 49 ಇಸ್ರೇಲಿನ ರಾಜನಾದ ಅಹಜ್ಯನು ಯೆಹೋಷಾಫಾಟನಿಗೆ ಸಹಾಯಮಾಡಲು ಹೋದನು. ಅಹಜ್ಯನು ಆ ಹಡಗುಗಳಲ್ಲಿ ತನ್ನ ಸ್ವಂತ ನಾವಿಕರಲ್ಲಿ ಕೆಲವರನ್ನು ಯೆಹೋಷಾಫಾಟನ ಜನರೊಂದಿಗೆ ಕಳುಹಿಸುತ್ತೇನೆಂದು ಯೆಹೋಷಾಫಾಟನಿಗೆ ತಿಳಿಸಿದನು. ಆದರೆ ಯೆಹೋಷಾಫಾಟನು ಅಹಜ್ಯನ ಜನರನ್ನು ಸ್ವೀಕರಿಸಲಿಲ್ಲ.
50 ಯೆಹೋಷಾಫಾಟನು ಸತ್ತುಹೋದನು. ಅವನನ್ನು ಅವನ ಪೂರ್ವಿಕರ ಬಳಿ ದಾವೀದನಗರದಲ್ಲಿ ಸಮಾಧಿಮಾಡಿದರು. ನಂತರ ಅವನ ಮಗನಾದ ಯೆಹೋರಾಮನು ರಾಜನಾದನು.
ಇಸ್ರೇಲಿನ ರಾಜನಾದ ಅಹಜ್ಯ
51 ಅಹಜ್ಯನು ಅಹಾಬನ ಮಗ. ಯೆಹೋಷಾಫಾಟನು ಯೆಹೂದದ ರಾಜನಾಗಿದ್ದ ಹದಿನೇಳನೆಯ ವರ್ಷದಲ್ಲಿ ಅವನು ಇಸ್ರೇಲಿನ ರಾಜನಾದನು. ಅಹಜ್ಯನು ಸಮಾರ್ಯದಲ್ಲಿ ಎರಡು ವರ್ಷ ರಾಜ್ಯವಾಳಿದನು. 52 ಅಹಜ್ಯನು ಯೆಹೋವನ ವಿರುದ್ಧ ಪಾಪವನ್ನು ಮಾಡಿದನು. ಅವನು ತನ್ನ ತಂದೆಯಾದ ಅಹಾಬ, ತಾಯಿಯಾದ ಈಜೆಬೆಲ ಮತ್ತು ನೆಬಾಟನ ಮಗನಾದ ಯಾರೊಬ್ಬಾಮ ಮಾಡಿದಂತಹ ಕಾರ್ಯಗಳನ್ನೇ ಮಾಡಿದನು. ಈ ಆಡಳಿತಗಾರರೆಲ್ಲ ಇಸ್ರೇಲಿನ ಜನರನ್ನು ಮತ್ತಷ್ಟು ಪಾಪಕ್ಕೆ ನಡೆಸಿದರು. 53 ಅಹಜ್ಯನು ತನ್ನ ತಂದೆಯಂತೆಯೇ ಸುಳ್ಳುದೇವರಾದ ಬಾಳನನ್ನು ಪೂಜಿಸಿ ಅವನ ಸೇವೆ ಮಾಡಿದನು; ಇಸ್ರೇಲಿನ ದೇವರಾದ ಯೆಹೋವನನ್ನು ರೇಗಿಸಿದನು. ಯೆಹೋವನು ಮೊದಲು ಅಹಜ್ಯನ ತಂದೆಯ ಮೇಲೆ ಕೋಪಗೊಂಡಿದ್ದಂತೆ, ಅಹಜ್ಯನ ಮೇಲೂ ಕೋಪಗೊಂಡನು.

*22:11: ಕಬ್ಬಿಣದ ಕೊಂಬುಗಳು ಉನ್ನತ ಶೌರ್ಯಕ್ಕೆ ಇವು ಸಂಕೇತಗಳು.