2
ದೇವಾಲಯವನ್ನು ಕಟ್ಟಲು ಸೊಲೊಮೋನನ ಸಿದ್ಧತೆ
ದೇವಾಲಯವನ್ನು ಕಟ್ಟಿ ದೇವರಿಗೆ ಘನತೆಯನ್ನು ಸಲ್ಲಿಸಲು ಸೊಲೊಮೋನನು ಯೋಜಿಸಿದನು. ಮಾತ್ರವಲ್ಲದೆ ತನಗೆ ವಾಸಿಸಲು ಒಂದು ಅರಮನೆಯನ್ನು ಕಟ್ಟಲೂ ಸಿದ್ಧತೆ ಮಾಡಿದನು. ಅದಕ್ಕಾಗಿ ಎಪ್ಪತ್ತು ಸಾವಿರ ಮಂದಿ ಕೆಲಸಗಾರರನ್ನೂ ಬೆಟ್ಟದ ಮೇಲೆ ನಡಿಯುತ್ತಿರುವ ಕಲ್ಲಿನ ಕೆಲಸಕ್ಕಾಗಿ ಎಂಭತ್ತು ಸಾವಿರ ಮಂದಿ ಕಲ್ಲುಕುಟಿಕರನ್ನೂ ಇವರ ಮೇಲ್ವಿಚಾರಣೆಗಾಗಿ ಮೂರು ಸಾವಿರದ ಆರುನೂರು ಮಂದಿ ಮೇಸ್ತ್ರಿಗಳನ್ನೂ ನೇಮಿಸಿದನು.
ಸೊಲೊಮೋನನು ತನ್ನ ಸ್ನೇಹಿತನೂ ತೂರ್ ದೇಶದ ರಾಜನೂ ಆದ ಹೂರಾಮನಿಗೆ ಹೀಗೆ ಬರೆದು ಕಳುಹಿಸಿದನು:
 
“ನನ್ನ ತಂದೆಯಾದ ದಾವೀದನ ಅರಮನೆಗೆ ಬೇಕಾದ ದೇವದಾರುಮರಗಳನ್ನು ನೀನು ಒದಗಿಸಿದಂತೆಯೇ ನನಗೂ ನೀನು ಸಹಾಯ ಮಾಡಬೇಕು. ನನ್ನ ದೇವರಾದ ಯೆಹೋವನ ನಾಮದ ಘನತೆಗಾಗಿ ನಾನು ಒಂದು ದೇವಾಲಯವನ್ನು ಕಟ್ಟಲಿರುವೆನು. ಆತನ ಸನ್ನಿಧಿಯಲ್ಲಿ ನಿತ್ಯವೂ ಧೂಪವನ್ನು ಹಾಕುವೆವು; ವಿಶೇಷ ಮೇಜಿನ ಮೇಲೆ ಪವಿತ್ರವಾದ ರೊಟ್ಟಿಗಳನ್ನಿಡುವೆವು. ಪ್ರತಿ ಮುಂಜಾನೆ ಮತ್ತು ಸಾಯಂಕಾಲಗಳಲ್ಲಿ, ಸಬ್ಬತ್ ದಿನಗಳಲ್ಲಿ ಮತ್ತು ಅಮಾವಾಸ್ಯೆ ದಿನಗಳಲ್ಲಿ ಯೆಹೋವನು ಆಜ್ಞಾಪಿಸಿದ ಹಬ್ಬಗಳಲ್ಲಿ ಸರ್ವಾಂಗಹೋಮಗಳನ್ನು ಸಮರ್ಪಿಸುವೆವು. ಇಸ್ರೇಲಿನ ಜನರು ನಿತ್ಯಕಾಲಕ್ಕೂ ಇವುಗಳನ್ನು ಅನುಸರಿಸಬೇಕೆಂದು ದೇವರು ನೇಮಿಸಿರುತ್ತಾನೆ.
“ನಮ್ಮ ದೇವರು ಎಲ್ಲಾ ದೇವರುಗಳಿಗಿಂತ ದೊಡ್ಡವನು. ಆದ್ದರಿಂದ ಆತನಿಗಾಗಿ ನಾನು ಮಹತ್ತಾದ ಆಲಯವನ್ನು ಕಟ್ಟುವೆನು. ಯಾವನೂ ದೇವರಿಗೆ ಆಲಯವನ್ನು ಕಟ್ಟಲು ಸಾಧ್ಯವಿಲ್ಲ. ಯಾಕೆಂದರೆ, ಆಕಾಶವೂ ಉನ್ನತೋನ್ನತವಾದ ಆಕಾಶವೂ ಆತನ ವಾಸಕ್ಕೆ ಸಾಲುವುದಿಲ್ಲ. ಆದ್ದರಿಂದ ನಾನು ಆತನಿಗೆ ಆಲಯವನ್ನು ಕಟ್ಟಲಾರೆ. ನಾನು ಆತನಿಗೆ ಆಲಯವನ್ನು ಕಟ್ಟುತ್ತಿರುವುದು ಧೂಪಹಾಕಿ ಆತನನ್ನು ಘನಪಡಿಸುವದಕ್ಕಾಗಿಯಷ್ಟೇ.
“ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಇವುಗಳ ಕೆಲಸಗಳಲ್ಲಿ ಪಳಗಿರುವ ಒಬ್ಬ ಕುಶಲಕರ್ಮಿಯನ್ನು ನೀನು ಕಳುಹಿಸಿಕೊಡಬೇಕು. ಅವನಿಗೆ ನೀಲಿ, ಕೆಂಪು, ನೇರಳೆ ವರ್ಣಗಳ ಬಟ್ಟೆಗಳನ್ನು ನೇಯುವುದೂ ಗೊತ್ತಿರಬೇಕು. ನನ್ನ ತಂದೆ ಆರಿಸಿಕೊಂಡಿರುವ ಕುಶಲಕರ್ಮಿಗಳ ಜೊತೆಯಲ್ಲಿ ಅವನು ಜೆರುಸಲೇಮಿನಲ್ಲಿಯೂ ಯೆಹೂದದಲ್ಲಿಯೂ ಕೆಲಸ ಮಾಡಬೇಕು. ಅಲ್ಲದೆ ನನಗೆ ಲೆಬನೋನಿನಿಂದ ದೇವದಾರು, ತುರಾಯಿ ಮತ್ತು ಸುಗಂಧಮರಗಳನ್ನು ಕಳುಹಿಸಿಕೊಡು. ನಿನ್ನ ಸೇವಕರು ಲೆಬನೋನಿನ ಮರಗಳನ್ನು ಕತ್ತರಿಸುವುದರಲ್ಲಿ ನಿಪುಣರೆಂಬುದು ನನಗೆ ಗೊತ್ತಿದೆ. ನಿನ್ನ ಅನುಭವಸ್ಥ ಸೇವಕರಿಗೆ ಸಹಾಯ ಮಾಡಲು ನನ್ನ ಸೇವಕರೂ ಬರುವರು. ನಾನು ಕಟ್ಟುವ ಆಲಯವು ದೊಡ್ಡದಾಗಿಯೂ ಅಂದವಾಗಿಯೂ ಇರುವದರಿಂದ ನನಗೆ ಬಹಳ ಮರ ಬೇಕಾಗುತ್ತದೆ. 10 ನಿನ್ನ ಜನರು ಮರಗಳನ್ನು ಕಡಿದು ಸಾಗಿಸುವ ಕಾರ್ಯಕ್ಕೆ ನಾನು ಒಂದು ಲಕ್ಷದ ಇಪ್ಪತ್ತೈದು ಸಾವಿರ ಕ್ವಿಂಟಾಲ್ ಗೋಧಿಯನ್ನೂ ಒಂದು ಲಕ್ಷದ ಇಪ್ಪತ್ತೈದು ಸಾವಿರ ಕ್ವಿಂಟಾಲ್ ಜವೆಗೋಧಿಯನ್ನೂ ಒಂದು ಲಕ್ಷದ ಹದಿನೈದು ಸಾವಿರ ಲೀಟರ್ ದ್ರಾಕ್ಷಾರಸವನ್ನೂ ಒಂದು ಲಕ್ಷದ ಹದಿನೈದು ಸಾವಿರ ಲೀಟರ್ ಎಣ್ಣೆಯನ್ನೂ ಕೊಡುವೆನು.”
 
11 ಅದಕ್ಕೆ ಹೂರಾಮನು ಸೊಲೊಮೋನನಿಗೆ ಪತ್ರದ ಮೂಲಕ ಹೀಗೆ ಉತ್ತರಿಸಿದನು,
 
“ಸೊಲೊಮೋನನೇ, ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆ. ಆದ್ದರಿಂದಲೇ ನಿನ್ನನ್ನು ಅವರ ಅರಸನನ್ನಾಗಿ ಆರಿಸಿಕೊಂಡಿರುತ್ತಾನೆ. 12 ಇಸ್ರೇಲರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ, ಆತನು ಭೂಪರಲೋಕಗಳನ್ನು ಉಂಟುಮಾಡಿದನು. ಅರಸನಾದ ದಾವೀದನಿಗೆ ಒಬ್ಬ ಜ್ಞಾನವುಳ್ಳ ಮಗನನ್ನು ಅನುಗ್ರಹಿಸಿದ್ದಾನೆ. ನಿನಗೆ ಜ್ಞಾನವೂ ತಿಳುವಳಿಕೆಯೂ ಇರುವದರಿಂದ ನೀನು ದೇವಾಲಯವನ್ನು ಕಟ್ಟುವೆ ಮತ್ತು ನಿನಗೂ ಒಂದು ಅರಮನೆಯನ್ನು ಕಟ್ಟುವೆ. 13 ನಾನು ಹೂರಾಮಾಬೀ ಎಂಬ ಹೆಸರಿನ ಅನುಭವಶಾಲಿಯಾದ ಕುಶಲಕರ್ಮಿಯನ್ನು ನಿನಗೋಸ್ಕರ ಕಳುಹಿಸುತ್ತೇನೆ. 14 ಅವನ ತಾಯಿಯು ದಾನ್ ಕುಟುಂಬದವಳು, ತಂದೆಯು ತೂರ್ ಪಟ್ಟಣದವನು. ಅವನು ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣ, ಮರ ಇವುಗಳ ಕೆಲಸಗಳಲ್ಲಿ ತುಂಬ ಚತುರನು. ಅಲ್ಲದೆ ನೀಲಿ, ಕೆಂಪು ಧೂಮ್ರವರ್ಣದ ಬಟ್ಟೆಗಳನ್ನು ಮತ್ತು ಬೆಲೆಬಾಳುವ ಲಿನಿನ್ ಬಟ್ಟೆಗಳನ್ನು ನೇಯುವುದರಲ್ಲಿ ನಿಪುಣನಾಗಿದ್ದಾನೆ. ನೀನು ಏನೇ ಹೇಳಿದರೂ ಅವನು ಮಾಡಿಕೊಡುವನು. ನಿನ್ನ ಮತ್ತು ದಾವೀದನ ಕುಶಲಕರ್ಮಿಗಳ ಜೊತೆಯಲ್ಲಿ ಅವನು ಕೆಲಸ ಮಾಡುವನು.
15 “ನೀನು ನನ್ನ ಸೇವಕರಿಗೆ ಆಹಾರವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಕೊಡುವ ಭರವಸೆ ನೀಡಿರುವೆ. ಆದ್ದರಿಂದ ದಯವಿಟ್ಟು ಇವುಗಳನ್ನು ಒದಗಿಸಿಕೊಡು. 16 ನಾವು ಲೆಬನೋನಿನಲ್ಲಿ ನಿನಗೆ ಬೇಕಾದಷ್ಟು ಮರಗಳನ್ನು ಕಡಿದು ಅವುಗಳನ್ನು ಜೋಡಿಸಿ ತೆಪ್ಪಗಳನ್ನಾಗಿ ಮಾಡಿ ಸಮುದ್ರದಲ್ಲಿ ತೇಲಿಬಿಡುವೆವು. ಅವು ಯೊಪ್ಪಕ್ಕೆ ತಲುಪಿದಾಗ ನೀನು ಅವುಗಳನ್ನು ಶೇಖರಿಸಿ ಬೇಕಾದ ಕಡೆಗೆ ರವಾನಿಸು.”
 
17 ಆಮೇಲೆ ಸೊಲೊಮೋನನು ತನ್ನ ರಾಜ್ಯದಲ್ಲಿದ್ದ ಎಲ್ಲಾ ಪರದೇಶಸ್ಥರನ್ನು ಲೆಕ್ಕಿಸಿದನು. ಸೊಲೊಮೋನನ ತಂದೆಯಾದ ದಾವೀದನು ಮಾಡಿದ ಜನಗಣತಿಯ ನಂತರ ಈ ಜನಗಣತಿಯನ್ನು ಮಾಡಲಾಯಿತು. ಅವರಲ್ಲಿ ಒಂದು ಲಕ್ಷದ ಐವತ್ತ ಮೂರು ಸಾವಿರದ ಆರುನೂರು ಮಂದಿ ಪರದೇಶದವರಿದ್ದರು. 18 ಅವರಲ್ಲಿ ಎಪ್ಪತ್ತು ಸಾವಿರ ಮಂದಿಯನ್ನು ಸೊಲೊಮೋನನು ಹೊರೆಹೊರುವದಕ್ಕಾಗಿ ನೇಮಿಸಿದನು; ಎಂಭತ್ತುಸಾವಿರ ಮಂದಿಯನ್ನು ಬೆಟ್ಟಗಳಲ್ಲಿ ಕಲ್ಲಿನ ಕೆಲಸಮಾಡಲು ನೇಮಿಸಿದನು; ಮೂರು ಸಾವಿರದ ಆರುನೂರು ಮಂದಿಯನ್ನು ಕಾರ್ಮಿಕರ ಮೇಲ್ವಿಚಾರಣೆಗೋಸ್ಕರ ನೇಮಿಸಿದನು.