5
ಯೆಹೋವದೇವರ ಆಲಯಕ್ಕೆ ಸೊಲೊಮೋನನು ಮಾಡಬೇಕಾಗಿದ್ದ ಕೆಲಸವೆಲ್ಲವೂ ಮುಗಿಯಿತು. ದಾವೀದನು ದೇವಾಲಯಕ್ಕಾಗಿ ಕೊಟ್ಟಿದ್ದ ವಸ್ತುಗಳನ್ನೆಲ್ಲಾ ಸೊಲೊಮೋನನು ತಂದಿರಿಸಿದನು; ಬೆಳ್ಳಿಬಂಗಾರಗಳಿಂದ ಮಾಡಿದ ಸಾಮಾನುಗಳನ್ನು ಸೊಲೊಮೋನನು ದೇವಾಲಯದ ಭಂಡಾರದ ಕೋಣೆಗಳಲ್ಲಿ ಇಡಿಸಿದನು.
ದೇವಾಲಯಕ್ಕೆ ಪವಿತ್ರ ಪೆಟ್ಟಿಗೆಯ ಆಗಮನ
ದಾವೀದನಗರದಲ್ಲಿದ್ದ ಅಂದರೆ ಚೀಯೋನಿನಲ್ಲಿದ್ದ ಒಡಂಬಡಿಕೆಯ ಪೆಟ್ಟಿಗೆಯನ್ನು ತರುವದಕ್ಕಾಗಿ ಸೊಲೊಮೋನನು ಇಸ್ರೇಲರ ಎಲ್ಲಾ ಹಿರಿಯರನ್ನು ಮತ್ತು ಕುಲಾಧಿಪತಿಗಳನ್ನು ಜೆರುಸಲೇಮಿಗೆ ಒಟ್ಟಾಗಿ ಕರೆಸಿದನು. ಪರ್ಣಶಾಲೆಗಳ ಹಬ್ಬದ ದಿವಸ ಇಸ್ರೇಲರೆಲ್ಲರೂ ಅರಸನಾದ ಸೊಲೊಮೋನನ ಮುಂದೆ ಸೇರಿಬಂದರು. ಈ ಹಬ್ಬವು ವರ್ಷದ ಏಳನೆಯ ತಿಂಗಳಲ್ಲಿ ನಡೆಯಿತು.
ಇಸ್ರೇಲಿನ ಹಿರಿಯರೆಲ್ಲರೂ ಒಟ್ಟಾಗಿ ಸೇರಿಬಂದಾಗ ಲೇವಿಯರು ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಜೆರುಸಲೇಮಿಗೆ ತಂದರು. ಯಾಜಕರೂ ಲೇವಿಯರೂ ದೇವದರ್ಶನದ ಗುಡಾರವನ್ನು, ಅದರ ಪವಿತ್ರ ವಸ್ತುಗಳನ್ನು ಹೊತ್ತು ಜೆರುಸಲೇಮಿಗೆ ತಂದರು. ಸೊಲೊಮೋನನು ಮತ್ತು ಇಸ್ರೇಲರೆಲ್ಲರೂ ಆ ಒಡಂಬಡಿಕೆಯ ಪೆಟ್ಟಿಗೆಯ ಮುಂದೆ ನೆರೆದು ಬಂದರು. ಸೊಲೊಮೋನನು ಮತ್ತು ಎಲ್ಲಾ ಇಸ್ರೇಲರೂ ಲೆಕ್ಕವಿಲ್ಲದಷ್ಟು ಕುರಿಗಳನ್ನೂ ಹೋರಿಗಳನ್ನೂ ಯಜ್ಞ ಮಾಡಿದರು. ಆಮೇಲೆ ಯಾಜಕರು ಒಡಂಬಡಿಕೆಯ ಪೆಟ್ಟಿಗೆಯನ್ನು ಅದಕ್ಕಾಗಿ ಮಾಡಿದ್ದ ಮಹಾಪರಿಶುದ್ಧ ಸ್ಥಳದ ಕೆರೂಬಿಗಳ ರೆಕ್ಕೆಗಳ ಕೆಳಗೆ ಇಟ್ಟರು. ಕೆರೂಬಿಗಳ ರೆಕ್ಕೆಗಳು ಒಡಂಬಡಿಕೆಯ ಪೆಟ್ಟಿಗೆಯ ಮೇಲೆ ಚಾಚಿಕೊಂಡಿದ್ದವು. ಕೆರೂಬಿಗಳು ಆ ಪೆಟ್ಟಿಗೆಯ ಮೇಲೆಯೂ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಉಪಯೋಗಿಸುತ್ತಿದ್ದ ಕಂಬಗಳ ಮೇಲೆಯೂ ನಿಂತುಕೊಂಡಿದ್ದವು. ಆ ಪೆಟ್ಟಿಗೆಯನ್ನು ಹೊರಲು ಜೋಡಿಸಿದ್ದ ಕೋಲುಗಳು ಉದ್ದವಾಗಿದ್ದ ಕಾರಣ ಅದರ ಕೊನೆಗಳು ಮಹಾಪರಿಶುದ್ಧ ಸ್ಥಳದ ಮುಂಭಾಗದಲ್ಲಿ ಕಾಣುತ್ತಿದ್ದವು. ಆದರೆ ದೇವಾಲಯದ ಹೊರಗಿನಿಂದ ಆ ಕೋಲುಗಳು ಯಾರಿಗೂ ಕಾಣುತ್ತಿರಲಿಲ್ಲ. ಇಂದಿಗೂ ಆ ಕೋಲುಗಳು ಅಲ್ಲಿಯೇ ಅವೆ. 10 ಒಡಂಬಡಿಕೆಯ ಪೆಟ್ಟಿಗೆಯೊಳಗೆ ಎರಡು ಕಲ್ಲಿನ ಹಲಗೆಗಳು ಮಾತ್ರ ಇದ್ದವು. ಹೋರೇಬ್ ಬೆಟ್ಟದಲ್ಲಿ ಮೋಶೆಯು ಈ ಕಲ್ಲಿನ ಹಲಗೆಗಳನ್ನು ಪೆಟ್ಟಿಗೆಯೊಳಗಿಟ್ಟನು. ಆ ಬೆಟ್ಟದಲ್ಲಿ ಯೆಹೋವನು ಈಜಿಪ್ಟಿನಿಂದ ಬಿಡುಗಡೆ ಹೊಂದಿದ ಇಸ್ರೇಲರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು.
11 ಅಲ್ಲಿ ನೆರೆದುಬಂದಿದ್ದ ಯಾಜಕರೆಲ್ಲರೂ ಯಾವ ವರ್ಗವ್ಯತ್ಯಾಸವಿಲ್ಲದೆ ಆಚಾರಕ್ಕನುಸಾರವಾಗಿ ತಮ್ಮನ್ನು ಶುದ್ಧೀಕರಿಸಿಕೊಂಡರು. ಬಳಿಕ ಅವರು ಪವಿತ್ರ ಸ್ಥಳದಿಂದ ಹೊರಬಂದು ಒಟ್ಟಾಗಿ ನಿಂತುಕೊಂಡರು. 12 ಯಜ್ಞವೇದಿಕೆಯ ಪೂರ್ವ ಭಾಗದಲ್ಲಿ ಲೇವಿಯರ ಗಾಯಕರು ನಿಂತರು. ಆಸಾಫನ, ಹೇಮಾನನ ಮತ್ತು ಯೆದುತೂನನ ಗಾಯಕ ವೃಂದದವರೆಲ್ಲರೂ ಅಲ್ಲಿ ಇದ್ದರು. ಅವರ ಗಂಡುಮಕ್ಕಳೂ ಕುಟುಂಬದವರೂ ಅಲ್ಲಿದ್ದರು. ಗಾಯಕರೆಲ್ಲರೂ ಬಿಳೀ ನಾರುಮಡಿಯ ಬಟ್ಟೆಗಳನ್ನು ಉಟ್ಟಿದ್ದರು. ತಾಳ, ತಂತಿವಾದ್ಯಗಳನ್ನು ಹಿಡಿದುಕೊಂಡಿದ್ದರು. ಗಾಯಕರೊಂದಿಗೆ ನೂರಿಪ್ಪತ್ತು ಮಂದಿ ಯಾಜಕರು ತುತ್ತೂರಿಯನ್ನೂದಿದರು. 13 ಗಾಯಕರ ಸ್ವರವೂ ತುತ್ತೂರಿಗಳ ಶಬ್ದವೂ ಒಬ್ಬನದೆಯೋ ಎಂಬಂತೆ ತೋರಿಬಂತು. ಅವರು ದೇವರನ್ನು ಸ್ತುತಿಸಿ ಕೊಂಡಾಡಿದಾಗ ಒಂದೇ ಶಬ್ದವು ಹೊರಟಿತ್ತು. ಅವರು ತಮ್ಮ ತಾಳ, ತಂತಿವಾದ್ಯಗಳನ್ನು ಗಟ್ಟಿಯಾಗಿ ಬಾರಿಸಿದರು.
 
“ಯೆಹೋವನಿಗೆ ಸ್ತೋತ್ರವಾಗಲಿ; ಆತನು ಒಳ್ಳೆಯವನು;
ಆತನ ಪ್ರೀತಿಯು ಶಾಶ್ವತವಾದದ್ದು”
 
ಎಂದು ಗಾಯಕರು ಹಾಡಿದರು.
ಆಗ ದೇವಾಲಯವು ಯೆಹೋವನ ತೇಜಸ್ಸಿನಿಂದ ಕೂಡಿದ ಮೋಡದಿಂದ ತುಂಬಿಹೋಯಿತು. 14 ಆಗ ಯಾಜಕರು ನಿಂತುಕೊಂಡು ಸೇವೆಯನ್ನು ಮಾಡಲಾಗಲಿಲ್ಲ. ಯಾಕೆಂದರೆ ದೇವರ ಮಹಿಮೆಯು ದೇವಾಲಯವನ್ನು ತುಂಬಿಕೊಂಡಿತ್ತು.