7
ಪ್ರಿಯ ಸ್ನೇಹಿತರೇ, ನಾವು ದೇವರಿಂದ ಈ ವಾಗ್ದಾನಗಳನ್ನು ಹೊಂದಿದ್ದೇವೆ. ಆದ್ದರಿಂದ ನಮ್ಮನ್ನು ಶುದ್ಧರನ್ನಾಗಿ ಮಾಡಿಕೊಳ್ಳಬೇಕು. ನಮ್ಮ ದೇಹವನ್ನಾಗಲಿ ನಮ್ಮ ಆತ್ಮವನ್ನಾಗಲಿ ಅಶುದ್ಧಗೊಳಿಸುವ ಎಲ್ಲಾ ವಿಧದ ಮಲಿನತೆಯಿಂದ ನಾವು ದೂರವಿರೋಣ. ನಾವು ದೇವರನ್ನು ಗೌರವಿಸುವುದರಿಂದ ಪರಿಶುದ್ಧವಾದ ಬಾಳ್ವೆಯನ್ನು ನಡೆಸಲು ನಾವು ಪ್ರಯತ್ನಿಸಬೇಕು.
ಪೌಲನ ಆನಂದ
ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳವನ್ನು ಕೊಡಿರಿ. ನಾವು ನಿಮ್ಮಲ್ಲಿ ಯಾರಿಗೂ ಕೆಟ್ಟದ್ದನ್ನು ಮಾಡಿಲ್ಲ. ಯಾರ ನಂಬಿಕೆಯನ್ನೂ ಹಾಳುಮಾಡಿಲ್ಲ; ಯಾರನ್ನೂ ವಂಚಿಸಲಿಲ್ಲ. ನಾನು ಇದನ್ನು ಹೇಳುತ್ತಿರುವುದು ನಿಮ್ಮನ್ನು ನಿಂದಿಸುವುದಕ್ಕಾಗಿಯಲ್ಲ. ನಿಮ್ಮೊಂದಿಗೆ ಬದುಕುವಷ್ಟರಮಟ್ಟಿಗೆ ಮತ್ತು ಸಾಯುವಷ್ಟರಮಟ್ಟಿಗೆ ನಿಮ್ಮನ್ನು ಅಪಾರವಾಗಿ ಪ್ರೀತಿಸುತ್ತೇವೆಂದು ನಾನು ಮೊದಲೇ ನಿಮಗೆ ತಿಳಿಸಿದ್ದೇನೆ. ನಿಮ್ಮ ವಿಷಯದಲ್ಲಿ ನನಗೆ ಬಹಳ ಭರವಸವಿದೆ. ನಾನು ನಿಮ್ಮ ವಿಷಯದಲ್ಲಿ ಹೆಮ್ಮೆಪಡುತ್ತೇನೆ. ನೀವು ನನ್ನನ್ನು ಬಹಳವಾಗಿ ಸಂತೈಸಿದಿರಿ. ನಮ್ಮ ಎಲ್ಲಾ ಇಕ್ಕಟ್ಟುಗಳಲ್ಲಿಯೂ ನನಗೆ ಮಹಾ ಆನಂದವಿದೆ.
ನಾವು ಮಕೆದೋನಿಯಕ್ಕೆ ಬಂದಾಗ ನಮಗೆ ವಿಶ್ರಾಂತಿಯೇ ಇರಲಿಲ್ಲ. ನಮ್ಮ ಸುತ್ತಮುತ್ತಲೆಲ್ಲಾ ಇಕ್ಕಟ್ಟುಗಳಿದ್ದವು. ಹೊರಗೆ ಕಲಹವಿತ್ತು, ಒಳಗೆ ಭಯವಿತ್ತು. ಆದರೆ ದೇವರು ಇಕ್ಕಟ್ಟುಗಳಲ್ಲಿರುವ ಜನರನ್ನು ಸಂತೈಸುತ್ತಾನೆ. ತೀತನು ಬಂದಾಗ ದೇವರು ನಮ್ಮನ್ನು ಸಂತೈಸಿದನು. ಅವನ ಆಗಮನದಿಂದಲೂ ನೀವು ಅವನಿಗೆ ಕೊಟ್ಟ ಆದರಣೆಯಿಂದಲೂ ನಮಗೆ ಸಮಾಧಾನವಾಯಿತು. ನನ್ನನ್ನು ನೋಡಲು ನಿಮಗಿರುವ ಹಂಬಲದ ಕುರಿತಾಗಿಯೂ ನಿಮ್ಮ ಕಾರ್ಯಗಳಿಂದ ನಿಮಗಾಗಿರುವ ದುಃಖದ ಕುರಿತಾಗಿಯೂ ನನ್ನ ವಿಷಯವಾಗಿ ನಿಮಗಿರುವ ಮಹಾಹಿತಚಿಂತನೆಯ ಕುರಿತಾಗಿಯೂ ಅವನು ನನಗೆ ಹೇಳಿದಾಗ ನನಗೆ ಬಹಳ ಸಂತೋಷವಾಯಿತು.
ನಾನು ನಿಮಗೆ ಬರೆದ ಪತ್ರವು ನಿಮಗೆ ದುಃಖವನ್ನು ಉಂಟುಮಾಡಿದ್ದರೂ, ಅದನ್ನು ಬರೆದದ್ದಕ್ಕೆ ನನಗೆ ದುಃಖವಿಲ್ಲ, ಆ ಪತ್ರವು ನಿಮಗೆ ದುಃಖವನ್ನು ಉಂಟು ಮಾಡಿತೆಂದು ನನಗೆಗೊತ್ತಿದೆ. ಆ ವಿಷಯದಲ್ಲಿ ನನಗೆ ವ್ಯಸನವಾಯಿತು. ಆದರೆ ಅದು ನಿಮ್ಮನ್ನು ಸ್ವಲ್ಪಕಾಲದವರೆಗೆ ಮಾತ್ರ ದುಃಖಿತರನ್ನಾಗಿ ಮಾಡಿತು. ಈಗ ನಾನು ಸಂತೋಷವಾಗಿದ್ದೇನೆ. ನಿಮ್ಮನ್ನು ದುಃಖಿತರನ್ನಾಗಿ ಮಾಡಿದ್ದಕ್ಕಾಗಿ ನಾನು ದುಃಖಿಸುತ್ತಿಲ್ಲ. ಆದರೆ ನಿಮ್ಮ ದುಃಖವು ನಿಮ್ಮ ಹೃದಯಗಳಲ್ಲಿ ಪರಿವರ್ತನೆಯನ್ನು ಉಂಟುಮಾಡಿದ್ದರಿಂದ ನಾನು ಸಂತೋಷವಾಗಿದ್ದೇನೆ. ದೇವರ ಇಚ್ಫೆಗನುಸಾರವಾಗಿ ನೀವು ದುಃಖಿತರಾದಿರಿ. ಆದ್ದರಿಂದ ನಮ್ಮಿಂದ ನಿಮಗೆ ಯಾವ ರೀತಿಯಲ್ಲಿಯೂ ನೋವಾಗಲಿಲ್ಲ. 10 ದೇವರ ಇಷ್ಟಾನುಸಾರವಾದ ದುಃಖವು ಹೃದಯವನ್ನೂ ಜೀವಿತವನ್ನೂ ಪರಿವರ್ತಿಸುತ್ತದೆ. ಈ ಪರಿವರ್ತನೆಯು ರಕ್ಷಣೆಗೆ ನಡೆಸುತ್ತದೆ. ಈ ಪರಿವರ್ತನೆಯ ವಿಷಯದಲ್ಲಿ ನಾವು ವ್ಯಸನಪಡಬೇಕಾಗಿಲ್ಲ. ಆದರೆ, ಲೋಕವು ಹೊಂದಿರುವ ದುಃಖವು ಮರಣವನ್ನು ಬರಮಾಡುತ್ತದೆ. 11 ನೀವು ಯಾವ ದುಃಖವನ್ನು ಹೊಂದಿರಬೇಕೆಂದು ದೇವರು ಬಯಸಿದ್ದನೋ ಅದೇ ದುಃಖವನ್ನು ನೀವು ಹೊಂದಿದ್ದೀರಿ. ಆ ದುಃಖವು ನಿಮ್ಮನ್ನು ಬಹು ಆಸಕ್ತಿಯುಳ್ಳವರನ್ನಾಗಿ ಮಾಡಿತು; ನೀವು ತಪ್ಪಿತಸ್ಥರಾಗಿರಲಿಲ್ಲವೆಂದು ನಿರೂಪಿಸಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನಿಮ್ಮನ್ನು ಕೋಪಗೊಳಿಸಿತು ಮತ್ತು ಭಯಗೊಳಿಸಿತು; ನನ್ನನ್ನು ನೋಡಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನನ್ನ ಬಗ್ಗೆ ಚಿಂತಿಸುವಂತೆ ಮಾಡಿತು; ತಪ್ಪಿತಸ್ಥರನ್ನು ದಂಡಿಸಬೇಕೆಂಬ ಬಯಕೆಯನ್ನು ಉಂಟು ಮಾಡಿತು. ಆ ಸಮಸ್ಯೆಯ ಯಾವ ವಿಷಯದಲ್ಲಿಯೂ ನೀವು ಅಪರಾಧಿಗಳಾಗಿರಲಿಲ್ಲವೆಂದು ನಿರೂಪಿಸಿದಿರಿ. 12 ನಾನು ಆ ಪತ್ರವನ್ನು ಬರೆದದ್ದು ತಪ್ಪು ಮಾಡಿದವನಿಗೋಸ್ಕರವಲ್ಲ, ಆ ತಪ್ಪಿನಿಂದ ದುಃಖಕ್ಕೆ ಒಳಗಾದವನಿಗೋಸ್ಕರವೂ ಅಲ್ಲ. ಆದರೆ ನಮ್ಮ ವಿಷಯದಲ್ಲಿ ನಿಮಗಿರುವ ಮಹಾಚಿಂತೆಯನ್ನು ನೀವು ದೇವರ ಎದುರಿನಲ್ಲಿ ನೋಡುವಂತಾಗಬೇಕೆಂದು ಆ ಪತ್ರವನ್ನು ಬರೆದೆನು. 13 ಆದ್ದರಿಂದಲೇ ನಮಗೆ ಆದರಣೆಯಾಯಿತು.
ತೀತನು ಬಹು ಸಂತೋಷವಾಗಿರುವುದನ್ನು ಕಂಡು ನಮಗೆ ಮತ್ತಷ್ಟು ಸಂತೋಷವಾಯಿತು. ನೀವೆಲ್ಲರೂ ಅವನನ್ನು ಸಂತೋಷಗೊಳಿಸಿದಿರಿ. 14 ತೀತನ ಮುಂದೆ ನಾನು ನಿಮ್ಮನ್ನು ಹೊಗಳಿದೆನು. ಅದು ಸಮರ್ಪಕವೆಂದು ನೀವು ನಿರೂಪಿಸಿದಿರಿ. ನಾವು ನಿಮಗೆ ಹೇಳಿದ ಪ್ರತಿಯೊಂದೂ ಸತ್ಯವಾಗಿತ್ತು. ನಾವು ತೀತನ ಮುಂದೆ ನಿಮ್ಮ ವಿಷಯದಲ್ಲಿ ಹೇಳಿದ ಹೊಗಳಿಕೆಯ ಮಾತುಗಳೆಲ್ಲಾ ಸತ್ಯವೆಂದು ನೀವು ನಿರೂಪಿಸಿದಿರಿ. 15 ನೀವೆಲ್ಲರೂ ವಿಧೇಯರಾಗಿರಲು ಸಿದ್ಧರಾಗಿದ್ದನ್ನು ಜ್ಞಾಪಿಸಿಕೊಂಡಾಗಲೆಲ್ಲಾ ಅವನಿಗೆ ನಿಮ್ಮ ಮೇಲೆ ಪ್ರೀತಿಯು ಹೆಚ್ಚಾಗುತ್ತದೆ. ನೀವು ಅವನನ್ನು ಗೌರವದಿಂದಲೂ ಭಯದಿಂದಲೂ ಸ್ವೀಕರಿಸಿದಿರಿ. 16 ನನಗೆ ನಿಮ್ಮ ವಿಷಯದಲ್ಲಿ ಪೂರ್ಣ ಭರವಸೆ ಇರುವುದರಿಂದ ಬಹು ಸಂತೋಷಪಡುತ್ತೇನೆ.