10
ಸಮಾರ್ಯದ ನಾಯಕರಿಗೆ ಯೇಹು ಬರೆಯುವನು
ಸಮಾರ್ಯದಲ್ಲಿ ಅಹಾಬನಿಗೆ ಎಪ್ಪತ್ತು ಮಂದಿ ಮಕ್ಕಳಿದ್ದರು. ಯೇಹುವು ಇಜ್ರೇಲಿನ ನಾಯಕರಿಗೆ ಮತ್ತು ಅಧಿಕಾರಿಗಳಿಗೆ ಪತ್ರಗಳನ್ನು ಬರೆದು ಸಮಾರ್ಯಕ್ಕೆ ಕಳುಹಿಸಿದನು. ಅಹಾಬನ ಮಕ್ಕಳನ್ನು ಬೆಳೆಸಿದ ಪಾಲಕರಿಗೂ ಅವನು ಪತ್ರಗಳನ್ನು ಕಳುಹಿಸಿದನು. ಯೇಹುವು ಪತ್ರಗಳಲ್ಲಿ, 2-3 “ನಿಮ್ಮ ಕೈಗೆ ಈ ಪತ್ರವು ತಲುಪಿದ ತಕ್ಷಣ, ನಿಮ್ಮ ಒಡೆಯನ ಕುಟುಂಬದಲ್ಲಿ ಬಹಳ ಉತ್ತಮನಾದ ಮತ್ತು ಸಮರ್ಥನಾದ ಒಬ್ಬ ವ್ಯಕ್ತಿಯನ್ನು ಆರಿಸಿರಿ. ನಿಮ್ಮ ಬಳಿ ರಥಗಳೂ ಕುದುರೆಗಳೂ ಇವೆ. ನೀವು ಬಲಾಢ್ಯವಾದ ನಗರದಲ್ಲಿ ವಾಸಿಸುತ್ತಿರುವಿರಿ. ನಿಮ್ಮ ಬಳಿ ಆಯುಧಗಳಿವೆ. ನೀವು ಆರಿಸಿದವನನ್ನು ಅವನ ತಂದೆಯ ಸಿಂಹಾಸನದ ಮೇಲೆ ಕುಳ್ಳಿರಿಸಿರಿ. ನಂತರ ನಿಮ್ಮ ಯಜಮಾನನ ಕುಟುಂಬಕ್ಕಾಗಿ ಹೋರಾಡಿ” ಎಂದು ಬರೆದಿದ್ದನು.
ಆದರೆ ಇಜ್ರೇಲಿನ ಅಧಿಕಾರಿಗಳು ಮತ್ತು ನಾಯಕರು ಬಹಳ ಭಯಗೊಂಡಿದ್ದರು. ಅವರು, “ಇಬ್ಬರು ರಾಜರು (ಯೋರಾವ್ ಮತ್ತು ಅಹಜ್ಯ) ಯೇಹುವನ್ನು ತಡೆಯಲಾಗಲಿಲ್ಲ. ನಾವು ಅವನನ್ನು ತಡೆಯಲಾಗುವುದಿಲ್ಲ” ಎಂದು ಹೇಳಿದರು.
ಅಹಾಬನ ಮನೆಯನ್ನು ನೋಡಿಕೊಳ್ಳುವ ಗೃಹಾಧಿಕಾರಿ, ನಗರವನ್ನು ನಿಯಂತ್ರಿಸುವ ನಗರಾಧಿಕಾರಿ, ಹಿರಿಯರು ಮತ್ತು ಅಹಾಬನ ಮಕ್ಕಳ ಪಾಲಕರಾದ ಜನರೆಲ್ಲರೂ ಯೇಹುವಿಗೆ ಈ ಸಂದೇಶವನ್ನು ಕಳುಹಿಸಿದರು: “ನಾವು ನಿನ್ನ ಸೇವಕರು. ನೀನು ನಮಗೆ ಹೇಳುವುದನ್ನೆಲ್ಲಾ ನಾವು ಮಾಡುತ್ತೇವೆ. ನಾವು ಯಾರನ್ನೂ ರಾಜನನ್ನಾಗಿ ಮಾಡುವುದಿಲ್ಲ. ನಿನಗೆ ಒಳ್ಳೆಯದೆಂದು ತೋಚಿದ್ದನ್ನು ಮಾಡು.”
ಸಮಾರ್ಯದ ನಾಯಕರು ಅಹಾಬನ ಮಕ್ಕಳನ್ನು ಕೊಂದುಹಾಕುವರು
ನಂತರ ಯೇಹು ಈ ನಾಯಕರಿಗೆ ಎರಡನೆಯ ಪತ್ರವನ್ನು ಬರೆದನು. ಯೇಹುವು, “ನೀವು ನನಗೆ ಬೆಂಬಲ ಕೊಡುವುದಾದರೆ ಮತ್ತು ವಿಧೇಯರಾಗಿರುವುದಾದರೆ ಅಹಾಬನ ಮಕ್ಕಳ ತಲೆಗಳನ್ನು ಕತ್ತರಿಸಿ ಹಾಕಿ. ನಾಳೆ ಇದೇ ಸಮಯಕ್ಕೆ ಇಜ್ರೇಲಿಗೆ ನನ್ನ ಬಳಿಗೆ ಅವುಗಳನ್ನು ತನ್ನಿ.”
ಅಹಾಬನಿಗೆ ಎಪ್ಪತ್ತು ಮಂದಿ ಮಕ್ಕಳಿದ್ದರು. ಅವರು ತಮ್ಮ ಪಾಲಕರಾದ ನಗರದ ನಾಯಕರ ಬಳಿಯಲ್ಲಿದ್ದರು. ನಗರದ ನಾಯಕರಿಗೆ ಈ ಪತ್ರವು ಬಂದು ತಲುಪಿದಾಗ, ಅವರು ರಾಜನ ಎಪ್ಪತ್ತುಮಂದಿ ಮಕ್ಕಳನ್ನು ಕರೆದುಕೊಂಡು ಹೋಗಿ ಕೊಂದುಹಾಕಿದರು. ನಂತರ ಆ ನಾಯಕರು ರಾಜನ ಮಕ್ಕಳ ತಲೆಗಳನ್ನು ಬುಟ್ಟಿಗಳಲ್ಲಿ ಹಾಕಿ ಇಜ್ರೇಲಿನಲ್ಲಿದ್ದ ಯೇಹುವಿನ ಬಳಿಗೆ ಕಳುಹಿಸಿದರು. ಸಂದೇಶಕನೊಬ್ಬನು ಯೇಹುವಿನ ಬಳಿಗೆ ಬಂದು ಅವನಿಗೆ, “ಅವರು ರಾಜನ ಮಕ್ಕಳ ತಲೆಗಳನ್ನು ತಂದಿದ್ದಾರೆ!” ಎಂದು ಹೇಳಿದನು.
ಆಗ ಯೇಹು, “ನಗರದ ಬಾಗಿಲಿನ ಬಳಿ ನಾಳೆ ಮುಂಜಾನೆಯ ತನಕ ಆ ತಲೆಗಳನ್ನು ಎರಡು ರಾಶಿಗಳನ್ನಾಗಿ ಹಾಕಿ” ಎಂದು ಹೇಳಿದನು.
ಮುಂಜಾನೆ, ಯೇಹು ಹೊರಗೆ ಬಂದು ಜನರ ಮುಂದೆ ನಿಂತು ಅವರಿಗೆ, “ನೀವು ನಿರಪರಾಧಿಗಳು. ನಾನಾದರೋ ನನ್ನ ಒಡೆಯನ ಮೇಲೆ ಒಳಸಂಚು ಮಾಡಿದವನು. ನಾನು ಅವನನ್ನು ಕೊಂದೆನು. ಆದರೆ ಅಹಾಬನ ಮಕ್ಕಳನ್ನೆಲ್ಲ ಕೊಂದವರು ಯಾರು? ನೀವು ಅವರನ್ನು ಕೊಂದಿದ್ದೀರಿ! 10 ಯೆಹೋವನು ಹೇಳಿದ್ದೆಲ್ಲವೂ ಸಂಭವಿಸುತ್ತದೆ ಎಂಬುದನ್ನು ನೀವು ತಿಳಿದಿರಬೇಕು. ಅಹಾಬನ ಕುಟುಂಬಕ್ಕೆ ಇವುಗಳು ಸಂಭವಿಸುತ್ತವೆಯೆಂದು ಯೆಹೋವನು ಎಲೀಯನ ಮೂಲಕ ತಿಳಿಸಿದ್ದನು. ಅಂತೆಯೇ ಆತನು ಮಾಡಿದ್ದಾನೆ” ಅಂದನು.
11 ಇಜ್ರೇಲಿನಲ್ಲಿ ವಾಸಿಸುತ್ತಿದ್ದ ಅಹಾಬನ ಕುಟುಂಬದ ಉಳಿದವರನ್ನೆಲ್ಲ ಯೇಹು ಕೊಂದುಹಾಕಿದನು. ಅಹಾಬನ ಆಪ್ತಮಿತ್ರರು, ಯಾಜಕರು ಮತ್ತು ಪ್ರಮುಖರನ್ನೆಲ್ಲ ಯೇಹುವು ಕೊಂದುಹಾಕಿದನು. ಅಹಾಬನ ಜನರಲ್ಲಿ ಯಾರನ್ನೂ ಉಳಿಸಲಿಲ್ಲ.
ಅಹಜ್ಯನ ಬಂಧುಗಳನ್ನು ಯೇಹು ಕೊಂದುಹಾಕುವನು
12 ಯೇಹು ಇಜ್ರೇಲನ್ನು ಬಿಟ್ಟು ಸಮಾರ್ಯಕ್ಕೆ ಹೋದನು. ಯೇಹುವು ದಾರಿಯಲ್ಲಿ ಕುರುಬರ ಪಾಳ್ಯವೆಂದು ಕರೆಯುವ ಸ್ಥಳದಲ್ಲಿ ತಂಗಿದನು. ಅವನು ಬೆತ್‌ಎಕೇಡ್‌ನ ರಸ್ತೆಯಲ್ಲಿ, ಕುರುಬರು ಕುರಿಗಳಿಂದ ತುಪ್ಪಟವನ್ನು ಕತ್ತರಿಸುವ ಒಂದು ಮನೆಗೆ ಹೋದನು. 13 ಯೇಹು ಯೆಹೂದದ ರಾಜನಾದ ಅಹಜ್ಯನ ಬಂಧುಗಳನ್ನು ಭೇಟಿಮಾಡಿ ಅವರಿಗೆ, “ನೀವು ಯಾರು?” ಎಂದು ಕೇಳಿದನು.
ಅವರು, “ನಾವು ಯೆಹೂದದ ರಾಜನಾದ ಅಹಜ್ಯನ ಬಂಧುಗಳು. ನಾವು ರಾಜನ ಮಕ್ಕಳನ್ನು ಮತ್ತು ರಾಜಮಾತೆಯ ಮಕ್ಕಳನ್ನು ನೋಡಲು ಬಂದಿದ್ದೇವೆ” ಎಂದರು.
14 ಆಗ ಯೇಹುವು ತನ್ನ ಜನರಿಗೆ, “ಅವರನ್ನು ಜೀವಸಹಿತ ಹಿಡಿದು ತನ್ನಿ!” ಎಂದು ಹೇಳಿದನು.
ಯೇಹುವಿನ ಜನರು ಅಹಜ್ಯನ ಬಂಧುಗಳನ್ನು ಜೀವಸಹಿತ ಹಿಡಿದು ತಂದರು. ಅಲ್ಲಿ ನಲವತ್ತೆರಡು ಮಂದಿ ಜನರಿದ್ದರು. ಯೇಹು ಬೆತ್‌ಎಕೇಡ್‌ನ ಬಾವಿಯ ಹತ್ತಿರ ಅವರನ್ನು ಕೊಂದುಹಾಕಿದನು. ಯೇಹುವು ಯಾರನ್ನೂ ಜೀವಸಹಿತ ಉಳಿಸಲಿಲ್ಲ.
ಯೇಹು ಯೆಹೋನಾದ್ವಾನನ್ನು ಸಂಧಿಸಿದನು
15 ಯೇಹುವು ಅಲ್ಲಿಂದ ಹೋದ ಮೇಲೆ, ರೇಕಾಬನ ಮಗನಾದ ಯೆಹೋನಾದ್ವಾನನ್ನು ಸಂಧಿಸಿದನು. ಯೆಹೋನಾದ್ವಾನು ಯೇಹುವನ್ನು ಸಂಧಿಸಲು ಬರುತ್ತಿದ್ದನು. ಯೇಹು ಯೆಹೋನಾದ್ವಾನನ್ನು ಅಭಿನಂದಿಸಿ ಅವನಿಗೆ, “ನಾನು ನಿನಗೆ ನಂಬಿಗಸ್ತನಾಗಿರುವಂತೆ ನೀನು ನನಗೆ ನಂಬಿಗಸ್ತನಾದ ಸ್ನೇಹಿತನಾಗಿರುವಿಯಾ?” ಎಂದು ಕೇಳಿದನು.
ಯೆಹೋನಾದ್ವಾನು, “ಹೌದು, ನಾನು ನಿನಗೆ ನಂಬಿಗಸ್ಥನಾದ ಸ್ನೇಹಿತನು” ಎಂದು ಉತ್ತರಿಸಿದನು.
ಯೇಹು, “ನೀನು ನಂಬಿಗಸ್ಥನಾದರೆ, ನಿನ್ನ ಕೈಯನ್ನು ಕೊಡು” ಎಂದನು.
ನಂತರ ಯೇಹು ಹೊರಬಂದು, ಯೆಹೋನಾದ್ವಾನನ್ನು ರಥದೊಳಕ್ಕೆ ಎಳೆದುಕೊಂಡನು.
16 ಯೇಹು, “ನನ್ನ ಸಂಗಡ ಬಾ. ಯೆಹೋವನಲ್ಲಿ ನನಗಿರುವ ಆಸಕ್ತಿಯನ್ನು ನೀನು ನೋಡುವಿಯಂತೆ” ಎಂದು ಹೇಳಿದನು.
ಯೇಹುವಿನ ರಥದಲ್ಲಿ ಯೆಹೋನಾದ್ವಾನೂ ಹೋದನು. 17 ಯೇಹು ಸಮಾರ್ಯಕ್ಕೆ ಬಂದು, ಅಹಾಬನ ಕುಟುಂಬದಲ್ಲಿ ಜೀವಸಹಿತರಾಗಿ ಸಮಾರ್ಯದಲ್ಲಿ ಉಳಿದಿದ್ದವರನ್ನೆಲ್ಲಾ ಕೊಂದುಹಾಕಿದನು. ಯೆಹೋವನು ಎಲೀಯನಿಗೆ ಹೇಳಿದ್ದಂತೆಯೇ ಯೇಹು ಮಾಡಿದನು.
ಯೇಹು ಬಾಳನ ಭಕ್ತರನ್ನು ಕರೆದನು
18 ಯೇಹು ಜನರನ್ನೆಲ್ಲ ಒಟ್ಟಾಗಿ ಸೇರಿಸಿ, “ಅಹಾಬನು ಬಾಳನನ್ನು ಸ್ವಲ್ಪ ಮಾತ್ರ ಸೇವಿಸಿದನು. ಆದರೆ ಯೇಹು ಬಾಳನನ್ನು ಅಧಿಕವಾಗಿ ಸೇವಿಸುತ್ತಾನೆ! 19 ಬಾಳನ ಎಲ್ಲಾ ಯಾಜಕರನ್ನೂ ಪ್ರವಾದಿಗಳನ್ನೂ ಕರೆಯಿರಿ. ಬಾಳನನ್ನು ಆರಾಧಿಸುವ ಜನರೆಲ್ಲರನ್ನೂ ಒಟ್ಟಾಗಿ ಕರೆಯಿರಿ. ಯಾರೂ ಈ ಸಭೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿ. ನಾನು ಬಾಳನಿಗೆ ಮಹಾಯಜ್ಞವನ್ನು ಅರ್ಪಿಸಬೇಕೆಂದಿದ್ದೇನೆ. ಈ ಸಭೆಗೆ ಯಾರಾದರೂ ಬಾರದೆ ಇದ್ದರೆ ಅವರನ್ನು ನಾನು ಕೊಂದುಹಾಕುತ್ತೇನೆ!” ಎಂದು ಹೇಳಿದನು.
ಆದರೆ ಅದು ಯೇಹುವಿನ ತಂತ್ರವಾಗಿತ್ತು. ಬಾಳನ ಭಕ್ತರನ್ನು ನಾಶಪಡಿಸಬೇಕೆಂಬುದೇ ಅವನ ಅಪೇಕ್ಷೆಯಾಗಿತ್ತು. 20 ಯೇಹುವು, “ಬಾಳನಿಗೆ ಒಂದು ಪವಿತ್ರ ಸಭೆಯನ್ನು ಸೇರಿಸಿರಿ” ಎಂದು ಹೇಳಿದನು. 21 ಬಳಿಕ ಅವನು ಇಸ್ರೇಲಿನ ಪ್ರದೇಶದಲ್ಲೆಲ್ಲಾ ಒಂದು ಸಂದೇಶವನ್ನು ಕಳುಹಿಸಿದನು. ಬಾಳನ ಆರಾಧಕರೆಲ್ಲರೂ ಬಂದರು. ಮನೆಯಲ್ಲಿ ಯಾರೂ ಉಳಿಯಲಿಲ್ಲ. ಬಾಳನ ಆರಾಧಕರೆಲ್ಲ ಬಾಳನ ಆಲಯಕ್ಕೆ ಬಂದರು. ಜನರಿಂದ ಆಲಯವು ತುಂಬಿಹೋಯಿತು.
22 ಯೇಹು ನಿಲುವಂಗಿಗಳ ಮೇಲ್ವಿಚಾರಕನಿಗೆ, “ಬಾಳನ ಭಕ್ತರಿಗೆಲ್ಲ ನಿಲುವಂಗಿಗಳನ್ನು ತಂದುಕೊಡು” ಎಂದು ಹೇಳಿದನು. ಅವನು ಬಾಳನ ಭಕ್ತರಿಗೆ ನಿಲುವಂಗಿಗಳನ್ನು ತಂದುಕೊಟ್ಟನು.
23 ಆಗ ಯೇಹು ಮತ್ತು ರೇಕಾಬನ ಮಗನಾದ ಯೆಹೋನಾದ್ವಾನು ಬಾಳನ ಆಲಯದೊಳಕ್ಕೆ ಹೋದರು. ಯೇಹು ಬಾಳನ ಭಕ್ತರಿಗೆ, “ಯೆಹೋವನ ಸೇವಕರು ಯಾರೂ ನಿಮ್ಮೊಡನೆ ಇಲ್ಲವೆಂಬುದನ್ನು ಸುತ್ತಲೂ ನೋಡಿ ಖಚಿತಪಡಿಸಿಕೊಳ್ಳಿ. ಬಾಳನ ಭಕ್ತರಾದ ಜನರು ಮಾತ್ರ ಇಲ್ಲಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಿ” ಎಂದು ಹೇಳಿದನು. 24 ಬಾಳನ ಆರಾಧಕರು ಯಜ್ಞಗಳನ್ನು ಮತ್ತು ಸರ್ವಾಂಗಹೋಮಗಳನ್ನು ಅರ್ಪಿಸಲು ಬಾಳನ ಆಲಯದೊಳಕ್ಕೆ ಹೋದರು.
ಆದರೆ ಹೊರಗಡೆ ಯೇಹುವಿನ ಎಂಭತ್ತು ಜನರು ಕಾಯುತ್ತಿದ್ದರು. ಯೇಹು ಅವರಿಗೆ, “ಯಾರೂ ತಪ್ಪಿಸಿಕೊಂಡು ಹೋಗಲು ಬಿಡಬೇಡಿ. ಯಾರಾದರೂ ಒಬ್ಬ ಮನುಷ್ಯನನ್ನು ತಪ್ಪಿಸಿಕೊಂಡು ಹೋಗಲು ಬಿಟ್ಟರೆ, ಅವನು ತನ್ನ ಜೀವವನ್ನು ಬೆಲೆಯಾಗಿ ಕೊಡಬೇಕಾಗುತ್ತದೆ” ಎಂದು ಹೇಳಿದನು.
25 ಯೇಹುವು ಸರ್ವಾಂಗಹೋಮಗಳನ್ನು ಅರ್ಪಿಸಿದ ತಕ್ಷಣ, ಕಾವಲುಗಾರರಿಗೂ ಸೇನಾಧಿಪತಿಗಳಿಗೂ, “ಒಳಕೋಣೆಗೆ* ಒಳಕೋಣೆ ಅಕ್ಷರಶಃ, “ಬಾಳನ ದೇವಾಲಯದ ಪಟ್ಟಣ.” ಹೋಗಿ ಬಾಳನ ಆರಾಧಕರನ್ನೆಲ್ಲ ಕೊಂದುಹಾಕಿ! ಜೀವಸಹಿತ ಯಾರೂ ಆಲಯದಿಂದ ಹೊರಕ್ಕೆ ಬರಲು ಬಿಡಬೇಡಿ!” ಎಂದು ಹೇಳಿದನು.
ಸೇನಾಧಿಪತಿಗಳು ಚೂಪಾದ ಖಡ್ಗದಿಂದ ಬಾಳನ ಭಕ್ತರನ್ನೆಲ್ಲ ಕೊಂದುಹಾಕಿದರು. ಬಾಳನ ಭಕ್ತರ ದೇಹಗಳನ್ನು ಕಾವಲುಗಾರರು ಮತ್ತು ಸೇನಾಧಿಪತಿಗಳು ಹೊರಕ್ಕೆ ಎಸೆದರು. ನಂತರ ಆ ಕಾವಲುಗಾರರು ಮತ್ತು ಸೇನಾಧಿಪತಿಗಳು ಬಾಳನ ಆಲಯದ ಒಳಕೋಣೆಯನ್ನು ಪ್ರವೇಶಿಸಿದರು. 26 ಅವರು ಬಾಳನ ಆಲಯದಲ್ಲಿದ್ದ ಸ್ಮಾರಕಸ್ತಂಭಗಳನ್ನು ಹೊರತಂದು, ಆಲಯವನ್ನು ಸುಟ್ಟುಹಾಕಿದರು. ನಂತರ ಅವರು ಬಾಳನ ಸ್ಮಾರಕಸ್ತಂಭಗಳನ್ನು ಚೂರುಚೂರು ಮಾಡಿದರು. 27 ಬಾಳನ ಆಲಯವನ್ನೂ ಅವರು ಹಾಳುಗೆಡವಿದರು. ಅವರು ಬಾಳನ ಆಲಯವನ್ನು ಶೌಚಗೃಹವನ್ನಾಗಿ ಮಾಡಿದರು. ಇಂದೂ ಸಹ ಅದನ್ನು ಶೌಚಗೃಹವಾಗಿ ಬಳಸುತ್ತಾರೆ.
28 ಯೇಹುವು ಇಸ್ರೇಲಿನಲ್ಲಿ ಬಾಳನ ಪೂಜೆಯನ್ನು ನಿಲ್ಲಿಸಿದನು. 29 ಆದರೂ ಇಸ್ರೇಲಿನ ಪಾಪಗಳಿಗೆ ಪ್ರೇರಕನಾದ, ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳಿಂದ ಯೇಹುವು ಸಂಪೂರ್ಣವಾಗಿ ವಿಮುಖನಾಗಲಿಲ್ಲ. ಬೇತೇಲ್ ಮತ್ತು ದಾನ್‌ಗಳಲ್ಲಿದ್ದ ಬಂಗಾರದ ಕರುಗಳನ್ನು ಯೇಹುವು ನಾಶಗೊಳಿಸಲಿಲ್ಲ.
ಇಸ್ರೇಲನ್ನು ಯೇಹು ಆಳುವನು
30 ಯೆಹೋವನು ಯೇಹುವಿಗೆ, “ನೀನು ಒಳ್ಳೆಯದನ್ನು ಮಾಡಿದೆ. ನಾನು ಒಳ್ಳೆಯದೆಂದು ಹೇಳಿದ್ದನ್ನೇ ನೀನು ಮಾಡಿದೆ. ನನ್ನ ಅಪೇಕ್ಷೆಯಂತೆ ನೀನು ಅಹಾಬನ ಕುಟುಂಬವನ್ನು ನಾಶಗೊಳಿಸಿದೆ. ಆದ್ದರಿಂದ ನಿನ್ನ ಸಂತತಿಯವರು ಇಸ್ರೇಲನ್ನು ನಾಲ್ಕು ತಲೆಮಾರುಗಳವರೆಗೆ ಆಳುತ್ತಾರೆ” ಎಂದು ಹೇಳಿದನು.
31 ಆದರೆ ಯೇಹು ಇಸ್ರೇಲಿನ ದೇವರಾದ ಯೆಹೋವನ ನಿಯಮಗಳನ್ನು ಪೂರ್ಣಮನಸ್ಸಿನಿಂದಲೂಎಚ್ಚರಿಕೆಯಿಂದಲೂ ಪಾಲಿಸಲಿಲ್ಲ. ಇಸ್ರೇಲಿನ ಪಾಪಗಳಿಗೆ ಪ್ರೇರಕನಾದ ಯಾರೊಬ್ಬಾಮನ ಪಾಪಗಳನ್ನು ಯೇಹುವು ಮಾಡುವುದನ್ನು ನಿಲ್ಲಿಸಲೇ ಇಲ್ಲ.
ಹಜಾಯೇಲನು ಇಸ್ರೇಲನ್ನು ಸೋಲಿಸಿದನು
32 ಆ ಸಮಯದಲ್ಲಿ, ಯೆಹೋವನು ಇಸ್ರೇಲಿನ ಭಾಗಗಳನ್ನು ಕುಗ್ಗಿಸತೊಡಗಿದನು. ಅರಾಮ್ಯರ ರಾಜನಾದ ಹಜಾಯೇಲನು ಇಸ್ರೇಲಿನ ಪ್ರತಿಯೊಂದು ಗಡಿಯಲ್ಲಿಯೂ ಇಸ್ರೇಲರನ್ನು ಸೋಲಿಸುತ್ತಿದ್ದನು. 33 ಹಜಾಯೇಲನು ಜೋರ್ಡನ್ ನದಿಯ ಪೂರ್ವಕ್ಕಿರುವ ಪ್ರದೇಶವನ್ನೆಲ್ಲ ಗೆದ್ದುಕೊಂಡನು. ಅವನು ಗಾದ್, ರೂಬೇನ್ ಮತ್ತು ಮನಸ್ಸೆ ಕುಲಗಳಿಗೆ ಸೇರಿದ ಎಲ್ಲಾ ಪ್ರದೇಶವನ್ನು, ಗಿಲ್ಯಾದ್‌ನ ಎಲ್ಲಾ ಪ್ರದೇಶವನ್ನು ಗೆದ್ದನು. ಹಜಾಯೇಲನು ಆರ್ನೋನ್ ಕಣಿವೆಯಿಂದ ಗಿಲ್ಯಾದ್, ಬಾಷಾನ್‌ವರೆಗಿನ ಅರೋಯೇರ್ ಪ್ರದೇಶವನ್ನೆಲ್ಲ ಗೆದ್ದುಕೊಂಡನು.
ಯೇಹುವಿನ ಸಾವು
34 ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೇಹು ಮಾಡಿದ ಇತರ ಉತ್ತಮಕಾರ್ಯಗಳನ್ನೆಲ್ಲ ಬರೆಯಲಾಗಿದೆ. 35 ಯೇಹು ಸತ್ತುಹೋದನು. ಅವನನ್ನು ಅವನ ಪೂರ್ವಿಕರ ಬಳಿ ಸಮಾರ್ಯದಲ್ಲಿ ಸಮಾಧಿಮಾಡಿದರು. ಯೇಹುವಿನ ನಂತರ ಅವನ ಮಗನಾದ ಯೇಹೋವಾಹಾಜನು ಇಸ್ರೇಲಿನ ನೂತನ ರಾಜನಾದನು. 36 ಯೇಹುವು ಸಮಾರ್ಯದಲ್ಲಿ ಇಸ್ರೇಲನ್ನು ಇಪ್ಪತ್ತೆಂಟು ವರ್ಷ ಆಳಿದನು.

*10:25: ಒಳಕೋಣೆ ಅಕ್ಷರಶಃ, “ಬಾಳನ ದೇವಾಲಯದ ಪಟ್ಟಣ.”