11
ಯೆಹೂದದಲ್ಲಿ ರಾಜನ ಮಕ್ಕಳನ್ನೆಲ್ಲ ಅತಲ್ಯಳು ನಾಶಗೊಳಿಸಿದಳು
ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗ ಸತ್ತದ್ದನ್ನು ನೋಡಿದಳು. ಅವಳು ಮೇಲೆದ್ದು ರಾಜನ ಕುಟುಂಬವನ್ನೆಲ್ಲ ಕೊಂದುಬಿಟ್ಟಳು.
ಯೆಹೋಷೆಬಳು ರಾಜನಾದ ಯೋರಾವುನ ಮಗಳಾಗಿದ್ದಳು ಮತ್ತು ಅಹಜ್ಯನ ಸೋದರಿಯಾಗಿದ್ದಳು. ಯೆಹೋವಾಷನು ರಾಜನ ಮಕ್ಕಳಲ್ಲಿ ಒಬ್ಬನಾಗಿದ್ದನು. ಅತಲ್ಯಳು ಇತರ ಮಕ್ಕಳನ್ನು ಕೊಲ್ಲುವಾಗ ಯೆಹೋಷೆಬಳು ಯೆಹೋವಾಷನನ್ನು ತೆಗೆದುಕೊಂಡು ಹೋದಳು. ಅವಳು ಯೆಹೋವಾಷನನ್ನು ಮತ್ತು ಅವನ ದಾದಿಯನ್ನು ತನ್ನ ಮಲಗುವ ಕೊಠಡಿಯಲ್ಲಿ ಅಡಗಿಸಿದಳು. ಯೆಹೋವಾಷನನ್ನು ಅವನ ದಾದಿಯು ಮತ್ತು ಯೆಹೋಷೆಬಳು ಅತಲ್ಯಳಿಂದ ತಪ್ಪಿಸಿ ಅಡಗಿಸಿಟ್ಟರು. ಈ ರೀತಿ ಯೆಹೋವಾಷನನ್ನು ಕೊಲ್ಲಲಾಗಲಿಲ್ಲ.
ನಂತರ ಯೆಹೋವಾಷ ಮತ್ತು ಯೆಹೋಷೆಬಳು ಯೆಹೋವನ ಆಲಯದಲ್ಲಿ ಅಡಗಿಕೊಂಡರು. ಯೆಹೋವಾಷನು ಆರು ವರ್ಷಗಳ ಕಾಲ ಅಡಗಿಕೊಂಡಿದ್ದನು. ಅತಲ್ಯಳು ಯೆಹೂದ ದೇಶವನ್ನು ಆಳಿದಳು.
ಏಳನೆ ವರ್ಷದಲ್ಲಿ, ಪ್ರಧಾನ ಯಾಜಕನಾದ ಯೆಹೋಯಾದಾವನು ಕೆರೇತ್ಯರ ಸೇನಾಧಿಪತಿಗಳನ್ನು ಮತ್ತು ಕಾವಲುಗಾರರನ್ನು ಕರೆಸಿಕೊಂಡನು. ಯೆಹೋಯಾದಾವನು ಅವರನ್ನೆಲ್ಲ ಯೆಹೋವನ ಆಲಯದಲ್ಲಿ ಒಟ್ಟಾಗಿ ಸೇರಿಸಿದನು. ನಂತರ ಯೆಹೋಯಾದಾವನು ಅವರೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಯೆಹೋಯಾದಾವನು ಆಲಯದಲ್ಲಿ ಅವರು ವಾಗ್ದಾನ ಮಾಡುವಂತೆ ಬಲತ್ಕಾರಗೊಳಿಸಿದನು. ನಂತರ ಅವನು ಅವರಿಗೆ ರಾಜನ ಮಗನನ್ನು (ಯೆಹೋವಾಷನನ್ನು) ತೋರಿಸಿದನು.
ಯೆಹೋಯಾದಾವನು ಅವರಿಗೆ, “ನೀವು ಈ ಕಾರ್ಯವನ್ನು ಮಾಡಲೇಬೇಕು. ನಿಮ್ಮಲ್ಲಿ ಸಬ್ಬತ್‌ದಿನದಂದು ಬರುವ ಮೂರನೆ ಒಂದು ಭಾಗದ ಜನರು ರಾಜನನ್ನು ಅವನ ಅರಮನೆಯಲ್ಲಿ ರಕ್ಷಿಸಬೇಕು. ಇನ್ನೊಂದು ಮೂರನೆಯ ಒಂದು ಭಾಗವು ಸೂರ್ ಬಾಗಿಲಿನಲ್ಲಿರಬೇಕು. ಮತ್ತೊಂದು ಮೂರನೆಯ ಒಂದು ಭಾಗವು ಕಾವಲುಗಾರನ ಹಿಂದೆ ಬಾಗಿಲಿನಲ್ಲಿರಬೇಕು. ಈ ರೀತಿ ನೀವು ಗೋಡೆಯಂತೆ ನಿಂತು ಯೆಹೋವಾಷನನ್ನು ರಕ್ಷಿಸುತ್ತಿರಬೇಕು. ಸಬ್ಬತ್‌ದಿನದಂದು ಕಾಯಲು ಬರುವ ನಿಮ್ಮೆಲ್ಲರ ಎರಡು ಪಡೆಗಳು ಯೆಹೋವನ ಆಲಯವನ್ನು ಕಾಯುತ್ತಾ ರಾಜನಾದ ಯೆಹೋವಾಷನನ್ನು ಕಾಯಬೇಕು. ರಾಜನಾದ ಯೆಹೋವಾಷನು ಎಲ್ಲಿಗಾದರೂ ಯಾವಾಗಲಾದರೂ ಹೋದರೆ ಅವನೊಂದಿಗೆ ನೀವು ಇರಲೇಬೇಕು. ನೀವೆಲ್ಲರೂ ರಾಜನನ್ನು ಸುತ್ತುವರಿದಿರಬೇಕು. ಪ್ರತಿಯೊಬ್ಬ ಕಾವಲುಗಾರನೂ ಆಯುಧವನ್ನು ತನ್ನ ಕೈಯಲ್ಲಿ ಹಿಡಿದಿರಲೇಬೇಕು. ನಿಮ್ಮ ಸಮೀಪಕ್ಕೆ ಯಾರಾದರೂ ಬಂದರೆ ಅವರನ್ನು ಕೊಲ್ಲಬೇಕು” ಎಂದನು.
ಯಾಜಕನಾದ ಯೆಹೋಯಾದಾವನು ಆಜ್ಞಾಪಿಸಿದ ಸಂಗತಿಗಳಿಗೆಲ್ಲ ಸೇನಾಧಿಪತಿಗಳು ವಿಧೇಯರಾಗಿದ್ದರು. ಪ್ರತಿಯೊಬ್ಬ ಸೇನಾಧಿಪತಿಯೂ ತನ್ನ ಕಾವಲುಗಾರರನ್ನು ಅಂದರೆ ಸಬ್ಬತ್‌ದಿನದಂದು ಕಾಯಲು ಬರಬೇಕಾಗಿದ್ದ ಮತ್ತು ಸಬ್ಬತ್‌ದಿನದಂದು ಕೆಲಸದಿಂದ ಹೋಗಬೇಕಾಗಿದ್ದ ಸಿಪಾಯಿಗಳನ್ನು ಕರೆದೊಯ್ದನು. ಅವರೆಲ್ಲರೂ ಯಾಜಕನಾದ ಯೆಹೋಯಾದಾವನ ಹತ್ತಿರಕ್ಕೆ ಹೋದರು. 10 ಸೇನಾಧಿಪತಿಗಳಿಗೆ ಬರ್ಜಿಗಳನ್ನು ಮತ್ತು ಗುರಾಣಿಗಳನ್ನು ಯಾಜಕನು ಕೊಟ್ಟನು. ರಾಜನಾದ ದಾವೀದನು ಯೆಹೋವನ ಆಲಯದಲ್ಲಿ ಈ ಬರ್ಜಿಗಳನ್ನು ಮತ್ತು ಗುರಾಣಿಗಳನ್ನು ಇಟ್ಟಿದ್ದನು. 11 ಈ ಕಾವಲುಗಾರರು ಆಲಯದ ಬಲಗಡೆಯ ಮೂಲೆಯಿಂದ ಎಡಗಡೆಯ ಮೂಲೆಯವರೆಗೆ ತಮ್ಮ ಕೈಗಳಲ್ಲಿ ಆಯುಧಗಳನ್ನು ಹಿಡಿದುಕೊಂಡು ನಿಂತರು. ರಾಜನು ಆಲಯದೊಳಕ್ಕೆ ಹೋದಾಗ ಅವರು ಅವನ ಸುತ್ತಲೂ, ಯಜ್ಞವೇದಿಕೆಯ ಮತ್ತು ಆಲಯದ ಸುತ್ತಲೂ ನಿಂತುಕೊಂಡರು. 12 ಈ ಜನರು ಯೆಹೋವಾಷಾನನ್ನು ಹೊರಗೆ ತಂದರು. ಅವರು ಯೆಹೋವಾಷನ ಮೇಲೆ ಕಿರೀಟವನ್ನಿಟ್ಟು ಕೈಯಲ್ಲಿ ಧರ್ಮಶಾಸ್ತ್ರವನ್ನು ಕೊಟ್ಟರು. ನಂತರ ಅವರು ಅವನನ್ನು ಅಭಿಷೇಕಿಸಿ, ನೂತನ ರಾಜನನ್ನಾಗಿ ಮಾಡಿದರು. ಅವರು ಚಪ್ಪಾಳೆ ತಟ್ಟುತ್ತಾ “ರಾಜನು ಚಿರಂಜೀವಿಯಾಗಿರಲಿ!” ಎಂದು ಆರ್ಭಟಿಸಿದರು.
13 ಕಾವಲುಗಾರರ ಮತ್ತು ಜನರ ಗದ್ದಲವು ರಾಣಿಯಾದ ಅತಲ್ಯಳಿಗೆ ಕೇಳಿಸಿತು. ಅವಳು ಯೆಹೋವನ ಆಲಯದಲ್ಲಿದ್ದ ಜನರ ಬಳಿಗೆ ಹೋದಳು. 14 ರಾಜನು ಪದ್ಧತಿಯಂತೆ ಸ್ತಂಭದ ಬಳಿ ನಿಂತಿರುವುದನ್ನೂ ಜನರು ಮತ್ತು ನಾಯಕರು ರಾಜನಿಗಾಗಿ ತುತ್ತೂರಿ ಊದುತ್ತಿರುವುದನ್ನೂ ಜನರೆಲ್ಲರೂ ಬಹಳ ಸಂತೋಷದಿಂದಿರುವುದನ್ನೂ ಅವಳು ನೋಡಿ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು “ದ್ರೋಹ, ದ್ರೋಹ!” ಎಂದು ಕೂಗಿಕೊಂಡಳು.
15 ಯಾಜಕನಾದ ಯೆಹೋಯಾದಾವನು ಸೈನಿಕರ ಮೇಲ್ವಿಚಾರಕರಾದ ಸೇನಾಧಿಪತಿಗಳಿಗೆ ಆಜ್ಞಾಪಿಸಿದನು. ಯೆಹೋಯಾದಾವನು ಅವರಿಗೆ, “ಅತಲ್ಯಳನ್ನು ಆಲಯದ ಆವರಣದಿಂದ ಹೊರಗೆ ತೆಗೆದುಕೊಂಡು ಹೋಗಿ. ಅವಳ ಹಿಂಬಾಲಕರು ಯಾರೇ ಆಗಿದ್ದರೂ ಕೊಂದುಬಿಡಿ. ಆದರೆ ಅವರನ್ನು ಯೆಹೋವನ ಆಲಯದಲ್ಲಿ ಕೊಲ್ಲಬೇಡಿ” ಎಂದು ಹೇಳಿದನು.
16 ಆದ್ದರಿಂದ ಸೈನಿಕರು ಅವಳನ್ನು ಹಿಡಿದುಕೊಂಡು ಹೊರಗೆ ಕರೆದೊಯ್ದರು, ಆಕೆಯು ಕುದುರೆಗಳ ಪ್ರವೇಶದ್ವಾರದ ಮೂಲಕ ಅರಮನೆಗೆ ಹೋದಳು. ಸೈನಿಕರು ಅತಲ್ಯಳನ್ನು ಅಲ್ಲಿ ಕೊಂದುಹಾಕಿದರು.
17 ಅನಂತರ ಯೆಹೋಯಾದಾವನ ಪ್ರೇರಣೆಯಿಂದ ಅರಸನೂ ಪ್ರಜೆಗಳೂ ತಾವು ಯೆಹೋವನ ಪ್ರಜೆಗಳಾಗಿರುವುದಾಗಿ ಆತನಿಗೆ ಪ್ರಮಾಣಮಾಡಿದರು.
18 ಆಗ ಜನರೆಲ್ಲರೂ ಸುಳ್ಳುದೇವರಾದ ಬಾಳನ ಗುಡಿಗೆ ಹೋಗಿ ಬಾಳನ ವಿಗ್ರಹವನ್ನೂ ಮತ್ತು ಅವನ ಯಜ್ಞವೇದಿಕೆಯನ್ನೂ ಚೂರುಚೂರು ಮಾಡಿದರು. ಬಾಳನ ಯಾಜಕನಾದ ಮತ್ತಾನನನ್ನು ಜನರು ಯಜ್ಞವೇದಿಕೆಯ ಎದುರಿನಲ್ಲಿಯೇ ಕೊಂದುಹಾಕಿದರು.
ಯಾಜಕನಾದ ಯೆಹೋಯಾದಾವನು ಯೆಹೋವನ ಆಲಯಕ್ಕೆ ಕಾವಲುಗಾರರನ್ನು ನೇಮಿಸಿದನು. 19 ಯಾಜಕನು ಜನರನ್ನೆಲ್ಲ ಕರೆದುಕೊಂಡು ಹೋದನು. ಅವರು ಸಿಪಾಯಿಗಳ ದ್ವಾರದ ಮೂಲಕ ಅರಮನೆಗೆ ಹೋದರು. ರಾಜನ ವಿಶೇಷ ಅಂಗರಕ್ಷಕರು ಮತ್ತು ಸೇನಾಧಿಪತಿಗಳು ರಾಜನ ಜೊತೆಯಲ್ಲಿ ಹೋದರು. ಅವರನ್ನು ಇತರ ಜನರೆಲ್ಲರೂ ಹಿಂಬಾಲಿಸಿದರು. ಅವರು ರಾಜನ ಅರಮನೆಯ ಬಾಗಿಲಿಗೆ ಹೋದರು. ನಂತರ ರಾಜನಾದ ಯೆಹೋವಾಷನು ಸಿಂಹಾಸನದ ಮೇಲೆ ಕುಳಿತುಕೊಂಡನು. 20 ಜನರೆಲ್ಲರೂ ಬಹಳ ಹರ್ಷಗೊಂಡರು. ನಗರದಲ್ಲಿ ಸಮಾಧಾನವಿತ್ತು. ರಾಜನ ಅರಮನೆಯ ಹತ್ತಿರ ರಾಣಿಯಾದ ಅತಲ್ಯಳನ್ನು ಖಡ್ಗದಿಂದ ಕೊಂದಿದ್ದರು.
21 ಯೆಹೋವಾಷನು ರಾಜನಾದಾಗ ಅವನಿಗೆ ಏಳು ವರ್ಷ ವಯಸ್ಸಾಗಿತ್ತು.