10
ಹೊಸ ಕಲ್ಲಿನ ಹಲಗೆಗಳು
“ಆಗ ಯೆಹೋವನು ನನಗೆ, ‘ಮೊದಲಿನ ಎರಡು ಕಲ್ಲಿನ ಹಲಗೆಗಳಂತೆಯೇ ಎರಡು ಕಲ್ಲಿನ ಹಲಗೆಗಳನ್ನು ಮಾಡು. ಆಮೇಲೆ ಬೆಟ್ಟದ ಮೇಲೆ ನನ್ನ ಬಳಿಗೆ ಬಾ. ಅಲ್ಲದೆ ಒಂದು ಮರದ ಪೆಟ್ಟಿಗೆಯನ್ನೂ ತಯಾರು ಮಾಡು. ನೀನು ಒಡೆದುಹಾಕಿದ ಮೊದಲಿನ ಕಲ್ಲು ಹಲಗೆಗಳ ಮೇಲೆ ಯಾವ ಪದಗಳನ್ನು ಬರೆದಿದ್ದೆನೋ ಅದೇ ಪದಗಳನ್ನು ಈ ಕಲ್ಲಿನ ಹಲಗೆಗಳ ಮೇಲೆ ಬರೆಯುತ್ತೇನೆ. ಈ ಹೊಸ ಕಲ್ಲಿನ ಹಲಗೆಗಳನ್ನು ನೀನು ಮರದ ಪೆಟ್ಟಿಗೆಯಲ್ಲಿಡಬೇಕು’ ಎಂದು ಹೇಳಿದನು.
“ನಾನು ಜಾಲೀಮರದಿಂದ ಪೆಟ್ಟಿಗೆಯನ್ನು ಮಾಡಿದೆನು. ಎರಡು ಕಲ್ಲಿನ ಹಲಗೆಗಳನ್ನು ತಯಾರಿಸಿ ಬೆಟ್ಟವನ್ನೇರಿದೆನು. ಆಗ ಯೆಹೋವನು ಮುಂಚಿನಂತೆಯೇ ಇದರಲ್ಲೂ ದಶಾಜ್ಞೆಗಳನ್ನು ಬರೆದು ನನಗೆ ಕೊಟ್ಟನು. ನೀವು ಬೆಟ್ಟದ ಬಳಿ ಒಟ್ಟಾಗಿ ಸೇರಿ ಬಂದಿದ್ದಾಗ ಆತನು ಬೆಂಕಿಯೊಳಗಿಂದ ಹೇಳಿದ್ದ ದಶಾಜ್ಞೆಗಳೇ ಇವು. ನಾನು ಬೆಟ್ಟದಿಂದಿಳಿದು ಆ ಕಲ್ಲಿನ ಹಲಗೆಗಳನ್ನು ಯೆಹೋವನ ಅಪ್ಪಣೆಯಂತೆ ನಾನು ಮಾಡಿದ ಪೆಟ್ಟಿಗೆಯೊಳಗಿಟ್ಟೆನು. ಆ ಕಲ್ಲಿನ ಹಲಗೆಗಳು ಈಗಲೂ ಇವೆ.”
(ಇಸ್ರೇಲರು ಯಾಕಾನ್ಯರ ಬಾವಿಗಳ ಬಳಿಯಿಂದ ಪ್ರಯಾಣ ಮಾಡಿ ಮೋಸೇರಕ್ಕೆ ಬಂದರು. ಆರೋನನು ಸತ್ತುಹೋದದ್ದು ಮತ್ತು ಅವನ ಶವವನ್ನು ಹೂಳಿಟ್ಟದ್ದು ಅಲ್ಲಿಯೇ. ಆರೋನನ ಬದಲಿಗೆ ಅವನ ಮಗನಾದ ಎಲ್ಲಾಜಾರನು ಯಾಜಕನಾದನು. ಆಮೇಲೆ ಇಸ್ರೇಲ್ ಜನರು ಮೋಸೇರದಿಂದ ಗುದ್ಗೋದ ಎಂಬ ಸ್ಥಳಕ್ಕೆ ಬಂದರು. ಆಮೇಲೆ ಗುದ್ಗೋದದಿಂದ ಯೊಟ್ಬಾತ ಎಂಬ ನದಿಗಳುಳ್ಳ ಸ್ಥಳದಲ್ಲಿ ಪಾಳೆಯ ಮಾಡಿದರು. ಆ ಸಮಯದಲ್ಲಿ ಯೆಹೋವನು ಲೇವಿಕುಲದವರನ್ನು ಒಂದು ವಿಶೇಷವಾದ ಕೆಲಸಕ್ಕಾಗಿ ಬೇರೆ ಕುಲಗಳವರಿಂದ ಪ್ರತ್ಯೇಕಿಸಿದನು. ಅವರಿಗೆ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಎತ್ತಿಕೊಂಡು ಹೋಗುವ ಕೆಲಸ ಕೊಡಲ್ಪಟ್ಟಿತು. ಯೆಹೋವನ ಸನ್ನಿಧಾನದಲ್ಲಿ ಅವರು ಯಾಜಕರ ಕೆಲಸವನ್ನು ಮಾಡಿದರು. ಅಲ್ಲದೆ ಯೆಹೋವನ ಜನರಿಗೆ ದೇವರ ಆಶೀರ್ವಾದ ವಚನಗಳನ್ನು ಹೇಳುವ ಕೆಲಸವನ್ನು ಅವರು ಮಾಡಿದರು. ಹೀಗಿದ್ದುದರಿಂದ ಅವರಿಗೆ ತಮ್ಮ ಸಹೋದರರ ಜೊತೆಯಲ್ಲಿ ವಾಗ್ದಾನದ ದೇಶದೊಳಗೆ ಸ್ವಾಸ್ತ್ಯವು ದೊರಕಲಿಲ್ಲ. ಅವರ ಸ್ವಾಸ್ತ್ಯವು ಯೆಹೋವನೇ ಆಗಿದ್ದನು. ಇದು ದೇವರಾದ ಯೆಹೋವನ ವಾಗ್ದಾನ.)
10 “ಹಿಂದಿನ ಪ್ರಕಾರ ಈ ಸಾರಿಯೂ ನಾನು ನಲವತ್ತು ದಿನ ಹಗಲಿರುಳು ಬೆಟ್ಟದ ಮೇಲಿದ್ದೆನು. ನನ್ನ ಮಾತುಗಳನ್ನು ಯೆಹೋವನು ಆಲೈಸಿದನು; ನಿಮ್ಮನ್ನು ನಾಶಮಾಡುವುದಿಲ್ಲವೆಂದು ಪ್ರಮಾಣ ಮಾಡಿದನು. 11 ಯೆಹೋವನು ನನಗೆ, ‘ನನ್ನ ಜನರನ್ನು ಪ್ರಯಾಣದಲ್ಲಿ ಮುನ್ನಡೆಸು; ನಾನು ಅವರ ಪೂರ್ವಿಕರಿಗೆ ವಾಗ್ದಾನ ಮಾಡಿದ ಆ ದೇಶದಲ್ಲಿ ಅವರು ನೆಲೆಸಬೇಕು’ ಎಂದು ಹೇಳಿದನು.
ಯೆಹೋವನು ಅಪೇಕ್ಷಿಸುವುದೇನೆಂದರೆ
12 “ಇಸ್ರೇಲ್ ಜನರೇ, ಕೇಳಿರಿ! ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ನಿಜವಾಗಿಯೂ ಅಪೇಕ್ಷಿಸುವುದೇನು? ನೀವು ಆತನನ್ನು ಗೌರವಿಸಬೇಕೆಂದೂ ಆತನ ಆಜ್ಞಾವಿಧಿಗಳಿಗೆ ವಿಧೇಯರಾಗಬೇಕೆಂದೂ ಅಪೇಕ್ಷಿಸುತ್ತಾನೆ. ನೀವು ಆತನನ್ನು ಪ್ರೀತಿಸಿ, ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಆತನ ಸೇವೆ ಮಾಡಬೇಕೆಂದು ಆತನು ಅಪೇಕ್ಷಿಸುತ್ತಾನೆ. 13 ಆದ್ದರಿಂದ ನಾನು ನಿಮಗೆ ಕೊಡುವ ಆತನ ಕಟ್ಟಳೆ, ವಿಧಿನಿಯಮಗಳಿಗೆ ವಿಧೇಯರಾಗಿರಿ. ಇವೆಲ್ಲವೂ ನಿಮ್ಮ ಒಳ್ಳೆಯದಕ್ಕಾಗಿಯೇ ಇರುತ್ತದೆ.
14 “ಪ್ರತಿಯೊಂದೂ ಯೆಹೋವನದೇ, ಉನ್ನತವಾದ ಆಕಾಶವೂ ಯೆಹೋವನದೇ. ಈ ಭೂಮಿಯೂ, ಅದರಲ್ಲಿರುವ ಸಮಸ್ತವೂ ದೇವರಿಗೇ ಸೇರಿದ್ದು. 15 ಯೆಹೋವನು ನಿಮ್ಮ ಪೂರ್ವಿಕರನ್ನು ಎಷ್ಟು ಪ್ರೀತಿಮಾಡಿದ್ದನೆಂದರೆ, ಅವರ ಸಂತಾನದವರಾದ ನಿಮ್ಮನ್ನು ತನ್ನ ಜನರನ್ನಾಗಿ ಆರಿಸಿಕೊಳ್ಳುವಷ್ಟು ಪ್ರೀತಿಸಿದನು; ಬೇರೆ ಜನಾಂಗದವರ ಬದಲಾಗಿ ನಿಮ್ಮನ್ನೇ ಆರಿಸಿಕೊಂಡನು. ನೀವು ಇಂದಿಗೂ ಆತನಿಂದ ಆರಿಸಲ್ಪಟ್ಟ ಜನರಾಗಿದ್ದೀರಿ.
16 “ಆದ್ದರಿಂದ ಹಠಮಾರಿಗಳಾಗಬೇಡಿರಿ. ನಿಮ್ಮ ಹೃದಯಗಳನ್ನು ಯೆಹೋವನಿಗೆ ಕೊಡಿರಿ. 17 ಯಾಕೆಂದರೆ ಯೆಹೋವನೇ ನಿಮ್ಮ ದೇವರು. ಆತನು ದೇವರುಗಳ ದೇವರೂ ಪ್ರಭುಗಳ ಪ್ರಭುವೂ ಆಗಿದ್ದಾನೆ. ಆತನು ಮಹಾದೇವರೂ ಆಶ್ಚರ್ಯಕಾರನೂ ಪರಾಕ್ರಮಶಾಲಿಯೂ ಭಯಂಕರನೂ ಆಗಿದ್ದಾನೆ. ಆತನಿಗೆ ಎಲ್ಲಾ ಜನರೂ ಒಂದೇ. ಆತನು ತನ್ನ ತೀರ್ಮಾನವನ್ನು ಬದಲಾಯಿಸಲು ಲಂಚ ಸ್ವೀಕರಿಸುವವನಲ್ಲ. 18 ಅನಾಥಮಕ್ಕಳಿಗೂ ವಿಧವೆಯರಿಗೂ ಆತನು ಸಹಾಯಕನಾಗಿದ್ದಾನೆ. ನಮ್ಮ ದೇಶದಲ್ಲಿರುವ ಪರದೇಶಿಯರನ್ನೂ ಆತನು ಪ್ರೀತಿಸುತ್ತಾನೆ; ಅವರಿಗೆ ಊಟಬಟ್ಟೆಗಳನ್ನು ಒದಗಿಸುತ್ತಾನೆ. 19 ಆದ್ದರಿಂದ ನೀವೂ ಪರದೇಶಿಯರನ್ನು ಪ್ರೀತಿಸಬೇಕು. ನೀವೂ ಸಹ ಈಜಿಪ್ಟ್ ದೇಶದಲ್ಲಿ ಪರದೇಶಿಗಳಾಗಿದ್ದಿರಿ.
20 “ನೀವು ನಿಮ್ಮ ದೇವರಾದ ಯೆಹೋವನನ್ನು ಗೌರವಿಸಿ ಆತನೊಬ್ಬನನ್ನೇ ಆರಾಧಿಸಬೇಕು. ಆತನನ್ನು ಬಿಟ್ಟು ತೊಲಗದಿರಿ. ವಾಗ್ದಾನ, ಒಡಂಬಡಿಕೆಗಳನ್ನು ಮಾಡುವಾಗ ಆತನ ಹೆಸರಿನಲ್ಲಿಯೇ ಮಾಡಿರಿ. 21 ಯೆಹೋವನನ್ನು ಮಾತ್ರ ನೀವು ಸ್ತುತಿಸಬೇಕು. ಆತನೇ ನಿಮ್ಮ ದೇವರು. ಆತನು ನಿಮಗಾಗಿ ಭಯಂಕರವಾದ ಮಹತ್ಕಾರ್ಯಗಳನ್ನು ಮಾಡಿದ್ದಾನೆ. ಅವುಗಳನ್ನು ನೀವು ಕಣ್ಣಾರೆ ಕಂಡಿದ್ದೀರಿ. 22 ನಿಮ್ಮ ಪೂರ್ವಿಕರು ಈಜಿಪ್ಟಿಗೆ ಹೋದಾಗ ಅವರಲ್ಲಿ ಕೇವಲ ಎಪ್ಪತ್ತು ಮಂದಿ ಮಾತ್ರ ಇದ್ದರು. ಆದರೆ ನಿಮ್ಮ ದೇವರಾದ ಯೆಹೋವನು ಆಕಾಶದಲ್ಲಿರುವ ನಕ್ಷತ್ರಗಳಂತೆ ನಿಮ್ಮನ್ನು ಅನೇಕಾನೇಕ ಜನರನ್ನಾಗಿ ಮಾಡಿದ್ದಾನೆ.