28
ಕಟ್ಟಳೆಗಳನ್ನು ಅನುಸರಿಸಿದವರ ಆಶೀರ್ವಾದ
“ನಾನು ಹೇಳಿದಂಥ ಎಲ್ಲಾ ಧರ್ಮಶಾಸ್ತ್ರವನ್ನು ಅನುಸರಿಸಿ ಅದಕ್ಕೆ ವಿಧೇಯರಾದರೆ ನಿಮ್ಮ ದೇವರಾದ ಯೆಹೋವನು ಪ್ರಪಂಚದ ಎಲ್ಲಾ ದೇಶಗಳಿಗಿಂತ ನಿಮ್ಮ ದೇಶವನ್ನು ಅತೀ ಉನ್ನತಸ್ಥಾನದಲ್ಲಿರುವ ದೇಶವನ್ನಾಗಿ ಮಾಡುವನು. ನೀವು ದೇವರಿಗೆ ವಿಧೇಯರಾದರೆ ಈ ಎಲ್ಲಾ ಆಶೀರ್ವಾದಗಳು ನಿಮ್ಮದಾಗುವವು.
 
“ಯೆಹೋವನು ನಿಮ್ಮನ್ನು ಹೊಲಗಳಲ್ಲಿಯೂ
ಪಟ್ಟಣಗಳಲ್ಲಿಯೂ ಆಶೀರ್ವದಿಸುವನು.
ಯೆಹೋವನು ನಿಮ್ಮನ್ನು ಆಶೀರ್ವದಿಸಿ
ನಿಮಗೆ ಅನೇಕ ಮಕ್ಕಳನ್ನು ಅನುಗ್ರಹಿಸುವನು.
ನಿಮ್ಮ ಹೊಲಗಳನ್ನು ಆಶೀರ್ವದಿಸಿ
ಒಳ್ಳೆಯ ಬೆಳೆಯನ್ನು ಅನುಗ್ರಹಿಸುವನು.
ನಿಮ್ಮ ಪಶುಪ್ರಾಣಿಗಳನ್ನು ಆಶೀರ್ವದಿಸಿ
ಅವು ಹೆಚ್ಚು ಮರಿಗಳನ್ನು ಈಯುವಂತೆ ಮಾಡುವನು.
ಆತನು ನಿಮ್ಮ ಎಲ್ಲಾ ದನಕರು, ಕುರಿಮರಿಗಳನ್ನು ಆಶೀರ್ವದಿಸುವನು.
ಯೆಹೋವನು ನಿಮ್ಮ ಪುಟ್ಟಿಗಳನ್ನೂ ಪಾತ್ರೆಗಳನ್ನೂ ಆಶೀರ್ವದಿಸಿ
ಅವು ಯಾವಾಗಲೂ ಆಹಾರಪದಾರ್ಥಗಳಿಂದ ತುಂಬಿರುವಂತೆ ಮಾಡುವನು.
ನೀವು ಮಾಡುವ ಎಲ್ಲಾ ಕಾರ್ಯಗಳಲ್ಲಿ
ಸಫಲ ಹೊಂದುವಂತೆ ಆಶೀರ್ವದಿಸುವನು.
 
“ವೈರಿಗಳು ನಿಮ್ಮೆದುರಾಗಿ ಯುದ್ಧಮಾಡಲು ಬಂದಾಗ ನಿಮಗೆ ಆತನು ಸಹಾಯ ಮಾಡುವನು. ವೈರಿಗಳು ಒಂದು ದಿಕ್ಕಿನಿಂದ ಬಂದರೆ ಏಳು ದಾರಿಯಲ್ಲಿ ಪಲಾಯನ ಮಾಡುವರು.
“ಯೆಹೋವನು ನಿಮ್ಮನ್ನು ಆಶೀರ್ವದಿಸಿ ನಿಮ್ಮ ಕಣಜಗಳನ್ನು ಆಶೀರ್ವದಿಸುವನು. ನೀವು ಮಾಡುವ ಕಾರ್ಯಗಳನ್ನೆಲ್ಲಾ ಆಶೀರ್ವದಿಸುವನು. ನಿಮಗೆ ಕೊಡುವ ದೇಶದಲ್ಲಿ ನೀವು ವಾಸಿಸುವಾಗ ನಿಮ್ಮನ್ನು ಆಶೀರ್ವದಿಸುವನು. ನೀವು ಯೆಹೋವನ ಆಜ್ಞೆಗಳಿಗೆ ವಿಧೇಯರಾದರೆ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ತನ್ನ ವಾಗ್ದಾನಕ್ಕನುಸಾರವಾಗಿ ವಿಶೇಷವಾದ ಸ್ವಕೀಯ ಪ್ರಜೆಯನ್ನಾಗಿ ಮಾಡುವನು. 10 ಆಗ ನಿಮ್ಮ ದೇಶದಲ್ಲಿ ವಾಸಿಸುವವರೆಲ್ಲರೂ ನೀವು ದೇವರ ಹೆಸರಿನಿಂದ ಕರೆಯಲ್ಪಟ್ಟವರೆಂಬುದನ್ನು ನೋಡುವಾಗ ನಿಮಗೆ ಭಯಪಡುವರು.
11 “ನಿಮ್ಮ ದೇವರಾದ ಯೆಹೋವನು ನಿಮಗೆ ಒಳ್ಳೆಯ ವಸ್ತುಗಳನ್ನು ಕೊಡುವನು; ನಿಮಗೆ ಹೆಚ್ಚು ಮಕ್ಕಳನ್ನು ಅನುಗ್ರಹಿಸುವನು. ನಿಮ್ಮ ಪಶುಗಳು ಹೆಚ್ಚು ಮರಿಗಳನ್ನು ಈಯುವಂತೆ ಮಾಡುವನು. ಯೆಹೋವನು ನಿಮಗೆ ಕೊಡುವುದಾಗಿ ವಾಗ್ದಾನ ಮಾಡಿದ ದೇಶದಲ್ಲಿ ನಿಮ್ಮ ಹೊಲವು ಒಳ್ಳೆಯ ಬೆಳೆಗಳನ್ನು ಫಲಿಸುತ್ತದೆ. 12 ಯೆಹೋವನು ತನ್ನ ಆಶೀರ್ವಾದಗಳೆಂಬ ಭಂಡಾರವನ್ನೇ ನಿಮಗೆ ತೆರೆಯುವನು. ಕಾಲಕ್ಕೆ ತಕ್ಕಹಾಗೆ ಮಳೆ ಸುರಿಯುವಂತೆ ಮಾಡುವನು; ನಿಮ್ಮ ಕಾರ್ಯವನ್ನೆಲ್ಲಾ ಸಫಲ ಮಾಡುವನು. ಇತರ ದೇಶಗಳಿಗೆ ಸಾಲ ಕೊಡಲು ನಿಮ್ಮಲ್ಲಿ ಹಣವಿರುವುದು; ಬೇರೆಯವರಿಂದ ಸಾಲ ತೆಗೆದುಕೊಳ್ಳುವ ಅವಶ್ಯಕತೆ ನಿಮಗೆ ಬಾರದು. 13 ಯೆಹೋವನು ನಿಮ್ಮನ್ನು ತಲೆಯನ್ನಾಗಿ ಮಾಡಲು ಬಯಸುತ್ತಾನೆಯೇ ಹೊರತು ಬಾಲವನ್ನಾಗಿಯಲ್ಲ. ನೀವು ಮೇಲಿನ ಅಂತಸ್ತಿನಲ್ಲಿರುವಿರಿ, ಕೆಳಗಿನದರಲ್ಲಿ ಅಲ್ಲ. ನೀವು ಯೆಹೋವನ ಆಜ್ಞೆಯನ್ನು ಪಾಲಿಸಿದಾಗ ನಿಮಗೆ ಹೀಗೆ ಆಗುವುದು. 14 ನಾನು ಈ ಹೊತ್ತು ಬೋಧಿಸುವ ಯಾವುದನ್ನೂ ನೀವು ಉಲ್ಲಂಘಿಸಬಾರದು. ಇತರ ದೇವರುಗಳನ್ನು ಹಿಂಬಾಲಿಸಿ ಅವುಗಳನ್ನು ಪೂಜಿಸಬಾರದು.
ಕಟ್ಟಳೆಗಳನ್ನು ಅನುಸರಿಸದಿದ್ದಲ್ಲಿ ಶಾಪ
15 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಆಜ್ಞೆ, ಕಟ್ಟಳೆಗಳಿಗೆ ನೀವು ವಿಧೇಯರಾಗದಿದ್ದರೆ ಈ ಕೆಟ್ಟ ಸಂಗತಿಗಳು ನಿಮಗೆ ತಟ್ಟುವವು:
 
16 “ನಿಮ್ಮ ಹೊಲದಲ್ಲಿಯೂ ನೀವು ವಾಸಿಸುವ ಪಟ್ಟಣದಲ್ಲಿಯೂ
ಯೆಹೋವನು ನಿಮ್ಮನ್ನು ಶಪಿಸುವನು.
17 ನಿಮ್ಮ ಪುಟ್ಟಿಗಳನ್ನೂ ಪಾತ್ರೆಗಳನ್ನೂ
ಆಹಾರವಿಲ್ಲದಂತೆ ಬರಿದಾಗಿ ಮಾಡುವನು.
18 ನಿಮಗೆ ಹೆಚ್ಚು ಮಕ್ಕಳಿಲ್ಲದಂತೆ ಮಾಡುವನು.
ನಿಮ್ಮ ಹೊಲಗಳನ್ನು ಶಪಿಸಿ
ನಿಮಗೆ ಹೆಚ್ಚು ಬೆಳೆಯಾಗದಂತೆ ಮಾಡುವನು.
ನಿಮ್ಮ ಪಶುಪ್ರಾಣಿಗಳನ್ನು ಶಪಿಸಿ
ಅವುಗಳು ಮರಿಗಳನ್ನು ಈಯದಂತೆ ಮಾಡುವನು.
ಆತನು ನಿಮ್ಮ ಎಲ್ಲಾ ಮರಿಗಳನ್ನೂ ಕರುಗಳನ್ನೂ ಶಪಿಸುವನು.
19 ನೀವು ಎಲ್ಲಾ ಸಮಯಗಳಲ್ಲಿ ಮಾಡುವ ಎಲ್ಲಾ ಕೆಲಸಕಾರ್ಯಗಳನ್ನು
ನಿಮ್ಮ ದೇವರಾದ ಯೆಹೋವನು ಶಪಿಸುವನು.
 
20 “ನೀವು ಕೆಟ್ಟಕಾರ್ಯಗಳನ್ನು ಮಾಡಿ ಯೆಹೋವನಿಂದ ದೂರವಾಗಿ ಹೋದರೆ ನಿಮಗೆ ಕೆಟ್ಟಸಂಗತಿಗಳು ಉಂಟಾಗುವವು. ನಿಮಗೆ ಉಪದ್ರವಗಳೂ ಮನಸ್ಸಿಗೆ ಅಸಮಾಧಾನವೂ ಉಂಟಾಗುವವು. ನೀವು ಸಂಪೂರ್ಣವಾಗಿ ನಾಶವಾಗುವ ತನಕ ಈ ಸಂಗತಿಗಳು ನಿಮ್ಮನ್ನು ಬಾಧಿಸುವವು. ನೀವು ಆತನನ್ನು ತೊರೆದದ್ದರಿಂದ ನಿಮಗೆ ಹಾಗೆ ಮಾಡುವನು. 21 ನೀವು ಸ್ವಾಸ್ತ್ಯವಾಗಿ ಹೊಂದಲಿರುವ ದೇಶದಿಂದ ನೀವು ನಾಶವಾಗುವವರೆಗೆ, ನಿಮ್ಮ ದೇವರಾದ ಯೆಹೋವನು ನಿಮಗೆ ಭಯಂಕರವಾದ ರೋಗಗಳನ್ನು ಬರಮಾಡುವನು. 22 ಜ್ವರ, ಬಾಧೆ, ದೇಹ ಊದಿಕೊಳ್ಳುವಿಕೆ ಇವುಗಳಿಂದ ನಿಮ್ಮನ್ನು ಶಿಕ್ಷಿಸುವನು. ನಿಮ್ಮ ದೇಶದೊಳಗೆ ಸಹಿಸಲಾರದ ಉಷ್ಣವನ್ನು ಕಳುಹಿಸಿ ಮಳೆಬೀಳದಂತೆ ಮಾಡುವನು. ನಿಮ್ಮ ಬೆಳೆ ರೋಗದಿಂದಲೂ ಬಿಸಿಲಿನಿಂದಲೂ ನಾಶವಾಗುವುದು. ಇವೆಲ್ಲಾ ನಿಮಗೆ ಉಂಟಾಗಿ ನೀವು ನಾಶವಾಗುವ ತನಕ ಮುಂದುವರಿಯುವವು. 23 ಆಕಾಶವು ಮೋಡಗಳೇ ಇರದ ಕಾದ ಹಿತ್ತಾಳೆಯಂತಿರುವುದು. ಕಾಲಿನ ಅಡಿಯಲ್ಲಿರುವ ನೆಲವು ಕಬ್ಬಿಣದಂತೆ ಗಟ್ಟಿಯಾಗಿರುವುದು. 24 ಯೆಹೋವನು ನಿಮಗೆ ಮಳೆಯನ್ನು ಬೀಳಮಾಡುವುದಿಲ್ಲ; ಕೇವಲ ಧೂಳು ಮತ್ತು ಮರಳು ಆಕಾಶದಿಂದ ಬೀಳುವುದು. ನೀವು ನಾಶವಾಗುವವರೆಗೆ ಅದು ಮೇಲಿನಿಂದ ಬೀಳುತ್ತಿರುವುದು.
25 “ನಿಮ್ಮ ವೈರಿಗಳು ಬಂದು ನಿಮ್ಮನ್ನು ಸೋಲಿಸಿಬಿಡುವಂತೆ ಮಾಡುವನು. ನೀವು ಒಂದು ದಾರಿಯಿಂದ ನಿಮ್ಮ ವೈರಿಗೆ ಎದುರಾಗಿ ಯುದ್ಧಕ್ಕೆ ಇಳಿದರೆ ಏಳುದಾರಿಗಳಿಂದ ರಣರಂಗದಿಂದ ಪಲಾಯನ ಮಾಡುವಿರಿ. ನಿಮಗೆ ಸಂಭವಿಸುವ ಬಾಧೆಗಳನ್ನು ನೋಡಿ ಇತರ ಜನಾಂಗದವರು ಭಯಪಡುವರು. 26 ಕಾಡುಪಕ್ಷಿಗಳಿಗೆ ಮತ್ತು ಕಾಡುಪ್ರಾಣಿಗಳಿಗೆ ನಿಮ್ಮ ಹೆಣಗಳು ಆಹಾರವಾಗುವವು. ಅವುಗಳನ್ನು ಓಡಿಸಲು ಯಾರೂ ಇರುವುದಿಲ್ಲ.
27 “ಈಜಿಪ್ಟಿನವರಿಗೆ ಕಳುಹಿಸಿದಂತೆ ನಿಮಗೂ ಮೈಯಲ್ಲಿ ಬಾಧಿಸುವ ಹುಣ್ಣುಗಳನ್ನು ಕಳುಹಿಸುವನು. ದೇಹದಲ್ಲಿ ಗಡ್ಡೆಗಳುಂಟಾಗುವವು. ಕೀವುಸೋರುವ ಹುಣ್ಣುಗಳು, ಗುಣವಾಗದ ತುರಿಸುವ ಕಜ್ಜಿಗಳು ಉಂಟಾಗುವವು. 28 ಯೆಹೋವನು ನಿಮ್ಮನ್ನು ದಿಗ್ಬ್ರಾಂತರನ್ನಾಗಿ ಮಾಡುವನು; ನಿಮ್ಮನ್ನು ಕುರುಡರನ್ನಾಗಿ ಮಾಡಿ ಗಲಿಬಿಲಿ ಮಾಡುವನು. 29 ಹಗಲಿನಲ್ಲೂ ಕುರುಡರಂತೆ ನೀವು ತಡವರಿಸುವಿರಿ. ನೀವು ಮಾಡುವ ಕಾರ್ಯವೆಲ್ಲವೂ ನಿಷ್ಫಲವಾಗುವವು. ಜನರು ನಿಮ್ಮನ್ನು ಬಾಧಿಸಿ ನಿಮ್ಮಲ್ಲಿರುವದನ್ನೆಲ್ಲಾ ದೋಚಿಕೊಂಡು ಹೋಗುವರು. ನಿಮ್ಮನ್ನು ರಕ್ಷಿಸಲು ಯಾರೂ ಬರುವುದಿಲ್ಲ.
30 “ನೀವು ಮದುವೆಯಾಗಲು ಕನ್ನಿಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವಿರಿ. ಆದರೆ ಬೇರೊಬ್ಬನು ಆಕೆಯನ್ನು ಕೂಡುವನು. ನೀವೊಂದು ಮನೆಯನ್ನು ಕಟ್ಟುವಿರಿ. ಆದರೆ ಬೇರೊಬ್ಬನು ಅದರಲ್ಲಿ ವಾಸಿಸುವನು. ನೀವು ದ್ರಾಕ್ಷಾತೋಟ ಮಾಡಿ ದ್ರಾಕ್ಷಾಲತೆಗಳನ್ನು ನೆಡುವಿರಿ. ಆದರೆ ಅದರ ಫಲಗಳನ್ನು ನೀವು ಕೂಡಿಸುವುದಿಲ್ಲ. 31 ನಿಮ್ಮ ದನಗಳನ್ನು ನಿಮ್ಮೆದುರಿನಲ್ಲಿ ಜನರು ಕೊಯ್ಯುವರು. ಆದರೆ ನೀವು ಅದರ ಮಾಂಸವನ್ನು ತಿನ್ನುವುದಿಲ್ಲ. ನಿಮ್ಮ ಕತ್ತೆಗಳನ್ನು ಜನರು ನಿಮ್ಮಿಂದ ತೆಗೆದುಕೊಂಡು ಹೋಗುವರು. ಆದರೆ ಅವುಗಳನ್ನು ಹಿಂದಕ್ಕೆ ಕೊಡರು. ನಿಮ್ಮ ಕುರಿಗಳನ್ನು ವೈರಿಗಳು ಕೊಂಡೊಯ್ಯುವರು. ನಿಮ್ಮನ್ನು ರಕ್ಷಿಸಲು ಯಾರೂ ಬರಲಾರರು.
32 “ನಿಮ್ಮ ಗಂಡುಹೆಣ್ಣು ಮಕ್ಕಳನ್ನು ಬೇರೆಯವರು ಎತ್ತಿಕೊಂಡು ಹೋಗುವರು. ನೀವು ಹಗಲುರಾತ್ರಿ ನಿಮ್ಮ ಮಕ್ಕಳಿಗಾಗಿ ಹುಡುಕಾಡುವಿರಿ. ಹುಡುಕಾಡುತ್ತಾ ನಿಮ್ಮ ಕಣ್ಣುಗಳು ಕಂಗೆಡುವವು; ಆದರೆ ಅವರು ನಿಮಗೆ ದೊರಕುವುದಿಲ್ಲ. ಯೆಹೋವನು ನಿಮಗೆ ಸಹಾಯ ಮಾಡುವುದಿಲ್ಲ.
33 “ನೀವು ಅರಿಯದಿರುವ ದೇಶದವರು ಬಂದು ನಿಮ್ಮ ಪೈರನ್ನು ಕೊಯ್ದುಕೊಂಡು ಹೋಗುವರು; ನೀವು ದುಡಿದು ಸಂಪಾದಿಸಿದವುಗಳನ್ನು ಎತ್ತಿಕೊಂಡು ಹೋಗುವರು. ಜನರು ನಿಮ್ಮನ್ನು ಕುಗ್ಗಿಸಿ ಬಲಹೀನರನ್ನಾಗಿ ಮಾಡುವರು. 34 ನೀವು ನೋಡುವ ಸಂಗತಿಗಳು ನಿಮ್ಮನ್ನು ಹುಚ್ಚರನ್ನಾಗಿ ಮಾಡುತ್ತವೆ. 35 ಯೆಹೋವನು ನಿಮ್ಮನ್ನು ಉರಿಯುವ ಹುಣ್ಣುಗಳಿಂದ ಬಾಧಿಸುವನು; ಅವುಗಳು ಗುಣವಾಗುವುದಿಲ್ಲ. ಈ ಹುಣ್ಣುಗಳು ನಿಮ್ಮ ದೇಹದ ಎಲ್ಲಾ ಭಾಗಗಳಲ್ಲಿ ಅಂದರೆ ನಿಮ್ಮ ಪಾದದಿಂದ ಹಿಡಿದು ನಡುನೆತ್ತಿಯ ತನಕ ಇರುವವು.
36 “ಯೆಹೋವನು ನಿಮ್ಮನ್ನೂ ನಿಮ್ಮ ಅರಸನನ್ನೂ ನೀವು ಅರಿಯದ ದೇಶಕ್ಕೆ ಅಟ್ಟಿಬಿಡುವನು. ನೀವಾಗಲಿ ನಿಮ್ಮ ಪೂರ್ವಿಕರಾಗಲಿ ಆ ದೇಶವನ್ನು ಎಂದೂ ನೋಡಲಿಲ್ಲ. ಅಲ್ಲಿ ಮರ, ಕಲ್ಲುಗಳಿಂದ ಮಾಡಿದ ಸುಳ್ಳುದೇವರನ್ನು ಆರಾಧಿಸುವಿರಿ. 37 ನೀವು ಯಾವ ದೇಶಕ್ಕೆ ಕಳುಹಿಸಲ್ಪಡುವಿರೋ ಆ ದೇಶದವರು ನಿಮ್ಮ ದುರವಸ್ಥೆಯನ್ನು ನೋಡಿ ನಗುವರು; ಕೆಟ್ಟಮಾತುಗಳನ್ನಾಡುವರು.
ಸೋಲು
38 “ಹೊಲದಲ್ಲಿ ಧಾನ್ಯ ಯಥೇಚ್ಛವಾಗಿ ಬೆಳೆದರೂ ನೀವು ಮನೆಯೊಳಗೆ ತರುವುದು ಸ್ವಲ್ಪ ಮಾತ್ರ. ಮಿಡತೆಯು ನಿಮ್ಮ ಬೆಳೆಯನ್ನು ತಿಂದು ಬಿಡುವದು. 39 ನೀವು ದ್ರಾಕ್ಷಾತೋಟ ಮಾಡಿ ಪ್ರಯಾಸಪಟ್ಟು ಅದರಲ್ಲಿ ಕೆಲಸ ಮಾಡುವಿರಿ. ಆದರೆ ಅದರ ಫಲವನ್ನು ಹುಳಗಳು ತಿಂದುಬಿಡುವುದರಿಂದ ನೀವು ದ್ರಾಕ್ಷಿಯನ್ನು ಸಂಗ್ರಹಿಸುವುದಿಲ್ಲ; ದ್ರಾಕ್ಷಾರಸವನ್ನು ಕುಡಿಯುವುದಿಲ್ಲ. 40 ನಿಮ್ಮ ಭೂಮಿಯಲ್ಲಿ ಆಲಿವ್ ಮರಗಳು ತುಂಬಿದ್ದರೂ ಎಣ್ಣೆಯ ಬರದಲ್ಲಿ ಸಂಕಟಪಡುವಿರಿ. ಯಾಕೆಂದರೆ ಆಲಿವ್ ಕಾಯಿಗಳು ಭೂಮಿಯ ಮೇಲೆ ಉದುರಿಬಿದ್ದು ಹಾಳಾಗುವವು. 41 ನಿಮಗೆ ಗಂಡುಹೆಣ್ಣು ಮಕ್ಕಳು ಹುಟ್ಟುವರು. ಆದರೆ ಅವರು ನಿಮ್ಮೊಂದಿಗೆ ಇರುವುದಿಲ್ಲ. ಅವರು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು. 42 ನಿಮ್ಮ ತೋಟದ ಎಲ್ಲಾ ಮರಗಳನ್ನೂ ಹೊಲದ ಪೈರುಗಳನ್ನೂ ಮಿಡತೆಗಳು ತಿಂದುಬಿಡುವವು. 43 ನಿಮ್ಮ ಮಧ್ಯದಲ್ಲಿ ವಾಸಿಸುವ ಅನ್ಯರು ಬಲಿಷ್ಠರಾಗುವರು. ನೀವಾದರೋ ಬಲಹೀನರಾಗುವಿರಿ. 44 ನಿಮಗೆ ಸಾಲ ಕೊಡಲು ವಿದೇಶಿಯರಿಗೆ ಹಣವಿರುವುದು. ಆದರೆ ಅವರಿಗೆ ಸಾಲ ಕೊಡಲು ನಿಮ್ಮಲ್ಲಿ ಹಣವಿರುವುದಿಲ್ಲ. ತಲೆಯು ದೇಹವನ್ನು ಹೇಗೆ ಹಿಡಿತದಲ್ಲಿಟ್ಟುಕೊಂಡಿರುತ್ತದೋ ಹಾಗೆಯೇ ಅವರು ನಿಮ್ಮನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವರು. ನೀವು ಅವರಿಗೆ ಬಾಲದಂತಿರುವಿರಿ.
45 “ನಿಮ್ಮ ದೇವರಾದ ಯೆಹೋವನು ಹೇಳಿದ ಸಂಗತಿಗಳಿಗೆ ನೀವು ಕಿವಿಗೊಡದೆ ಹೋದದ್ದರಿಂದ, ಆತನು ಕೊಟ್ಟ ಆಜ್ಞೆಗಳಿಗೂ ನಿಯಮಗಳಿಗೂ ನೀವು ವಿಧೇಯರಾಗದಿದ್ದ ಕಾರಣ ಈ ಶಾಪಗಳೆಲ್ಲಾ ನಿಮ್ಮ ಮೇಲೆ ಬರುತ್ತವೆ. ನೀವು ನಾಶವಾಗುವವರೆಗೂ ಅವು ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತವೆ. 46 ನೀವೂ ನಿಮ್ಮ ಸಂತತಿಯವರೂ ದೇವರ ಶಾಶ್ವತವಾದ ತೀರ್ಪನ್ನು ಹೊಂದಿದ್ದೀರೆಂಬುದಕ್ಕೆ ಬೇರೆಯವರಿಗೆ ಈ ಶಾಪಗಳೇ ಸೂಚನೆಯಾಗಿಯೂ ರುಜುವಾತಾಗಿಯೂ ಇರುತ್ತವೆ.
47 “ನಿಮ್ಮದೇವರಾದ ಯೆಹೋವನು ನಿಮಗೆ ಹೆಚ್ಚಾದ ಆಶೀರ್ವಾದವನ್ನು ಕೊಟ್ಟನು. ಆದರೆ ನೀವು ಸಂತೋಷ ಮತ್ತು ಉಪಕಾರದ ಹೃದಯದಿಂದ ಆತನ ಸೇವೆಮಾಡಲಿಲ್ಲ. 48 ಆದ್ದರಿಂದ ಆತನು ನಿಮ್ಮ ವೈರಿಗಳನ್ನು ಕಳುಹಿಸಿ ಅವರ ಸೇವೆ ನೀವು ಮಾಡುವಂತೆ ಮಾಡುವನು. ನೀವು ಹಸಿವು ಬಾಯಾರಿಕೆಗಳಿಂದ ಬಳಲುವಿರಿ; ಬಟ್ಟೆಯಿಲ್ಲದೆ ಬಡವರಾಗಿ ಜೀವಿಸುವಿರಿ. ನಿಮ್ಮ ಯೆಹೋವನು ನಿಮ್ಮ ಮೇಲೆ ಭಾರವನ್ನು ಹೊರಿಸುವನು. ಆ ಭಾರವನ್ನು ನಿಮ್ಮಿಂದ ತೆಗೆಯಲಾಗುವುದಿಲ್ಲ; ನೀವು ನಾಶವಾಗುವಿರಿ.
ವೈರಿಜನಾಂಗದ ಶಾಪ
49 “ಬಹಳ ದೂರದಿಂದ ಒಂದು ಜನಾಂಗವು ನಿಮ್ಮೊಂದಿಗೆ ಯುದ್ಧಮಾಡಲು ಬರುವಂತೆ ಯೆಹೋವನು ಮಾಡುವನು. ನೀವು ಅವರ ಭಾಷೆಯನ್ನು ಅರಿಯದಿರುವಿರಿ. ಆಕಾಶದಿಂದ ಹದ್ದು ಹಾರಿಬರುವಂತೆ ಅತೀ ವೇಗವಾಗಿ ಅವರು ನಿಮ್ಮ ಮೇಲೆ ಬೀಳುವರು. 50 ಅವರು ಮಹಾಕ್ರೂರಿಗಳು. ಅವರು ನಿಮ್ಮಲ್ಲಿರುವ ಮುದುಕರಿಗೆ ಅಥವಾ ಎಳೆಗೂಸುಗಳಿಗೆ ಕರುಣೆ ತೋರಿಸರು. 51 ಅವರು ನಿಮ್ಮ ಪಶುಗಳನ್ನು ಅಟ್ಟಿಸಿಕೊಂಡು ಹೋಗುವರು; ನೀವು ಬೆಳೆದ ಬೆಳೆಯನ್ನು ಕೊಂಡೊಯ್ಯುವರು. ನಿಮ್ಮನ್ನು ನಾಶಪಡಿಸುವ ತನಕ ಅವರು ಪ್ರತಿಯೊಂದನ್ನೂ ತೆಗೆದುಕೊಂಡು ಹೋಗುವರು. ಅವರು ನಿಮಗೆ ದವಸಧಾನ್ಯವನ್ನಾಗಲಿ ದ್ರಾಕ್ಷಾರಸವನ್ನಾಗಲಿ ಎಣ್ಣೆಯನ್ನಾಗಲಿ ಹಸುಗಳನ್ನಾಗಲಿ ಕುರಿಗಳನ್ನಾಗಲಿ ಮೇಕೆಗಳನ್ನಾಗಲಿ ಬಿಟ್ಟುಹೋಗುವುದಿಲ್ಲ. ಅವರು ನಿಮ್ಮನ್ನು ನಾಶಪಡಿಸುವ ತನಕ ಪ್ರತಿಯೊಂದನ್ನೂ ತೆಗೆದುಕೊಂಡು ಹೋಗುವರು.
52 “ಆ ವೈರಿಗಳು ನಿಮ್ಮ ಪಟ್ಟಣಗಳನ್ನೆಲ್ಲಾ ಮುತ್ತಿ ವಶಪಡಿಸಿಕೊಳ್ಳುವರು. ಆ ಪಟ್ಟಣಗಳಿಗೆ ಎತ್ತರದ ಪೌಳಿಗೋಡೆಗಳಿವೆ. ಆದ್ದರಿಂದ ನಮಗೆ ಭಯವಿಲ್ಲವೆಂದು ನೀವು ಭರವಸೆಯಿಂದಿರುವಿರಿ. ಆದರೆ ಅವರು ಪೌಳಿಗೋಡೆಗಳನ್ನು ಕೆಡವಿ ನೆಲಸಮ ಮಾಡುವರು. ದೇವರಾದ ಯೆಹೋವನು ನಿಮಗೆ ಕೊಟ್ಟಿರುವ ಪಟ್ಟಣಗಳಲ್ಲೆಲ್ಲಾ ತೊಂದರೆ ಮಾಡುವರು. 53 ವೈರಿಗಳು ನಿಮ್ಮ ಪಟ್ಟಣವನ್ನು ಮುತ್ತಿಗೆ ಹಾಕಿದಾಗ ನೀವು ಸಂಕಟ ಅನುಭವಿಸುವಿರಿ. ಆಗ ನೀವು ಊಟಕ್ಕೆ ಇಲ್ಲದೆ ತೊಂದರೆಗೊಳಗಾಗುವಿರಿ; ಹಸಿವು ತಾಳಲಾರದೆ ನಿಮ್ಮ ಮಕ್ಕಳನ್ನೇ ತಿನ್ನುವಿರಿ.
54 “ನಿಮ್ಮಲ್ಲಿರುವ ಮೃದುವಾದ ಮತ್ತು ಕನಿಕರವುಳ್ಳ ಮನುಷ್ಯನೂ ಬೇರೆಯವರಿಗೆ ಕ್ರೂರಿಯಾಗುವನು; ತನ್ನನ್ನು ಬಹಳವಾಗಿ ಪ್ರೀತಿಸುವ ಹೆಂಡತಿಗೂ ಅವನು ಕ್ರೂರಿಯಾಗುವನು; ಇನ್ನೂ ಜೀವಂತವಾಗಿರುವ ತನ್ನ ಮಕ್ಕಳಿಗೂ ಅವನು ಕ್ರೂರಿಯಾಗುವನು. 55 ಅವನಿಗೆ ಊಟಕ್ಕೇನೂ ಇಲ್ಲದಿರುವುದರಿಂದ ಸ್ವಂತ ಮಕ್ಕಳನ್ನೇ ತಿನ್ನುವನು. ಅವರನ್ನು ಇತರರೊಂದಿಗೆ ಹಂಚಿಕೊಳ್ಳದೆ, ತನ್ನ ಸ್ವಂತ ಕುಟುಂಬದವರೊಂದಿಗೆ ಹಂಚಿಕೊಳ್ಳದೆ ತಾನೊಬ್ಬನೇ ತಿನ್ನುವನು. ನಿಮ್ಮ ವೈರಿಗಳು ಬಂದು ನಿಮ್ಮ ಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ ನಿಮಗೆ ಇವೆಲ್ಲಾ ಸಂಭವಿಸುತ್ತವೆ.
56 “ನಿಮ್ಮಲ್ಲಿರುವ ಅತ್ಯಂತ ಮೃದುವಾದ ಮತ್ತು ಕನಿಕರವುಳ್ಳ ಸ್ತ್ರೀಯೂ ಕ್ರೂರಿಯಾಗುವಳು. ನೆಲದ ಮೇಲೆ ಬರಿಗಾಲಿನಲ್ಲಿ ಎಂದೂ ನಡೆಯದಷ್ಟು ಮೃದುವೂ ಕೋಮಲೆಯೂ ಆಗಿದ್ದ ಆಕೆ ತನ್ನನ್ನು ಬಹಳವಾಗಿ ಪ್ರೀತಿಸುವ ಗಂಡನಿಗೇ ಕ್ರೂರಿಯಾಗುವಳು; ಅವಳು ತನ್ನ ಸ್ವಂತ ಮಗನಿಗೂ ಮಗಳಿಗೂ ಕ್ರೂರಿಯಾಗುವಳು. 57 ಅವಳು ಅಡಗಿಕೊಂಡು ಮಗುವನ್ನು ಹೆರುವಳು. ಬಳಿಕ ಆ ಮಗುವನ್ನೂ ಅದರೊಡನೆ ಬರುವುದೆಲ್ಲವನ್ನೂ ಭಯಂಕರವಾದ ಹಸಿವೆಯಿಂದಾಗಿ ತಿಂದುಬಿಡುವಳು. ನಿಮ್ಮ ಶತ್ರುವು ಬಂದು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಸಂಕಟಕ್ಕೆ ಗುರಿ ಮಾಡಿದಾಗ ಈ ಕೆಟ್ಟ ಸಂಗತಿಗಳೆಲ್ಲಾ ನಿಮಗೆ ಸಂಭವಿಸುತ್ತವೆ.
58 “ಈ ಪುಸ್ತಕದಲ್ಲಿ ಬರೆದಿರುವ ಎಲ್ಲಾ ಆಜ್ಞೆಗಳಿಗೂ ಉಪದೇಶಗಳಿಗೂ ನೀವು ವಿಧೇಯರಾಗಬೇಕು. ನಿಮ್ಮ ದೇವರಾದ ಯೆಹೋವನು ಅದ್ಭುತನೂ ಭಯಂಕರನೂ ಆಗಿರುವುದರಿಂದ ಆತನ ಹೆಸರನ್ನು ನೀವು ಗೌರವಿಸಬೇಕು. 59 ನಿಮಗೂ ನಿಮ್ಮ ಸಂತತಿಯವರಿಗೂ ಅನೇಕ ತೊಂದರೆಗಳನ್ನು ಕೊಡುವನು. ಆ ತೊಂದರೆಗಳು ಮತ್ತು ರೋಗಗಳು ಭಯಂಕರವಾಗಿವೆ. 60 ನೀವು ಈಜಿಪ್ಟಿನಲ್ಲಿರುವಾಗ ದೇವರು ಅವರಿಗೆ ಕಳುಹಿಸಿದ ವ್ಯಾಧಿಸಂಕಟಗಳನ್ನು ನೋಡಿ ಭಯಗ್ರಸ್ತರಾದಿರಿ. ಅಂಥ ಸಂಕಟಗಳು ನಿಮಗೆ ಬರುವವು. 61 ಈ ಪುಸ್ತಕದಲ್ಲಿ ಬರೆದಿಲ್ಲದ ಸಂಕಟಗಳೂ ರೋಗಗಳೂ ನಿಮಗೆ ಪ್ರಾಪ್ತಿಯಾಗುವವು. ನೀವು ನಾಶವಾಗುವ ತನಕ ಅವೆಲ್ಲಾ ನಿಮಗೆ ಬರುತ್ತವೆ. 62 ನೀವು ಆಕಾಶದ ನಕ್ಷತ್ರದಷ್ಟು ಅಸಂಖ್ಯಾತರಾಗಿದ್ದರೂ ನಿಮ್ಮಲ್ಲಿ ಕೆಲವರೇ ಉಳಿದುಕೊಳ್ಳುವರು. ಯಾಕೆಂದರೆ ನೀವು ನಿಮ್ಮ ದೇವರಾದ ಯೆಹೋವನಿಗೆ ಕಿವಿಗೊಡಲಿಲ್ಲ.
63 “ಯೆಹೋವನು ನಿಮ್ಮ ಅಭಿವೃದ್ದಿಯಲ್ಲಿ ಸಂತೋಷಪಡುವಂತೆ ನಿಮ್ಮ ಅವನತಿಯಲ್ಲಿಯೂ ನಿಮ್ಮ ನಾಶನದಲ್ಲಿಯೂ ಸಂತೋಷಪಡುವನು. ನೀವು ಆ ದೇಶವನ್ನು ನಿಮ್ಮದನ್ನಾಗಿಸಿಕೊಳ್ಳಲು ಹೋಗುವಿರಿ. ಆದರೆ ಜನರು ನಿಮ್ಮನ್ನು ದೇಶದಿಂದ ಹೊರಡಿಸಿ ಅಟ್ಟಿಬಿಡುವರು. 64 ಯೆಹೋವನು ನಿಮ್ಮನ್ನು ಲೋಕದ ಎಲ್ಲಾ ದೇಶಗಳಿಗೆ ಚದರಿಸಿಬಿಡುವನು. ಆತನು ಪ್ರಪಂಚದ ಒಂದು ಕಡೆಯಿಂದ ಇನ್ನೊಂದು ಕಡೆಯ ತನಕ ನಿಮ್ಮನ್ನು ಚದರಿಸುವನು. ಅಲ್ಲಿ ನೀವು ಕಲ್ಲುಮರಗಳಿಂದ ಮಾಡಿದ ದೇವರುಗಳನ್ನು ಪೂಜಿಸುವಿರಿ. ಆ ಸುಳ್ಳುದೇವರುಗಳನ್ನು ನೀವಾಗಲಿ ನಿಮ್ಮ ಪೂರ್ವಿಕರಾಗಲಿ ಎಂದೂ ಪೂಜಿಸಿರಲಿಲ್ಲ.
65 “ಆ ಜನಾಂಗದವರೊಂದಿಗೆ ಜೀವಿಸುವಾಗ ನಿಮಗೆ ಸಮಾಧಾನವಿರುವುದಿಲ್ಲ; ನಿಮಗೆ ವಿಶ್ರಾಂತಿ ಇರುವುದಿಲ್ಲ. ನಿಮ್ಮ ಯೆಹೋವನು ನಿಮಗೆ ಚಿಂತೆಬೇಸರಗಳನ್ನು ತಂದು ತುಂಬಿಸುವನು. ನಿಮ್ಮ ಕಣ್ಣುಗಳು ಆಯಾಸದಿಂದ ತುಂಬಿರುವವು; ನೀವು ಕಳವಳದಿಂದಿರುವಿರಿ. 66 ನೀವು ಹಗಲಿರುಳು ಭಯದಿಂದಿರುವಿರಿ ಮತ್ತು ಅಪಾಯದಲ್ಲಿ ಜೀವಿಸುವಿರಿ. ನಿಮ್ಮ ಜೀವಿತದ ಬಗ್ಗೆ ನಿಮಗೆಂದಿಗೂ ನಿಶ್ಚಯತ್ವವಿರುವುದಿಲ್ಲ. 67 ಮುಂಜಾನೆಯಲ್ಲಿ ನೀವು, ‘ಇದು ಸಾಯಂಕಾಲವಾಗಿದ್ದರೆ ಉತ್ತಮವಾಗಿರುತ್ತಿತ್ತು’ ಎಂದು ಅನ್ನುವಿರಿ. ಸಾಯಂಕಾಲದಲ್ಲಿ, ‘ಇದು ಮುಂಜಾನೆಯಾಗಿದ್ದರೆ ಉತ್ತಮವಾಗಿರುತ್ತಿತ್ತು’ ಎಂದು ಅನ್ನುವಿರಿ. ನಿಮ್ಮ ಹೃದಯದಲ್ಲಿರುವ ಭಯ ಮತ್ತು ನೀವು ಕಣ್ಣಾರೆ ಕಾಣುವ ಭಯಂಕರ ಸಂಗತಿಗಳೇ ಇದಕ್ಕೆ ಕಾರಣ. 68 ಯೆಹೋವನು ನಿಮ್ಮನ್ನು ಹಡಗುಗಳ ಮುಖಾಂತರ ಈಜಿಪ್ಟಿಗೆ ಕೊಂಡೊಯ್ಯುವನು. ನೀವು ಅಲ್ಲಿಗೆ ಹೋಗುವುದೇ ಇಲ್ಲವೆಂದು ನಾನು ಹೇಳಿದ್ದೆನು. ಆದರೆ ದೇವರು ನಿಮ್ಮನ್ನು ಅಲ್ಲಿಗೆ ಕಳುಹಿಸುವನು. ಈಜಿಪ್ಟಿನಲ್ಲಿ ನಿಮ್ಮನ್ನು ನೀವೇ ಗುಲಾಮರನ್ನಾಗಿ ನಿಮ್ಮ ವೈರಿಗಳಿಗೆ ಮಾರಿಕೊಳ್ಳುವಿರಿ; ಆದರೆ ಯಾರೂ ನಿಮ್ಮನ್ನು ಕೊಂಡುಕೊಳ್ಳುವವರಿರುವುದಿಲ್ಲ.”