13
ಬಳಿಕ ಯೆಹೋವನು ಮೋಶೆಗೆ, “ಇಸ್ರೇಲರಲ್ಲಿ ಹುಟ್ಟಿದ ಚೊಚ್ಚಲು ಗಂಡುಮಕ್ಕಳೆಲ್ಲಾ ನನಗೆ ಮೀಸಲಾಗಿರಬೇಕು; ಪ್ರತಿಯೊಬ್ಬ ಚೊಚ್ಚಲು ಮಗನು ನನ್ನವನೇ. ಪ್ರತಿಯೊಂದು ಚೊಚ್ಚಲು ಪಶುವು ನನ್ನದೇ” ಎಂದು ಹೇಳಿದನು.
ಮೋಶೆಯು ಜನರಿಗೆ, “ನೀವು ಈಜಿಪ್ಟಿನ ಗುಲಾಮತನದಿಂದ ಬಿಡುಗಡೆಯಾದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಆದರೆ ಈ ದಿನದಲ್ಲಿ ಯೆಹೋವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ನೀವು ಹುಳಿಯಿರುವ ರೊಟ್ಟಿಯನ್ನು ತಿನ್ನಬಾರದು. ಅಬೀಬ್ ತಿಂಗಳಿನ ಈ ದಿನದಲ್ಲಿ ನೀವು ಈಜಿಪ್ಟನ್ನು ಬಿಟ್ಟು ಹೊರಟಿರಿ. ಆಗ ಯೆಹೋವನು ಒಂದು ವಿಶೇಷ ವಾಗ್ದಾನವನ್ನು ನಿಮ್ಮ ಪೂರ್ವಿಕರಿಗೆ ಮಾಡಿದನು. ಕಾನಾನ್ಯರು, ಹಿತ್ತಿಯರು, ಅಮೋರಿಯರು, ಹಿವ್ವಿಯರು ಮತ್ತು ಯೆಬೂಸಿಯರು ವಾಸಿಸುವ ಸಮೃದ್ಧಿಕರವಾದ ದೇಶವನ್ನು ನಿಮಗೆ ಕೊಡುವುದಾಗಿ ಯೆಹೋವನು ವಾಗ್ದಾನ ಮಾಡಿದನು. ಆತನು ನಿಮಗೆ ಆ ದೇಶವನ್ನು ಕೊಟ್ಟಾಗ ಪ್ರತಿವರ್ಷದ ಮೊದಲನೆಯ ತಿಂಗಳ ಈ ದಿನವನ್ನು ಆರಾಧನೆಯ ವಿಶೇಷ ದಿನವನ್ನಾಗಿ ಇಟ್ಟುಕೊಳ್ಳಬೇಕು.
“ಏಳು ದಿನಗಳವರೆಗೆ ನೀವು ಕೇವಲ ಹುಳಿಯಿಲ್ಲದ ರೊಟ್ಟಿಯನ್ನೇ ತಿನ್ನಬೇಕು. ಏಳನೆಯ ದಿನದಲ್ಲಿ ಯೊಹೋವನ ಘನತೆಗಾಗಿ ಒಂದು ದೊಡ್ಡ ಹಬ್ಬ ಮಾಡಬೇಕು. ಆದ್ದರಿಂದ ಹುಳಿಯಿರುವ ರೊಟ್ಟಿಯನ್ನು ಏಳು ದಿನಗಳವರೆಗೆ ತಿನ್ನಬಾರದು. ನಿಮ್ಮ ದೇಶದಲ್ಲಿ ಹುಳಿಯಿರುವ ರೊಟ್ಟಿ ಇರಲೇಕೂಡದು. ಈ ದಿನದಲ್ಲಿ ನೀವು ನಿಮ್ಮ ಮಕ್ಕಳಿಗೆ, ‘ಯೆಹೋವನು ನಮ್ಮನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದದ್ದರಿಂದ ನಾವು ಈ ಹಬ್ಬವನ್ನು ಮಾಡುತ್ತಿದ್ದೇವೆ’ ಎಂದು ಹೇಳಬೇಕು.
“ಈ ಹಬ್ಬವು ನಿಮ್ಮ ಕೈಗಳಲ್ಲಿ ಜ್ಞಾಪಕಪಟ್ಟಿಯಂತಿದ್ದು ಯೆಹೋವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿದ್ದನ್ನು ಮತ್ತು ನಿಮಗೆ ಆತನು ನೀಡಿದ ಉಪದೇಶಗಳನ್ನು ನೆನಪಿಗೆ ತರುತ್ತದೆ. 10 ಆದ್ದರಿಂದ ಪ್ರತಿವರ್ಷ ನಿಯಮಿತವಾದ ಕಾಲದಲ್ಲಿ ನೀವು ಈ ಹಬ್ಬವನ್ನು ಆಚರಿಸಬೇಕು.
11 “ಯೆಹೋವನು ನಿಮಗೆ ಕೊಡುವುದಾಗಿ ವಾಗ್ದಾನ ಮಾಡಿದ ದೇಶಕ್ಕೆ ನಿಮ್ಮನ್ನು ನಡಿಸುವನು. ಈಗ ಅಲ್ಲಿ ಕಾನಾನ್ಯರು ವಾಸವಾಗಿದ್ದಾರೆ. ಆದರೆ ದೇವರು ಆ ದೇಶವನ್ನು ನಿಮಗೆ ಕೊಡುವುದಾಗಿ ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದನು. ದೇವರು ಆ ದೇಶವನ್ನು ನಿಮಗೆ ಕೊಟ್ಟನಂತರ 12 ನೀವು ನಿಮ್ಮ ಚೊಚ್ಚಲು ಗಂಡುಮಕ್ಕಳನ್ನು ಆತನಿಗಾಗಿ ಮೀಸಲಿಡಬೇಕು. 13 ಚೊಚ್ಚಲು ಕತ್ತೆಮರಿಯನ್ನು ನೀವು ಯೆಹೋವನಿಂದ ಬಿಡಿಸಿಕೊಳ್ಳಬೇಕೆಂದಿದ್ದರೆ ಅದಕ್ಕೆ ಬದಲಾಗಿ ಒಂದು ಕುರಿಮರಿಯನ್ನು ಕೊಡಬೇಕು. ಕತ್ತೆಮರಿಯನ್ನು ಬಿಡಿಸಿಕೊಳ್ಳಲು ಇಷ್ಟಪಡದಿದ್ದರೆ, ಅದರ ಕುತ್ತಿಗೆಯನ್ನು ಮುರಿದು ಕೊಲ್ಲಬೇಕು. ಆದರೆ ಚೊಚ್ಚಲು ಗಂಡುಮಕ್ಕಳನ್ನೆಲ್ಲಾ ಯೆಹೋವನಿಂದ ಬಿಡಿಸಿಕೊಳ್ಳಲೇಬೇಕು.
14 “ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು, ‘ನೀವು ಹೀಗೇಕೆ ಮಾಡುತ್ತೀರಿ?’ ಎಂದು ಕೇಳುವಾಗ ನೀವು, ‘ಯೆಹೋವನು ನಮ್ಮನ್ನು ಈಜಿಪ್ಟಿನಿಂದ ತನ್ನ ಮಹಾಶಕ್ತಿಯಿಂದ ರಕ್ಷಿಸಿದನು. ನಾವು ಅಲ್ಲಿ ಗುಲಾಮರಾಗಿದ್ದೆವು, ಆದರೆ ಯೆಹೋವನು ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದನು. 15 ಈಜಿಪ್ಟಿನಲ್ಲಿ ಫರೋಹನು ತನ್ನ ಹೃದಯವನ್ನು ಕಠಿಣಪಡಿಸಿಕೊಂಡು ನಮ್ಮನ್ನು ಕಳುಹಿಸಿಕೊಡಲಿಲ್ಲ. ಆಗ ಯೆಹೋವನು ಆ ದೇಶದ ಚೊಚ್ಚಲು ಗಂಡುಮಕ್ಕಳನ್ನೆಲ್ಲಾ ಸಂಹರಿಸಿದನು. (ಯೆಹೋವನು ಚೊಚ್ಚಲು ಪಶುಗಳನ್ನು ಮತ್ತು ಚೊಚ್ಚಲು ಗಂಡುಮಕ್ಕಳನ್ನು ಕೊಂದನು.) ಆದ್ದರಿಂದ ನಾವು ಚೊಚ್ಚಲಾದ ಪ್ರತಿಯೊಂದು ಗಂಡುಪಶುವನ್ನು ಯೆಹೋವನಿಗೆ ಯಜ್ಞವಾಗಿ ಅರ್ಪಿಸುತ್ತೇವೆ. ಈ ಕಾರಣದಿಂದಲೇ, ನಮ್ಮ ಪ್ರತಿಯೊಂದು ಗಂಡುಮಗುವನ್ನು ಯೆಹೋವನಿಂದ ಮತ್ತೆ ಖರೀದಿ ಮಾಡುತ್ತೇವೆ’ ಎಂದು ಹೇಳುವಿರಿ. 16 ಇದು ನಿಮ್ಮ ಕೈಗೆ ದಾರ ಕಟ್ಟಿದಂತಿರುತ್ತದೆ; ನಿಮ್ಮ ಕಣ್ಣುಗಳ ಮುಂದೆ ಒಂದು ಚಿಹ್ನೆಯಂತೆ ಇರುತ್ತದೆ.* ಇದು … ಇರುತ್ತದೆ ಅಕ್ಷರಶಃ, “ನಿಮ್ಮ ಕೈಗಳ ಮೇಲೆ ಚಿಹ್ನೆ ಮತ್ತು ನಿಮ್ಮ ಕಣ್ಣುಗಳ ನಡುವೆ ಜ್ಞಾಪಕಪಟ್ಟಿ.” ಯೆಹೂದ್ಯನೊಬ್ಬನು ದೇವರ ಧರ್ಮಶಾಸ್ತ್ರವನ್ನು ಜ್ಞಾಪಕಮಾಡಿಕೊಳ್ಳುವುದಕ್ಕಾಗಿ ವಿಮೋಚನೆಯ ಬಗ್ಗೆ ತಿಳಿಸುವ ಈ ವಚನಗಳನ್ನು ಚಿಕ್ಕ ಪೆಟ್ಟಿಗೆಗಳಲ್ಲಿಟ್ಟು ಅವುಗಳನ್ನು ಪ್ರಾರ್ಥನೆಯೊಡನೆ ಚರ್ಮದ ಪಟ್ಟಿಗಳಿಂದ ಕಟ್ಟಿ ತನ್ನ ಕೈಗೂ ತಲೆಗೂ ಕಟ್ಟಿಕೊಳ್ಳುತ್ತಿದ್ದದ್ದನ್ನು ಇದು ಸೂಚಿಸುತ್ತದೆ. ಯೆಹೋವನು ತನ್ನ ಮಹಾಶಕ್ತಿಯಿಂದ ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದನೆಂಬುದನ್ನು ಜ್ಞಾಪಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.”
ಈಜಿಪ್ಟಿನಿಂದ ಪ್ರಯಾಣ
17 ಇಸ್ರೇಲರು ಈಜಿಪ್ಟನ್ನು ಬಿಟ್ಟುಹೋಗುವಂತೆ ಫರೋಹನು ಅನುಮತಿ ನೀಡಿದನು. ಇಸ್ರೇಲರು ಫಿಲಿಷ್ಟಿಯರ ದೇಶದ ಮೂಲಕ ಹಾದುಹೋಗುವ ರಸ್ತೆಯಲ್ಲಿ ಹೋಗಲು ಯೆಹೋವನು ಅನುಮತಿ ನೀಡಲಿಲ್ಲ. ಸಮುದ್ರದ ಮೂಲಕ ಹಾದುಹೋಗುವ ಆ ರಸ್ತೆ ಬಹಳ ಹತ್ತಿರವಾಗಿತ್ತು. ಆದರೆ ಯೆಹೋವನು, “ಇಸ್ರೇಲರು ಆ ದಾರಿಯಲ್ಲಿ ಹೋದರೆ, ಯುದ್ಧಮಾಡಬೇಕಾಗುವುದು. ಆಗ ಅವರು ತಮ್ಮ ಮನಸ್ಸುಗಳನ್ನು ಬದಲಾಯಿಸಿ ಈಜಿಪ್ಟಿಗೆ ಹಿಂತಿರುಗಬಹುದು” ಅಂದುಕೊಂಡನು. 18 ಆದ್ದರಿಂದ ಯೆಹೋವನು ಅವರನ್ನು ಕೆಂಪು ಸಮುದ್ರದ ಅರಣ್ಯದ ಮೂಲಕ ನಡೆಸಿದನು. ಇಸ್ರೇಲರು ಈಜಿಪ್ಟನ್ನು ಬಿಟ್ಟಾಗ ಯುದ್ಧವಸ್ತ್ರಗಳನ್ನು ಧರಿಸಿಕೊಂಡಿದ್ದರು.
ಯೋಸೇಫನ ಎಲುಬುಗಳನ್ನು ತೆಗೆದುಕೊಂಡರು
19 ಮೋಶೆಯು ತನ್ನೊಡನೆ ಯೋಸೇಫನ ಎಲುಬುಗಳನ್ನು ತೆಗೆದುಕೊಂಡು ಹೋದನು. (ಯೋಸೇಫನು ಸಾಯುವ ಮೊದಲು, ತನಗಾಗಿ ಈ ಕಾರ್ಯವನ್ನು ಮಾಡುವಂತೆ ಇಸ್ರೇಲನ ಪುತ್ರರಿಂದ ಪ್ರಮಾಣ ಮಾಡಿಸಿದ್ದನು. ಯೋಸೇಫನು ಅವರಿಗೆ, “ಯೆಹೋವನು ನಿಮ್ಮನ್ನು ರಕ್ಷಿಸುವಾಗ, ಈಜಿಪ್ಟಿನಿಂದ ನನ್ನ ಎಲುಬುಗಳನ್ನು ತೆಗೆದುಕೊಂಡು ಹೋಗಲು ಮರೆಯಬೇಡಿ” ಎಂದು ಹೇಳಿದ್ದನು.)
ಯೆಹೋವನು ತನ್ನ ಜನರನ್ನು ಮುನ್ನಡೆಸಿದನು
20 ಇಸ್ರೇಲರು ಸುಕ್ಕೋತನ್ನು ಬಿಟ್ಟು ಏತಾಮಿನಲ್ಲಿ ಪಾಳೆಯ ಹಾಕಿದರು. ಏತಾಮು ಮರುಭೂಮಿಗೆ ಹತ್ತಿರವಾಗಿತ್ತು. 21 ಯೆಹೋವನು ದಾರಿಯನ್ನು ತೋರಿಸಿದನು. ಹಗಲಿನಲ್ಲಿ ಜನರನ್ನು ನಡಿಸಲು ಯೆಹೋವನು ಎತ್ತರವಾದ ಮೇಘಸ್ತಂಭವನ್ನು ಉಪಯೋಗಿಸಿದನು; ರಾತ್ರಿ ವೇಳೆಯಲ್ಲಿ ದಾರಿಯನ್ನು ತೋರಿಸಲು ಯೆಹೋವನು ಎತ್ತರವಾದ ಅಗ್ನಿಸ್ತಂಭವನ್ನು ಉಪಯೋಗಿಸಿದನು. ಈ ಬೆಂಕಿಯು ಅವರಿಗೆ ಬೆಳಕು ಕೊಟ್ಟಿದ್ದರಿಂದ ಅವರು ರಾತ್ರಿಯಲ್ಲಿ ಪ್ರಯಾಣ ಮಾಡಲು ಸಾಧ್ಯವಾಯಿತು. 22 ಹಗಲಿನಲ್ಲಿ ಎತ್ತರವಾದ ಮೇಘಸ್ತಂಭವೂ ರಾತ್ರಿವೇಳೆಯಲ್ಲಿ ಅಗ್ನಿಸ್ತಂಭವೂ ಯಾವಾಗಲೂ ಅವರ ಮುಂಭಾಗದಲ್ಲಿ ಅವರೊಂದಿಗಿದ್ದವು.

*13:16: ಇದು … ಇರುತ್ತದೆ ಅಕ್ಷರಶಃ, “ನಿಮ್ಮ ಕೈಗಳ ಮೇಲೆ ಚಿಹ್ನೆ ಮತ್ತು ನಿಮ್ಮ ಕಣ್ಣುಗಳ ನಡುವೆ ಜ್ಞಾಪಕಪಟ್ಟಿ.” ಯೆಹೂದ್ಯನೊಬ್ಬನು ದೇವರ ಧರ್ಮಶಾಸ್ತ್ರವನ್ನು ಜ್ಞಾಪಕಮಾಡಿಕೊಳ್ಳುವುದಕ್ಕಾಗಿ ವಿಮೋಚನೆಯ ಬಗ್ಗೆ ತಿಳಿಸುವ ಈ ವಚನಗಳನ್ನು ಚಿಕ್ಕ ಪೆಟ್ಟಿಗೆಗಳಲ್ಲಿಟ್ಟು ಅವುಗಳನ್ನು ಪ್ರಾರ್ಥನೆಯೊಡನೆ ಚರ್ಮದ ಪಟ್ಟಿಗಳಿಂದ ಕಟ್ಟಿ ತನ್ನ ಕೈಗೂ ತಲೆಗೂ ಕಟ್ಟಿಕೊಳ್ಳುತ್ತಿದ್ದದ್ದನ್ನು ಇದು ಸೂಚಿಸುತ್ತದೆ.