29
ಈಜಿಪ್ಟಿನ ವಿರುದ್ಧ ಸಂದೇಶ
ಸೆರೆ ಒಯ್ಯಲ್ಪಟ್ಟ ಹತ್ತನೇ ವರ್ಷದ ಹತ್ತನೇ ತಿಂಗಳಿನ, ಹನ್ನೆರಡನೇ ದಿವಸದಲ್ಲಿ ನನ್ನ ಒಡೆಯನಾದ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಈಜಿಪ್ಟಿನ ರಾಜನಾದ ಫರೋಹನ ಕಡೆಗೆ ಮುಖಮಾಡು. ಅವನಿಗೂ ಈಜಿಪ್ಟಿಗೂ ವಿರುದ್ಧವಾಗಿ ನನ್ನ ಪರವಾಗಿ ಮಾತನಾಡು. ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದ್ದಾನೆ ಎಂದು ಅವರಿಗೆ ತಿಳಿಸು,
 
“ ‘ಈಜಿಪ್ಟಿನ ರಾಜನಾದ ಫರೋಹನೇ, ನಾನು ನಿನಗೆ ವಿರುದ್ಧವಾಗಿದ್ದೇನೆ.
ನೀನು ನೈಲ್ ನದಿಯ ದಡದಲ್ಲಿ ಮಲಗಿರುವ ಪೇರ್ಮೊಸಳೆ,
“ಇದು ನಾನು ನಿರ್ಮಿಸಿದ ಹೊಳೆ”
ಎಂದು ನೀನು ಹೇಳಿಕೊಳ್ಳುವೆ.
 
“ ‘ಆದರೆ ನಾನು ನಿನ್ನ ದವಡೆಗಳಿಗೆ ಕೊಂಡಿಗಳನ್ನು ಸಿಕ್ಕಿಸುವೆನು.
ನೈಲ್ ನದಿಯ ಮೀನುಗಳು ನಿನ್ನ ಪೊರೆಗಳಿಗೆ ಸಿಲುಕಿಕೊಳ್ಳುವವು.
ನಾನು ನಿನ್ನನ್ನೂ ನಿನ್ನ ಮೀನುಗಳನ್ನೂ
ನೀರಿನೊಳಗಿಂದ ಹೊರಕ್ಕೆತ್ತಿ ಒಣನೆಲದ ಮೇಲೆ ಹಾಕುವೆನು.
ನೀನು ನೆಲದ ಮೇಲೆ ಬೀಳುವಿ.
ಯಾರೂ ನಿನ್ನನ್ನು ಮೇಲಕ್ಕೆ ಎತ್ತುವುದೂ ಇಲ್ಲ ಹೂಣಿಡುವುದೂ ಇಲ್ಲ.
ನಾನು ನಿನ್ನನ್ನು ಕಾಡುಪ್ರಾಣಿಗಳಿಗೂ ಪಕ್ಷಿಗಳಿಗೂ ಕೊಡುವೆನು.
ಅವರಿಗೆ ನೀನು ಆಹಾರವಾಗುವಿ.
ಆಗ ಈಜಿಪ್ಟಿನಲ್ಲಿ ವಾಸಮಾಡುವವರೆಲ್ಲರೂ
ನಾನು ಒಡೆಯನಾದ ಯೆಹೋವನು ಎಂದು ತಿಳಿದುಕೊಳ್ಳುವರು.
 
“ ‘ನಾನು ಯಾಕೆ ಹೀಗೆ ಮಾಡುತ್ತಿದ್ದೇನೆ?
ಯಾಕೆಂದರೆ ಇಸ್ರೇಲಿನ ಜನರು ಈಜಿಪ್ಟಿನ ಸಹಾಯದ ಮೇಲೆ ಆತುಕೊಂಡರು.
ಆದರೆ ಈಜಿಪ್ಟ್ ಪೊಳ್ಳು ಬೆತ್ತದಂತಿತ್ತು.
ಇಸ್ರೇಲ್ ಜನರು ಈಜಿಪ್ಟಿನ ಮೇಲೆ ಆತುಕೊಂಡರು.
ಆದರೆ ಈಜಿಪ್ಟ್ ಅವರ ಕೈಗಳನ್ನೂ ಭುಜಗಳನ್ನೂ ಗಾಯಗೊಳಿಸಿತು.
ನಿನ್ನ ಸಹಾಯಕ್ಕಾಗಿ ಅವರು ನಿನ್ನನ್ನು ಆಶ್ರಯಿಸಿದರು.
ಆದರೆ ನೀನು ಅವರ ಬೆನ್ನೆಲುಬನ್ನು ತಿರುಗಿಸಿ ಮುರಿದುಬಿಟ್ಟೆ.’ ”
 
ಆದ್ದರಿಂದ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ,
“ನಾನು ನಿನಗೆ ವಿರುದ್ಧವಾಗಿ ಖಡ್ಗವನ್ನು ತರುವೆನು.
ನಾನು ನಿನ್ನ ಜನರನ್ನೂ ಪ್ರಾಣಿಗಳನ್ನೂ ಸಂಪೂರ್ಣವಾಗಿ ಸಂಹರಿಸುವೆನು.
ಈಜಿಪ್ಟ್ ನಿಶ್ಯೇಷವಾಗಿ ನಾಶವಾಗುವದು.
ಆಗ ಅವರು ನಾನೇ ದೇವರಾದ ಯೆಹೋವನು ಎಂದು ತಿಳಿದುಕೊಳ್ಳುವರು.”
 
ದೇವರು ಹೀಗೆಂದನು, “ನಾನು ಯಾಕೆ ಹೀಗೆ ಮಾಡುತ್ತಿದ್ದೇನೆ. ಯಾಕೆಂದರೆ ನೀನು, ‘ಇದು ನನ್ನ ನದಿ, ಇದನ್ನು ನಾನು ಮಾಡಿದೆನು’ ಎಂದು ಹೇಳಿದೆ. 10 ಆದ್ದರಿಂದ ನಾನು ನಿನಗೆ ವಿರೋಧವಾಗಿರುತ್ತೇನೆ. ನೈಲ್ ನದಿಯ ಅನೇಕ ಶಾಖೆಗಳಿಗೂ ನಾನು ವಿರೋಧವಾಗಿದ್ದೇನೆ. ಈಜಿಪ್ಟನ್ನು ನಾನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಮಿಗ್ದೋಲ್‌ನಿಂದ ಅಸಾಬನ್ ತನಕ ಇರುವ ಪಟ್ಟಣಗಳು ಬರಿದಾಗುವವು. ಇಥಿಯೋಪ್ಯದ ಮೇರೆಯ ತನಕವೂ ಬರಿದಾಗುವದು. 11 ಯಾವನೂ, ಯಾವ ಪ್ರಾಣಿಯೂ ಈಜಿಪ್ಟ್ ದೇಶವನ್ನು ದಾಟುವುದಿಲ್ಲ. ನಲವತ್ತು ವರ್ಷದ ತನಕ ಯಾರೂ ಅಲ್ಲಿ ನೆಲೆಸುವದಿಲ್ಲ. 12 ನಾನು ಈಜಿಪ್ಟನ್ನು ನಾಶಮಾಡುತ್ತೇನೆ. ಅದರ ನಗರಗಳು ನಲವತ್ತು ವರ್ಷಗಳ ತನಕ ನಿರ್ಜನವಾಗಿರುವದು. ಈಜಿಪ್ಟ್ ಜನರನ್ನು ಬೇರೆ ದೇಶಗಳಿಗೆ ಅಟ್ಟಿಬಿಡುವೆನು. ಪರದೇಶಗಳಲ್ಲಿ ಅವರು ಪ್ರವಾಸಿಗಳಂತಿರುವರು.”
13 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳುತ್ತಾನೆ: “ಈಜಿಪ್ಟಿನ ಜನರನ್ನು ನಾನು ಅನೇಕ ದೇಶಗಳಲ್ಲಿ ಚದರಿಸಿಬಿಡುವೆನು. ನಲವತ್ತು ವರ್ಷದ ಕೊನೆಯಲ್ಲಿ ಅವರನ್ನು ತಿರಿಗಿ ಒಟ್ಟುಗೂಡಿಸುವೆನು. 14 ಸೆರೆಹಿಡಿಯಲ್ಪಟ್ಟ ಈಜಿಪ್ಟರನ್ನು ಪತ್ರೋಸ್ ದೇಶಕ್ಕೆ ಬರಮಾಡುವೆನು. ಅವರ ಜನ್ಮಸ್ಥಳಕ್ಕೆ ಅವರನ್ನು ತಿರುಗಿ ಬರಮಾಡುವೆನು. ಆದರೆ ಅವರ ರಾಜ್ಯಕ್ಕೆ ಮಹತ್ವವಿರುವುದಿಲ್ಲ. 15 ಅದು ಯಾವ ಮಹತ್ವವೂ ಇಲ್ಲದ ರಾಜ್ಯವಾಗಿರುವುದು. ಬೇರೆ ರಾಜ್ಯಗಳಿಗಿಂತ ಅದು ಎಂದಿಗೂ ಉನ್ನತಸ್ಥಾನದಲ್ಲಿರದು. ಅದು ಅಷ್ಟು ಚಿಕ್ಕ ರಾಜ್ಯವಾಗುವುದರಿಂದ ಬೇರೆ ದೇಶಗಳ ಮೇಲೆ ಅಧಿಕಾರ ನಡೆಸದು. 16 ಇಸ್ರೇಲರು ಅವರ ಮೇಲೆ ಇನ್ನು ಎಂದಿಗೂ ಭರವಸವಿಡುವುದಿಲ್ಲ. ಇಸ್ರೇಲರು ಸಹಾಯಕ್ಕಾಗಿ ದೇವರ ಬಳಿಗೆ ಹೋಗದೆ ಈಜಿಪ್ಟಿನವರ ಮೇಲೆ ಭರವಸವಿಟ್ಟಿದ್ದ ಪಾಪವನ್ನು ಅರಿತುಕೊಳ್ಳುವರು. ಆಗ ಅವರು ನಾನೇ ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವರು.”
ಬಾಬಿಲೋನ್ ಈಜಿಪ್ಟನ್ನು ಸೆರೆಹಿಡಿಯುವದು
17 ಯೆಹೋಯಾಖೀನನು ಸೆರೆಹಿಡಿಯಲ್ಪಟ್ಟ ಇಪ್ಪತ್ತೇಳನೇ ವರ್ಷದ, ಮೊದಲನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, 18 “ನರಪುತ್ರನೇ, ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ತನ್ನ ಸೈನ್ಯವು ತೂರ್ ದೇಶದವರೊಂದಿಗೆ ಉಗ್ರವಾಗಿ ಹೋರಾಡುವಂತೆ ನಡೆಸಿದನು. ಪ್ರತಿ ಸೈನಿಕನ ತಲೆಯನ್ನು ಬೋಳಿಸಿದರು. ಪ್ರತಿಯೊಬ್ಬನ ಭುಜಗಳು ಭಾರ ಹೊತ್ತುಹೊತ್ತು ಸವೆದುಹೋಗಿದ್ದವು. ನೆಬೂಕದ್ನೆಚ್ಚರ್ ಮತ್ತು ಅವನ ಸೈನ್ಯವು ತೂರ್ ದೇಶವನ್ನು ಸೋಲಿಸಲು ಬಹಳವಾಗಿ ಪ್ರಯಾಸಪಡಬೇಕಾಗಿ ಬಂತು. ಆದರೆ ಅವರ ಪ್ರಯಾಸದ ಪ್ರತಿಫಲವಾಗಿ ಏನೂ ದೊರಕಲಿಲ್ಲ.” 19 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ರಾಜನಾದ ನೆಬೂಕದ್ನೆಚ್ಚರನಿಗೆ ನಾನು ಈಜಿಪ್ಟ್ ದೇಶವನ್ನು ಕೊಡುವೆನು. ನೆಬೂಕದ್ನೆಚ್ಚರನು ಈಜಿಪ್ಟಿನವರನ್ನು ಸೆರೆಹಿಡಿದು ಕೊಂಡೊಯಬನು. ಈಜಿಪ್ಟಿನ ಬೆಲೆಬಾಳುವ ವಸ್ತುಗಳನ್ನೆಲ್ಲಾ ದೋಚುವನು. ಇದು ಅವನ ಸೈನಿಕರ ಸಂಬಳವಾಗುವುದು. 20 ನೆಬೂಕದ್ನೆಚ್ಚರನು ಪ್ರಯಾಸದ ಕೆಲಸ ಮಾಡಿದ್ದರಿಂದ ನಾನು ಅವನಿಗೆ ಪ್ರತಿಫಲವಾಗಿ ಈಜಿಪ್ಟ್ ದೇಶವನ್ನು ಕೊಟ್ಟೆನು. ಯಾಕೆಂದರೆ ಅವರು ನನಗೋಸ್ಕರ ಪ್ರಯಾಸಪಟ್ಟರು.” ಇದು ಒಡೆಯನಾದ ಯೆಹೋವನ ನುಡಿ.
21 “ಆ ದಿವಸದಲ್ಲಿ ಇಸ್ರೇಲ್ ವಂಶವನ್ನು ನಾನು ಬಲಪಡಿಸುವೆನು. ಯೆಹೆಜ್ಕೇಲನೇ, ನೀನು ಅವರೊಂದಿಗೆ ಮಾತನಾಡುವಂತೆ ಮಾಡುವೆನು. ಆಗ ಅವರು ನಾನೇ ಯೆಹೋವನೆಂದು ತಿಳಿದುಕೊಳ್ಳುವರು.”