46
ರಾಜನೂ ಹಬ್ಬಗಳೂ
ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಒಳಗಿನ ಪ್ರಾಕಾರದ ಪೂರ್ವ ದಿಕ್ಕಿನ ದ್ವಾರವು ಆರು ಕೆಲಸದ ದಿವಸಗಳಲ್ಲಿ ಮುಚ್ಚಲ್ಪಡುವದು. ಅದು ಸಬ್ಬತ್ ದಿವಸಗಳಲ್ಲಿಯೂ ಅಮಾವಾಸ್ಯೆಯ ದಿವಸಗಳಲ್ಲಿಯೂ ತೆರೆಯಲ್ಪಡುವದು. ಅಧಿಪತಿಯು ಆ ದ್ವಾರದ ಕೈಸಾಲೆಯೊಳಗೆ ಪ್ರವೇಶಿಸಿ ಅದರ ನಿಲುವು ಕಂಬದ ಬಳಿಯಲ್ಲಿ ನಿಲ್ಲುವನು. ಅಧಿಪತಿಯು ಕೊಡುವ ಸರ್ವಾಂಗಹೋಮವನ್ನು ಮತ್ತು ಸಮಾಧಾನಯಜ್ಞವನ್ನು ಆಗ ಯಾಜಕರು ಸಮರ್ಪಿಸುವರು. ಅಧಿಪತಿಯು ಆ ದ್ವಾರದ ಮುಂಭಾಗದಲ್ಲಿ ಆರಾಧಿಸುವನು. ಅನಂತರ ಅವನು ಹೊರಗೆ ಹೋಗುವನು. ಆ ದ್ವಾರದ ಕದಗಳು ಸಾಯಂಕಾಲದ ತನಕ ತೆರೆದೇ ಇರುವವು. ಸಬ್ಬತ್ ಮತ್ತು ಅಮಾವಾಸ್ಯೆ ದಿವಸಗಳಲ್ಲಿ ಸಾಮಾನ್ಯ ಜನರೂ ಅದೇ ದ್ವಾರದ ಬಳಿ ಆರಾಧಿಸುವರು.
“ಸಬ್ಬತ್ ದಿವಸದಲ್ಲಿ ರಾಜನು ಯೆಹೋವನಿಗೆ ಸರ್ವಾಂಗಹೋಮವನ್ನು ಸಮರ್ಪಿಸುವನು. ಅವನು ಅದಕ್ಕಾಗಿ ನಿಷ್ಕಳಂಕವಾದ ಆರು ಕುರಿಗಳನ್ನೂ ನಿಷ್ಕಳಂಕವಾದ ಒಂದು ಟಗರನ್ನೂ ಕೊಡಬೇಕು. ಟಗರಿನೊಂದಿಗೆ ಒಂದು ಏಫಾ ಧಾನ್ಯಸಮರ್ಪಣೆಗಾಗಿ ಕೊಡಬೇಕು. ಕುರಿಗಳೊಂದಿಗೆ ಧಾನ್ಯಸಮರ್ಪಣೆಗಾಗಿ ರಾಜನು ತನ್ನ ಇಷ್ಟಬಂದ ಹಾಗೆ ಕೊಡಬಹುದು. ಆದರೆ ಪ್ರತೀ ಒಂದು ಏಫಾ ಧಾನ್ಯದೊಂದಿಗೆ ಒಂದು ಹಿನ್ ಆಲಿವ್ ಎಣ್ಣೆಯನ್ನು ಕೊಡಬೇಕು.
“ಅಮಾವಾಸ್ಯೆ ದಿವಸ ಅವನು ಒಂದು ಎಳೇ ಪೂರ್ಣಾಂಗವಾದ ಹೋರಿಯನ್ನು ಸಮರ್ಪಿಸಬೇಕು. ಅದರ ಜೊತೆಗೆ ಆರು ಪೂರ್ಣಾಂಗವಾದ ಕುರಿಗಳನ್ನೂ ಒಂದು ಪೂರ್ಣಾಂಗವಾದ ಟಗರನ್ನೂ ಸಮರ್ಪಿಸಬೇಕು. ರಾಜನು ಒಂದು ಏಫಾ ಧಾನ್ಯವನ್ನು ಹೋರಿಯೊಂದಿಗೂ ಇನ್ನೊಂದು ಏಫಾ ಧಾನ್ಯವನ್ನು ಟಗರಿನೊಂದಿಗೂ ಕೊಡಬೇಕು. ಆದರೆ ಅಧಿಪತಿಯು ಕುರಿಗಳೊಂದಿಗೆ ತನಗಿಷ್ಟವಾದಷ್ಟು ಧಾನ್ಯಸಮರ್ಪಣೆಯನ್ನು ಕೊಡಬಹುದು. ಆದರೆ ಅವನು ಪ್ರತೀ ಒಂದು ಏಫಾ ಧಾನ್ಯಕ್ಕೆ ಒಂದು ಹಿನ್ ಆಲಿವ್ ಎಣ್ಣೆಯನ್ನು ಕೊಡಲೇಬೇಕು.
“ಅಧಿಪತಿಯು ಆಲಯದ ಸಂಕೀರ್ಣ ಪ್ರವೇಶಿಸುವಾಗ ಅವನು ಪೂರ್ವದಿಕ್ಕಿನ ದ್ವಾರದಿಂದ ಪ್ರವೇಶಿಸಬೇಕು. ಮತ್ತು ಅದರ ಮೂಲಕವೇ ಅವನು ಹೊರಗೆ ಹೋಗಬೇಕು.
“ಸಾಮಾನ್ಯ ಜನರು ವಿಶೇಷ ಹಬ್ಬದ ದಿವಸಗಳಲ್ಲಿ ಯೆಹೋವನನ್ನು ಸಂಧಿಸಲು ಬರುವಾಗ ಉತ್ತರ ದ್ವಾರದಿಂದ ಬರುವವರು ದಕ್ಷಿಣ ದ್ವಾರದ ಮೂಲಕ ಹೊರಗೆ ಹೋಗಬೇಕು. ದಕ್ಷಿಣದ ದ್ವಾರದಿಂದ ಒಳ ಪ್ರವೇಶಿಸುವವನು ಉತ್ತರ ದ್ವಾರದ ಮೂಲಕ ಹೊರಗೆ ಹೋಗಬೇಕು. ಯಾರೂ ಬಂದ ದಾರಿಯಿಂದ ಹಿಂದೆ ಹೋಗಬಾರದು. ಪ್ರತಿಯೊಬ್ಬನೂ ನೇರವಾಗಿ ಮುಂದಕ್ಕೆ ಹೋಗಬೇಕು. 10 ರಾಜನು ತನ್ನ ಜನರೊಂದಿಗೆ ಇರಬೇಕು. ಜನರು ಒಳಗೆ ಪ್ರವೇಶ ಮಾಡುವಾಗ ಅವನೂ ಅವರ ಜೊತೆಯಲ್ಲಿರಬೇಕು. ಅವರು ಹೊರಗೆ ಹೋಗುವಾಗಲೂ ಅವನು ಅವರ ಜೊತೆಯಲ್ಲಿರಬೇಕು.
11 “ಹಬ್ಬದ ದಿವಸಗಳಲ್ಲಿ ಮತ್ತು ಬೇರೆ ವಿಶೇಷ ದಿವಸಗಳಲ್ಲಿ ಪ್ರತಿ ಎಳೇ ಹೋರಿಯೊಂದಿಗೆ ಒಂದು ಏಫಾ ಧಾನ್ಯಸಮರ್ಪಣೆಯನ್ನು ಸಮರ್ಪಿಸಬೇಕು. ಮತ್ತು ಪ್ರತಿ ಒಂದು ಟಗರಿನೊಂದಿಗೆ ಒಂದು ಏಫಾ ಧಾನ್ಯವನ್ನು ಸಮರ್ಪಿಸಬೇಕು. ಕುರಿಗಳೊಂದಿಗೆ ಸಮರ್ಪಿಸಬೇಕಾದ ಧಾನ್ಯವು ರಾಜನಿಗೆ ಇಷ್ಟದ ಪ್ರಕಾರ ಇರುವದು. ಅದರ ಜೊತೆಗೆ ಒಂದು ಏಫಾ ಧಾನ್ಯದೊಂದಿಗೆ ಒಂದು ಹಿನ್ ಎಣ್ಣೆಯನ್ನೂ ಕೊಡಬೇಕು.
12 “ರಾಜನು ತನ್ನ ಇಚ್ಛೆಯ ಪ್ರಕಾರ ಯೆಹೋವನಿಗೆ ಸರ್ವಾಂಗಹೋಮ ಅಥವಾ ಸಮಾಧಾನಯಜ್ಞ ಅಥವಾ ಮನಃಪೂರ್ವಕವಾದ ಕಾಣಿಕೆಯನ್ನು ಸಮರ್ಪಿಸುವಾಗ ಅವನಿಗಾಗಿ ಪೂರ್ವದ ಬಾಗಿಲು ತೆಗೆಯಲ್ಪಡಬೇಕು. ಆದರೆ ಅವನು ಸಬ್ಬತ್ ದಿನದಂತೆ ತನ್ನ ಕಾಣಿಕೆಗಳನ್ನು ಸಮರ್ಪಿಸಿದ ನಂತರ ಅವನು ಹಿಂತಿರುಗಿದಾಗ ಪ್ರವೇಶ ದ್ವಾರವು ಮುಚ್ಚಲ್ಪಡಬೇಕು.
ದೈನಂದಿನ ಸಮರ್ಪಣೆ
13 “ನೀನು ಪ್ರತಿದಿನ ಮುಂಜಾನೆ ಒಂದು ವರ್ಷದ ಪೂರ್ಣಾಂಗವಾದ ಕುರಿಯನ್ನು ಸರ್ವಾಂಗಹೋಮವಾಗಿ ಯೆಹೋವನಿಗೆ ಸಮರ್ಪಿಸಬೇಕು. 14 ಪ್ರತಿ ಮುಂಜಾನೆ ನೀನು ಐದು ಸೇರು ಗೋಧಿಹಿಟ್ಟನ್ನೂ ಎರಡು ಸೇರು ಎಣ್ಣೆಯನ್ನೂ ಒಟ್ಟಾಗಿ ಬೆರೆಸಿ ಪ್ರತಿದಿನ ಯೆಹೋವನಿಗೆ ಧಾನ್ಯ ನೈವೇದ್ಯವಾಗಿ ಸಮರ್ಪಿಸಬೇಕು. 15 ಹೀಗೆ ಅವರು ಶಾಶ್ವತವಾಗಿ ಕುರಿ, ಧಾನ್ಯ ಮತ್ತು ಎಣ್ಣೆಯನ್ನು ಪ್ರತೀ ಮುಂಜಾನೆ ಸರ್ವಾಂಗಹೋಮವಾಗಿ ಸಮರ್ಪಿಸಬೇಕು.”
ರಾಜನ ಸಾಬಸ್ತ್ಯದ ಬಗ್ಗೆ ಕಟ್ಟಳೆಗಳು
16 ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ಒಬ್ಬ ರಾಜನು ತನ್ನ ಗಂಡುಮಕ್ಕಳಿಗೆ ತನ್ನ ಭೂಮಿಯ ಭಾಗವನ್ನು ಉಚಿತವಾಗಿ ಕೊಟ್ಟರೆ ಅದು ಅವನ ಗಂಡುಮಕ್ಕಳಿಗೆ ಸೇರುವದು. ಅದು ಅವರ ಆಸ್ತಿಯಾಗುವದು. 17 ಆದರೆ ಆ ರಾಜನು ತನ್ನ ಭೂಮಿಯ ಒಂದು ಭಾಗವನ್ನು ತನ್ನ ದಾಸನಿಗೆ ಉಚಿತವಾಗಿ ಕೊಟ್ಟರೆ, ಆ ಭೂಮಿಯು ಬಿಡುಗಡೆ ಸಂವತ್ಸರದ ತನಕ ಮಾತ್ರವೇ ದಾಸನದ್ದಾಗಿರುವದು. ಅನಂತರ ಅದು ರಾಜನಿಗೆ ಹಿಂದೆ ಹೋಗುವದು. ರಾಜನ ಗಂಡುಮಕ್ಕಳು ಮಾತ್ರ ರಾಜನಿಂದ ಹೊಂದಿದ ಭೂಮಿಯನ್ನು ನಿತ್ಯಕಾಲಕ್ಕೂ ಅನುಭೋಗಿಸುವರು. 18 ರಾಜನು ತನ್ನ ಪ್ರಜೆಯ ಭೂಮಿಯನ್ನು ತನ್ನ ಉಪಯೋಗಕ್ಕೆಂದು ಬಲತ್ಕಾರದಿಂದ ಇಟ್ಟುಕೊಳ್ಳಬಾರದು ಅಥವಾ ತೆಗೆದುಕೊಳ್ಳಲೂಬಾರದು. ತನ್ನ ಸ್ವಂತ ಭೂಮಿಯಿಂದ ಪಾಲನ್ನು ತನ್ನ ಮಕ್ಕಳಿಗೆ ಕೊಡಬೇಕು. ಹೀಗೆ ನನ್ನ ಜನರು ತಮ್ಮ ಭೂಮಿಯನ್ನು ಕಳೆದುಕೊಳ್ಳುವದಿಲ್ಲ.”
ವಿಶೇಷ ಅಡಿಗೆಮನೆ
19 ಬಳಿಕ ಆ ಪುರುಷನು ನನ್ನನ್ನು ಮಹಾದ್ವಾರದ ಪಕ್ಕದಲ್ಲಿನ ಪ್ರವೇಶಮಾರ್ಗವಾಗಿ ಉತ್ತರದಲ್ಲಿರುವ ಯಾಜಕರ ಪವಿತ್ರ ಕೋಣೆಗಳಿಗೆ ಕರೆದುಕೊಂಡು ಹೋದನು. 20 ಅವನು ನನಗೆ ಹೇಳಿದ್ದೇನೆಂದರೆ, “ಈ ಸ್ಥಳದಲ್ಲಿ ಯಾಜಕರು ದೋಷಪರಿಹಾರಕ ಮತ್ತು ಪಾಪಪರಿಹಾರಕಯಜ್ಞದ ಮಾಂಸಗಳನ್ನು ಬೇಯಿಸುವರು. ಇದೇ ಸ್ಥಳದಲ್ಲಿ ಧಾನ್ಯಸಮರ್ಪಣೆಯ ಹಿಟ್ಟಿನಿಂದ ರೊಟ್ಟಿಯನ್ನು ಸುಡುವರು. ಇದನ್ನು ಇಲ್ಲಿಯೇ ಯಾಕೆ ಮಾಡುತ್ತಾರೆಂದರೆ ಅವರು ಹೊರಗಿನ ಪ್ರಾಕಾರದೊಳಗೆ ಆ ಪವಿತ್ರ ವಸ್ತುವನ್ನು ತರುವ ಅವಶ್ಯಕತೆ ಇರುವದಿಲ್ಲ. ಸಾರ್ವಜನಿಕರು ಕೂಡುವ ಸ್ಥಳದಲ್ಲಿ ಆ ಪವಿತ್ರ ವಸ್ತುವನ್ನು ತರಬಾರದು.”
21 ಆಮೇಲೆ ಅವನು ಹೊರಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಆ ಪ್ರಾಕಾರದ ನಾಲ್ಕು ಮೂಲೆಗಳಿಗೆ ನನ್ನನ್ನು ಕರೆದುಕೊಂಡು ಹೋದನು. ವಿಶಾಲವಾದ ಪ್ರಾಕಾರದ ಪ್ರತೀ ಮೂಲೆಗಳಲ್ಲಿ ಇನ್ನೊಂದು ಚಿಕ್ಕ ಪ್ರಾಕಾರವಿರುವದನ್ನು ಕಂಡೆನು. 22 ಆ ನಾಲ್ಕು ಮೂಲೆಗಳಲ್ಲಿಯೂ ಗೋಡೆಗಳಿಂದ ಆವರಿಸಲ್ಪಟ್ಟಿದ್ದ ಒಂದು ಚಿಕ್ಕ ಪ್ರಾಕಾರವಿತ್ತು. ಈ ಪ್ರಾಕಾರದ ಉದ್ದ ನಲವತ್ತು ಮೊಳ ಮತ್ತು ಅಗಲ ಮೂವತ್ತು ಮೊಳ. ಈ ನಾಲ್ಕು ಚಿಕ್ಕ ಪ್ರಾಕಾರಗಳು ಒಂದೇ ಅಳತೆಯುಳ್ಳವುಗಳಾಗಿದ್ದವು. 23 ಇವುಗಳ ಸುತ್ತಲೂ ಇಟ್ಟಿಗೆಯ ಗೋಡೆ ಕಟ್ಟಲ್ಪಟ್ಟಿತ್ತು. ಈ ಗೋಡೆಯೊಳಗೆ ಅಡಿಗೆ ಮಾಡುವದಕ್ಕಾಗಿ ಸ್ಥಳವನ್ನು ಏರ್ಪಡಿಸಲಾಗಿತ್ತು. 24 ಅವನು ನನಗೆ ಹೇಳಿದ್ದೇನೆಂದರೆ, “ಆಲಯದ ಈ ಸ್ಥಳದಲ್ಲಿ ಸೇವೆಮಾಡುವ ಜನರು ಸಾಮಾನ್ಯ ಜನರ ಯಜ್ಞದ ಮಾಂಸವನ್ನು ಆ ಜನರಿಗಾಗಿ ಬೇಯಿಸುವರು.”