43
ಯಾಕೋಬನು ಬೆನ್ಯಾಮೀನನನ್ನು ಈಜಿಪ್ಟಿಗೆ ಕಳುಹಿಸಲು ಒಪ್ಪಿದ್ದು
ಬರಗಾಲವು ದೇಶದಲ್ಲಿ ತುಂಬ ಭೀಕರವಾಗಿತ್ತು. ಅವರು ಈಜಿಪ್ಟಿನಿಂದ ತಂದಿದ್ದ ದವಸಧಾನ್ಯಗಳನ್ನೆಲ್ಲ ಊಟ ಮಾಡಿದರು. ದವಸಧಾನ್ಯಗಳು ಮುಗಿದು ಹೋದಾಗ ಯಾಕೋಬನು, ತನ್ನ ಗಂಡುಮಕ್ಕಳಿಗೆ, “ಈಜಿಪ್ಟಿಗೆ ಮತ್ತೆ ಹೋಗಿ ನಮಗೆ ಊಟಕ್ಕೆ ದವಸಧಾನ್ಯಗಳನ್ನು ಕೊಂಡುಕೊಂಡು ಬನ್ನಿ” ಎಂದು ಹೇಳಿದನು.
ಯೆಹೂದನು ಯಾಕೋಬನಿಗೆ, “ಆ ದೇಶದ ರಾಜ್ಯಪಾಲನು ನಮಗೆ ಎಚ್ಚರಿಕೆ ಕೊಟ್ಟಿದ್ದಾನೆ. ಅವನು, ‘ನೀವು ನಿಮ್ಮ ಸಹೋದರನನ್ನು ನನ್ನ ಬಳಿಗೆ ಕರೆದುಕೊಂಡು ಬಾರದೆ ನನ್ನನ್ನು ಭೇಟಿಯಾಗಕೂಡದು’ ಎಂದು ಹೇಳಿದ್ದಾನೆ. ನೀನು ನಮ್ಮೊಡನೆ ಬೆನ್ಯಾಮೀನನನ್ನು ಕಳುಹಿಸಿದರೆ, ನಾವು ಹೋಗಿ ದವಸಧಾನ್ಯಗಳನ್ನು ಕೊಂಡುಕೊಂಡು ಬರುವೆವು. ಆದರೆ ಬೆನ್ಯಾಮೀನನನ್ನು ಕಳುಹಿಸದಿದ್ದರೆ, ನಾವು ಹೋಗುವುದಿಲ್ಲ; ಆ ಮನುಷ್ಯನು ನಮಗೆ ಬೆನ್ಯಾಮೀನನಿಲ್ಲದೆ ಬರಕೂಡದೆಂದು ಎಚ್ಚರಿಕೆ ಕೊಟ್ಟಿದ್ದಾನೆ” ಅಂದನು.
ಇಸ್ರೇಲನು, “ನಿಮಗೆ ಮತ್ತೊಬ್ಬ ಸಹೋದರನಿರುವುದಾಗಿ ನೀವು ಆ ಮನುಷ್ಯನಿಗೆ ಯಾಕೆ ಹೇಳಿದಿರಿ? ನೀವು ಅಂಥ ಕೆಟ್ಟದ್ದನ್ನು ಯಾಕೆ ಮಾಡಿದಿರಿ?” ಎಂದು ಕೇಳಿದನು.
ಸಹೋದರರು, “ಆ ಮನುಷ್ಯನು ನಮ್ಮ ವಿಷಯವಾಗಿಯೂ ನಮ್ಮ ಕುಟುಂಬದ ವಿಷಯವಾಗಿಯೂ ತಿಳಿದುಕೊಳ್ಳಲು ಸೂಕ್ಷ್ಮವಾಗಿ ಪ್ರಶ್ನೆಗಳನ್ನು ಕೇಳಿದನು. ಅವನು ನಮಗೆ, ‘ನಿಮ್ಮ ತಂದೆಯು ಇನ್ನೂ ಜೀವಂತವಾಗಿರುವನೇ? ನಿಮಗೆ ಮನೆಯಲ್ಲಿ ಮತ್ತೊಬ್ಬ ಸಹೋದರನಿರುವನೇ?’ ಎಂದು ಕೇಳಿದನು. ನಾವು ಅವನ ಪ್ರಶ್ನೆಗಳಿಗೆ ಮಾತ್ರ ಉತ್ತರಕೊಟ್ಟೆವು. ನಮ್ಮ ಸಹೋದರನನ್ನು ತನ್ನ ಬಳಿಗೆ ಕರೆದುಕೊಂಡು ಬರಬೇಕೆಂದು ಅವನು ಹೇಳುತ್ತಾನೆಂದು ನಮಗೆ ತಿಳಿದಿರಲಿಲ್ಲ” ಎಂದು ಹೇಳಿದರು.
ಆಮೇಲೆ ಯೆಹೂದನು ತನ್ನ ತಂದೆಯಾದ ಇಸ್ರೇಲನಿಗೆ, “ನನ್ನೊಂದಿಗೆ ಬೆನ್ಯಾಮೀನನನ್ನು ಕಳುಹಿಸಿಕೊಡು. ನಾನು ಅವನನ್ನು ನೋಡಿಕೊಳ್ಳುವೆನು. ನಾವು ಈಜಿಪ್ಟಿಗೆ ಹೋಗಿ ಆಹಾರವನ್ನು ತರಬೇಕು. ಇಲ್ಲವಾದರೆ ನಾವೂ ಸಾಯುವೆವು, ನಮ್ಮ ಮಕ್ಕಳೂ ಸಾಯುವರು. ಅವನು ಸುರಕ್ಷಿತವಾಗಿರುವಂತೆ ನಾನು ನೋಡಿಕೊಳ್ಳುವೆನು. ನಾನು ಅವನಿಗೆ ಜವಾಬ್ದಾರನಾಗಿರುತ್ತೇನೆ. ನಾನು ಅವನನ್ನು ನಿನ್ನ ಬಳಿಗೆ ಮತ್ತೆ ಕರೆದುಕೊಂಡು ಬರದಿದ್ದರೆ, ನೀನು ಸದಾಕಾಲ ನನ್ನನ್ನು ದೂಷಿಸಬಹುದು. 10 ಮೊದಲೇ ನೀನು ನಮ್ಮನ್ನು ಕಳುಹಿಸಿಕೊಟ್ಟಿದ್ದರೆ, ಈಗಾಗಲೇ ಎರಡು ಸಲ ಆಹಾರವನ್ನು ತೆಗೆದುಕೊಂಡು ಬರಬಹುದಾಗಿತ್ತು” ಎಂದು ಹೇಳಿದನು.
11 ಅದಕ್ಕೆ ಅವರ ತಂದೆಯಾದ ಇಸ್ರೇಲನು, “ಇದು ನಿಜವಾಗಿಯೂ ಸತ್ಯವಾಗಿದ್ದರೆ, ನಿನ್ನೊಂದಿಗೆ ಬೆನ್ಯಾಮೀನನನ್ನು ಕರೆದುಕೊಂಡು ಹೋಗು. ಆದರೆ ರಾಜ್ಯಪಾಲನಿಗೆ ಶ್ರೇಷ್ಠವಾದ ಕೆಲವು ಉಡುಗೊರೆಗಳನ್ನು ತೆಗೆದುಕೊಂಡು ಹೋಗಿ. ನಮ್ಮ ನಾಡಿನಲ್ಲಿ ದೊರಕುವ ಜೇನು, ಆಕ್ರೋಡು, ಬಾದಾಮಿ, ಹಾಲುಮಡ್ಡಿ ಮತ್ತು ಗೋಲರಸ ಇವುಗಳನ್ನು ತೆಗೆದುಕೊಳ್ಳಿ. 12 ಈ ಸಲ ಎರಡರಷ್ಟು ಹಣವನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ. ಕಳೆದ ಸಲ ನೀವು ಪಾವತಿ ಮಾಡಿದ್ದರೂ ಹಿಂತಿರುಗಿಸಲಾದ ಹಣವನ್ನು ತೆಗೆದುಕೊಂಡು ಹೋಗಿ. ಒಂದುವೇಳೆ ರಾಜ್ಯಪಾಲನು ತಪ್ಪು ಮಾಡಿದ್ದಿರಬೇಕು. 13 ಬೆನ್ಯಾಮೀನನನ್ನು ಕರೆದುಕೊಂಡು ಆ ಮನುಷ್ಯನ ಬಳಿಗೆ ಹಿಂತಿರುಗಿ ಹೋಗಿರಿ. 14 ನೀವು ರಾಜ್ಯಪಾಲನ ಮುಂದೆ ನಿಂತುಕೊಂಡಾಗ ಸರ್ವಶಕ್ತನಾದ ದೇವರು ನಿಮಗೆ ಸಹಾಯ ಮಾಡುವಂತೆ ನಾನು ಪ್ರಾರ್ಥಿಸುತ್ತೇನೆ. ಬೆನ್ಯಾಮೀನನನ್ನೂ ಸಿಮೆಯೋನನನ್ನೂ ಕಳುಹಿಸಿಕೊಡುವಂತೆ ಮತ್ತು ನೀವು ಸುರಕ್ಷಿತವಾಗಿ ಮರಳಿಬರುವಂತೆ ನಾನು ಪ್ರಾರ್ಥಿಸುತ್ತೇನೆ. ಇಲ್ಲವಾದರೆ, ನನ್ನ ಮಗನನ್ನು ಕಳೆದುಕೊಂಡು ನಾನು ಮತ್ತೆ ದುಃಖಿತನಾಗುವೆ” ಎಂದು ಹೇಳಿದನು.
15 ಆದ್ದರಿಂದ ಸಹೋದರರು ರಾಜ್ಯಪಾಲನಿಗೆ ಕೊಡಲು ಉಡುಗೊರೆಗಳನ್ನು ತೆಗೆದುಕೊಂಡರು; ಮೊದಲನೆ ಸಲ ತೆಗೆದುಕೊಂಡು ಹೋಗಿದ್ದ ಹಣಕ್ಕಿಂತ ಎರಡರಷ್ಟು ಹೆಚ್ಚಾಗಿ ತೆಗೆದುಕೊಂಡರು. ಬೆನ್ಯಾಮೀನನು ಸಹೋದರರೊಂದಿಗೆ ಈಜಿಪ್ಟಿಗೆ ಹೋದನು.
ಯೋಸೇಫನು ಸಹೋದರರನ್ನು ಮನೆಗೆ ಆಹ್ವಾನಿಸಿದ್ದು
16 ಸಹೋದರರೊಂದಿಗೆ ಬೆನ್ಯಾಮೀನನು ಇರುವುದನ್ನು ಕಂಡ ಯೋಸೇಫನು ತನ್ನ ಸೇವಕನಿಗೆ, “ಈ ಜನರನ್ನು ನನ್ನ ಮನೆಯೊಳಗೆ ಕರೆದುಕೊಂಡು ಹೋಗು; ಕುರಿಯನ್ನು ಕೊಯ್ದು ಅಡಿಗೆ ಮಾಡು. ಈ ಜನರು ಈ ಹೊತ್ತು ಮಧ್ಯಾಹ್ನ ನನ್ನೊಂದಿಗೆ ಊಟಮಾಡುವರು” ಎಂದು ಹೇಳಿದನು. 17 ಅಂತೆಯೇ ಆ ಸೇವಕನು ಸಹೋದರರನ್ನು ಮನೆಯೊಳಗೆ ಕರೆದುಕೊಂಡು ಹೋದನು.
18 ಆಗ ಸಹೋದರರಿಗೆ ಭಯವಾಯಿತು. ಅವರು, “ಕಳೆದ ಸಲ ನಮ್ಮ ಚೀಲಗಳಿಗೆ ಮತ್ತೆ ಹಾಕಿದ್ದ ಹಣದ ಕಾರಣದಿಂದಾಗಿ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ನಮ್ಮನ್ನು ತಪ್ಪಿತಸ್ಥರೆಂದು ನಿರ್ಣಯಿಸಿ ನಮ್ಮ ಕತ್ತೆಗಳನ್ನು ವಶಮಾಡಿಕೊಳ್ಳುವರು; ನಮ್ಮನ್ನೂ ಗುಲಾಮರನ್ನಾಗಿ ಮಾಡಿಕೊಳ್ಳುವರು” ಎಂದು ಮಾತಾಡಿಕೊಂಡರು.
19 ಆದ್ದರಿಂದ ಸಹೋದರರು ಯೋಸೇಫನ ಮನೆಯ ಮೇಲ್ವಿಚಾರಕನಾದ ಸೇವಕನ ಬಳಿಗೆ ಹೋಗಿ ಪ್ರವೇಶದ್ವಾರದ ಬಳಿಯಲ್ಲಿ ಅವನೊಂದಿಗೆ ಮಾತಾಡಿದರು. 20 ಅವರು, “ಸ್ವಾಮೀ, ನಾವು ಪ್ರಮಾಣಮಾಡಿ ಹೇಳುತ್ತೇವೆ. ಇದು ಸತ್ಯ. ಕಳೆದ ಸಲ ನಾವು ಆಹಾರವನ್ನು ಕೊಂಡುಕೊಳ್ಳಲು ಬಂದಿದ್ದೆವು. 21-22 ಮನೆಗೆ ಹೋಗುವಾಗ ದಾರಿಯಲ್ಲಿ ನಾವು ನಮ್ಮ ಚೀಲಗಳನ್ನು ಬಿಚ್ಚಿದಾಗ ಪ್ರತಿಯೊಂದು ಚೀಲದಲ್ಲಿಯೂ ನಾವು ಪಾವತಿಮಾಡಿದ್ದ ಹಣವನ್ನು ಕಂಡೆವು. ಆ ಹಣವು ಅಲ್ಲಿಗೆ ಹೇಗೆ ಬಂತೋ ನಮಗೆ ಗೊತ್ತಿಲ್ಲ. ಆದರೆ ಆ ಹಣವನ್ನು ನಿಮಗೆ ಕೊಡುವುದಕ್ಕಾಗಿ ನಮ್ಮೊಂದಿಗೆ ತೆಗೆದುಕೊಂಡು ಬಂದಿದ್ದೇವೆ. ಈ ಸಲ ನಾವು ಖರೀದಿ ಮಾಡಬೇಕೆಂದಿರುವ ಆಹಾರಕ್ಕೆ ಕೊಡಲು ಹೆಚ್ಚು ಹಣವನ್ನು ತಂದಿದ್ದೇವೆ” ಎಂದು ಹೇಳಿದರು.
23 ಅದಕ್ಕೆ ಸೇವಕನು, “ಭಯಪಡಬೇಡಿ, ಚಿಂತಿಸಬೇಡಿ. ನಿಮ್ಮ ದೇವರೂ ನಿಮ್ಮ ತಂದೆಯ ದೇವರೂ ಹಣವನ್ನು ಉಡುಗೊರೆಯಾಗಿ ನಿಮ್ಮ ಚೀಲಗಳಲ್ಲಿ ಇಟ್ಟಿದ್ದಿರಬೇಕು. ಕಳೆದ ಸಲ ನೀವು ದವಸಧಾನ್ಯಗಳಿಗಾಗಿ ಹಣ ಪಾವತಿ ಮಾಡಿದ್ದು ನನಗೆ ನೆನಪಿದೆ” ಎಂದು ಹೇಳಿದನು.
ಬಳಿಕ ಆ ಸೇವಕನು ಸಿಮೆಯೋನನನ್ನು ಸೆರೆಮನೆಯಿಂದ ಕರೆತಂದನು. 24 ಸೇವಕನು ಅವರನ್ನು ಯೋಸೇಫನ ಮನೆಯೊಳಗೆ ಕರೆದುಕೊಂಡು ಹೋಗಿ ಅವರಿಗೆ ನೀರನ್ನು ಕೊಟ್ಟನು. ಅವರು ತಮ್ಮ ಕಾಲುಗಳನ್ನು ತೊಳೆದುಕೊಂಡರು. ಬಳಿಕ ಅವನು ಅವರ ಕತ್ತೆಗಳಿಗೆ ಆಹಾರವನ್ನು ಹಾಕಿದನು.
25 ತಾವು ಯೋಸೇಫನೊಂದಿಗೆ ಊಟ ಮಾಡುವುದಾಗಿ ಸಹೋದರರಿಗೆ ತಿಳಿಯಿತು. ಆದ್ದರಿಂದ ಅವರು ಅವನಿಗೆ ಕೊಡಲು ತಮ್ಮ ಉಡುಗೊರೆಗಳನ್ನು ಮಧ್ಯಾಹ್ನದವರೆಗೆ ಸಿದ್ಧಪಡಿಸಿದರು.
26 ಯೋಸೇಫನು ಮನೆಗೆ ಬಂದಾಗ, ಸಹೋದರರು ತಾವು ತಂದಿದ್ದ ಉಡುಗೊರೆಗಳನ್ನು ಅವನಿಗೆ ಕೊಟ್ಟರು. ಬಳಿಕ ಅವರು ನೆಲದವರೆಗೆ ಬಾಗಿ ನಮಸ್ಕರಿಸಿದರು.
27 ಯೋಸೇಫನು ಅವರ ಯೋಗಕ್ಷೇಮವನ್ನು ವಿಚಾರಿಸಿದನು. ಯೋಸೇಫನು “ನೀವು ನನಗೆ ತಿಳಿಸಿದ ನಿಮ್ಮ ವೃದ್ಧನಾದ ತಂದೆ ಕ್ಷೇಮವಾಗಿದ್ದಾನೆಯೇ? ಇನ್ನೂ ಜೀವಂತವಾಗಿರುವನೇ?” ಎಂದು ಕೇಳಿದನು.
28 ಸಹೋದರರು, “ಸ್ವಾಮೀ, ನಮ್ಮ ತಂದೆ ಕ್ಷೇಮವಾಗಿದ್ದಾನೆ. ಅವನು ಇನ್ನೂ ಜೀವಂತವಾಗಿದ್ದಾನೆ” ಎಂದು ಹೇಳಿದನು. ಬಳಿಕ ಅವರು ಮತ್ತೆ ಯೋಸೇಫನಿಗೆ ಅಡ್ಡಬಿದ್ದರು.
29 ಬಳಿಕ ಯೋಸೇಫನು ತನ್ನ ಸಹೋದರನಾದ ಬೆನ್ಯಾಮೀನನನ್ನು ನೋಡಿದನು. (ಬೆನ್ಯಾಮೀನ ಮತ್ತು ಯೋಸೇಫ ಒಂದೇ ತಾಯಿಯ ಮಕ್ಕಳು.) ಯೋಸೇಫನು, “ನೀವು ನನಗೆ ತಿಳಿಸಿದ ನಿಮ್ಮ ಕಿರಿಯ ತಮ್ಮನು ಇವನೋ?” ಎಂದು ಕೇಳಿದನು. ಆಮೇಲೆ ಯೋಸೇಫನು ಬೆನ್ಯಾಮೀನನಿಗೆ “ಮಗನೇ, ದೇವರು ನಿನಗೆ ಒಳ್ಳೆಯದನ್ನು ಮಾಡಲಿ” ಎಂದು ಹೇಳಿದನು.
30 ಯೋಸೇಫನು ತನ್ನ ತಮ್ಮನಾದ ಬೆನ್ಯಾಮೀನನನ್ನು ಬಹಳವಾಗಿ ಪ್ರೀತಿಸುತ್ತಿದ್ದ ಕಾರಣ ಆನಂದದಿಂದ ಅವನ ಕಣ್ಣಲ್ಲಿ ನೀರು ಉಕ್ಕೇರಿ ಬಂದದ್ದರಿಂದ ಕೋಣೆಯೊಳಗೆ ಹೋಗಿ ಕಣ್ಣೀರಿಟ್ಟನು. 31 ಬಳಿಕ ಯೋಸೇಫನು ತನ್ನ ಮುಖವನ್ನು ತೊಳೆದುಕೊಂಡು ಮತ್ತು ಮನಸ್ಸನ್ನು ಬಿಗಿಹಿಡಿದುಕೊಂಡು ಬಂದು, “ಊಟ ಬಡಿಸಿರಿ” ಎಂದು ಅಪ್ಪಣೆಕೊಟ್ಟನು.
32 ಯೋಸೇಫನೊಬ್ಬನೇ ಒಂದು ಮೇಜಿನಲ್ಲಿ ಊಟ ಮಾಡಿದನು. ಅವನ ಸಹೋದರರು ಒಟ್ಟಾಗಿ ಮತ್ತೊಂದು ಮೇಜಿನಲ್ಲಿ ಊಟ ಮಾಡಿದರು. ಈಜಿಪ್ಟಿನವರು ಬೇರೊಂದು ಮೇಜಿನಲ್ಲಿ ಊಟ ಮಾಡಿದರು. ಇಬ್ರಿಯ ಜನರೊಂದಿಗೆ ಊಟ ಮಾಡುವುದು ತಪ್ಪೆಂಬುದು ಅವರ ನಂಬಿಕೆಯಾಗಿತ್ತು. 33 ಯೋಸೇಫನ ಎದುರಿನ ಸಾಲಿನಲ್ಲಿ ಕುಳಿತುಕೊಳ್ಳಲು ಯೋಸೇಫನ ಸಹೋದರರಿಗೆ ಹಿರಿಯವನಿಂದ ಮೊದಲುಗೊಂಡು ಕಿರಿಯವನವರೆಗೆ ಕ್ರಮವಾಗಿ ಸ್ಥಳವನ್ನು ಗೊತ್ತುಪಡಿಸಲಾಗಿತ್ತು. ಆದ್ದರಿಂದ ಸಹೋದರರೆಲ್ಲಾ ಅತ್ಯಾಶ್ಚರ್ಯದಿಂದ ಒಬ್ಬರನ್ನೊಬ್ಬರು ನೋಡತೊಡಗಿದರು. 34 ಸೇವಕರು ಯೋಸೇಫನ ಮೇಜಿನಿಂದ ಊಟವನ್ನು ತೆಗೆದುಕೊಂಡು ಅವರಿಗೆ ಬಡಿಸುತ್ತಿದ್ದರು. ಆದರೆ ಸೇವಕರು ಬೆನ್ಯಾಮೀನನಿಗೆ ಬೇರೆಯವರಿಗಿಂತ ಐದರಷ್ಟು ಹೆಚ್ಚಾಗಿ ಕೊಟ್ಟರು. ಸಹೋದರರು ಯಥೇಚ್ಛವಾಗಿ ಊಟ ಮಾಡಿದರು.