8
ಯೇಸುವೇ ನಮ್ಮ ಪ್ರಧಾನಯಾಜಕನು
ನಾವು ಹೇಳುವ ಸಂಗತಿಗಳಲ್ಲಿ ಮುಖ್ಯವಾದದ್ದೇನೆಂದರೆ, ನಿಮಗೆ ಹೇಳಿದಂತೆಯೇ ನಮಗೊಬ್ಬ ಪ್ರಧಾನ ಯಾಜಕನಿದ್ದಾನೆ. ಆತನು ಪರಲೋಕದಲ್ಲಿ ದೇವರ ಸಿಂಹಾಸನದ ಬಲಭಾಗದಲ್ಲಿ ಈಗ ಕುಳಿತುಕೊಂಡಿದ್ದಾನೆ. ಆತನು ಮಹಾ ಪವಿತ್ರಸ್ಥಳದಲ್ಲಿ ಅಂದರೆ ಜನರಿಂದ ನಿರ್ಮಿತವಾಗದೆ, ದೇವರಿಂದಲೇ ನಿರ್ಮಿಸಲ್ಪಟ್ಟಿರುವ ನಿಜವಾದ ದೇವದರ್ಶನ ಗುಡಾರದಲ್ಲಿ ಸೇವೆಮಾಡುತ್ತಿದ್ದಾನೆ.
ಪ್ರತಿಯೊಬ್ಬ ಪ್ರಧಾನಯಾಜಕನೂ ದೇವರಿಗೆ ಯಜ್ಞಗಳನ್ನೂ ಕಾಣಿಕೆಗಳನ್ನೂ ಅರ್ಪಿಸಬೇಕು. ಆದ್ದರಿಂದ ನಮ್ಮ ಪ್ರಧಾನ ಯಾಜಕನೂ ದೇವರಿಗೆ ಏನನ್ನಾದರೂ ಅರ್ಪಿಸಲೇಬೇಕು. ಆತನು ಇನ್ನೂ ಭೂಮಿಯ ಮೇಲೆ ವಾಸಮಾಡುತ್ತಿದ್ದರೆ ಯಾಜಕನಾಗಿರುತ್ತಿರಲಿಲ್ಲ. ಕಾರಣವೇನೆಂದರೆ, ಧರ್ಮಶಾಸ್ತ್ರದ ಪ್ರಕಾರ ದೇವರಿಗೆ ಕಾಣಿಕೆಗಳನ್ನು ಅರ್ಪಿಸುವ ಯಾಜಕರು ಈಗಾಗಲೇ ಇಲ್ಲಿದ್ದಾರೆ. ಈ ಯಾಜಕರು ಮಾಡುವ ಕಾರ್ಯಗಳು ಪರಲೋಕದಲ್ಲಿನ ಕಾರ್ಯಗಳ ನಿಜವಾದ ಪ್ರತಿರೂಪಗಳೂ ಛಾಯೆಗಳೂ ಆಗಿವೆ. ಮೋಶೆಯು ದೇವದರ್ಶನ ಗುಡಾರವನ್ನು ನಿರ್ಮಿಸಲು ಸಿದ್ಧನಾದಾಗ ದೇವರು ಅವನಿಗೆ, “ನಾನು ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಎಚ್ಚರಿಕೆಯಿಂದ ನಿರ್ಮಿಸಬೇಕು” ಉಲ್ಲೇಖನ: ವಿಮೋಚನ. 25:40. ಎಂದು ಹೇಳಿದ್ದು ಈ ಕಾರಣದಿಂದಲೇ. ಆದರೆ ಯೇಸುವಿಗೆ ಕೊಡಲ್ಪಟ್ಟ ಕಾರ್ಯವು ಆ ಯಾಜಕರಿಗೆ ಕೊಡಲ್ಪಟ್ಟ ಕಾರ್ಯಕ್ಕಿಂತ ಅತ್ಯಂತ ಮಹತ್ವದ್ದಾಗಿದೆ. ಇದೇ ರೀತಿಯಲ್ಲಿ ಯೇಸು ತನ್ನ ಜನರಿಗಾಗಿ ದೇವರಿಂದ ತಂದ ಹೊಸ ಒಡಂಬಡಿಕೆಯು ಹಳೆಯದಕ್ಕಿಂತ ಶ್ರೇಷ್ಠವಾಗಿದೆ. ಉತ್ತಮ ಸಂಗತಿಗಳ ವಾಗ್ದಾನದ ಆಧಾರದ ಮೇಲೆ ಹೊಸ ಒಡಂಬಡಿಕೆಯು ಸ್ಥಾಪಿತವಾಗಿದೆ.
ಮೊದಲನೆ ಒಡಂಬಡಿಕೆ ಏನೂ ದೋಷವಿಲ್ಲದ್ದಾಗಿದ್ದರೆ, ಎರಡನೆ ಒಡಂಬಡಿಕೆಯ ಅಗತ್ಯವೇ ಇರಲಿಲ್ಲ. ಆದರೆ ದೇವರು ಜನರಲ್ಲಿ ಯಾವುದೋ ದೋಷವನ್ನು ಕಂಡು ಹೇಳಿದ್ದೇನೆಂದರೆ:
 
“ಇಸ್ರೇಲರೊಡನೆಯೂ ಯೆಹೂದ್ಯರೊಡನೆಯೂ
ನಾನು ಹೊಸ ಒಡಂಬಡಿಕೆ ಮಾಡಿಕೊಳ್ಳುವ ಕಾಲ ಬರುತ್ತಿದೆ ಎಂದು ಪ್ರಭು ಹೇಳುತ್ತಾನೆ.
ಅದು, ಅವರ ಪಿತೃಗಳೊಡನೆ ನಾನು ಮಾಡಿಕೊಂಡ ಒಡಂಬಡಿಕೆಯಂತಿರುವುದಿಲ್ಲ.
ಅವರನ್ನು ಈಜಿಪ್ಟಿನಿಂದ ಕೈಹಿಡಿದು ಹೊರಗೆ ಕರೆದುಕೊಂಡು ಬಂದ ಕಾಲದಲ್ಲಿ ಅವರೊಡನೆ ಆ ಒಡಂಬಡಿಕೆಯನ್ನೂ ಮಾಡಿಕೊಂಡೆನು.
ಆದರೆ ಅವರು ಅದನ್ನು ಅನುಸರಿಸಲಿಲ್ಲವಾದ್ದರಿಂದ
ಅವರಿಗೆ ವಿಮುಖನಾದೆನು ಎಂದು ಪ್ರಭು ಹೇಳುತ್ತಾನೆ.
10 ನಾನು ಇಸ್ರೇಲರೊಡನೆ ಮುಂದಿನ ದಿನಗಳಲ್ಲಿ ಮಾಡಿಕೊಳ್ಳುವ
ಹೊಸ ಒಡಂಬಡಿಕೆಯು ಇಂತಿದೆ:
ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇರಿಸುವೆನು;
ಅವರ ಹೃದಯದ ಮೇಲೆ ಬರೆಯುವೆನು;
ನಾನು ಅವರ ದೇವರಾಗಿರುವೆನು;
ಅವರು ನನ್ನ ಜನರಾಗಿರುವರು.
11 ಒಬ್ಬನು ಸಹೋದರನಿಗಾಗಲಿ, ಬೇರೆಯವರಿಗಾಗಲಿ ಬೋಧಿಸಬೇಕಾಗಿರುವುದಿಲ್ಲ;
ದೇವರನ್ನು ತಿಳಿದುಕೊಳ್ಳಿ ಎಂದು ಹೇಳಬೇಕಾಗಿರುವುದಿಲ್ಲ. ಏಕೆಂದರೆ ಅತ್ಯಂತ ಪ್ರಮುಖರನ್ನು ಮೊದಲುಗೊಂಡು ಅತ್ಯಂತ ಅಲ್ಪರಾದವರೆಲ್ಲರೂ ನನ್ನನ್ನು ತಿಳಿದುಕೊಂಡಿರುವರು.
12 ಅವರು ನನ್ನ ವಿರುದ್ಧವಾಗಿ ಮಾಡುವ ಎಲ್ಲಾ ಕೆಟ್ಟಕಾರ್ಯಗಳನ್ನು ಕ್ಷಮಿಸುವೆನು;
ಅವರ ಪಾಪಗಳನ್ನು ನೆನಪಿಗೆ ತಂದುಕೊಳ್ಳುವುದಿಲ್ಲ.” ಯೆರೆಮೀಯ 31:31-34
 
13 ದೇವರು ಇದನ್ನು ಹೊಸ ಒಡಂಬಡಿಕೆ ಎಂದು ಕರೆದನು. ಆದ್ದರಿಂದ ಮೊದಲನೆ ಒಡಂಬಡಿಕೆಯನ್ನು ದೇವರು ಹಳೆಯದಾಗಿ ಮಾಡಿದನು. ಯಾವುದು ಹಳೆಯದಾಗಿ ಉಪಯೋಗಕ್ಕೆ ಬಾರದಾಗುತ್ತದೋ ಅದು ಅದೃಶ್ಯವಾಗುವುದು.

8:5: ಉಲ್ಲೇಖನ: ವಿಮೋಚನ. 25:40.