17
ಅರಾಮ್ಯರ ಕುರಿತು ದೇವರ ಸಂದೇಶ
ದಮಸ್ಕಕ್ಕೆ ಇದು ದುಃಖಕರವಾದ ಸಂದೇಶ. ಯೆಹೋವನು ಹೇಳುವುದೇನೆಂದರೆ,
 
“ದಮಸ್ಕವು ಈಗ ಒಂದು ದೊಡ್ಡ ನಗರವಾಗಿದೆ. ಆದರೆ ಅದು ನಾಶವಾಗುವದು.
ಕೆಡವಲ್ಪಟ್ಟ ಕಟ್ಟಡಗಳು ಮಾತ್ರವೇ ದಮಸ್ಕದಲ್ಲಿರುವವು.
ಅರೋಯೇರ್ ಪ್ರಾಂತ್ಯದ ನಗರಗಳನ್ನು ಜನರು ಬಿಟ್ಟುಹೋಗುವರು.
ಆ ಪಾಳುಬಿದ್ದ ನಗರಗಳಲ್ಲಿ ಕುರಿಮಂದೆಗಳು ತಿರುಗಾಡುವವು.
ಅವುಗಳಿಗೆ ತೊಂದರೆ ಕೊಡಲು ಯಾರೂ ಇರುವದಿಲ್ಲ.
ಕೋಟೆಗೋಡೆಯುಳ್ಳ ಎಫ್ರಾಯೀಮನ ಪಟ್ಟಣಗಳು ನಾಶವಾಗುವವು.
ದಮಸ್ಕದಲ್ಲಿರುವ ಸರ್ಕಾರವು ಕೊನೆಗೊಳ್ಳುವದು.
ಇಸ್ರೇಲರಿಗೆ ಆದಂತೆಯೇ ಅರಾಮ್ಯರಿಗೂ ಆಗುವದು.
ಪ್ರಮುಖ ನಗರವಾಸಿಗಳು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು” ಇದು ಸರ್ವಶಕ್ತನಾದ ಯೆಹೋವನ ನುಡಿ.
 
“ಆ ಸಮಯದಲ್ಲಿ ಯಾಕೋಬಿನ ಸಂಪತ್ತೆಲ್ಲಾ ಕೊಳ್ಳೆಹೊಡೆಯಲ್ಪಡುವದು.
ಯಾಕೋಬನು ರೋಗಗ್ರಸ್ಥನಾದವನಂತೆ ಬಲಹೀನನಾಗಿಯೂ ತೆಳುವಾಗಿಯೂ ಇರುವನು.
 
“ಆ ಸಮಯದಲ್ಲಿ ರೆಫಾಯೀಮ್ ಕಣಿವೆಯಲ್ಲಿ ಧಾನ್ಯದ ಸುಗ್ಗಿಯಂತಿರುವದು. ಕೆಲಸಗಾರರು ಹೊಲಗಳಲ್ಲಿ ಬೆಳೆಯನ್ನು ಕೊಯ್ದು ಧಾನ್ಯವನ್ನು ಶೇಖರಿಸುವರು.
“ಆ ಸಮಯವು ಆಲೀವ್ ಬೀಜಗಳನ್ನು ಜನರು ಕೂಡಿಸಿಕೊಳ್ಳುವಂತೆ ಇರುವುದು. ಆಲೀವ್ ಮರಗಳಿಂದ ಜನರು ಕಾಯಿಗಳನ್ನು ಉದುರಿಸುವರು. ಆದರೆ ಕೆಲವು ಕಾಯಿಗಳು ಮರಗಳ ತುದಿಯಲ್ಲಿ ಉಳಿದುಕೊಳ್ಳುವವು. ಎತ್ತರದ ಕೊಂಬೆಗಳಲ್ಲಿ ನಾಲ್ಕೈದು ಕಾಯಿಗಳು ಉಳಿಯುವವು. ಅದೇ ರೀತಿಯಲ್ಲಿ ಆ ನಗರಗಳ ಸ್ಥಿತಿಯೂ ಇರುವುದು” ಇದು ಸರ್ವಶಕ್ತನಾದ ಯೆಹೋವನ ನುಡಿಗಳು.
ಮಯಗಳಲ್ಲಿ ಜನರು ತಮ್ಮ ನಿರ್ಮಾಣಿಕನಾದ ದೇವರ ಕಡೆಗೆ ದೃಷ್ಟಿಸಿ ನೋಡುವರು. ಅವರ ಕಣ್ಣುಗಳು ಇಸ್ರೇಲಿನ ಪರಿಶುದ್ಧನನ್ನು ನೋಡುತ್ತವೆ. ಜನರು ತಮ್ಮ ಮಹಾಕಾರ್ಯಗಳ ಮೇಲೆ ನಂಬಿಕೆ ಇಡುವದಿಲ್ಲ. ಸುಳ್ಳುದೇವರುಗಳಿಗೆ, ತಾವು ಮಾಡಿದ ಬಲಿಪೀಠಗಳಿಗೆ, ಪೂಜಾಸ್ಥಳಗಳಿಗೆ ಅವರು ಹೋಗುವದಿಲ್ಲ. ಆ ಸಮಯದಲ್ಲಿ ಕೋಟೆಗೋಡೆಗಳಿರುವ ಎಲ್ಲಾ ಪಟ್ಟಣಗಳು ನಿರ್ಜನವಾಗುವದು. ಇಸ್ರೇಲರು ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳುವ ಕಾಲದಲ್ಲಿ ಹೇಗೆ ಅಡವಿಗಳಂತೆಯೂ ಬೆಟ್ಟಗಳಂತೆಯೂ ಇದ್ದವೋ ಅದೇ ರೀತಿಯಲ್ಲಿ ಇರುವವು. ಆ ಸಮಯದಲ್ಲಿ ಇಸ್ರೇಲರು ದೇಶದೊಳಗೆ ಪ್ರವೇಶಿಸುವಾಗ ಅಲ್ಲಿಯ ನಿವಾಸಿಗಳೆಲ್ಲರೂ ಓಡಿಹೋದರು. ಮುಂಬರುವ ದಿವಸಗಳಲ್ಲಿ ದೇಶವು ಮತ್ತೆ ನಿರ್ಜನವಾಗುವದು. 10 ನೀವು ನಿಮ್ಮ ರಕ್ಷಕನಾದ ದೇವರನ್ನು ಮರೆತುಬಿಟ್ಟಿದ್ದರಿಂದ ನಿಮಗೆ ಹೀಗೆ ಆಗುವದು. ದೇವರು ನಿಮ್ಮ ಆಶ್ರಯದುರ್ಗವಾಗಿದ್ದಾನೆಂಬುದನ್ನು ನೀವು ನೆನಪು ಮಾಡಿಕೊಳ್ಳಲಿಲ್ಲ.
ದೂರದ ಪ್ರಾಂತ್ಯದಿಂದ ನೀವು ಉತ್ತಮ ತಳಿಯ ದ್ರಾಕ್ಷಿಯನ್ನು ತಂದಿರಿ. ಅದನ್ನು ನೀವು ನೆಟ್ಟರೂ ಅವು ಚಿಗುರುವದಿಲ್ಲ. 11 ಒಂದು ದಿವಸ ಆ ಕೊಂಬೆಗಳನ್ನು ನೆಟ್ಟು ಅದು ಚಿಗುರುವಂತೆ ಮಾಡುವಿರಿ. ಮರುದಿವಸ ಅದು ಚಿಗುರುವದು. ಸುಗ್ಗಿಯ ಕಾಲದಲ್ಲಿ ನೀವು ದ್ರಾಕ್ಷಿತೋಟಕ್ಕೆ ಹೋದಾಗ ದ್ರಾಕ್ಷಿಬಳ್ಳಿಗಳೆಲ್ಲಾ ರೋಗದಿಂದ ಸತ್ತುಹೋಗಿರುವವು.
 
12 ಇಗೋ! ಸಮುದ್ರವು ಭೋರ್ಗರೆಯುವ ಶಬ್ದದಂತೆ
ಅನೇಕ ಜನಾಂಗಗಳು ರೋಧಿಸುವ ಶಬ್ದ ಕೇಳಿಸುತ್ತದೆ.
ಆ ಶಬ್ದವು ಸಮುದ್ರದ ತೆರೆಗಳು ದಡಕ್ಕೆ ಅಪ್ಪಳಿಸುವಂತಿದೆ.
13 ದೇವರು ಗದರಿಸಿದಾಗ
ಜನರು ಓಡಿಹೋಗುವರು.
ಆ ಜನರು ಗಾಳಿಯಲ್ಲಿ ಹಾರಿಹೋಗುವ ಹೊಟ್ಟಿನಂತಿರುವರು;
ಬಿರುಗಾಳಿಯು ಬಹುದೂರಕ್ಕೆ ಕೊಂಡೊಯ್ಯುವ ಬೇರಿಲ್ಲದ ಹಣಜಿಗಳಂತಿರುವರು.
14 ಆ ರಾತ್ರಿ ಜನರು ಭಯಗ್ರಸ್ತರಾಗುವರು.
ಬೆಳಗಾಗುವದರೊಳಗೆ ಏನೂ ಉಳಿಯುವದಿಲ್ಲ.
ಹಾಗೆಯೇ ನಮ್ಮ ವೈರಿಗಳಿಗೆ ಏನೂ ದೊರಕುವದಿಲ್ಲ.
ಅವರು ನಮ್ಮ ದೇಶಕ್ಕೆ ನುಗ್ಗಿದರೂ ಅವರಿಗೆ ಏನೂ ಸಿಗದು.