31
ಇಸ್ರೇಲು, ದೇವರ ಶಕ್ತಿಯ ಮೇಲೆ ಅವಲಂಬಿಸಬೇಕು
ಸಹಾಯಕ್ಕಾಗಿ ಈಜಿಪ್ಟಿಗೆ ಹೋಗುವ ಜನರನ್ನು ನೋಡಿರಿ. ಆ ಜನರು ಕುದುರೆಗಳಿಗಾಗಿ ಕೇಳುತ್ತಿದ್ದಾರೆ. ಕುದುರೆಗಳು ಅವರನ್ನು ರಕ್ಷಿಸುತ್ತವೆ ಎಂದು ಅವರು ಭಾವಿಸುತ್ತಾರೆ. ಈಜಿಪ್ಟಿನ ಬಹಳ ರಥಗಳು ಮತ್ತು ಬಹಳ ಕುದುರೆಗಳು ಅವರನ್ನು ಕಾಪಾಡುವವು ಎಂದು ಜನರು ತಿಳಿದುಕೊಳ್ಳುತ್ತಾರೆ. ಸೈನ್ಯವು ದೊಡ್ಡದಾಗಿರುವದರಿಂದ ಯಾವ ಅಪಾಯವೂ ಬಾರದು ಎಂದು ಅವರು ತಿಳಿದುಕೊಳ್ಳುತ್ತಾರೆ. ಜನರು ಇಸ್ರೇಲಿನ ಪರಿಶುದ್ಧನನ್ನು ನಂಬುವದಿಲ್ಲ. ಅವರು ಯೆಹೋವನ ಸಹಾಯವನ್ನು ಕೋರುವದಿಲ್ಲ. ಆದರೆ ಯೆಹೋವನು ಜ್ಞಾನವಂತನಾಗಿದ್ದಾನೆ. ಆತನೇ ಅವರಿಗೆ ವಿರುದ್ಧವಾಗಿ ಸಂಕಟಗಳನ್ನು ಬರಮಾಡುವನು. ದೇವರ ಆಜ್ಞೆಯನ್ನು ಜನರು ಬದಲಾಯಿಸಲಾಗುವದಿಲ್ಲ. ಯೆಹೋವನು ಎದ್ದು ದುಷ್ಟಜನರ (ಯೆಹೂದ) ವಿರುದ್ಧ ಯುದ್ಧ ಮಾಡುವನು. ಮತ್ತು ಅವರಿಗೆ ಸಹಾಯ ಕೊಡುವವರ (ಈಜಿಪ್ಟ್) ವಿರುದ್ಧವಾಗಿಯೂ ಯುದ್ಧ ಮಾಡುವನು.
ಈಜಿಪ್ಟಿನ ಜನರು ಮನುಷ್ಯಮಾತ್ರದವರೇ. ಅವರು ದೇವರಲ್ಲ. ಈಜಿಪ್ಟಿನ ಕುದುರೆಗಳು ಪ್ರಾಣಿಗಳಾಗಿವೆ. ಅವುಗಳು ಆತ್ಮವಲ್ಲ. ಯೆಹೋವನು ತನ್ನ ಕೈಯನ್ನು ಚಾಚುವಾಗ ಸಹಾಯ ಮಾಡುವವನು (ಈಜಿಪ್ಟ್) ಸೋಲುವನು. ಸಹಾಯ ಪಡೆದವನು (ಯೆಹೂದ) ಬೀಳುವನು. ಅವರೆಲ್ಲರೂ ಒಟ್ಟಿಗೆ ನಾಶವಾಗುವರು.
ಯೆಹೋವನು ನನಗೆ ಹೀಗೆ ಹೇಳಿದನು: “ಸಿಂಹವು ಅಥವಾ ಪ್ರಾಯದ ಸಿಂಹವು ಒಂದು ಪ್ರಾಣಿಯನ್ನು ಹಿಡಿದು ಕೊಂದಾಗ ಅದರ ಮೇಲೆ ನಿಂತು ಗರ್ಜಿಸುವದು. ಆ ಸಮಯದಲ್ಲಿ ಯಾವುದೂ ಆ ಸಿಂಹವನ್ನು ಹೆದರಿಸಲಾರದು. ಜನರು ಬಂದು ಗಟ್ಟಿಯಾಗಿ ಚೀರಿಕೊಂಡರೂ ಸಿಂಹಕ್ಕೆ ಹೆದರಿಕೆಯುಂಟಾಗದು; ದೊಡ್ಡ ಶಬ್ದ ಮಾಡಿದರೂ ಸಿಂಹವು ಓಡಿಹೋಗದು.”
ಅದೇ ರೀತಿಯಲ್ಲಿ ಸರ್ವಶಕ್ತನಾದ ಯೆಹೋವನು ಚೀಯೋನ್ ಪರ್ವತಕ್ಕೆ ಬಂದು ಯುದ್ಧ ಮಾಡುವನು. ಆತನು ಜೆರುಸಲೇಮನ್ನು ಹಕ್ಕಿಯು ತನ್ನ ಗೂಡಿನ ಸುತ್ತಲೂ ಹಾರಾಡುತ್ತಾ ಕಾಪಾಡುವಂತೆ ಸಂರಕ್ಷಿಸುವನು. ಯೆಹೋವನು ಜೆರುಸಲೇಮನ್ನು ರಕ್ಷಿಸುವನು. ಯೆಹೋವನು “ಹಾದುಹೋಗಿ” ಜೆರುಸಲೇಮನ್ನು ರಕ್ಷಿಸುವನು.
ದೇವರಿಗೆ ವಿರುದ್ಧವಾಗಿರುವ ಇಸ್ರೇಲಿನ ಮಕ್ಕಳೇ, ನೀವು ದೇವರ ಬಳಿಗೆ ಹಿಂತಿರುಗಿ ಬನ್ನಿರಿ. ಆಗ ಜನರು ತಯಾರಿಸಿರುವ ಬೆಳ್ಳಿಬಂಗಾರದ ವಿಗ್ರಹಗಳನ್ನು ಪೂಜಿಸುವದನ್ನು ನಿಲ್ಲಿಸುವರು. ನೀವು ಆ ವಿಗ್ರಹಗಳನ್ನು ತಯಾರಿಸಿದಾಗ ನಿಜವಾಗಿಯೂ ಪಾಪಮಾಡಿದಿರಿ.
ಅಶ್ಶೂರವು ಕತ್ತಿಯಿಂದ ನಾಶವಾಗುವದು ಖಂಡಿತ. ಆದರೆ ಆ ಕತ್ತಿಯು ಮನುಷ್ಯನ ಕತ್ತಿಯಲ್ಲ. ಖಡ್ಗವು ಅವರನ್ನು ನುಂಗುವುದು, ಆದರೆ ಅದು ಮನುಷ್ಯನ ಖಡ್ಗವಲ್ಲ. ಅಶ್ಶೂರವು ದೇವರ ಖಡ್ಗದಿಂದ ಓಡಿಹೋಗುವದು. ಅದರ ಯೌವನಸ್ಥರು ಸೆರೆಹಿಡಿಯಲ್ಪಟ್ಟು ಗುಲಾಮರನ್ನಾಗಿ ಮಾಡಲ್ಪಡುವರು. ಅವರ ಸುರಕ್ಷತೆಯ ಸ್ಥಳ ನಾಶವಾಗುವದು. ಅವರ ಅಧಿಪತಿಗಳು ಧ್ವಜವನ್ನು ಬಿಟ್ಟು ಸೋತುಹೋಗುವರು.
ಯೆಹೋವನೇ ಇದನ್ನು ನುಡಿದಿದ್ದಾನೆ. ಆತನ ಅಗ್ನಿವೇದಿಕೆಯು ಚೀಯೋನಿನಲ್ಲಿದೆ. ಆತನ ಒಲೆಯು ಜೆರುಸಲೇಮಿನಲ್ಲಿದೆ.