36
ಅಶ್ಶೂರರು ಯೆಹೂದದ ಪ್ರವೇಶ ಮಾಡುವರು
ಅರಸನಾದ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೇ ವರ್ಷದಲ್ಲಿ ಅಶ್ಶೂರದ ಅರಸನಾದ ಸನ್ಹೇರೀಬನು ಯೆಹೂದದಲ್ಲಿ ಕೋಟೆಗಳನ್ನು ಹೊಂದಿದ್ದ ಎಲ್ಲಾ ಪಟ್ಟಣಗಳ ವಿರುದ್ಧ ದಂಡೆತ್ತಿ ಬಂದು ಅವುಗಳನ್ನೆಲ್ಲ ಸೋಲಿಸಿದನು. ಅಶ್ಶೂರದ ರಾಜನಾದ ಸನ್ಹೇರೀಬನು ತನ್ನ ಸೇನಾದಂಡನಾಯಕನನ್ನು ಒಂದು ದೊಡ್ಡ ಸೈನ್ಯದೊಡನೆ ಜೆರುಸಲೇಮಿನಲ್ಲಿದ್ದ ಅರಸನಾದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಸೇನಾದಂಡನಾಯಕ ತನ್ನ ಸೈನ್ಯದೊಡನೆ ಲಾಕೀಷಿನಿಂದ ಜೆರುಸಲೇಮಿಗೆ ಹೊರಟನು. ಅವರು ಮೇಲಿನ ಕೊಳದ ಬಳಿಯಲ್ಲಿರುವ ನೀರುಕಾಲುವೆಯ ಬಳಿ ನಿಂತರು. ಮೇಲಿನ ಕೊಳವು ಅಗಸರ ಬಯಲಿಗೆ ಹೋಗುವ ಮಾರ್ಗದಲ್ಲಿದೆ.
ಜೆರುಸಲೇಮಿನಿಂದ ಮೂರು ಮಂದಿ ಸೇನಾದಂಡನಾಯಕನೊಂದಿಗೆ ಮಾತನಾಡಲು ಹೊರಟರು. ಅವರು ಯಾರೆಂದರೆ ಹಿಲ್ಕೀಯನ ಮಗನಾದ ಎಲ್ಯಾಕೀಮ್, ಆಸಾಫನ ಮಗನಾದ ಯೋವ ಮತ್ತು ಶೆಬ್ನ. ಎಲ್ಯಾಕೀಮನು ಅರಮನೆಯ ಆಡಳಿತಗಾರನಾಗಿದ್ದನು; ಯೋವನು ದಾಖಲೆಕಾರನಾಗಿದ್ದನು; ಶೆಬ್ನ ಅರಮನೆಯ ಕಾರ್ಯದರ್ಶಿಯಾಗಿದ್ದನು.
ಸೇನಾದಂಡನಾಯಕನು ಅವರಿಗೆ, “ಮಹಾರಾಜನಾದ ಅಶ್ಶೂರದ ಅರಸನು ಹಿಜ್ಕೀಯನಿಗೆ ಹೇಳುವುದನ್ನು ನೀವು ಹೋಗಿ ಅವನಿಗೆ ತಿಳಿಸಿರಿ. ಅವನು ಹೇಳುವುದೇನೆಂದರೆ:
 
“ ‘ನೀನು ಯಾವುದರ ಮೇಲೆ ಭರವಸವಿಟ್ಟಿರುವೆ? ನೀನು ನಿನ್ನ ಶಕ್ತಿಯಲ್ಲಿಯೂ ಯುದ್ಧದ ತಂತ್ರೋಪಾಯಗಳ ಮೇಲೆಯೂ ಭರವಸವಿಟ್ಟಿದ್ದರೆ ಅವು ಕೇವಲ ನಿಷ್ಪ್ರಯೋಜಕವಾಗಿವೆ; ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಿರುವೆ? ನೀನು ನನ್ನ ವಿರುದ್ಧ ದಂಗೆ ಏಳಬೇಕಾದರೆ ಯಾರ ಮೇಲೆ ಭರವಸವಿಟ್ಟಿರುವೆ? ಈಜಿಪ್ಟು ನಿನಗೆ ಸಹಾಯ ಮಾಡುವುದೆಂದು ನಂಬಿರುವಿಯಾ? ಈಜಿಪ್ಟು ಒಂದು ಮುರಿದ ದಂಟು. ಅದರ ಮೇಲೆ ನೀನು ಭಾರಹಾಕಿದರೆ ಅದು ನಿನ್ನ ಅಂಗೈಯಲ್ಲಿ ರಂಧ್ರಮಾಡುವುದು. ಈಜಿಪ್ಟಿನ ರಾಜನಾದ ಫರೋಹನ ಸಹಾಯಕ್ಕಾಗಿ ಆಶ್ರಯಿಸಿಕೊಂಡ ಯಾವ ಜನರೂ ಅವನಲ್ಲಿ ಭರವಸೆ ಇಡಲಾಗದು.
“ ‘ಒಂದುವೇಳೆ ನೀವು, “ನಾವು ನಮ್ಮ ದೇವರಾದ ಯೆಹೋವನ ಮೇಲೆ ಭರವಸವಿಟ್ಟಿದ್ದೇವೆ” ಎಂದು ಹೇಳಬಹುದು. ಆದರೆ ಜನರು ಯೆಹೋವನನ್ನು ಆರಾಧಿಸುತ್ತಿದ್ದ ವೇದಿಕೆಗಳನ್ನೂ ಎತ್ತರವಾದ ಸ್ಥಳಗಳನ್ನೂ ಹಿಜ್ಕೀಯನು ನಾಶಮಾಡಿದ್ದಾನೆ. ಅಲ್ಲದೆ, ಯೆಹೂದ ಮತ್ತು ಜೆರುಸಲೇಮಿನಲ್ಲಿರುವ ಜನರಿಗೆ, “ನೀವು ಜೆರುಸಲೇಮಿನಲ್ಲಿರುವ ಯಜ್ಞವೇದಿಕೆಯಲ್ಲಿಯೇ ಆರಾಧಿಸಬೇಕು” ಎಂದು ಆಜ್ಞಾಪಿಸಿರುವುದು ನನಗೆ ಗೊತ್ತಿದೆ.
“ ‘ನೀವು ನನ್ನ ಒಡೆಯನಾದ ಅರಸನೊಂದಿಗೆ ಯುದ್ಧಮಾಡುವ ಆಲೋಚನೆಯನ್ನು ಇನ್ನೂ ಹೊಂದಿದ್ದರೆ, ನಿಮ್ಮೊಂದಿಗೆ ಈ ಒಪ್ಪಂದವನ್ನು ಮಾಡಿಕೊಳ್ಳುವೆನು. ಯುದ್ಧಕ್ಕೆ ಬರಲು ನಿಮ್ಮಲ್ಲಿ ಸಾಕಷ್ಟು ಸೈನಿಕರಿದ್ದಾರೆ. ನಾನು ನಿಮಗೆ ಎರಡುಸಾವಿರ ಕುದುರೆಗಳನ್ನು ಕೊಡುವುದಾಗಿ ವಾಗ್ದಾನ ಮಾಡುತ್ತೇನೆ. ಹೀಗಿದ್ದರೂ ನನ್ನ ಒಡೆಯನ ಸೈನ್ಯಾಧಿಕಾರಿಗಳಲ್ಲಿ ಕನಿಷ್ಠನಾದವನನ್ನು ಸೋಲಿಸಲು ನಿಮ್ಮಿಂದಾಗದು. ಆದ್ದರಿಂದ ನೀವು ಈಜಿಪ್ಟಿನವರ ಅಶ್ವದಳದ ಮೇಲೆ ಯಾಕೆ ಭರವಸವಿಡುತ್ತೀರಿ?
10 “ ‘ಈಗ ನಾನು ಯೆಹೋವನ ಸಹಾಯವಿಲ್ಲದೆ ಈ ದೇಶವನ್ನು ನಾಶಮಾಡಲು ಬಂದೆನೆಂದು ನೆನಸುತ್ತೀರೋ? “ಎದ್ದುಹೋಗಿ ಈ ದೇಶದ ವಿರುದ್ಧ ಯುದ್ಧ ನಡೆಸಿ ಅದನ್ನು ಸಂಪೂರ್ಣವಾಗಿ ನಾಶಮಾಡು” ಎಂದು ಯೆಹೋವನು ನನಗೆ ಹೇಳಿದ್ದಾನೆ.’ ”
 
11 ಆಗ ಎಲ್ಯಾಕೀಮ್, ಶೆಬ್ನ ಮತ್ತು ಯೋವ ಎಂಬವರು ಆ ಸೇನಾದಂಡನಾಯಕನಿಗೆ, “ದಯಮಾಡಿ ನಮ್ಮೊಂದಿಗೆ ಅರಮೇಯಿಕ್ ಭಾಷೆಯಲ್ಲಿ ಮಾತನಾಡು. ಆ ಭಾಷೆಯು ನಮಗೆ ಗೊತ್ತು. ಯೆಹೂದದ ಭಾಷೆಯಲ್ಲಿ ನಮ್ಮೊಂದಿಗೆ ಮಾತನಾಡಬೇಡ. ನೀವು ನಮ್ಮ ಭಾಷೆಯಲ್ಲಿ ಮಾತನಾಡಿದರೆ ಗೋಡೆಯ ಮೇಲಿರುವ ನಮ್ಮ ಜನರು ತಿಳಿದುಕೊಳ್ಳುವರು” ಎಂದು ಹೇಳಿದರು.
12 ಸೇನಾದಂಡನಾಯಕನು ಅದಕ್ಕುತ್ತರವಾಗಿ, “ನನ್ನ ಒಡೆಯನು ನಿಮ್ಮೊಂದಿಗೂ ನಿಮ್ಮ ಅರಸನೊಂದಿಗೂ ಮಾತ್ರ ಮಾತನಾಡಲು ಕಳುಹಿಸಲಿಲ್ಲ. ನನ್ನ ಒಡೆಯನು ಕೋಟೆಗೋಡೆಯ ಮೇಲೆ ಕುಳಿತಿರುವ ಜನರೊಂದಿಗೆ ಮಾತಾಡಲು ಕಳುಹಿಸಿದ್ದಾನೆ. ಆ ಜನರಿಗೆ ಊಟಕ್ಕೆ ಆಹಾರ, ಕುಡಿಯಲು ನೀರು ದೊರಕುವದಿಲ್ಲ. ಅವರು ನಿಮ್ಮ ಹಾಗೆ ತಮ್ಮ ಸ್ವಂತ ಮಲವನ್ನು ತಿಂದು ಮೂತ್ರವನ್ನು ಕುಡಿಯುವರು” ಎಂದು ಹೇಳಿದನು.
13 ಬಳಿಕ ಸೇನಾದಂಡನಾಯಕನು ಯೆಹೂದ್ಯ ಭಾಷೆಯಲ್ಲಿ ಗಟ್ಟಿಯಾಗಿ, 14 “ಮಹಾರಾಜನಾಗಿರುವ ಅಶ್ಶೂರದ ಅರಸನ ಮಾತುಗಳನ್ನು ಕೇಳಿರಿ:
 
“ ‘ಹಿಜ್ಕೀಯನು ನಿಮ್ಮನ್ನು ಮೋಸಪಡಿಸದಂತೆ ನೋಡಿಕೊಳ್ಳಿರಿ. ಅವನು ನಮ್ಮ ಸಾಮರ್ಥ್ಯದಿಂದ ನಿಮ್ಮನ್ನು ರಕ್ಷಿಸಲಾರನು. 15 “ಯೆಹೋವನನ್ನು ನಂಬಿರಿ. ಆತನು ನಮ್ಮನ್ನು ರಕ್ಷಿಸುವನು. ಅಶ್ಶೂರದ ಅರಸನು ನಮ್ಮ ಪಟ್ಟಣವನ್ನು ಸೋಲಿಸಲು ಬಿಡುವದಿಲ್ಲ” ಎಂದು ಹಿಜ್ಕೀಯನು ಹೇಳಿದರೆ ಅವನನ್ನು ನಂಬಬೇಡಿ.
16 “ ‘ಹಿಜ್ಕೀಯನ ಮಾತುಗಳನ್ನು ಕೇಳಬೇಡಿ. ಅಶ್ಶೂರದ ಅರಸನ ಮಾತುಗಳಿಗೆ ಕಿವಿಗೊಡಿರಿ. ಅವನು ಹೇಳುವುದೇನೆಂದರೆ: “ನೀವು ನನ್ನೊಡನೆ ಒಪ್ಪಂದ ಮಾಡಿಕೊಂಡು ನಿಮ್ಮ ನಗರದಿಂದ ಹೊರಗೆ ಬಂದು ನನ್ನನ್ನು ಸಂಧಿಸಬೇಕು. ಆಗ ನೀವೆಲ್ಲರೂ ನಿಮ್ಮ ಮನೆಗಳಿಗೆ ಹೋಗಬಹುದು; ನಿಮ್ಮ ಸ್ವಂತ ದ್ರಾಕ್ಷಿತೋಟದ ದ್ರಾಕ್ಷಿಹಣ್ಣುಗಳನ್ನು ತಿನ್ನಬಹುದು; ಅಂಜೂರದ ಮರದ ಹಣ್ಣನ್ನು ತಿನ್ನಬಹುದು ನೀವೆಲ್ಲರೂ ನಿಮ್ಮ ಬಾವಿಯ ನೀರನ್ನು ಕುಡಿಯಬಹುದು. 17 ಹೀಗೆ ನೀವು ಸೇವಿಸುತ್ತಾ ಇದ್ದರೆ ನಾನು ಬಂದು ನಿಮ್ಮ ದೇಶಕ್ಕೆ ಸಮಾನವಾದ ಇನ್ನೊಂದು ದೇಶಕ್ಕೆ ನಿಮ್ಮನ್ನು ಕರೆದೊಯ್ಯವೆನು. ಆ ಹೊಸ ದೇಶದಲ್ಲಿ ನೀವು ಒಳ್ಳೆಯ ಧಾನ್ಯವನ್ನು ಮತ್ತು ಹೊಸ ದ್ರಾಕ್ಷಾರಸವನ್ನು, ರೊಟ್ಟಿಯನ್ನು ಮತ್ತು ದ್ರಾಕ್ಷಿತೋಟಗಳನ್ನು ಹೊಂದುವಿರಿ.”
18 “ ‘ಹಿಜ್ಕೀಯನು ತನ್ನ ಮಾತುಗಳಿಂದ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ. ಅವನು, “ಯೆಹೋವನು ನಮ್ಮನ್ನು ರಕ್ಷಿಸುತ್ತಾನೆ” ಎಂದು ಹೇಳುತ್ತಾನೆ. ನಾನು ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ. ಬೇರೆ ದೇಶದ ದೇವರುಗಳು ಅವರ ದೇಶವನ್ನು ಅಶ್ಶೂರದ ಅರಸನಿಂದ ಕಾಪಾಡಲು ಶಕ್ತರಾದರೋ? ಇಲ್ಲ! 19 ಹಮಾತಿನ, ಅರ್ಪಾದಿನ ದೇವರೆಲ್ಲಿ? ಅವರು ಸೋತುಹೋದರು. ಸೆಫರ್ವಯಿಮಿನ ದೇವರುಗಳೆಲ್ಲಿ? ಅವರು ಸಮಾರ್ಯವನ್ನು ನನ್ನ ಬಲದಿಂದ ರಕ್ಷಿಸಿದರೋ? ಇಲ್ಲ! 20 ಬೇರೆ ಯಾವ ದೇಶದ ದೇವರುಗಳು ನನ್ನ ಕೈಯಿಂದ ತಮ್ಮ ಜನರನ್ನು ತಪ್ಪಿಸಿ ಕಾಪಾಡಿದರು? ಹೀಗಿರಲು ಯೆಹೋವನು ಜೆರುಸಲೇಮನ್ನು ನನ್ನಿಂದ ರಕ್ಷಿಸುವನೋ? ಇಲ್ಲ.’ ”
 
21 ಇದನ್ನು ಕೇಳಿ ಜೆರುಸಲೇಮಿನ ಜನರು ಮೌನವಾದರು. ಅವರು ಸೇನಾದಂಡನಾಯಕನಿಗೆ ಯಾವ ಉತ್ತರವನ್ನೂ ಕೊಡಲಿಲ್ಲ. ಯಾಕೆಂದರೆ ಹಿಜ್ಕೀಯನು ಅವರ ಸಂಗಡ ಮಾತಾಡಬಾರದೆಂದು ಹೇಳಿದ್ದನು.
22 ಹಿಲ್ಕೀಯನ ಮಗನೂ ಅರಮನೆಯ ಆಡಳಿತಾಧಿಕಾರಿಯೂ ಆಗಿದ್ದ ಎಲ್ಯಾಕೀಮ್, ಲೇಖಕನಾದ ಶೆಬ್ಹ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬವರು ತಮ್ಮ ಬಟ್ಟೆಗಳನ್ನು ಹರಿದುಕೊಂಡು ಹಿಜ್ಕೀಯನ ಬಳಿಗೆ ಬಂದು ಅಶ್ಶೂರದ ಸೇನಾದಂಡನಾಯಕ ಹೇಳಿದ್ದನ್ನೆಲ್ಲಾ ತಿಳಿಸಿದರು.