39
ಜೆರುಸಲೇಮಿಗೆ ಎಚ್ಚರಿಕೆ
ಆ ಸಮಯದಲ್ಲಿ ಬಲದಾನ್ ಎಂಬವನ ಮಗನಾದ ಮೆರೋದಕಬಲದಾನ್ ಎಂಬವನು ಬಾಬಿಲೋನಿನ ಅರಸನಾಗಿದ್ದನು. ಅವನಿಗೆ ಹಿಜ್ಕೀಯನು ಅಸ್ವಸ್ಥನಾಗಿದ್ದಾನೆಂಬ ವರ್ತಮಾನ ತಲುಪಿದ್ದರಿಂದ ಅವನು ಹಿಜ್ಕೀಯನಿಗೆ ಒಂದು ಪತ್ರವನ್ನೂ ಜೊತೆಗೆ ಬಹುಮಾನಗಳನ್ನೂ ತನ್ನ ದೂತರ ಸಂಗಡ ಕಳುಹಿಸಿದನು. ಅವುಗಳನ್ನು ನೋಡಿ ಹಿಜ್ಕೀಯನಿಗೆ ಬಹು ಸಂತೋಷವಾಯಿತು. ಅವನು ಬಾಬಿಲೋನಿನ ದೂತರಿಗೆ ತನ್ನ ಅರಮನೆಯ ಉಗ್ರಾಣದಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನೂ ತಾನು ಕೊಡಿಸಿಟ್ಟಿದ್ದ ಬೆಳ್ಳಿಬಂಗಾರಗಳನ್ನೂ ಸಾಂಬಾರ ಪದಾರ್ಥಗಳನ್ನೂ ಮತ್ತು ಸುಗಂಧದ್ರವ್ಯಗಳನ್ನೂ ತೋರಿಸಿದನು. ಅಲ್ಲದೆ ಯುದ್ಧದಲ್ಲಿ ಉಪಯೋಗಿಸುವ ಖಡ್ಗಗಳನ್ನು, ಗುರಾಣಿಗಳನ್ನು ತೋರಿಸಿದನು; ಅಲ್ಲದೆ ತನ್ನ ರಾಜ್ಯದಲ್ಲಿರುವ ಪ್ರತಿಯೊಂದು ವಿಷಯಗಳನ್ನು ಅವರಿಗೆ ಪ್ರದರ್ಶಿಸಿದನು.
ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಹೋಗಿ, “ನಿನ್ನ ಬಳಿಗೆ ಬಂದವರು ಎಲ್ಲಿಯವರು? ಅವರು ಏನನ್ನು ಹೇಳಿದರು?” ಎಂದು ವಿಚಾರಿಸಿದನು.
ಅದಕ್ಕೆ ಹಿಜ್ಕೀಯನು, “ಇವರು ಬಹುದೂರ ದೇಶದಿಂದ ನನ್ನನ್ನು ಸಂಧಿಸಲು ಬಂದಿದ್ದಾರೆ. ಅವರ ದೇಶ ಬಾಬಿಲೋನ್” ಎಂದನು.
“ನಿನ್ನ ಮನೆಯಲ್ಲಿ ಅವರು ಏನು ನೋಡಿದರು?” ಎಂದು ತಿರುಗಿ ಯೆಶಾಯನು ಪ್ರಶ್ನಿಸಿದನು.
“ಅವರು ನನ್ನ ಅರಮನೆಯಲ್ಲಿರುವದನ್ನೆಲ್ಲಾ ನೋಡಿದರು. ನಾನು ನನ್ನ ಐಶ್ವರ್ಯವನ್ನೆಲ್ಲಾ ಅವರಿಗೆ ತೋರಿಸಿದೆನು” ಎಂದು ಹಿಜ್ಕೀಯನು ಉತ್ತರಿಸಿದನು.
ಆಗ ಯೆಶಾಯನು ಹಿಜ್ಕೀಯನಿಗೆ, “ಸರ್ವಶಕ್ತನಾದ ಯೆಹೋವನ ಮಾತುಗಳನ್ನು ಕೇಳು: ‘ನಿನ್ನ ಮನೆಯಲ್ಲಿರುವ ಎಲ್ಲಾ ವಸ್ತುಗಳೂ ನಿನ್ನ ಪೂರ್ವಿಕರು ಕೂಡಿಟ್ಟಿದ್ದ ಎಲ್ಲಾ ವಸ್ತುಗಳೂ ಇಲ್ಲಿಂದ ಬಾಬಿಲೋನಿಗೆ ಒಯ್ಯುವ ಕಾಲವು ಬರುವದು. ಇಲ್ಲಿ ಏನೂ ಉಳಿಯುವದಿಲ್ಲ.’ ಇದು ಸರ್ವಶಕ್ತನಾದ ಯೆಹೋವನ ನುಡಿ. ಬಾಬಿಲೋನಿನವರು ನಿನ್ನ ಗಂಡುಮಕ್ಕಳನ್ನು ತೆಗೆದುಕೊಂಡು ಹೋಗುವರು. ಅವರು ಬಾಬಿಲೋನಿನ ಅರಮನೆಗಳಲ್ಲಿ ಕಂಚುಕಿಯರಾಗಿ ಸೇವೆ ಮಾಡುವರು” ಎಂದು ಹೇಳಿದನು.
ಅದಕ್ಕೆ ಹಿಜ್ಕೀಯನು ಯೆಶಾಯನಿಗೆ, “ಯೆಹೋವನ ಮಾತುಗಳು ಒಳ್ಳೆಯವೇ ಸರಿ” ಎಂದು ಹೇಳಿದನು. (ಯಾಕೆಂದರೆ ತಾನು ಅರಸನಾಗಿರುವಷ್ಟು ಕಾಲ ದೇಶದಲ್ಲಿ ಸಮಾಧಾನವಿರುವುದೆಂದು ಅವನು ಯೋಚಿಸಿಕೊಂಡನು.)