49
ದೇವರು ತನ್ನ ವಿಶೇಷ ಸೇವಕನನ್ನು ಕರೆಯುತ್ತಾನೆ
ದೂರದೇಶದಲ್ಲಿರುವ ಜನರೇ, ನನ್ನ ಮಾತುಗಳಿಗೆ ಕಿವಿಗೊಡಿರಿ;
ಭೂಮಿಯ ಮೇಲೆ ವಾಸಿಸುವ ಜನರೇ, ನನ್ನ ಮಾತುಗಳನ್ನು ಕೇಳಿರಿ.
ನಾನು ಹುಟ್ಟುವ ಮೊದಲೇ ಯೆಹೋವನು ನನ್ನನ್ನು ತನ್ನ ಸೇವೆಗಾಗಿ ಕರೆದನು.
ನಾನು ತಾಯಿಯ ಗರ್ಭದಲ್ಲಿರುವಾಗಲೇ ಯೆಹೋವನು ನನ್ನ ಹೆಸರೆತ್ತಿ ಕರೆದನು.
ತನ್ನ ಪರವಾಗಿ ಮಾತನಾಡಲು ಯೆಹೋವನು ನನ್ನನ್ನು ಉಪಯೋಗಿಸುತ್ತಾನೆ.
ಹದವಾದ ಕತ್ತಿಯಂತೆ ನನ್ನನ್ನು ಉಪಯೋಗಿಸುತ್ತಾನೆ.
ಅದೇ ಸಮಯದಲ್ಲಿ ನನ್ನನ್ನು ತನ್ನ ಕೈಯೊಳಗೆ ಸುರಕ್ಷಿತವಾಗಿ ಇರಿಸುತ್ತಾನೆ.
ಯೆಹೋವನು ನನ್ನನ್ನು ಬಾಣದಂತೆ ಉಪಯೋಗಿಸುತ್ತಾನೆ,
ಅದೇ ಸಮಯದಲ್ಲಿ ಬತ್ತಳಿಕೆಯಲ್ಲಿ ನನ್ನನ್ನು ಅಡಗಿಸಿಡುತ್ತಾನೆ.
 
ಯೆಹೋವನು ಹೀಗೆಂದನು: “ಇಸ್ರೇಲೇ, ನೀನೇ ನನ್ನ ಸೇವಕನು.
ನಾನು ನಿನಗೆ ಆಶ್ಚರ್ಯವಾದ ಕಾರ್ಯಗಳನ್ನು ಮಾಡುವೆನು.”
 
ಆಗ ನಾನು “ನಾನು ಕಷ್ಟಪಟ್ಟು ಮಾಡಿದ ಕಾರ್ಯಗಳೆಲ್ಲವೂ ನಿಷ್ಪ್ರಯೋಜನವಾದವು.
ನಾನು ನನ್ನನ್ನೇ ಸವೆಯಿಸಿದೆನು. ಆದರೆ ಪ್ರಯೋಜನವಾದದ್ದನ್ನು ನಾನು ಮಾಡಲಿಲ್ಲ.
ನಾನು ನನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿದರೂ ಏನೂ ಮಾಡಲಾಗಲಿಲ್ಲ.
ಆದ್ದರಿಂದ ನನಗೆ ಮಾಡಬೇಕಾದುದನ್ನು ಯೆಹೋವನೇ ತೀರ್ಮಾನಿಸಲಿ.
ನನಗೆ ದೊರಕಬೇಕಾದ ಬಹುಮಾನವನ್ನು ದೇವರೇ ತೀರ್ಮಾನಿಸಲಿ” ಎಂದು ಹೇಳಿದೆನು.
ನಾನು ಯೆಹೋವನ ಸೇವಕನಾಗಿರಬೇಕೆಂದು
ಆತನು ನನ್ನನ್ನು ನನ್ನ ತಾಯಿಯ ಗರ್ಭದಲ್ಲಿಯೇ ರೂಪಿಸಿದನು.
ಇಸ್ರೇಲರನ್ನೂ ಯಾಕೋಬನನ್ನೂ ಆತನ ಬಳಿಗೆ ಮತ್ತೆ ಕರೆದುಕೊಂಡು ಬರಲು
ಆತನು ನನ್ನನ್ನು ರೂಪಿಸಿದನು.
ಯೆಹೋವನು ನನ್ನನ್ನು ಸನ್ಮಾನಿಸುವನು.
ನಾನು ಆತನಿಂದ ಬಲವನ್ನು ಹೊಂದುವೆನು.
 
ಯೆಹೋವನು ನನಗೆ ಹೇಳಿದ್ದೇನೆಂದರೆ:
“ನನ್ನ ಸೇವಕನಾದ ಯಾಕೋಬನ ಕುಲಗಳನ್ನು ಮೇಲೆತ್ತಿ
ಇಸ್ರೇಲಿನ ಅಳಿದುಳಿದವರನ್ನು ಪುನಃಸ್ಥಾಪಿಸುವೆ.
ಆದರೆ ನಿನಗೆ ಇನ್ನೊಂದು ಕೆಲಸವಿದೆ. ಅದು ಇದಕ್ಕಿಂತಲೂ ಮಹತ್ತಾದದ್ದು.
ನಾನು ನಿನ್ನನ್ನು ಎಲ್ಲಾ ಜನಾಂಗಗಳಿಗೆ ಬೆಳಕನ್ನಾಗಿ ಮಾಡುವೆನು.
ಲೋಕದ ಎಲ್ಲಾ ಜನರನ್ನು ರಕ್ಷಿಸಲು ನೀನು ನನ್ನ ಮಾರ್ಗವಾಗುವೆ.”
 
ಇಸ್ರೇಲಿನ ಪರಿಶುದ್ಧನೂ ವಿಮೋಚಕನೂ ಆದ ಯೆಹೋವನು ಇಸ್ರೇಲನ್ನು ಬಿಡಿಸುವನು.
ಆತನು ಹೇಳುವುದೇನೆಂದರೆ, “ನನ್ನ ಸೇವಕನು ದೀನನಾಗಿದ್ದಾನೆ. ಆತನು ಅರಸರನ್ನು ಸೇವಿಸುವನು.
ಆದರೆ ಜನರು ಆತನನ್ನು ದ್ವೇಷಿಸುವರು.
ಆದರೆ ರಾಜರುಗಳು ಅವನನ್ನು ನೋಡಿ ಎದ್ದುನಿಂತು ಗೌರವಿಸುವರು.
ಶ್ರೇಷ್ಠ ನಾಯಕರು ಆತನ ಮುಂದೆ ಅಡ್ಡಬೀಳುವರು.”
 
ಇದು ಇಸ್ರೇಲರ ಪರಿಶುದ್ಧನಾದ ಯೆಹೋವನ ಚಿತ್ತಕ್ಕನುಸಾರವಾಗಿದೆ. ಆತನು ಭರವಸೆಗೆ ಯೋಗ್ಯನಾಗಿದ್ದಾನೆ. ಆತನೇ ನಿನ್ನನ್ನು ಆರಿಸಿಕೊಂಡನು.
ರಕ್ಷಣೆಯ ದಿನ
ಯೆಹೋವನು ಹೇಳುವುದೇನೆಂದರೆ,
“ನನ್ನ ದಯೆಯನ್ನು ತೋರಿಸಲು ಒಂದು ವಿಶೇಷ ಸಮಯವಿದೆ.
ಆಗ ನಾನು ನಿನ್ನ ಪ್ರಾರ್ಥನೆಗೆ ಉತ್ತರ ಕೊಡುವೆನು.
ನಿನ್ನನ್ನು ರಕ್ಷಿಸಲು ಒಂದು ವಿಶೇಷ ಸಮಯವಿದೆ. ಆಗ ನಾನು ನಿನಗೆ ಸಹಾಯ ಮಾಡುವೆನು,
ನಿನ್ನನ್ನು ಕಾಪಾಡುವೆನು.
ಜನರೊಂದಿಗೆ ನಾನು ಒಡಂಬಡಿಕೆ ಮಾಡಿಕೊಂಡಿದ್ದೇನೆ ಎಂಬುದಕ್ಕೆ ನೀನೇ ಸಾಕ್ಷಿಯಾಗಿರುವೆ.
ದೇಶವು ಈಗ ನಾಶವಾಗಿದೆ,
ಆದರೆ ಈ ಭೂಮಿಯು ಯಾರದಾಗಿತ್ತೋ ಅವರಿಗೆ ನೀನದನ್ನು ಹಿಂದಕ್ಕೆ ಕೊಡುವೆ.
ಸೆರೆಮನೆಯಲ್ಲಿರುವವರಿಗೆ ನೀವು,
‘ಸೆರೆಮನೆಯಿಂದ ಹೊರಗೆ ಬನ್ನಿರಿ’ ಎಂದು ಹೇಳುವಿರಿ.
ಅಂಧಕಾರದಲ್ಲಿರುವವರಿಗೆ,
‘ಕತ್ತಲೆಯಿಂದ ಹೊರಗೆ ಬನ್ನಿರಿ’ ಎಂದು ಹೇಳುವಿರಿ.
ಪ್ರಯಾಣದಲ್ಲಿರುವವರು ತಿನ್ನುತ್ತಾ ಹೋಗುವರು.
ಬೋಳುಬೆಟ್ಟಗಳಲ್ಲೂ ನಿಮಗೆ ಆಹಾರ ದೊರೆಯುವದು.
10 ಜನರಿಗೆ ಹಸಿವೆಯಾಗದು, ಬಾಯಾರಿಕೆಯಾಗದು.
ಸೂರ್ಯನ ಉರಿ ಬಿಸಿಲಾಗಲಿ ಗಾಳಿಯಾಗಲಿ ಅವರಿಗೆ ಹಾನಿಮಾಡದು.
ಯಾಕೆಂದರೆ ದೇವರು ತಾನೇ ಅವರನ್ನು ಸಂತೈಸುವನು,
ಅವರನ್ನು ಬುಗ್ಗೆಗಳ ಬಳಿಗೆ ನಡಿಸುವನು.
11 ನಾನು ನನ್ನ ಜನರಿಗೊಂದು ಮಾರ್ಗ ಸಿದ್ಧಮಾಡುವೆನು.
ಬೆಟ್ಟವು ನೆಲದ ಮಟ್ಟಕ್ಕೆ ಇಳಿಯುವುದು;
ತಗ್ಗು ಏರಿಸಲ್ಪಡುವದು.
 
12 “ಇಗೋ, ದೂರದೇಶಗಳಿಂದ ಜನರು ನನ್ನ ಬಳಿಗೆ ಬರುತ್ತಿದ್ದಾರೆ.
ಉತ್ತರ, ಪಶ್ಚಿಮ ದಿಕ್ಕುಗಳಿಂದ ಜನರು ನನ್ನ ಬಳಿಗೆ ಬರುತ್ತಿದ್ದಾರೆ.
ಈಜಿಪ್ಟಿನ ಅಸ್ವಾನಿನಿಂದ ಜನರು ನನ್ನ ಬಳಿಗೆ ಬರುತ್ತಿದ್ದಾರೆ.”
 
13 ಭೂಮ್ಯಾಕಾಶಗಳೇ, ಸಂತೋಷಪಡಿರಿ!
ಪರ್ವತಗಳೇ, ಹರ್ಷಧ್ವನಿ ಮಾಡಿರಿ!
ಯಾಕೆಂದರೆ ಯೆಹೋವನು ತನ್ನ ಜನರನ್ನು ಸಂತೈಸುತ್ತಾನೆ.
ಆತನು ಬಡವರಿಗೆ ಕರುಣೆ ತೋರಿಸುತ್ತಾನೆ.
 
14 ಆದರೆ ಈಗ ಚೀಯೋನ್ ಹೇಳುವುದೇನೆಂದರೆ, “ಯೆಹೋವನು ನನ್ನನ್ನು ಬಿಟ್ಟುಹೋಗಿದ್ದಾನೆ.
ನನ್ನ ಒಡೆಯನು ನನ್ನನ್ನು ತೊರೆದಿದ್ದಾನೆ.”
 
15 ಆದರೆ ನಾನು ಹೇಳುವುದೇನೆಂದರೆ,
“ಒಬ್ಬ ತಾಯಿಯು ತನ್ನ ಮಗುವನ್ನು ಮರೆತಾಳೇ?
ತಾನು ಹೆತ್ತ ಶಿಶುವನ್ನು ತಾಯಿಯು ಮರೆತುಬಿಡುವಳೇ? ಇಲ್ಲ.
ಒಂದುವೇಳೆ ತಾಯಿ ತನ್ನ ಮಕ್ಕಳನ್ನು ಮರೆತಾಳು,
ಆದರೆ ಯೆಹೋವನಾದ ನಾನು ನಿಮ್ಮನ್ನು ಮರೆಯುವದಿಲ್ಲ.
16 ನೋಡಿ, ನಿಮ್ಮ ಹೆಸರುಗಳನ್ನು ನಾನು ನನ್ನ ಅಂಗೈಗಳಲ್ಲಿ ಕೆತ್ತಿರುತ್ತೇನೆ.
ನಿಮ್ಮನ್ನು ಯಾವಾಗಲೂ ಜ್ಞಾಪಿಸಿಕೊಳ್ಳುತ್ತೇನೆ.
17 ನಿನ್ನ ಮಕ್ಕಳು ನಿನ್ನ ಬಳಿಗೆ ಹಿಂದಿರುಗಿ ಬರುವರು.
ಜನರು ನಿಮ್ಮನ್ನು ಸೋಲಿಸಿದರೂ ಅವರು ನಿಮ್ಮನ್ನು ನಿಮ್ಮಷ್ಟಕ್ಕೆ ಬಿಡುವರು.”
18 ಮೇಲಕ್ಕೆ ನೋಡು! ನಿನ್ನ ಸುತ್ತಲೂ ನೋಡು!
ನಿನ್ನ ಮಕ್ಕಳೆಲ್ಲಾ ಒಟ್ಟಾಗಿ ಸೇರಿ ನಿನ್ನ ಬಳಿಗೆ ಬರುತ್ತಿದ್ದಾರೆ.
ಯೆಹೋವನು ಹೇಳುವುದೇನೆಂದರೆ,
“ನನ್ನ ಜೀವದಾಣೆ,
ನಿನ್ನ ಮಕ್ಕಳು ನೀನು ಕೊರಳಲ್ಲಿ ಧರಿಸುವ ಹಾರದಂತಿರುವರು.
ಮದುಮಗಳು ಧರಿಸುವ ಕಂಠಹಾರದಂತೆ ನಿನ್ನ ಮಕ್ಕಳಿರುವರು.
 
19 “ಈಗ ನೀನು ಸೋತವಳೂ ನಾಶವಾದವಳೂ ಆಗಿರುವಿ.
ನಿನ್ನ ಭೂಮಿಯು ನಿಷ್ಪ್ರಯೋಜಕವಾಗಿದೆ.
ಆದರೆ ಸ್ವಲ್ಪ ಸಮಯದ ನಂತರ ನಿನ್ನ ದೇಶವು ಜನರಿಂದ ತುಂಬುವದು.
ನಿನ್ನನ್ನು ನಾಶಮಾಡಿದವರು ಬಹುದೂರ ಹೋಗುವರು.
20 ಕಳೆದುಹೋದ ನಿನ್ನ ಮಕ್ಕಳಿಗಾಗಿ ನೀನು ವ್ಯಸನವಾಗಿದ್ದಿ.
ಆದರೆ ಆ ಮಕ್ಕಳು, ‘ಈ ದೇಶವು ನಮಗೆ ಸಾಲುವದಿಲ್ಲ.
ಇದಕ್ಕಿಂತ ದೊಡ್ಡ ದೇಶ ನಮಗೆ ಕೊಡು’ ಎಂದು ಕೇಳುವರು.
21 ಆಗ ನೀನು ನಿನ್ನ ಮನಸ್ಸಿನೊಳಗೆ, ‘ಈ ಮಕ್ಕಳನ್ನೆಲ್ಲಾ ನನಗೆ ಯಾರು ಕೊಟ್ಟರು?
ಇದು ಸಂತಸದ ಸಂಗತಿ! ನಾನು ಒಬ್ಬಂಟಿಗಳಾಗಿ ದುಃಖಿಸುತ್ತಿದ್ದೆನು.
ನಾನು ಸೋಲಲ್ಪಟ್ಟವಳಾಗಿ ನನ್ನ ಜನರಿಂದ ದೂರವಿದ್ದೆನು.
ಹೀಗಿರುವಾಗ ಈ ಮಕ್ಕಳನ್ನೆಲ್ಲಾ ಯಾರು ಕೊಟ್ಟರು?
ನಾನು ಒಬ್ಬಂಟಿಗಳಾಗಿ ಇದ್ದೆನಲ್ಲಾ!
ಇಷ್ಟೆಲ್ಲಾ ಮಕ್ಕಳನ್ನು ನನಗೆ ಕೊಟ್ಟವರು ಯಾರು?’ ” ಎಂದು ಅಂದುಕೊಳ್ಳುವಿ.
 
22 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ,
“ನಾನು ಜನಾಂಗಗಳಿಗೆ ಕೈಬೀಸಿ ಸನ್ನೆ ಮಾಡುವೆನು.
ಎಲ್ಲಾ ಜನರು ನೋಡುವಂತೆ ನಾನು ನನ್ನ ಧ್ವಜವನ್ನು ಎತ್ತುವೆನು.
ಆಗ ಅವರು ನಿನ್ನ ಮಕ್ಕಳನ್ನು ನಿನಗೆ ತಂದೊಪ್ಪಿಸುವರು.
ಅವರು ನಿನ್ನ ಮಕ್ಕಳನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ತರುವರು.
ತಮ್ಮ ಕೈಗಳಲ್ಲಿ ಅವರನ್ನು ಎತ್ತಿಕೊಂಡು ಬರುವರು.
23 ನಿನ್ನ ಮಕ್ಕಳಿಗೆ ಅರಸರು ಉಪಾಧ್ಯಾಯರಾಗಿರುವರು.
ರಾಜಪುತ್ರಿಯರು ನಿನ್ನ ಮಕ್ಕಳನ್ನು ನೋಡಿಕೊಳ್ಳುವರು.
ಆ ಅರಸರೂ ರಾಜಪುತ್ರಿಯರೂ ನಿನಗೆ ಅಡ್ಡಬೀಳುವರು.
ನಿನ್ನ ಕಾಲಿನ ಧೂಳಿಗೆ ಮುತ್ತು ಕೊಡುವರು.
ಆಗ ನಾನು ಯೆಹೋವನೆಂದು ನೀನು ತಿಳಿದುಕೊಳ್ಳುವಿ.
ನನ್ನ ಮೇಲೆ ಭರವಸವಿಡುವವನು ಆಶಾಭಂಗಪಡನು ಎಂದು ಆಗ ನೀನು ತಿಳಿದುಕೊಳ್ಳುವಿ.”
 
24 ಯುದ್ಧವೀರನು ಯುದ್ಧದಲ್ಲಿ ಕೊಳ್ಳೆಹೊಡೆದದ್ದನ್ನು
ನೀನು ಅವನಿಂದ ಕಿತ್ತುಕೊಳ್ಳಲಾರೆ.
ಬಲಿಷ್ಠ ಸೈನಿಕನು ಯುದ್ಧ ಕೈದಿಯನ್ನು ಕಾವಲು ಕಾಯುವಾಗ
ಆ ಕೈದಿಯು ತಪ್ಪಿಸಿಕೊಳ್ಳಲಾರನು.
25 ಆದರೆ ಯೆಹೋವನು ಹೇಳುವುದೇನೆಂದರೆ,
“ಕೈದಿಗಳು ತಪ್ಪಿಸಿಕೊಳ್ಳುವರು.
ಬಲಿಷ್ಠ ಸೈನಿಕನಿಂದ ಯಾರೋ ಒಬ್ಬನು ಕೈದಿಯನ್ನು ಬಿಡಿಸಿಕೊಳ್ಳುವನು. ಇದು ಹೇಗೆ ಸಾಧ್ಯ?
ಹೇಗೆಂದರೆ, ನಾನೇ ನಿನ್ನ ಬದಲಾಗಿ ಯುದ್ಧ ಮಾಡುವೆನು;
ನಿನ್ನ ಮಕ್ಕಳನ್ನು ರಕ್ಷಿಸುವೆನು.
26 ನಿನ್ನನ್ನು ಹಿಂಸಿಸುವವರು
ತಮ್ಮ ದೇಹದ ಮಾಂಸವನ್ನೇ ತಿನ್ನುವಂತೆ ಮಾಡುವೆನು; ದ್ರಾಕ್ಷಾರಸವನ್ನು ಕುಡಿಯುವಂತೆ
ತಮ್ಮ ಸ್ವಂತ ರಕ್ತವನ್ನೇ ಕುಡಿಸಿ ಅಮಲೇರಿಸುವೆನು;
ಆಗ ಯೆಹೋವನೇ ನಿನ್ನನ್ನು ರಕ್ಷಿಸಿದನೆಂದು ಜನರೆಲ್ಲರೂ ತಿಳಿದುಕೊಳ್ಳುವರು.
ಯಾಕೋಬ್ಯರ ಸರ್ವಶಕ್ತನಾದ ದೇವರು ನಿಮ್ಮನ್ನು ರಕ್ಷಿಸಿದನೆಂದು ಎಲ್ಲರೂ ತಿಳಿಯುವರು.”