11
ಒಡಂಬಡಿಕೆಯ ಉಲ್ಲಂಘನೆ
ಯೆರೆಮೀಯನಿಗೆ ಈ ಸಂದೇಶ ಯೆಹೋವನಿಂದ ಬಂದಿತು: “ಯೆರೆಮೀಯನೇ, ಈ ಒಡಂಬಡಿಕೆಯ ವಚನಗಳನ್ನು ಕೇಳು, ಈ ವಿಷಯಗಳ ಬಗ್ಗೆ ಯೆಹೂದದ ಜನರಿಗೂ ಜೆರುಸಲೇಮಿನಲ್ಲಿರುವ ಜನರಿಗೂ ಹೇಳು. ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ, ‘ಈ ಒಡಂಬಡಿಕೆಯನ್ನು ಪಾಲಿಸದೆ ಇದ್ದವರಿಗೆ ಕೇಡಾಗುತ್ತದೆ.’ ನಾನು ನಿಮ್ಮ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಯ ಬಗ್ಗೆ ಮಾತನಾಡುತ್ತಿದ್ದೇನೆ. ನಾನು ಈಜಿಪ್ಟಿನಿಂದ ಅವರನ್ನು ಹೊರತಂದಾಗ ನಾನು ಅವರೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಂಡೆ. ಈಜಿಪ್ಟು ಅನೇಕ ಕಷ್ಟಗಳ ನಾಡಾಗಿತ್ತು. ಅದು ಕಬ್ಬಿಣವನ್ನು ಕರಗಿಸುವ ಉರಿಯುವ ಕುಲುಮೆಯಂತಿತ್ತು. ನಾನು ಅವರಿಗೆ, ‘ನನ್ನ ಆಜ್ಞಾಪಾಲನೆಯನ್ನು ಮಾಡಿರಿ ಮತ್ತು ನಾನು ಹೇಳಿದಂತೆ ಎಲ್ಲವನ್ನು ಮಾಡಿರಿ. ಆಗ ನೀವು ನನ್ನ ಭಕ್ತರಾಗುವಿರಿ. ನಾನು ನಿಮ್ಮ ದೇವರಾಗುವೆನು’ ಎಂದೆ.
“ನಾನು ನಿಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಲು ನಾನು ಇದೆಲ್ಲವನ್ನು ಮಾಡಿದೆ. ನಾನು ಅವರಿಗೆ ಫಲವತ್ತಾದ ಭೂಮಿಯನ್ನೂ ಹಾಲು ಮತ್ತು ಜೇನು ಹರಿಯುವ ಪ್ರದೇಶವನ್ನೂ ಕೊಡುವ ವಾಗ್ದಾನ ಮಾಡಿದ್ದೆ. ನೀವು ಈಗ ಈ ಪ್ರದೇಶದಲ್ಲಿ ವಾಸಮಾಡುತ್ತಿದ್ದೀರಿ.”
ನಾನು, “ಯೆಹೋವನೇ ನಿನ್ನ ಅಪ್ಪಣೆಯಂತಾಗಲಿ” ಎಂದು ಉತ್ತರಿಸಿದೆನು.
ಯೆಹೋವನು ನನಗೆ, “ಯೆರೆಮೀಯನೇ, ಯೆಹೂದದ ಪಟ್ಟಣಗಳಲ್ಲಿ ಮತ್ತು ಜೆರುಸಲೇಮಿನ ಬೀದಿಗಳಲ್ಲಿ ಈ ಸಂದೇಶವನ್ನು ಸಾರು. ಈ ಒಡಂಬಡಿಕೆಯಲ್ಲಿನ ಮಾತುಗಳನ್ನು ಕೇಳಿ ಅನುಸರಿಸಿರಿ. ನಾನು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಹೊರತಂದಾಗ ಅವರಿಗೆ ಒಂದು ಮುನ್ನೆಚ್ಚರಿಕೆಯನ್ನು ಕೊಟ್ಟೆನು. ಇಂದಿನವರೆಗೂ ನಾನು ಮತ್ತೆಮತ್ತೆ ಅವರಿಗೆ ಮುನ್ನೆಚ್ಚರಿಕೆಯನ್ನು ಕೊಟ್ಟೆ. ನನ್ನ ಆಜ್ಞಾಪಾಲನೆ ಮಾಡಬೇಕೆಂದು ಅವರಿಗೆ ಹೇಳಿದೆ. ಆದರೆ ನಿಮ್ಮ ಪೂರ್ವಿಕರು ನನ್ನ ಮಾತನ್ನು ಕೇಳಲಿಲ್ಲ. ಅವರು ಮೊಂಡರಾಗಿದ್ದು ತಮ್ಮ ದುಷ್ಟಹೃದಯ ಹೇಳಿದಂತೆ ಮಾಡಿದರು. ಆಜ್ಞಾಪಾಲನೆ ಮಾಡದಿದ್ದರೆ ಅವರಿಗೆ ಕೆಡುಕಾಗುವದೆಂದು ಒಡಂಬಡಿಕೆಯಲ್ಲಿ ಹೇಳಲಾಗಿದೆ. ಅದಕ್ಕಾಗಿ ನಾನು ಅವರಿಗೆ ಕೇಡುಂಟಾಗುವಂತೆ ಮಾಡಿದೆ, ಒಡಂಬಡಿಕೆಯನ್ನು ಪಾಲಿಸಬೇಕೆಂದು ನಾನು ಅವರಿಗೆ ಆಜ್ಞಾಪಿಸಿದೆ ಆದರೆ ಅವರು ಪಾಲಿಸಲಿಲ್ಲ.”
ಯೆಹೋವನು ನನಗೆ, “ಯೆರೆಮೀಯನೇ, ಯೆಹೂದದ ಜನರೂ ಜೆರುಸಲೇಮಿನಲ್ಲಿ ವಾಸಮಾಡುವ ಜನರೂ ಒಳಸಂಚನ್ನು ಮಾಡಿದ್ದಾರೆ. 10 ಅವರು ತಮ್ಮ ಪೂರ್ವಿಕರು ಮಾಡಿದ ಪಾಪಗಳನ್ನೇ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನ್ನ ಸಂದೇಶವನ್ನು ಕೇಳಲು ಒಪ್ಪಲಿಲ್ಲ. ಅವರು ಬೇರೆ ದೇವರುಗಳನ್ನು ಅನುಸರಿಸಿ ಪೂಜಿಸಿದರು. ನಾನು ಅವರ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಯೆಹೂದ ಮತ್ತು ಇಸ್ರೇಲ್ ವಂಶದವರು ಮೀರಿದ್ದಾರೆ.”
11 ಯೆಹೋವನು ಹೇಳುತ್ತಾನೆ, “ನಾನು ಶೀಘ್ರವಾಗಿ ಯೆಹೂದದ ಜನರಿಗೆ ಏನಾದರೊಂದು ಭಯಂಕರ ಅನಾಹುತ ಸಂಭವಿಸುವಂತೆ ಮಾಡುತ್ತೇನೆ. ಅವರು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವದಿಲ್ಲ. ಅವರು ಪಶ್ಚಾತ್ತಾಪಪಡುವರು. ಅವರು ಸಹಾಯಕ್ಕಾಗಿ ನನಗೆ ಮೊರೆಯಿಡುವರು. ಆದರೆ ನಾನು ಅವರ ಮೊರೆಯನ್ನು ಕೇಳುವದಿಲ್ಲ. 12 ಯೆಹೂದದ ಪಟ್ಟಣಗಳ ಜನರು ಮತ್ತು ಜೆರುಸಲೇಮ್ ನಗರದ ಜನರು ತಮ್ಮ ವಿಗ್ರಹಗಳ ಹತ್ತಿರ ಹೋಗಿ ಸಹಾಯಕ್ಕಾಗಿ ಪ್ರಾರ್ಥಿಸುವರು. ಆ ವಿಗ್ರಹಗಳ ಮುಂದೆ ಅವರು ಧೂಪ ಹಾಕುವರು. ಆದರೆ ಕೇಡು ಬಂದಾಗ ಯೆಹೂದದ ಜನರಿಗೆ ಸಹಾಯಮಾಡಲು ಆ ವಿಗ್ರಹಗಳಿಗೆ ಸಾಧ್ಯವಾಗುವದಿಲ್ಲ.
13 “ಯೆಹೂದದ ಜನರೇ, ನೀವು ಅನೇಕ ವಿಗ್ರಹಗಳನ್ನು ಇಟ್ಟುಕೊಂಡಿದ್ದೀರಿ. ಯೆಹೂದದಲ್ಲಿ ಎಷ್ಟು ಪಟ್ಟಣಗಳಿವೆಯೋ, ಅಷ್ಟು ವಿಗ್ರಹಗಳಿವೆ. ತುಚ್ಛ ದೇವರಾದ ಬಾಳನನ್ನು ಪೂಜಿಸಲು ನೀವು ಅನೇಕ ಬಲಿಪೀಠಗಳನ್ನು ಕಟ್ಟಿಕೊಂಡಿದ್ದೀರಿ. ಜೆರುಸಲೇಮಿನಲ್ಲಿ ಎಷ್ಟು ಬೀದಿಗಳಿವೆಯೋ ಅಷ್ಟು ಬಲಿಪೀಠಗಳಿವೆ.
14 “ಯೆರೆಮೀಯನೇ, ಈ ಯೆಹೂದದ ಜನರಿಗಾಗಿ ಬೇಡಿಕೊಳ್ಳಬೇಡ. ಅವರಿಗಾಗಿ ಮೊರೆಯಿಡಬೇಡ. ಅವರಿಗಾಗಿ ಪ್ರಾರ್ಥನೆ ಮಾಡಿದರೂ ನಾನು ಕೇಳುವದಿಲ್ಲ. ಆ ಜನರು ತೊಂದರೆಯನ್ನು ಅನುಭವಿಸುವರು. ಆಗ ಅವರು ಸಹಾಯಕ್ಕಾಗಿ ನನಗೆ ಮೊರೆಯಿಡುವರು. ಆದರೆ ನಾನು ಕೇಳುವದಿಲ್ಲ.
 
15 “ನನ್ನ ಪ್ರೇಯಸಿ (ಯೆಹೂದ) ನನ್ನ ಪವಿತ್ರ ಆಲಯದಲ್ಲಿ ಏಕೆ ಇದ್ದಾಳೆ?
ಇಲ್ಲಿ ಇರಲು ಅವಳಿಗೆ ಅಧಿಕಾರವಿಲ್ಲ. ಅವಳು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದಾಳೆ.
ಯೆಹೂದವೇ, ಹರಕೆಗಳಿಂದ ಮತ್ತು ಪ್ರಾಣಿಗಳ ಬಲಿಯಿಂದ ನಿನ್ನ ವಿನಾಶವನ್ನು ತಡೆಯಬಹುದೆಂದು ತಿಳಿದುಕೊಂಡಿರುವಿಯಾ?
ನನಗೆ ಹೋಮವನ್ನು ಅರ್ಪಿಸಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದೆಂದು ತಿಳಿದುಕೊಂಡಿರುವಿಯಾ?”
 
16 “ಯೆಹೋವನು ನಿನಗೆ
‘ನೋಡಲು ಸುಂದರವಾದ ಹಸಿರು ಆಲೀವ್ ಮರ ಎಂದು’ ಹೆಸರು ಕೊಟ್ಟನು.
ಆದರೆ ಯೆಹೋವನು ಬಿರುಗಾಳಿ ಬೀಸಿ ಆ ಮರಕ್ಕೆ ಬೆಂಕಿ ಇಡುವನು.
ಆಗ ಅದರ ಕೊಂಬೆಗಳು ಸುಟ್ಟುಹೋಗುವವು.
17 ಸರ್ವಶಕ್ತನಾದ ಯೆಹೋವನು ನಿಮ್ಮನ್ನು ನೆಟ್ಟನು.
ನಿಮಗೆ ಕೇಡು ಬರುವದೆಂದು ಆತನು ಸಾರಿರುವನು.
ಏಕೆಂದರೆ ಇಸ್ರೇಲ್ ವಂಶವೂ
ಯೆಹೂದ ವಂಶವೂ ದುಷ್ಕೃತ್ಯಗಳನ್ನು ಮಾಡಿವೆ.
ಬಾಳನಿಗೆ ಹೋಮವನ್ನರ್ಪಿಸಿ
ನನಗೆ ಕೋಪ ಬರುವಂತೆ ಮಾಡಿವೆ.”
ಯೆರೆಮೀಯನ ವಿರುದ್ಧ ಒಳಸಂಚು
18 ಅನಾತೋತಿನ* ಅನಾತೋತ್ ಯೆರೆಮೀಯನ ಸ್ವಂತ ಊರು. ಅವನ ವಿರುದ್ಧವಾಗಿ ಹೊಂಚುಹಾಕುತ್ತಿದ್ದ ಜನರಲ್ಲಿ ಅವನ ಸಂಬಂಧಿಕರೂ ಸೇರಿದ್ದರು. ಜನರು ನನ್ನ ವಿರುದ್ಧ ಮಾಡುತ್ತಿರುವ ಕುತಂತ್ರವನ್ನೂ ಮಾಡುವ ಕೃತ್ಯಗಳನ್ನೂ ಯೆಹೋವನು ನನಗೆ ತೋರಿಸಿದನು. ಆದ್ದರಿಂದ ಅವರು ನನ್ನ ವಿರೋಧಿಗಳೆಂದು ನಾನು ತಿಳಿದುಕೊಂಡೆನು. 19 ಜನರು ನನ್ನ ವಿರುದ್ಧ ಕೆಲಸ ಮಾಡುತ್ತಿದ್ದಾರೆಂಬುದನ್ನು ಯೆಹೋವನು ನನಗೆ ತೋರಿಸುವ ಮುಂಚೆ ನಾನು ವಧೆಗಾಗಿ ತೆಗೆದುಕೊಂಡು ಹೋದ ಸಾಧುಕುರಿಯಂತೆ ಇದ್ದೆನು. ಅವರು ನನ್ನ ವಿರೋಧಿಗಳೆಂದು ನಾನು ತಿಳಿದುಕೊಂಡಿರಲಿಲ್ಲ. ಅವರು ನನ್ನ ಬಗ್ಗೆ ಹೀಗೆ ಹೇಳುತ್ತಿದ್ದರು: “ಮರವನ್ನು ಮತ್ತು ಅದರ ಫಲಗಳನ್ನು ನಾಶಮಾಡೋಣ; ಅವನನ್ನು ಕೊಂದುಬಿಡೋಣ; ಜನರು ಅವನನ್ನು ಮರೆತುಬಿಡುವರು.” 20 ಆದರೆ ಯೆಹೋವನೇ, ನೀನು ನ್ಯಾಯಪರನಾದ ತೀರ್ಪುಗಾರ. ಜನರ ಹೃದಯವನ್ನು ಮತ್ತು ಬುದ್ಧಿಯನ್ನು ಹೇಗೆ ಪರೀಕ್ಷಿಸಬೇಕೆಂದು ನಿನಗೆ ಗೊತ್ತು. ನಾನು ನನ್ನ ವಾದವನ್ನು ನಿನ್ನ ಮುಂದೆ ಮಂಡಿಸುತ್ತೇನೆ ಮತ್ತು ನೀನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡು ಎಂದು ಅರಿಕೆ ಮಾಡಿಕೊಳ್ಳುತ್ತೇನೆ.
21 ಅನಾತೋತಿನ ಜನರು ಯೆರೆಮೀಯನನ್ನು ಕೊಲೆ ಮಾಡಬೇಕೆಂದು ಯೋಚಿಸುತ್ತಿದ್ದರು. ಆ ಜನರು ಯೆರೆಮೀಯನಿಗೆ, “ಯೆಹೋವನ ಹೆಸರಿನಿಂದ ನೀನು ಪ್ರವಾದಿಸಬೇಡ, ನೀನು ಹಾಗೆ ಮಾಡಿದರೆ ನಾವು ನಿನ್ನ ಕೊಲೆ ಮಾಡುವೆವು” ಎಂದರು. ಅನಾತೋತಿನ ಆ ಜನರ ಬಗ್ಗೆ ಯೆಹೋವನು ಒಂದು ನಿರ್ಣಯವನ್ನು ತೆಗೆದುಕೊಂಡನು. 22 ಸರ್ವಶಕ್ತನಾದ ಯೆಹೋವನು, “ನಾನು ಕೂಡಲೇ ಅನಾತೋತಿನ ಜನರನ್ನು ದಂಡಿಸುವೆನು. ಅವರ ಯುವಕರೆಲ್ಲ ಯುದ್ಧದಲ್ಲಿ ಮಡಿದು ಹೋಗುವರು. ಅವರ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಹಸಿವಿನಿಂದ ಸತ್ತುಹೋಗುವರು. 23 ಅನಾತೋತ್ ನಗರದಲ್ಲಿ ಒಬ್ಬನೂ ಉಳಿಯುವುದಿಲ್ಲ; ಯಾರೂ ಬಂದುಕುವದಿಲ್ಲ. ನಾನು ಅವರನ್ನು ದಂಡಿಸುತ್ತೇನೆ. ಅವರಿಗೆ ಏನಾದರೂ ಕೇಡಾಗುವಂತೆ ಮಾಡುತ್ತೇನೆ” ಎಂದು ಹೇಳಿದನು.

*11:18: ಅನಾತೋತ್ ಯೆರೆಮೀಯನ ಸ್ವಂತ ಊರು. ಅವನ ವಿರುದ್ಧವಾಗಿ ಹೊಂಚುಹಾಕುತ್ತಿದ್ದ ಜನರಲ್ಲಿ ಅವನ ಸಂಬಂಧಿಕರೂ ಸೇರಿದ್ದರು.