49
ಅಮ್ಮೋನಿನ ಬಗ್ಗೆ ಸಂದೇಶ
ಈ ಸಂದೇಶ ಅಮ್ಮೋನ್ಯರನ್ನು ಕುರಿತದ್ದು. ಯೆಹೋವನು ಹೀಗೆ ಹೇಳಿದನು:
 
“ಅಮ್ಮೋನ್ಯರೇ, ಇಸ್ರೇಲಿನ ಜನರಿಗೆ ಮಕ್ಕಳಿಲ್ಲವೆಂದು
ನೀವು ತಿಳಿದುಕೊಂಡಿರುವಿರೇನು?
ತಂದೆತಾಯಿಗಳು ಸತ್ತಮೇಲೆ ಭೂಮಿಯನ್ನು ತೆಗೆದುಕೊಳ್ಳುವದಕ್ಕೆ
ಅವರ ವಾರಸುದಾರರು ಇಲ್ಲವೆಂದು ನೀವು ತಿಳಿದುಕೊಂಡಿರುವಿರೇನು?
ಅದಕ್ಕಾಗಿಯೇ ಮಲ್ಕಾಮ್ ದೇವತೆಯು ಗಾದನ ಸೀಮೆಯನ್ನು ಸ್ವಾಧೀನ ಮಾಡಿಕೊಂಡಳೇ?”
 
ಯೆಹೋವನು ಹೀಗೆನ್ನುತ್ತಾನೆ: “ಅಮ್ಮೋನಿನ ರಬ್ಬಾ ನಿವಾಸಿಗಳು
ಯುದ್ಧದ ಧ್ವನಿಗಳನ್ನು ಕೇಳುವ ಕಾಲ ಬರಲಿದೆ.
ಅಮ್ಮೋನಿನ ರಬ್ಬಾ ನಾಶವಾಗಿ ಹಾಳಾದ ಕಟ್ಟಡಗಳ ಗುಡ್ಡವಾಗುವುದು.
ಅದರ ಸುತ್ತಮುತ್ತಲಿನ ಪಟ್ಟಣಗಳನ್ನು ಸುಟ್ಟುಹಾಕಲಾಗುವುದು.
ಆ ಜನರು ಇಸ್ರೇಲರಿಗೆ ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಒತ್ತಾಯಿಸಿದರು.
ಆದರೆ ಇಸ್ರೇಲರು ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಅವರನ್ನು ಒತ್ತಾಯಿಸುವರು.”
ಯೆಹೋವನು ಹೀಗೆನ್ನುತ್ತಾನೆ:
 
“ಹೆಷ್ಬೋನಿನ ಜನರೇ, ಗೋಳಾಡಿರಿ;
ಏಕೆಂದರೆ ಆಯಿ ಎಂಬ ಪಟ್ಟಣ ನಾಶವಾಯಿತು.
ರಬ್ಬಾದ ಸ್ತ್ರೀಯರೇ, ಅಮ್ಮೋನಿನ ಸ್ತ್ರೀಯರೇ, ಗೋಳಾಡಿರಿ.
ದುಃಖಸೂಚಕ ವಸ್ತ್ರಗಳನ್ನು ಧರಿಸಿಕೊಂಡು ಗೋಳಾಡಿರಿ.
ರಕ್ಷಣೆಗಾಗಿ ನಗರಕ್ಕೆ ಓಡಿಹೋಗಿರಿ.
ಏಕೆಂದರೆ ನಿಮ್ಮ ಶತ್ರುಗಳು ಬರುತ್ತಿದ್ದಾರೆ.
ಅವರು ಮಲ್ಕಾಮ್ ದೇವತೆಯನ್ನು ತೆಗೆದುಕೊಂಡು ಹೋಗುತ್ತಾರೆ.
ಶತ್ರುಗಳು ಮಲ್ಕಾಮ್ ದೇವತೆಯ ಯಾಜಕರನ್ನೂ ಪ್ರಧಾನರನ್ನೂ ತೆಗೆದುಕೊಂಡು ಹೋಗುವರು.
ನೀನು ನಿನ್ನ ಬಲದ ಬಗ್ಗೆ ಜಂಬ ಕೊಚ್ಚಿಕೊಳ್ಳುತ್ತಿರುವೆ,
ಆದರೆ ನೀನು ನಿನ್ನ ಬಲವನ್ನು ಕಳೆದುಕೊಳ್ಳುತ್ತಿರುವೆ.
ನಿನ್ನ ಹಣ ನಿನ್ನನ್ನು ರಕ್ಷಿಸುವದೆಂದು ನೀನು ನಂಬಿರುವೆ.
ಯಾರೂ ನಿನ್ನ ಮೇಲೆ ಧಾಳಿಮಾಡುವ ವಿಚಾರ ಸಹ ಇಟ್ಟುಕೊಂಡಿಲ್ಲವೆಂದು ನೀನು ತಿಳಿದುಕೊಂಡಿರುವೆ.”
ಆದರೆ ಸರ್ವಶಕ್ತನಾದ ಯೆಹೋವನು ಹೀಗೆನ್ನುವನು,
“ನಾನು ಎಲ್ಲೆಡೆಗಳಿಂದಲೂ ನಿಮಗೆ ಆಪತ್ತುಗಳನ್ನು ತರುವೆನು.
ನೀವೆಲ್ಲರೂ ಭಯದಿಂದ ಓಡಿಹೋಗುವಿರಿ.
ಯಾರೂ ನಿಮ್ಮನ್ನು ಪುನಃ ಒಂದಡೆ ಸೇರಿಸಲಾರರು.”
 
“ಅಮ್ಮೋನ್ಯರನ್ನು ಸೆರೆಯಾಳುಗಳನ್ನಾಗಿ ಕೊಂಡೊಯ್ಯಲಾಗುವುದು. ಆದರೆ ಅಮ್ಮೋನ್ಯರನ್ನು ನಾನು ಪುನಃ ಹಿಂದಕ್ಕೆ ಕರೆತರುವ ಕಾಲ ಬರುವದು.” ಇದು ಯೆಹೋವನ ನುಡಿ.
ಎದೋಮಿನ ಬಗ್ಗೆ ಸಂದೇಶ
ಈ ಸಂದೇಶ ಎದೋಮನ್ನು ಕುರಿತದ್ದು. ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:
 
“ತೇಮಾನ್ ಪಟ್ಟಣನಿವಾಸಿಗಳಲ್ಲಿ ಈಗ ಬುದ್ಧಿ ಉಳಿದಿಲ್ಲವೇ?
ಎದೋಮಿನ ವಿವೇಕಿಗಳು ಒಳ್ಳೆಯ ಸಲಹೆಗಳನ್ನು ಕೊಡಲು ಸಮರ್ಥರಾಗಿಲ್ಲವೇ?
ಅವರು ತಮ್ಮ ಜ್ಞಾನವನ್ನು ಕಳೆದುಕೊಂಡರೇ?
ದೆದಾನಿನ ನಿವಾಸಿಗಳೇ, ಓಡಿಹೋಗಿರಿ, ಅಡಗಿಕೊಳ್ಳಿರಿ;
ಏಕೆಂದರೆ ಏಸಾವನು* ಏಸಾವ ಯಾಕೋಬನ ಅವಳಿ ಸಹೋದರ. ಆದರೆ ಇಲ್ಲಿ ಎದೋಮ್ ಎಂದರ್ಥ. ಏಕೆಂದರೆ ಎದೋಮಿನ ಜನರು ಏಸಾವನ ವಂಶಜರು. ಮಾಡಿದ ತಪ್ಪಿಗಾಗಿ ನಾನು ಅವನನ್ನು ದಂಡಿಸುವೆನು.
 
“ಕೆಲಸಗಾರರು ನಿಮ್ಮ ದ್ರಾಕ್ಷಿತೋಟಕ್ಕೆ ಬಂದು ದ್ರಾಕ್ಷಿಯನ್ನು ಕೀಳುವರು;
ಆದರೆ ಬಳ್ಳಿಯಲ್ಲಿ ಕೆಲವು ದ್ರಾಕ್ಷಿಗಳನ್ನು ಬಿಡುವರು;
ರಾತ್ರಿಯಲ್ಲಿ ಕಳ್ಳರು ಬಂದರೆ
ಅವರು ತಮಗೆ ಬೇಕಾದಷ್ಟನ್ನು ಮಾತ್ರ ತೆಗೆದುಕೊಳ್ಳುತ್ತಾರೆ.
10 ಆದರೆ ಏಸಾವನಿಂದ ನಾನು ಎಲ್ಲವನ್ನು ಕಿತ್ತುಕೊಳ್ಳುವೆನು.
ಅವನು ಅಡಗಿಕೊಳ್ಳುವ ಎಲ್ಲಾ ಸ್ಥಳಗಳನ್ನು ನಾನು ಪತ್ತೆ ಹಚ್ಚುವೆನು.
ಅವನು ನನ್ನ ಕಣ್ಣು ತಪ್ಪಿಸಲು ಸಾಧ್ಯವಿಲ್ಲ.
ಅವನ ಮಕ್ಕಳು, ಬಂಧುಗಳು ಮತ್ತು ನೆರೆಹೊರೆಯವರು ಸತ್ತುಹೋಗುವರು.
11 ನಿನ್ನ ಅನಾಥಮಕ್ಕಳನ್ನು ನಾನು ಸಂರಕ್ಷಿಸುವೆನು.
ನಿನ್ನ ವಿಧವೆಯರು ನನ್ನಲ್ಲಿ ಭರವಸೆ ಇಡಲಿ.”
 
12 ಯೆಹೋವನು ಹೀಗೆನ್ನುತ್ತಾನೆ: “ಕೆಲವು ಜನರು ದಂಡನೆಗೆ ಅರ್ಹರಾಗಿರುವದಿಲ್ಲ. ಆದರೂ ಅವರು ಕಷ್ಟ ಅನುಭವಿಸುವರು. ಎದೋಮೇ, ನೀನು ದಂಡನೆಗೆ ಯೋಗ್ಯಳಾಗಿರುವೆ. ಆದ್ದರಿಂದ ನಿಜವಾಗಿಯೂ ನಿನ್ನನ್ನು ದಂಡಿಸಲಾಗುವುದು. ನಿನಗೆ ಸಿಗಬೇಕಾದ ದಂಡನೆಯಿಂದ ನೀನು ತಪ್ಪಿಸಿಕೊಳ್ಳಲಾರೆ. ನಿನ್ನನ್ನು ದಂಡಿಸಲಾಗುವುದು.” 13 ಯೆಹೋವನು ಹೀಗೆನ್ನುತ್ತಾನೆ, “ನನ್ನ ಸಬಸಾಮರ್ಥ್ಯದಿಂದ ನಾನು ಈ ಪ್ರಮಾಣ ಮಾಡುವೆನು. ನಾನು ಆಣೆಯಿಟ್ಟು ಹೇಳುವೆನು. ಬೊಚ್ರ ನಗರವನ್ನು ನಾಶಮಾಡಲಾಗುವುದು. ಆ ನಗರ ಒಂದು ಹಾಳು ದಿಬ್ಬವಾಗುವುದು. ಬೇರೆ ನಗರಗಳಿಗೆ ದುರ್ಗತಿ ಬರಲಿ ಎಂದು ಶಪಿಸುವಾಗ ಜನರು ‘ಬೊಚ್ರದಂತೆ ಹಾಳಾಗಲಿ’ ಎಂದು ಈ ನಗರದ ಉದಾಹರಣೆಯನ್ನು ಕೊಡುವರು. ಜನರು ಈ ನಗರವನ್ನು ಅವಮಾನ ಮಾಡುವರು. ಬೊಚ್ರ ನಗರದ ಸುತ್ತಮುತ್ತಲಿನ ಪಟ್ಟಣಗಳು ಶಾಶ್ವತವಾಗಿ ಹಾಳುಬೀಳುವವು.”
 
14 ಯೆಹೋವನ ಒಂದು ಸಂದೇಶವನ್ನು ಕೇಳಿದೆ.
ಯೆಹೋವನು ಎಲ್ಲಾ ಜನಾಂಗಗಳಿಗೆ ಸಂದೇಶವಾಹಕರನ್ನು ಕಳುಹಿಸಿದ್ದನು.
ಆ ಸಂದೇಶ ಹೀಗಿದೆ:
“ನಿಮ್ಮ ಸೈನ್ಯಗಳನ್ನು ಒಂದಡೆ ಸೇರಿಸಿರಿ.
ಯುದ್ಧಕ್ಕೆ ಸಿದ್ಧರಾಗಿರಿ.
ಎದೋಮ್ ಜನಾಂಗದ ವಿರುದ್ಧ ದಂಡಯಾತ್ರೆ ಮಾಡಿರಿ.
15 ಎದೋಮೇ, ನಾನು ನಿನಗೆ ಪ್ರಮುಖನಾಗಲು ಬಿಡುವುದಿಲ್ಲ.
ಪ್ರತಿಯೊಬ್ಬರು ನಿನ್ನನ್ನು ದ್ವೇಷಿಸುವರು.
16 ಎದೋಮೇ, ನೀನು ಬೇರೆ ಜನಾಂಗಗಳನ್ನು ಹೆದರಿಸಿದೆ.
ಆದ್ದರಿಂದ ನೀನು ನಿನ್ನನ್ನೇ ಪ್ರಮುಖನೆಂದು ಭಾವಿಸಿಕೊಂಡೆ.
ಆದರೆ ಅದು ನಿನ್ನ ಮೂರ್ಖತನ.
ನಿನ್ನ ಅಹಂಭಾವ ನಿನಗೆ ಮೋಸಮಾಡಿದೆ.
ಎದೋಮೇ, ನೀನು ಎತ್ತರದ ಬೆಟ್ಟಗಳಲ್ಲಿರುವೆ.
ಬೆಟ್ಟಗುಡ್ಡಗಳಿಂದ ರಕ್ಷಿತವಾದ ಸ್ಥಳಗಳಲ್ಲಿ ನೀನು ವಾಸಿಸುವೆ.
ಆದರೆ ರಣಹದ್ದು ಗೂಡುಕಟ್ಟುವಷ್ಟು ಎತ್ತರದ ಸ್ಥಳದಲ್ಲಿ ನೀನು ಮನೆಕಟ್ಟಿದರೂ ನಾನು ನಿನ್ನನ್ನು ಹಿಡಿಯುತ್ತೇನೆ.
ಅಲ್ಲಿಂದ ನಿನ್ನನ್ನು ಕೆಳಗೆ ತರುತ್ತೇನೆ.”
ಇದು ಯೆಹೋವನ ನುಡಿ.
 
17 “ಎದೋಮನ್ನು ನಾಶಮಾಡಲಾಗುವುದು.
ಹಾಳಾದ ನಗರಗಳನ್ನು ಕಂಡು ಜನರು ಬೆರಗಾಗುವರು.
ನಾಶವಾದ ನಗರಗಳನ್ನು ಕಂಡು ಜನರು ಆಶ್ಚರ್ಯಚಕಿತರಾಗಿ ಸಿಳ್ಳುಹಾಕುವರು.
18 ಸೊದೋಮ್ ಗೊಮೋರನಗರಗಳಂತೆಯೂ ಅವುಗಳ ಸುತ್ತಲಿನ ಪಟ್ಟಣಗಳಂತೆಯೂ ಎದೋಮ್ ನಾಶವಾಗುವುದು.
ಅಲ್ಲಿ ಯಾರೂ ವಾಸಮಾಡಲಾರರು”
ಯೆಹೋವನು ಹೀಗೆನ್ನುತ್ತಾನೆ:
 
19 “ಜೋರ್ಡನ್ ನದಿಯ ಸಮೀಪದ ದಟ್ಟವಾದ ಕಾಡಿನಿಂದ ಫಕ್ಕನೆ ಒಂದು ಸಿಂಹ ಬರುವದು. ಅದು ಹೊಲಗಳಲ್ಲಿದ್ದ ಜನರ ದನಕುರಿಗಳ ಹಟ್ಟಿಗಳಿಗೆ ನುಗ್ಗುವುದು. ನಾನು ಆ ಸಿಂಹದಂತೆ ಇದ್ದೇನೆ. ನಾನು ಎದೋಮ್ ನಗರಕ್ಕೆ ಹೋಗಿ ಆ ಜನರನ್ನು ಹೆದರಿಸುವೆನು; ಅವರು ಓಡಿಹೋಗುವಂತೆ ಮಾಡುವೆನು. ಅವರ ತರುಣರಲ್ಲಿ ಯಾರೂ ನನ್ನನ್ನು ತಡೆಯಲಾರರು. ನನ್ನತೆ ಯಾರೂ ಇಲ್ಲ. ಯಾರೂ ನನ್ನನ್ನು ಪ್ರತಿಭಟಿಸುವದಿಲ್ಲ. ಅವರ ನಾಯಕರಲ್ಲಿ ಯಾರೂ ನನ್ನ ವಿರುದ್ಧ ನಿಲ್ಲುವದಿಲ್ಲ.”
 
20 ಎದೋಮ್ಯರಿಗೆ ಯೆಹೋವನು
ಮಾಡಬೇಕೆಂದಿರುವುದನ್ನು ಕೇಳಿರಿ.
ತೇಮಾನ್ಯರ ಬಗ್ಗೆ ಯೆಹೋವನು
ಏನು ನಿರ್ಧರಿಸಿದ್ದಾನೆಂಬುದನ್ನು ಕೇಳಿರಿ.
ಎದೋಮಿನ ಕುರಿಮರಿಗಳನ್ನು (ಜನರನ್ನು)
ಶತ್ರು ಎಳೆದುಕೊಂಡು ಹೋಗುವನು.
ಸಂಭವಿಸಿದ ಸಂಗತಿಯನ್ನು ನೋಡಿ
ಎದೋಮಿನ ಹುಲ್ಲುಗಾವಲುಗಳು ಬೆದರುವವು.
21 ಎದೋಮ್ಯರ ಪತನದ ಶಬ್ಧಕ್ಕೆ ಭೂಮಿಯು ನಡುಗುವುದು.
ಅವರ ಗೋಳಾಟದ ಧ್ವನಿಯು ಕೆಂಪು ಸಮುದ್ರದವರೆಗೂ ಕೇಳಿಸುವುದು.
 
22 ಯೆಹೋವನು ತಾನು ಎರಗಬೇಕಾದ ಪ್ರಾಣಿಯ ಮೇಲೆ ಹಾರಾಡುವ ರಣಹದ್ದಿನಂತೆ ಇರುವನು.
ಆತನು ಬೊಚ್ರ ನಗರದ ಮೇಲೆ ತನ್ನ ರೆಕ್ಕೆಗಳನ್ನು ಹರಡುವ ರಣಹದ್ದಿನಂತಿದ್ದಾನೆ.
ಆ ಸಮಯದಲ್ಲಿ ಎದೋಮಿನ ಸೈನಿಕರು ಭಯಪಡುವರು.
ಪ್ರಸವವೇದನೆಪಡುವ ಹೆಂಗಸಿನಂತೆ ಅವರು ಭಯದಿಂದ ಗೋಳಾಡುವರು.
ದಮಸ್ಕದ ವಿಷಯವಾಗಿ ದೈವೋಕ್ತಿ
23 ಈ ಸಂದೇಶವು ದಮಸ್ಕ ನಗರದ ಕುರಿತಾಗಿದೆ:
 
“ಹಮಾತ್ ಮತ್ತು ಅರ್ಪಾದ್ ನಗರಗಳು ಹೆದರಿಕೊಂಡಿವೆ.
ಅವು ಕೆಟ್ಟ ಸಮಾಚಾರವನ್ನು ಕೇಳಿದ್ದರಿಂದ ಹೆದರಿಕೊಂಡಿವೆ.
ಅವುಗಳು ನಿರಾಶೆಗೊಂಡಿವೆ.
ಅವು ಆತಂಕಪಡುತ್ತಿವೆ ಮತ್ತು ಭಯಪಡುತ್ತಿವೆ.
24 ದಮಸ್ಕ ನಗರವು ನಿಬರ್ಲವಾಗಿದೆ.
ಜನರು ಓಡಿಹೋಗಬಯಸುತ್ತಾರೆ,
ಜನರು ಗಾಬರಿಗೊಂಡಿದ್ದಾರೆ.
ಪ್ರಸವವೇದನೆಪಡುವ ಸ್ತ್ರೀಯಂತೆ
ಸಂಕಟಪಡುತ್ತಿದ್ದಾರೆ.
 
25 “ದಮಸ್ಕವು ಸಂತೋಷಭರಿತವಾದ ನಗರವಾಗಿದೆ.
ಜನರು ಇನ್ನೂ ಆ ‘ಮೋಜಿನ ನಗರವನ್ನು’ ಬಿಟ್ಟಿಲ್ಲ.
26 ಆದ್ದರಿಂದ ತರುಣರು ನಗರದ ಚೌಕಗಳಲ್ಲಿ ಮರಣಹೊಂದುವರು.
ಆ ಕಾಲದಲ್ಲಿ ದಮಸ್ಕದ ಎಲ್ಲಾ ಸೈನಿಕರು ಕೊಲ್ಲಲ್ಪಡುವರು.”
ಇದು ಸರ್ವಶಕ್ತನಾದ ಯೆಹೋವನ ನುಡಿ.
27 “ದಮಸ್ಕದ ಗೋಡೆಗಳಿಗೆ ನಾನು ಬೆಂಕಿ ಹಚ್ಚುವೆನು.
ಆ ಬೆಂಕಿಯು ಬೆನ್‌ಹದದನ ಭದ್ರವಾದ ಕೋಟೆಯನ್ನು ಸುಟ್ಟುಹಾಕುವುದು.”
ಕೇದಾರ ಮತ್ತು ಹಾಚೋರಿನ ಬಗ್ಗೆ ಸಂದೇಶ
28 ಈ ಸಂದೇಶವು ಕೇದಾರ್ ಕುಲವನ್ನೂ ಹಾಚೋರಿನ ಅಧಿಪತಿಗಳನ್ನೂ ಕುರಿತದ್ದು. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಅವರನ್ನು ಸೋಲಿಸಿದನು. ಯೆಹೋವನು ಹೀಗೆನ್ನುತ್ತಾನೆ:
 
“ಹೋಗಿ ಕೇದಾರ ಕುಲದವರ ಮೇಲೆ ಧಾಳಿ ಮಾಡಿರಿ.
ಪೂರ್ವದಿಕ್ಕಿನ ಜನರನ್ನು ನಾಶಮಾಡಿರಿ.
29 ಅವರ ಗುಡಾರಗಳನ್ನು ಮತ್ತು ಹಿಂಡುಗಳನ್ನು ತೆಗೆದುಕೊಂಡು ಹೋಗಲಾಗುವುದು.
ಅವರ ಗುಡಾರಗಳನ್ನು, ಅವರ ಎಲ್ಲಾ ವಸ್ತುಗಳನ್ನು ಎತ್ತಿಕೊಂಡು ಹೋಗಲಾಗುವುದು.
ಅವರ ಶತ್ರುಗಳು ಒಂಟೆಗಳನ್ನು ತೆಗೆದುಕೊಂಡು ಹೋಗುವರು.
‘ನಮ್ಮ ಸುತ್ತಲೂ ಭಯಂಕರ ಘಟನೆಗಳು ನಡೆಯುತ್ತಿವೆ’
ಎಂದು ತಮ್ಮತಮ್ಮಲ್ಲಿಯೇ ಕೂಗಿಕೊಳ್ಳುವರು.
30 ಹಾಚೋರಿನ ನಿವಾಸಿಗಳೇ, ಬೇಗನೆ ಓಡಿಹೋಗಿರಿ,
ಅಡಗಿಕೊಳ್ಳುವದಕ್ಕೆ ಒಂದು ಒಳ್ಳೆಯ ಸ್ಥಳವನ್ನು ಹುಡುಕಿಕೊಳ್ಳಿರಿ.”
ಇದು ಯೆಹೋವನ ಸಂದೇಶ.
“ನೆಬೂಕದ್ನೆಚ್ಚರನು ನಿಮ್ಮ ವಿರುದ್ಧ ಯೋಜನೆ ಮಾಡಿದ್ದಾನೆ.
ನಿಮ್ಮನ್ನು ಸೋಲಿಸಲು ಒಳ್ಳೆಯ ಸಂಚನ್ನು ಮಾಡಿದ್ದಾನೆ.
 
31 “ಒಂದು ಜನಾಂಗವು ಯಾರೂ ತಮ್ಮನ್ನು ಸೋಲಿಸಲಾರರು ಎಂದು ನೆಮ್ಮದಿಯಿಂದಲೂ ಸಮಾಧಾನದಿಂದಲೂ ಇದೆ.
ಅದು ತನ್ನ ರಕ್ಷಣೆಗಾಗಿ ಒಂದು ಕೋಟೆಯನ್ನಾಗಲಿ ಒಂದು ಬಾಗಿಲನ್ನಾಗಲಿ ಹೊಂದಿಲ್ಲ.
ಆ ಜನರು ಪ್ರತ್ಯೇಕವಾಗಿ ವಾಸವಾಗಿದ್ದಾರೆ.
ಆ ಜನಾಂಗದ ಮೇಲೆ ಧಾಳಿ ಮಾಡಿರಿ.” ಎಂದು ಯೆಹೋವನು ಹೇಳಿದನು.
32 “ವೈರಿಯು ಅವರ ಒಂಟೆಗಳನ್ನು ಮತ್ತು
ಅವರ ದನಗಳ ಮಂದೆಗಳನ್ನು ಅಪಹರಿಸುವನು.
ವೈರಿಯು ಅವರ ದೊಡ್ಡದೊಡ್ಡ ಮಂದೆಗಳನ್ನು ಅಪಹರಿಸುವನು.
ತಮ್ಮ ಗಡ್ಡದ ಕೂದಲಿನ ಮೂಲೆಗಳನ್ನು ಗಡ್ಡ … ಮೂಲೆಗಳನ್ನು ಯೆಹೂದ್ಯರು ತಮ್ಮ ಗಡ್ಡದ ಕೂದಲನ್ನು ವಿದೇಶಿಯರ ರೀತಿಯಲ್ಲಿ ಕತ್ತರಿಸಿಕೊಳ್ಳುತ್ತಿರಲಿಲ್ಲ. ನೋಡಿ ವಿಮೋಚನಕಾಂಡ 19:27. ಕತ್ತರಿಸಿಕೊಂಡ ಜನರನ್ನು ನಾನು ಭೂಮಂಡಲದ ಎಲ್ಲೆಡೆಗಳಲ್ಲಿ ಚದರಿಸುವೆನು.
ಎಲ್ಲಾ ಕಡೆಯಿಂದಲೂ ಅವರ ಮೇಲೆ ವಿಪತ್ತುಗಳನ್ನು ಬರಮಾಡುವೆನು.”
ಇದು ಯೆಹೋವನ ನುಡಿ.
33 “ಹಾಚೋರ್ ಪ್ರದೇಶವು ಕಾಡುನಾಯಿಗಳ ನಿವಾಸಸ್ಥಾನವಾಗುವುದು. ಅದು ಶಾಶ್ವತವಾಗಿ ಒಂದು ಬರಿದಾದ ಮರುಭೂಮಿಯಾಗುವುದು.
ಅಲ್ಲಿ ಯಾರೂ ವಾಸಮಾಡಲಾರರು.
ಆ ಸ್ಥಳದಲ್ಲಿ ಯಾವ ಮನುಷ್ಯನೂ ವಾಸಮಾಡುವದಿಲ್ಲ.”
ಏಲಾಮಿನ ಬಗ್ಗೆ ದೈವೋಕ್ತಿ
34 ಚಿದ್ಕೀಯನು ಯೆಹೂದದ ರಾಜನಾದ ಹೊಸದರಲ್ಲಿಯೇ ಪ್ರವಾದಿಯಾದ ಯೆರೆಮೀಯನು ಯೆಹೋವನಿಂದ ಒಂದು ಸಂದೇಶವನ್ನು ಪಡೆದನು. ಈ ಸಂದೇಶವು ಏಲಾಮ್ ಜನಾಂಗವನ್ನು ಕುರಿತದ್ದು.
 
35 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:
“ನಾನು ಅತಿ ಶೀಘ್ರದಲ್ಲಿ ಏಲಾಮಿನ ಬಿಲ್ಲನ್ನು ಮುರಿದುಹಾಕುವೆನು.
ಏಲಾಮಿಗೆ ಬಿಲ್ಲು ಬಹು ಮುಖ್ಯವಾದ ಆಯುಧವಾಗಿದೆ.
36 ನಾನು ಏಲಾಮಿನ ಮೇಲೆ ನಾಲ್ಕು ಗಾಳಿಗಳನ್ನು
ಆಕಾಶದ ನಾಲ್ಕು ಮೂಲೆಗಳಿಂದ ಬರಮಾಡುವೆನು.
ಆ ನಾಲ್ಕು ಗಾಳಿಗಳು ಬೀಸುವ ಎಲ್ಲಾ ಕಡೆಗಳಲ್ಲಿಯೂ
ಏಲಾಮ್ಯರನ್ನು ಚದುರಿಸುವೆನು.
ಏಲಾಮಿನ ಸೆರೆಯಾಳುಗಳು ಪ್ರತಿಯೊಂದು ರಾಷ್ಟ್ರಗಳಲ್ಲಿಯೂ ಸಿಕ್ಕುವರು.
37 ಅವರ ಶತ್ರುಗಳ ಕಣ್ಣೆದುರಿನಲ್ಲಿಯೇ
ನಾನು ಏಲಾಮನ್ನು ಚೂರುಚೂರು ಮಾಡುವೆನು.
ಏಲಾಮ್ಯರನ್ನು ಕೊಲ್ಲಬೇಕೆಂದಿರುವ ಜನರೆದುರಿಗೆ
ನಾನು ಎಲಾಮ್ಯರನ್ನು ಮುರಿದುಬಿಡುವೆನು.
ನಾನು ಅವರ ಮೇಲೆ ಭಯಂಕರವಾದ ವಿಪತ್ತುಗಳನ್ನು ತರುವೆನು.
ನನಗೆ ಎಷ್ಟು ಕೋಪ ಬಂದಿದೆ ಎಂಬುದನ್ನು ನಾನು ಅವರಿಗೆ ತೋರಿಸುವೆನು.”
ಇದು ಯೆಹೋವನ ನುಡಿ.
“ಏಲಾಮನ್ನು ಬೆನ್ನಟ್ಟಲು ನಾನೊಂದು ಖಡ್ಗವನ್ನು ಕಳುಹಿಸುವೆನು.
ನಾನು ಏಲಾಮ್ಯರನ್ನೆಲ್ಲ ಕೊಂದುಹಾಕುವವರೆಗೆ ಆ ಖಡ್ಗವು ಅವರನ್ನು ಬೆನ್ನಟ್ಟುವುದು.
38 ಏಲಾಮಿನ ಅಧಿಪತ್ಯ ನನಗೆ ಸೇರಿದ್ದು ಎಂಬುದನ್ನು ನಾನು ಏಲಾಮ್ಯರಿಗೆ ತೋರಿಸಿಕೊಡುವೆನು.
ನಾನು ಅಲ್ಲಿಯ ರಾಜನನ್ನು ಮತ್ತು ರಾಜನ ಅಧಿಕಾರಿಗಳನ್ನು ನಾಶಮಾಡುವೆನು.”
ಇದು ಯೆಹೋವನ ನುಡಿ.
39 “ಆದರೆ ಭವಿಷ್ಯದಲ್ಲಿ ನಾನು ಏಲಾಮಿಗೆ ಒಳ್ಳೆಯದನ್ನು ಮಾಡುವೆನು.”
ಇದು ಯೆಹೋವನ ನುಡಿ.
 

*49:8: ಏಸಾವ ಯಾಕೋಬನ ಅವಳಿ ಸಹೋದರ. ಆದರೆ ಇಲ್ಲಿ ಎದೋಮ್ ಎಂದರ್ಥ. ಏಕೆಂದರೆ ಎದೋಮಿನ ಜನರು ಏಸಾವನ ವಂಶಜರು.

49:32: ಗಡ್ಡ … ಮೂಲೆಗಳನ್ನು ಯೆಹೂದ್ಯರು ತಮ್ಮ ಗಡ್ಡದ ಕೂದಲನ್ನು ವಿದೇಶಿಯರ ರೀತಿಯಲ್ಲಿ ಕತ್ತರಿಸಿಕೊಳ್ಳುತ್ತಿರಲಿಲ್ಲ. ನೋಡಿ ವಿಮೋಚನಕಾಂಡ 19:27.