4
ಎಲೀಫಜನ ವಾದ
ಆಗ ಎಲೀಫಜನು ಹೀಗೆ ಉತ್ತರಿಸಿದನು:
 
“ಒಬ್ಬನು ನಿನ್ನೊಂದಿಗೆ ಮಾತಾಡತೊಡಗಿದರೆ ನಿನಗೆ ಬೇಸರವಾಗುವುದೇ?
ಸುಮ್ಮನಿರಲು ನನಗಂತೂ ಸಾಧ್ಯವಿಲ್ಲ.
ಯೋಬನೇ, ನೀನು ಅನೇಕರಿಗೆ ಉಪದೇಶಿಸಿರುವೆ.
ನೀನು ಬಲಹೀನನ ಕೈಗಳಿಗೆ ಶಕ್ತಿಯನ್ನು ಕೊಟ್ಟಿರುವೆ;
ಎಡವಿಬಿದ್ದವರನ್ನು ನಿನ್ನ ಮಾತುಗಳಿಂದ ಉದ್ಧರಿಸಿರುವೆ;
ಬಲಹೀನವಾದ ಮೊಣಕಾಲುಗಳನ್ನು ಪ್ರೋತ್ಸಾಹದಿಂದ ಬಲಗೊಳಿಸಿರುವೆ.
ಈಗಲಾದರೋ ನಿನಗೆ ಕೇಡು ಬಂದಿದೆ;
ಆದ್ದರಿಂದ ನೀನು ನಿರಾಶನಾಗಿರುವೆ.
ಕೇಡು ನಿನಗೆ ಬಡಿದಿರುವುದರಿಂದ
ಭ್ರಮೆಗೊಂಡಿರುವೆ.
ನೀನು ದೇವರಲ್ಲಿ ಭಯಭಕ್ತಿಯಿಂದಿರುವುದರಿಂದ
ಆತನಲ್ಲಿ ಭರವಸವಿಡು.
ನೀನು ನೀತಿವಂತನಾಗಿರುವುದರಿಂದ
ಅದೇ ನಿನ್ನ ನಿರೀಕ್ಷೆಯಾಗಿರಲಿ.
ಯೋಬನೇ, ಆಲೋಚಿಸು: ಎಂದಾದರೂ ನಿರಪರಾಧಿಯು ನಾಶವಾಗಿರುವನೇ?
ಎಂದಾದರೂ ಯಥಾರ್ಥವಂತರು ನಾಶವಾಗಿರುವರೇ?
ನಾನು ನೋಡಿರುವಂತೆ, ಅಧರ್ಮವನ್ನು ಮತ್ತು ಕೇಡನ್ನು ಬಿತ್ತುವವರು
ಅದನ್ನೇ ಕೊಯ್ಯುವರು.
ದೇವರ ಉಸಿರು ಅವರನ್ನು ಕೊಲ್ಲುತ್ತದೆ;
ಆತನ ಕೋಪದ ಗಾಳಿಯು ಅವರನ್ನು ನಾಶಮಾಡುತ್ತದೆ.
10 ದುಷ್ಟರು ಸಿಂಹಗಳಂತೆ ಗರ್ಜಿಸುತ್ತಾ ಗುರುಗುಟ್ಟುವರು.
ಆದರೆ ದೇವರು ದುಷ್ಟರನ್ನು ಸುಮ್ಮನಿರಿಸಿ, ಅವರ ಹಲ್ಲುಗಳನ್ನು
ಮುರಿದುಹಾಕುವನು.
11 ದುಷ್ಟರು ಆಹಾರವಿಲ್ಲದ ಸಿಂಹಗಳಂತಿದ್ದು ಸಾಯುವರು;
ಅವರ ಮಕ್ಕಳು ಚದರಿಹೋಗಿ ಅಳಿದುಹೋಗುವರು.
 
12 “ಒಂದು ಸಂದೇಶವು ನನಗೆ ರಹಸ್ಯವಾಗಿ ತಿಳಿಸಲ್ಪಟ್ಟಿತು;
ನನ್ನ ಕಿವಿಗಳಿಗೆ ಅದು ಗುಸುಗುಸು ಸದ್ದಾಗಿ ಕೇಳಿಬಂತು.
13 ಮನುಷ್ಯರಿಗೆ ಗಾಢನಿದ್ರೆ ಹತ್ತುವ ಸಮಯದಲ್ಲಿ
ರಾತ್ರಿಯ ಕನಸುಗಳಿಂದ ಯೋಚನೆಯಲ್ಲಿರುವಾಗ
14 ನನಗೆ ಎಲುಬುಗಳೆಲ್ಲಾ ನಡುಗುವಷ್ಟು
ಭಯಂಕರವಾದ ಭಯ ಉಂಟಾಯಿತು.
15 ಯಾವುದೋ ಒಂದು ಉಸಿರು ನನ್ನ ಮುಖಕ್ಕೆ ಸುಳಿಯಲು
ಮೈಯೆಲ್ಲಾ ರೋಮಾಂಚನಗೊಂಡಿತು.
16 ಯಾವುದೋ ಒಂದು ಆತ್ಮ
ನನ್ನ ಕಣ್ಣೆದುರಿನಲ್ಲಿ ಬಂದು ನಿಂತುಕೊಂಡಿತು;
ಅದು ಏನೆಂಬುದು ನನಗೆ ಗೊತ್ತಾಗಲಿಲ್ಲ.
ಸೂಕ್ಷ್ಮ ಧ್ವನಿಯೊಂದು ನನಗೆ ಕೇಳಿಬಂತು.
17 ಅದೇನೆಂದರೆ: ‘ದೇವರಿಗಿಂತಲೂ ನೀತಿವಂತನಾದ ಮನುಷ್ಯನಿರುವನೇ?
ಮನುಷ್ಯನು ತನ್ನ ಸೃಷ್ಟಿಕರ್ತನಿಗಿಂತಲೂ ಶುದ್ಧನಾಗಿರುವನೇ?
18 ದೇವರು ತನ್ನ ಪರಲೋಕದ ಸೇವಕರುಗಳಲ್ಲಿಯೂ ಭರವಸವಿಡುವುದಿಲ್ಲ.
ದೇವರು ತನ್ನ ದೂತರುಗಳಲ್ಲಿಯೂ ತಪ್ಪನ್ನು ಕಂಡುಹಿಡಿಯುವನು.
19 ಹೀಗಿರಲು ದೇವರು ಮನುಷ್ಯರಲ್ಲಿ ಎಷ್ಟೋ ತಪ್ಪುಗಳನ್ನು ಕಂಡುಹಿಡಿಯುವನು;
ಮನುಷ್ಯರು ಮಣ್ಣಿನ ಮನೆಗಳಲ್ಲಿ* ಮಣ್ಣಿನ ಮನೆ ಇದರರ್ಥ, ಮಾನವ ದೇಹ. ವಾಸಿಸುತ್ತಾರೆ.
ಈ ಮಣ್ಣಿನ ಮನೆಗಳ ಅಸ್ತಿವಾರಗಳು ಧೂಳಿನಲ್ಲಿವೆ.
ಅವರು ಹುಳಕ್ಕಿಂತಲೂ ಸುಲಭವಾಗಿ ಸಾವಿಗೀಡಾಗುವರು!
20 ಸೂರ್ಯೋದಯ ಮತ್ತು ಸೂರ್ಯಾಸ್ತಮಾನಗಳ ನಡುವೆ ಅವರು ನಜ್ಜುಗುಜ್ಜಾಗುವರು.
ಅವರು ಸತ್ತು ನಿತ್ಯ ನಾಶವಾಗುವುದನ್ನು ಯಾರೂ ಗಮನಿಸುವುದಿಲ್ಲ.
21 ಅವರ ಗುಡಾರಗಳ ಹಗ್ಗಗಳು ಬಿಚ್ಚಲ್ಪಡುವವು,
ಅವರು ಜ್ಞಾನವಿಲ್ಲದವರಾಗಿ ಸತ್ತುಹೋಗುವರು.’ ”
 

*4:19: ಮಣ್ಣಿನ ಮನೆ ಇದರರ್ಥ, ಮಾನವ ದೇಹ.