8
ಬಿಲ್ದದನ ವಾದ
ಬಳಿಕ ಶೂಹ ದೇಶದ ಬಿಲ್ದದನು ಉತ್ತರಿಸಿದನು:
 
“ಇನ್ನೆಷ್ಟುಕಾಲ ಹೀಗೆ ಮಾತಾಡುವೆ?
ನಿನ್ನ ಮಾತುಗಳು ಬೀಸುವ ಬಿರುಗಾಳಿಯಂತಿವೆ.
ದೇವರು ಅನ್ಯಾಯ ಮಾಡುವನೇ?
ಸರ್ವಶಕ್ತನಾದ ದೇವರು ನೀತಿಯನ್ನು ಡೊಂಕು ಮಾಡುವನೇ?
ನಿನ್ನ ಮಕ್ಕಳು ದೇವರಿಗೆ ವಿರೋಧವಾಗಿ ಪಾಪ ಮಾಡಿದ್ದರಿಂದ ಆತನು ಅವರನ್ನು ಶಿಕ್ಷಿಸಿದ್ದಾನೆ.
ಅವರ ಪಾಪಗಳಿಗಾಗಿ ಪ್ರತಿಫಲ ದೊರೆಯಿತು.
ಯೋಬನೇ, ಈಗಲಾದರೋ ದೇವರ ಕಡೆಗೆ ನೋಡು,
ಕರುಣೆತೋರುವಂತೆ ಸರ್ವಶಕ್ತನಾದ ದೇವರಿಗೆ ಪ್ರಾರ್ಥಿಸು.
ನೀನು ಶುದ್ಧನೂ ಒಳ್ಳೆಯವನೂ ಆಗಿದ್ದರೆ
ಆತನು ಬಂದು ನಿನಗೆ ಸಹಾಯ ಮಾಡುತ್ತಾನೆ;
ನಿನ್ನ ಕುಟುಂಬವನ್ನು ನಿನಗೆ ಮತ್ತೆ ದಯಪಾಲಿಸುತ್ತಾನೆ.
ಆಗ, ನೀನು ಮೊದಲು ಹೊಂದಿದ್ದೆಲ್ಲ ಅಲ್ಪವಾಗಿ ತೋರುವುದು;
ನಿನ್ನ ಭವಿಷ್ಯವು ಬಹು ಯಶಸ್ವಿಯಾಗುವುದು.
 
“ಪೂರ್ವಿಕರನ್ನು ವಿಚಾರಿಸಿ
ಅವರ ಪಿತೃಗಳು ಕಲಿತುಕೊಂಡದ್ದನ್ನು ತಿಳಿದುಕೊ.
ಯಾಕೆಂದರೆ, ನಾವು ಕೇವಲ ನಿನ್ನೆ ಹುಟ್ಟಿದವರಂತಿದ್ದೇವೆ.
ನಮಗೇನೂ ಗೊತ್ತಿಲ್ಲ.
ಭೂಮಿಯ ಮೇಲಿನ ನಮ್ಮ ದಿನಗಳು ನೆರಳಿನಂತೆ ಕ್ಷಣಿಕವಷ್ಟೇ.
10 ಅವರು ನಿನಗೆ ಉಪದೇಶಮಾಡಿ ಬುದ್ಧಿ ಹೇಳುವರು;
ತಾವು ಕಲಿತುಕೊಂಡದ್ದನ್ನು ನಿನಗೆ ಹೇಳಿಕೊಡುವರು.
 
11 “ಜಂಬುಗಿಡವು ಜವುಗುಮಣ್ಣಿಲ್ಲದೆ ಎತ್ತರವಾಗಿ ಬೆಳೆಯಬಲ್ಲದೇ?
ಜವುಗುಸಸ್ಯವು ನೀರಿಲ್ಲದೆ ಬೆಳೆಯಬಲ್ಲದೇ?
12 ನೀರು ಬತ್ತಿಹೋದರೆ ಅವು ಸಹ ಒಣಗಿಹೋಗುತ್ತವೆ.
ಅವು ತುಂಬ ಎಳೆಯದಾಗಿರುವುದರಿಂದ ಕತ್ತರಿಸಿ ಉಪಯೋಗಿಸಲಾಗದು.
13 ದೇವರನ್ನು ಮರೆಯುವವನು ಆ ಜವುಗು ಸಸ್ಯಗಳಂತೆಯೇ ಇರುವನು.
ದೇವರನ್ನು ಮರೆಯುವವನಿಗೆ ನಿರೀಕ್ಷೆಯೇ ಇಲ್ಲ.
14 ಅವನ ಭರವಸೆಯು ಬಹು ಬಲಹೀನವಾಗಿರುವುದು.
ಅವನು ಜೇಡರಬಲೆಯ ಮೇಲೆ ಭರವಸವಿಡುವನು.
15 ಅವನು ಜೇಡರಬಲೆಯನ್ನು ಒರಗಿಕೊಳ್ಳುವನು,
ಆದರೆ ಬಲೆಯು ಕಿತ್ತುಹೋಗುವುದು.
ಅವನು ಜೇಡರಬಲೆಯನ್ನು ಹಿಡಿದುಕೊಳ್ಳುವನು,
ಆದರೆ ಅದು ಅವನಿಗೆ ಆಧಾರ ನೀಡುವುದಿಲ್ಲ.
16 ಅವನು ಬೇಕಾದಷ್ಟು ನೀರನ್ನೂ ಬಿಸಿಲನ್ನೂ ಹೊಂದಿರುವ ಬಳ್ಳಿಯಂತಿರುವನು.
ಆ ಬಳ್ಳಿಯ ಕವಲುಗಳು ತೋಟದಲ್ಲೆಲ್ಲಾ ಹರಡಿಕೊಳ್ಳುತ್ತವೆ.
17 ಅದು ಕಲ್ಲುಕುಪ್ಪೆಯ ಸುತ್ತಲೂ ತನ್ನ ಬೇರುಗಳನ್ನು ಹೆಣೆದುಕೊಂಡು
ಕಲ್ಲುಗಳಲ್ಲಿ ಬೆಳೆಯಲು ಒಂದು ಸ್ಥಳಕ್ಕಾಗಿ ನೋಡುವುದು.
18 ಆದರೆ ಆ ತೋಟವು,
‘ನಾನು ನಿನ್ನನ್ನು ಮೊದಲು ನೋಡಿಯೇ ಇಲ್ಲ’ ಎಂದು ಹೇಳುತ್ತದೆ.
19 ಆದ್ದರಿಂದ ಆ ಬಳ್ಳಿ ಹೊಂದಿರುವ ಸಂತೋಷವೆಲ್ಲಾ ಅಷ್ಟೇ.
ಬಳಿಕ ಆ ಮಣ್ಣಿನಿಂದ ಇತರ ಸಸಿಗಳು ಬೆಳೆಯುತ್ತವೆ.
20 ಆದರೆ ದೇವರು ಒಬ್ಬ ನಿರಪರಾಧಿಯನ್ನೂ ಕೈಬಿಡುವುದಿಲ್ಲ.
ಆತನು ದುಷ್ಟರಿಗೆ ಸಹಾಯ ಮಾಡುವುದಿಲ್ಲ.
21 ದೇವರು ಇನ್ನು ಮೇಲೆ ನಿನ್ನ ಬಾಯನ್ನು ನಗೆಯಿಂದಲೂ
ನಿನ್ನ ತುಟಿಗಳನ್ನು ಉತ್ಸಾಹಧ್ವನಿಯಿಂದಲೂ ತುಂಬಿಸುವನು.
22 ಆದರೆ ನಿನ್ನನ್ನು ದ್ವೇಷಿಸುವವರಿಗೆ ದೇವರು ಅವಮಾನ ಮಾಡುವನು;
ದುಷ್ಟರ ಮನೆಗಳನ್ನು ನಾಶಮಾಡುವನು.”