9
ಯೋಬನ ವಾದ
ಬಳಿಕ ಯೋಬನು ಪ್ರತ್ಯುತ್ತರವಾಗಿ ಹೀಗೆಂದನು:
 
“ಹೌದು, ನೀನು ಹೇಳಿದ್ದು ಸತ್ಯವೇ ಸರಿ!
ಆದರೆ ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾಗಿರುವುದು ಹೇಗೆ?
ಒಬ್ಬನು ದೇವರೊಂದಿಗೆ ವಾದಿಸಬಯಸಿದರೆ,
ದೇವರ ಸಾವಿರ ಪ್ರಶ್ನೆಗಳಲ್ಲಿ ಮನುಷ್ಯನು ಒಂದಕ್ಕೂ ಉತ್ತರ ಕೊಡಲಾರನು.
ದೇವರ ಜ್ಞಾನವು ಅಗಾಧವಾದದ್ದು;
ಆತನ ಶಕ್ತಿಯು ಮಹತ್ವವಾದದ್ದು; ಯಾವನೂ ದೇವರಿಗೆ ವಿರೋಧವಾಗಿ ಜಯಗಳಿಸಲಾರನು.
ದೇವರು ಪರ್ವತಗಳನ್ನು ಅವುಗಳಿಗೇ ತಿಳಿಯದಂತೆ ಸರಿಸಿ ಕೋಪದಿಂದ ಅವುಗಳನ್ನು ಉರುಳಿಸುವನು.
ಆತನು ಭೂಮಿಯನ್ನು ಅದರ ಸ್ಥಳದೊಳಗಿಂದ ಕದಲಿಸುವನು;
ಅದರ ಅಸ್ತಿವಾರಗಳನ್ನು ನಡುಗಿಸುವನು.
ಆತನು ಆಜ್ಞಾಪಿಸಿದರೆ, ಆತನ ಆಜ್ಞೆಯಂತೆಯೇ ಸೂರ್ಯೋದಯವಾಗದು.
ನಕ್ಷತ್ರಗಳು ಪ್ರಕಾಶಿಸದಂತೆ ಆತನು ಅವುಗಳನ್ನು ಮುಚ್ಚಿಟ್ಟು ಮುದ್ರೆ ಹಾಕಬಲ್ಲನು.
ಆಕಾಶಮಂಡಲವನ್ನು ಸೃಷ್ಟಿಸಿದವನು ಆತನೇ.
ಆತನು ಭೋರ್ಗರೆಯುತ್ತಿರುವ ಸಮುದ್ರದ ಮೇಲೆ ನಡೆಯಬಲ್ಲನು.
 
“ಆತನೇ ಬೇರ್, ಒರೈಯನ್ ಮತ್ತು ಪ್ಲೈಯಡ್ಸ್* ಬೇರ್, ಒರೈಯನ್ ಮತ್ತು ಪ್ಲೈಯಡ್ಸ್ ಇವು ಸಪ್ತರ್ಷಿ, ಮೃಗಶಿರ ಮತ್ತು ಕೃತ್ತಿಕೆ ಎಂಬ ನಕ್ಷತ್ರಸಮೂಹಗಳು. ಎಂಬ ನಕ್ಷತ್ರಸಮೂಹಗಳನ್ನು ಸೃಷ್ಟಿಮಾಡಿದನು.
ದಕ್ಷಿಣ ಆಕಾಶದಲ್ಲಿ ನಕ್ಷತ್ರವ್ಯೂಹಗಳನ್ನು ಸೃಷ್ಟಿಸಿದವನು ಆತನೇ.
10 ಗ್ರಹಿಸಲಶಕ್ಯವಾದ ಅದ್ಭುತಕಾರ್ಯಗಳನ್ನೂ
ಅಸಂಖ್ಯಾತವಾದ ಮಹತ್ಕಾರ್ಯಗಳನ್ನೂ ಆತನು ಮಾಡುವನು.
11 ದೇವರು ನನ್ನ ಸಮೀಪದಲ್ಲಿ ಹಾದುಹೋದರೂ ನನಗೆ ಕಾಣಿಸದು;
ನನ್ನ ಮುಂದೆ ಹೋದರೂ ನನಗೆ ತಿಳಿಯದು.
12 ದೇವರೇ ತೆಗೆದುಕೊಳ್ಳುವುದಾದರೆ, ಆತನನ್ನು ತಡೆಯಬಲ್ಲವರು ಯಾರು?
‘ನೀನು ಏನು ಮಾಡುತ್ತಿರುವೆ’ ಎಂದು ಆತನನ್ನು ಕೇಳುವವರು ಯಾರು?
13 ದೇವರು ತನ್ನ ಕೋಪವನ್ನು ತಡೆಹಿಡಿದುಕೊಳ್ಳುವುದಿಲ್ಲ.
ರಹಬನ ಸಹಾಯಕರು ಸಹ ದೇವರ ಮುಂದೆ ಭಯದಿಂದ ಅಡ್ಡಬೀಳುವರು.
14 ಆದ್ದರಿಂದ ನಾನು ದೇವರೊಂದಿಗೆ ವಾದ ಮಾಡಲಾರೆ.
ಆತನಿಗೆ ಉತ್ತರ ಕೊಡುವುದಕ್ಕೂ ನಾನು ಅಶಕ್ತನಾಗಿರುವೆ.
15 ಯೋಬನಾದ ನಾನು ನಿರಪರಾಧಿಯಾಗಿದ್ದರೂ ಆತನಿಗೆ ಉತ್ತರವನ್ನು ಕೊಡಲಾರೆ.
ನನಗೆ ಕರುಣೆ ತೋರುವಂತೆ ನ್ಯಾಯಾಧಿಪತಿಯಾದ ದೇವರನ್ನು ಬೇಡಿಕೊಳ್ಳುವೆನು.
16 ನಾನು ಆತನಿಗೆ ಮೊರೆಯಿಟ್ಟಿದ್ದರೂ, ಆತನು ನನಗೆ ಉತ್ತರ ಕೊಟ್ಟಿದ್ದರೂ
ಈಗ ಆತನು ನನಗೆ ಕಿವಿಗೊಡುತ್ತಾನೆ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ.
17 ನನ್ನನ್ನು ಜಜ್ಜುವುದಕ್ಕಾಗಿ ದೇವರು ಬಿರುಗಾಳಿಗಳನ್ನು ಕಳುಹಿಸುವನು;
ನಿಷ್ಕಾರಣವಾಗಿ ನನಗೆ ಗಾಯಮಾಡುವನು.
18 ಉಸಿರೆಳೆದುಕೊಳ್ಳಲೂ ಬಿಡುವು ನೀಡದೆ
ಕಷ್ಟದ ಮೇಲೆ ಕಷ್ಟವನ್ನು ಕೊಡುವನು.
19 ಆತನನ್ನು ಸೋಲಿಸೋಣವೆಂದರೆ
ಆತನೇ ಬಲಿಷ್ಠನಾಗಿದ್ದಾನೆ;
ನ್ಯಾಯಾಲಯಕ್ಕೆ ಹೋಗೋಣವೆಂದರೆ
ಆತನನ್ನು ನ್ಯಾಯಾಲಯಕ್ಕೆ ಬರಮಾಡುವವನು ಯಾರು?
20 ನಾನು ನಿರಪರಾಧಿಯಾಗಿದ್ದರೂ ನನ್ನ ಬಾಯಿ ನನ್ನನ್ನು ಖಂಡಿಸುವುದು;
ನಾನು ನಿರ್ದೋಷಿಯಾಗಿದ್ದರೂ ನನ್ನ ಬಾಯಿ ನನ್ನನ್ನು ದೋಷಿಯೆಂದು ಹೇಳುವುದು.
21 ನಾನು ನಿರಪರಾಧಿಯಾಗಿದ್ದರೂ ನನ್ನ ಬಗ್ಗೆ ಚಿಂತಿಸುವುದಿಲ್ಲ;
ನನ್ನ ಜೀವಿತವನ್ನೇ ತುಚ್ಫೀಕರಿಸುವೆನು.
22 ‘ಜೀವಿತದಲ್ಲಿ ಎಲ್ಲರೂ ಒಂದೇ.
ಆದ್ದರಿಂದ ಆತನು ಅಪರಾಧಿಗಳನ್ನೂ ನಿರಪರಾಧಿಗಳನ್ನೂ ನಾಶಮಾಡುತ್ತಾನೆ’
ಎಂಬುದು ನನ್ನ ಆಲೋಚನೆ.
23 ಪಕ್ಕನೆ ಆಪತ್ತಿಗೊಳಗಾಗಿ ನಿರಪರಾಧಿಯು ಸತ್ತರೆ, ದೇವರು ಅವನನ್ನು ನೋಡುತ್ತಾ ನಗುವನೇ?
24 ದುಷ್ಟನು ಭೂಮಿಯನ್ನು ಆಕ್ರಮಿಸಿಕೊಂಡಾಗ, ದೇವರು ಅದನ್ನು ನ್ಯಾಯಾಧಿಪತಿಗಳಿಗೆ ಮರೆಮಾಡುವನೇ?
ಇದು ಸತ್ಯವಾಗಿದ್ದರೆ, ಇದನ್ನು ದೇವರಲ್ಲದೆ ಇನ್ಯಾರು ಮಾಡಿದರು?
 
25 “ನನ್ನ ದಿನಗಳು ಓಟಗಾರನಿಗಿಂತಲೂ ವೇಗವಾಗಿ ಹೋಗುತ್ತಿವೆ.
ಸುಖವಿಲ್ಲದ ನನ್ನ ದಿನಗಳು ಹಾರಿಹೋಗುತ್ತಿವೆ.
26 ಜಂಬುಗಿಡದಿಂದ ಮಾಡಿದ ದೋಣಿಗಳಂತೆಯೂ
ಹದ್ದು ತನ್ನ ಬೇಟೆಯ ಮೇಲೆ ಎರಗಲು ಹಾರಿಹೋಗುವಂತೆಯೂ
ನನ್ನ ದಿನಗಳು ವೇಗವಾಗಿ ಹೋಗುತ್ತಿವೆ.
 
27 “ನಾನು ದೂರು ಹೇಳುವುದಿಲ್ಲ.
ನನ್ನ ನೋವನ್ನು ಮರೆತು ನನ್ನ ಮುಖವನ್ನು ಮಾರ್ಪಡಿಸಿಕೊಂಡು ನಗುವೆನೆಂದರೆ,
28 ನನ್ನ ಎಲ್ಲಾ ಸಂಕಟಗಳಿಂದ ಇನ್ನೂ ಭಯಗೊಂಡಿರುವೆ.
ಯಾಕೆಂದರೆ ನನ್ನನ್ನು ಅಪರಾಧಿಯೆಂದು ದೇವರು ಹೇಳುತ್ತಿದ್ದಾನೆ.
29 ಅಪರಾಧಿಯೆಂದು ಈಗಾಗಲೇ ನನಗೆ ತೀರ್ಪಾಗಿದೆ.
ಹೀಗಿರಲು ನಾನೇಕೆ ವ್ಯರ್ಥ ಪ್ರಯತ್ನ ಮಾಡಲಿ?
30 ನಾನು ಹಿಮದಿಂದ ಸ್ನಾನಮಾಡಿದರೂ
ಸಾಬೂನಿನಿಂದ ಕೈತೊಳೆದುಕೊಂಡರೂ
31 ದೇವರು ನನ್ನನ್ನು ಮಣ್ಣಿನ ಗುಂಡಿಗೆ ತಳ್ಳಿ
ನನ್ನ ಬಟ್ಟೆಗಳಿಗೇ ನಾನು ಅಸಹ್ಯವಾಗುವಂತೆ ಮಾಡುವನು.
32 ದೇವರು ನನ್ನಂಥ ಮನುಷ್ಯನಲ್ಲ; ನಾನು ಆತನಿಗೆ ಉತ್ತರಿಸಲಾರೆ.
ನಾವು ನ್ಯಾಯಾಲಯದಲ್ಲಿ ಒಬ್ಬರನ್ನೊಬ್ಬರು ಸಂಧಿಸಲಾರೆವು.
33 ನಮ್ಮಿಬ್ಬರಿಗೆ ಮಧ್ಯಸ್ಥಗಾರನಿದ್ದರೆ, ನಮ್ಮಿಬ್ಬರ ಮೇಲೆ ಅಧಿಕಾರವುಳ್ಳವನಿದ್ದರೆ
ಎಷ್ಟೋ ಚೆನ್ನಾಗಿರುತ್ತಿತ್ತು. (ಆದರೆ ಅಂಥವರು ಯಾರೂ ಇಲ್ಲ.)
34 ದೇವರ ದಂಡವನ್ನು ತೆಗೆದುಹಾಕುವ ಮಧ್ಯಸ್ಥಗಾರನಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು.
ಆಗ ಆತನು ನನ್ನನ್ನು ಹೆದರಿಸುತ್ತಿರಲಿಲ್ಲ.
35 ಆಗ ನಾನು ಭಯವಿಲ್ಲದೆ ಮಾತಾಡುತ್ತಿದ್ದೆನು;
ಆದರೆ ಈಗ ನನಗೆ ಸಾಧ್ಯವೇ ಇಲ್ಲ.”
 

*9:9: ಬೇರ್, ಒರೈಯನ್ ಮತ್ತು ಪ್ಲೈಯಡ್ಸ್ ಇವು ಸಪ್ತರ್ಷಿ, ಮೃಗಶಿರ ಮತ್ತು ಕೃತ್ತಿಕೆ ಎಂಬ ನಕ್ಷತ್ರಸಮೂಹಗಳು.