11
ಚೋಫರನ ವಾದ
ಆಗ ನಾಮಾಥ ದೇಶದ ಚೋಫರನು ಯೋಬನಿಗೆ ಉತ್ತರಿಸಿದನು:
 
“ಮಾತುಗಳ ಈ ಪ್ರವಾಹಕ್ಕೆ ಯಾರಾದರೊಬ್ಬರು ಉತ್ತರ ಕೊಡಬೇಕು!
ಇಷ್ಟೆಲ್ಲಾ ಮಾತುಗಳು ಯೋಬನನ್ನು ನೀತಿವಂತನನ್ನಾಗಿ ಮಾಡುತ್ತವೆಯೋ? ಇಲ್ಲ!
ಯೋಬನೇ, ಅರ್ಥರಹಿತವಾದ ನಿನ್ನ ಮಾತುಗಳಿಗೆ
ನಮ್ಮಲ್ಲಿ ಉತ್ತರವೇ ಇಲ್ಲವೆಂದು ಆಲೋಚಿಸಿಕೊಂಡಿರುವೆಯಾ?
ನೀನು ದೇವರನ್ನು ಅಪಹಾಸ್ಯ ಮಾಡುವಾಗ
ಯಾರೂ ನಿನ್ನನ್ನು ಎಚ್ಚರಿಸುವುದಿಲ್ಲ ಎಂದುಕೊಂಡಿರುವಿಯಾ?
ಯೋಬನೇ, ನೀನು ದೇವರಿಗೆ,
‘ನನ್ನ ವಾದಗಳು ಸರಿಯಾಗಿವೆ,
ನಿನ್ನ ದೃಷ್ಟಿಯಲ್ಲಿ ನಾನು ಶುದ್ಧನಾಗಿರುವೆ’ ಎಂದು ಹೇಳಿದೆಯಲ್ಲವೇ?
ದೇವರು ನಿನಗೆ ಉತ್ತರ ನೀಡಿ ನಿನ್ನನ್ನು ತಪ್ಪಿತಸ್ಥನೆಂದು ಹೇಳಿದರೆ
ಎಷ್ಟೋ ಒಳ್ಳೆಯದು.
ಆತನು ನಿನಗೆ ಜ್ಞಾನದ ರಹಸ್ಯಗಳನ್ನು ತಿಳಿಸಿ
ಜ್ಞಾನಕ್ಕೆ ಎರಡು ಮುಖಗಳಿವೆ ಎಂದು ತೋರಿಸಿಕೊಟ್ಟರೆ ಎಷ್ಟೋ ಲೇಸು.
ದೇವರು ನಿನಗೆ ತಕ್ಕ ದಂಡನೆಯನ್ನು ವಿಧಿಸಿಲ್ಲವೆಂಬುದು
ನಿನಗೆ ತಿಳಿದಿರಲಿ.
 
“ನೀನು ದೇವರ ರಹಸ್ಯಗಳನ್ನು ಅರ್ಥಮಾಡಿಕೊಳ್ಳಬಲ್ಲೆಯಾ?
ಸರ್ವಶಕ್ತನಾದ ದೇವರ ಜ್ಞಾನದ ಮೇರೆಗಳನ್ನು ತಿಳಿದುಕೊಳ್ಳಬಲ್ಲೆಯಾ?
ಆತನ ಜ್ಞಾನವು ಆಕಾಶಕ್ಕಿಂತಲೂ ಉನ್ನತವಾಗಿದೆ; ಅದನ್ನು ಅರ್ಥಮಾಡಿಕೊಳ್ಳಲು ನಿನಗೆ ಸಾಧ್ಯವೇ ಇಲ್ಲ.
ಅದು ಮೃತ್ಯುಲೋಕಕ್ಕಿಂತಲೂ ಆಳವಾಗಿದೆ. ನೀನು ಅದನ್ನು ಗ್ರಹಿಸಿಕೊಳ್ಳಲಾರೆ.
ದೇವರ ಜ್ಞಾನವು ಭೂಮಿಗಿಂತಲೂ ಉದ್ದವಾಗಿದೆ;
ಸಮುದ್ರಕ್ಕಿಂತಲೂ ಅಗಲವಾಗಿದೆ.
 
10 “ದೇವರು ನಿನ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಎಳೆದುಕೊಂಡು ಬರುವುದಾದರೆ
ಆತನನ್ನು ತಡೆಯಬಲ್ಲವರು ಯಾರು?
11 ಅಯೋಗ್ಯರು ಯಾರೆಂಬುದು ದೇವರಿಗೆ ಚೆನ್ನಾಗಿ ಗೊತ್ತಿದೆ.
ಆತನು ಕೆಟ್ಟದ್ದನ್ನು ಕಂಡಾಗ ಗಮನಿಸುವನು.
12 ಕಾಡುಕತ್ತೆಯು ಮನುಷ್ಯನನ್ನು ಹೇಗೆ ಹೆರಲಾರದೋ
ಅದೇ ರೀತಿಯಲ್ಲಿ ದಡ್ಡನು ಎಂದಿಗೂ ಜ್ಞಾನಿಯಾಗಲಾರನು.
13 ಯೋಬನೇ, ನಿನ್ನ ಕೈಗಳನ್ನು ಮೇಲೆತ್ತಿ ದೇವರೊಬ್ಬನನ್ನೇ ಆರಾಧಿಸುವುದಕ್ಕಾಗಿ
ನಿನ್ನ ಹೃದಯವನ್ನು ಸಿದ್ಧಪಡಿಸಿಕೊ.
14 ನೀನು ಪಾಪವನ್ನು ಹಿಡಿದುಕೊಂಡಿದ್ದರೆ ಅದನ್ನು ನಿನ್ನಿಂದ ದೂರಮಾಡು.
ದುಷ್ಟತನವು ನಿನ್ನ ಗುಡಾರಗಳಲ್ಲಿ ವಾಸಿಸದಿರಲಿ.
15 ಆಗ ನೀನು ಖಂಡಿತವಾಗಿ ನಾಚಿಕೆಯಿಲ್ಲದೆ ತಲೆಯೆತ್ತುವೆ;
ಸ್ಥಿರವಾಗಿ ನಿಂತುಕೊಂಡು ನಿರ್ಭಯದಿಂದಿರುವೆ.
16 ಯೋಬನೇ, ಆಗ ನೀನು ನಿನ್ನ ಕಷ್ಟವನ್ನು ಮರೆತುಬಿಡುವೆ;
ಹರಿದುಹೋದ ನೀರನ್ನೋ ಎಂಬಂತೆ ನಿನ್ನ ಕಷ್ಟಗಳನ್ನು ಜ್ಞಾಪಿಸಿಕೊಳ್ಳುವೆ.
17 ನಿನ್ನ ಜೀವಿತವು ಮಧ್ಯಾಹ್ನದ ಸೂರ್ಯನಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿರುವುದು.
ನಿನ್ನ ಜೀವಿತದ ಕಾರ್ಗತ್ತಲೆಯ ತಾಸುಗಳು ಮುಂಜಾನೆಯ ಸೂರ್ಯನಂತೆ ಹೊಳೆಯುತ್ತವೆ.
18 ಯೋಬನೇ, ನಿನಗೆ ನಿರೀಕ್ಷೆಯಿರುವುದರಿಂದ ಸುರಕ್ಷಿತನಾಗಿರುವೆ.
ಆತನು ನಿನ್ನನ್ನು ಪರಿಪಾಲಿಸುತ್ತಾ ನಿನಗೆ ವಿಶ್ರಾಂತಿಯನ್ನು ದಯಪಾಲಿಸುವನು.
19 ಆಗ ನೀನು ಮಲಗಿ ವಿಶ್ರಮಿಸಿಕೊಳ್ಳುವೆ; ಯಾರೂ ನಿನಗೆ ಭಯ ಹುಟ್ಟಿಸುವುದಿಲ್ಲ.
ಅನೇಕರು ನಿನ್ನ ಸಹಾಯಕ್ಕಾಗಿಯೇ ಕೇಳಿಕೊಳ್ಳುವರು.
20 ಆದರೆ ದುಷ್ಟರು ಸಹಾಯಕ್ಕಾಗಿ ಎದುರುನೋಡಿದರೂ
ತಮ್ಮ ಆಪತ್ತುಗಳಿಂದ ಪಾರಾಗಲು ಅವರಿಗೆ ಸಾಧ್ಯವಿಲ್ಲ.
ಅವರ ನಿರೀಕ್ಷೆಯೇ ಅವರನ್ನು ಮರಣಕ್ಕೆ ನಡೆಸುತ್ತದೆ.”