12
ಯೋಬನ ವಾದ
ಆಮೇಲೆ ಯೋಬನು ಚೋಫರನಿಗೆ ಹೀಗೆ ಉತ್ತರಿಸಿದನು:
 
“ನೀವು ನಿಮ್ಮನ್ನೇ ಜ್ಞಾನಿಗಳೆಂದು ಆಲೋಚಿಸಿಕೊಂಡಿದ್ದೀರಿ.
ನೀವು ಸಾಯುವಾಗ ಜ್ಞಾನವು ನಿಮ್ಮೊಡನೆಯೇ ಸಾಯುವುದು.
ಆದರೆ ನನ್ನ ಮನಸ್ಸು ನಿಮ್ಮ ಮನಸ್ಸಿನಂತೆಯೇ ಒಳ್ಳೆಯದಾಗಿದೆ.
ನಾನು ನಿಮ್ಮಂತೆಯೇ ಬುದ್ಧಿವಂತನಾಗಿರುವೆ.
ಇದು ಸತ್ಯವೆಂದು
ಯಾರು ಬೇಕಾದರೂ ತಿಳಿದುಕೊಳ್ಳಬಲ್ಲರು.
 
“ಈಗ ನನ್ನ ಸ್ನೇಹಿತರು ನನ್ನನ್ನು ನೋಡಿ ನಗುವರು.
ಹೌದು, ನಾನು ದೇವರಿಗೆ ಪ್ರಾರ್ಥಿಸುವೆನು; ಆತನು ನನಗೆ ಉತ್ತರಿಸುವನು.
ನಾನು ನೀತಿವಂತನಾಗಿದ್ದರೂ ನಿರ್ದೋಷಿಯಾಗಿದ್ದರೂ
ಪರಿಹಾಸ್ಯಕ್ಕೆ ಗುರಿಯಾಗಿದ್ದೇನೆ.
ಆಪತ್ತಿಗೆ ಗುರಿಯಾಗಿಲ್ಲದವರು ಆಪತ್ತಿನಿಂದ ಕಷ್ಟಪಡುತ್ತಿರುವ ಜನರನ್ನು ಗೇಲಿ ಮಾಡುವರು;
ಜಾರಿಬಿದ್ದವನಿಗೆ ಹೊಡೆಯುವರು.
ಕಳ್ಳರ ಗುಡಾರಗಳಿಗೆ ತೊಂದರೆಯಿಲ್ಲ;
ತಮ್ಮ ದೇವರುಗಳನ್ನು ಕೈಗಳಲ್ಲಿ ಎತ್ತಿಕೊಂಡು ಹೋಗುತ್ತಾ
ದೇವರನ್ನು ರೇಗಿಸುವವರು ಸಮಾಧಾನದಿಂದಿದ್ದಾರೆ.
 
“ಆದರೆ ಪ್ರಾಣಿಗಳನ್ನು ಕೇಳು, ಅವು ನಿನಗೆ ಉಪದೇಶಿಸುತ್ತವೆ.
ಆಕಾಶದ ಪಕ್ಷಿಗಳನ್ನು ಕೇಳು, ಅವು ನಿನಗೆ ತಿಳಿಸುತ್ತವೆ.
ಭೂಮಿಯೊಂದಿಗೆ ಮಾತಾಡು, ಅದು ನಿನಗೆ ಉಪದೇಶಿಸುತ್ತದೆ.
ಸಮುದ್ರದ ಮೀನುಗಳು ತಮ್ಮ ಜ್ಞಾನವನ್ನು ನಿನಗೆ ತಿಳಿಸಲಿ.
ಇದನ್ನು ಮಾಡಿದಾತನು ಯೆಹೋವನೇ ಎಂಬುದು
ಈ ಸೃಷ್ಟಿಗಳಲ್ಲಿ ಪ್ರತಿಯೊಂದಕ್ಕೂ ಗೊತ್ತು.
10 ಪ್ರತಿಯೊಂದು ಪ್ರಾಣಿಯ ಜೀವವೂ ಪ್ರತಿಯೊಬ್ಬ ವ್ಯಕ್ತಿಯ ಆತ್ಮವೂ
ದೇವರ ಕೈಯಲ್ಲಿವೆ.
11 ಆದರೆ ನಾಲಿಗೆಯು ಊಟದ ರುಚಿಯನ್ನು ಆನಂದಿಸುವಂತೆ
ಕಿವಿಗಳು ಮಾತುಗಳನ್ನು ವಿವೇಚಿಸುವುದಿಲ್ಲವೇ?
12 ‘ಜ್ಞಾನವು ವೃದ್ಧರಲ್ಲಿಲ್ಲವೇ?
ದೀರ್ಘಾಯುಷ್ಯವು ತಿಳಿವಳಿಕೆಯನ್ನು ಉಂಟುಮಾಡುವುದಿಲ್ಲವೇ?’
13 ಜ್ಞಾನವೂ ಶಕ್ತಿಯೂ ಆತನವೇ.
ಆಲೋಚನೆಯೂ ವಿವೇಕವೂ ಆತನವೇ.
14 ದೇವರು ಕೆಡವಿದ್ದನ್ನು ಮತ್ತೆ ಕಟ್ಟುವುದಕ್ಕಾಗಲಿ
ಸೆರೆಗೆ ಹಾಕಿದವನನ್ನು ಬಿಡಿಸುವುದಕ್ಕಾಗಲಿ ಯಾರಿಗೂ ಸಾಧ್ಯವಿಲ್ಲ.
15 ಆತನು ಮಳೆಯನ್ನು ತಡೆಹಿಡಿದರೆ ಭೂಮಿಗೆ ಬರಗಾಲವಾಗುವುದು.
ಮಳೆಯನ್ನು ಸುರಿಸಿದರೆ ಭೂಮಿಯ ಮೇಲೆ ಪ್ರವಾಹವಾಗುವುದು.
16 ದೇವರು ಬಲಿಷ್ಠನಾಗಿರುವುದರಿಂದ ಯಾವಾಗಲೂ ಜಯಗಳಿಸುತ್ತಾನೆ.
ಗೆಲ್ಲುವವರೂ ಸೋಲುವವರೂ ಆತನವರೇ!
17 ದೇವರು ಮಂತ್ರಿಗಳ ಜ್ಞಾನವನ್ನು ತೆಗೆದುಹಾಕುವನು.
ನ್ಯಾಯಾಧಿಪತಿಗಳನ್ನು ಮೂರ್ಖರನ್ನಾಗಿ ಮಾಡುವನು.
18 ರಾಜರುಗಳು ಜನರಿಗೆ ಬೇಡಿಗಳನ್ನು ಹಾಕಿಸಿದರೆ ದೇವರು ಅವುಗಳನ್ನು ಕಿತ್ತೊಗೆದು
ರಾಜರುಗಳ ಸೊಂಟಕ್ಕೆ ಚಿಂದಿಬಟ್ಟೆಯನ್ನು ಕಟ್ಟಿಸುವನು.
19 ದೇವರು ಯಾಜಕರುಗಳ ಅಧಿಕಾರವನ್ನು ಕಿತ್ತೊಗೆಯುವನು;
ಪ್ರಧಾನರನ್ನು ದಬ್ಬಿಬಿಡುವನು.
20 ದೇವರು ವಿಶ್ವಾಸನೀಯವಾದ ಆಲೋಚನಾಗಾರರನ್ನು ಮೌನಗೊಳಿಸುವನು;
ಹಿರಿಯರ ವಿವೇಕವನ್ನು ತೆಗೆದುಹಾಕುವನು.
21 ದೇವರು ಪ್ರಮುಖರಿಗೆ ಅವಮಾನ ಮಾಡುವನು;
ಅಧಿಪತಿಗಳ ಶಕ್ತಿಯನ್ನು ತೆಗೆದುಹಾಕುವನು.* ಅಧಿಪತಿಗಳ … ತೆಗೆದುಹಾಕುವನು ಅಕ್ಷರಶಃ, “ಆತನು ಅಧಿಪತಿಗಳ ನಡುಕಟ್ಟನ್ನು ಬಿಚ್ಚಿಹಾಕುವನು.”
22 ಕಾರ್ಗತ್ತಲೆಯೊಳಗಿರುವ ನಿಗೂಢ ರಹಸ್ಯಗಳನ್ನು ಆತನು ಪ್ರಕಟಿಸುವನು;
ಮರಣಾಂಧಕಾರದ ಸ್ಥಳಗಳನ್ನು ಬೆಳಕಿನಿಂದ ಪ್ರಕಾಶಗೊಳಿಸುವನು.
23 ದೇವರು ಜನಾಂಗಗಳನ್ನು ವೃದ್ಧಿಮಾಡಿ ಬಲಗೊಳಿಸುವನು;
ಬಳಿಕ ಅವುಗಳನ್ನು ನಾಶಮಾಡುವನು.
ಆತನು ಜನಾಂಗಗಳನ್ನು ವಿಸ್ತಾರವಾಗಿ ಬೆಳೆಯ ಮಾಡುವನು;
ನಂತರ ಅವುಗಳನ್ನು ಚದರಿಸಿಬಿಡುವನು.
24 ದೇವರು ಭೂಲೋಕದ ನಾಯಕರುಗಳನ್ನು ಮೂಢರನ್ನಾಗಿ ಮಾಡುವನು;
ರಸ್ತೆಯಿಲ್ಲದ ಮರಳುಗಾಡಿನಲ್ಲಿ ಅವರನ್ನು ಅಲೆದಾಡಿಸುವನು.
25 ಅವರು ಬೆಳಕಿಲ್ಲದೆ ಕತ್ತಲೆಯಲ್ಲಿ ತಡವಾಡುವರು.
ಆತನು ಅವರನ್ನು ಅಮಲೇರಿದವರಂತೆ ಅಲೆದಾಡಿಸುವನು.”
 

*12:21: ಅಧಿಪತಿಗಳ … ತೆಗೆದುಹಾಕುವನು ಅಕ್ಷರಶಃ, “ಆತನು ಅಧಿಪತಿಗಳ ನಡುಕಟ್ಟನ್ನು ಬಿಚ್ಚಿಹಾಕುವನು.”