22
ಎಲೀಫಜನ ಉತ್ತರ
ಬಳಿಕ ತೇಮಾನ್ ಪಟ್ಟಣದ ಎಲೀಫಜನು ಉತ್ತರಕೊಟ್ಟನು:
 
“ಯಾವನೂ ದೇವರಿಗೆ ಸಹಾಯಮಾಡಲಾರನು.
ಮಹಾ ಜ್ಞಾನಿಯು ಸಹ ದೇವರಿಗೆ ಉಪಯುಕ್ತನಾಗಲಾರನು.
ನಿನ್ನ ನಡತೆಯು ಒಳ್ಳೆಯದಾಗಿದ್ದರೆ, ಅದರಿಂದ ದೇವರಿಗೆ ಸಹಾಯವಾಗುವುದೇ? ಇಲ್ಲ.
ನೀನು ನೀತಿವಂತನಾಗಿದ್ದರೆ ಸರ್ವಶಕ್ತನಾದ ದೇವರಿಗೆ ಅದರಿಂದೇನಾದರೂ ಲಾಭವಾಗುವುದೇ?
ನಿನ್ನ ಆರಾಧನೆಯ ದೆಸೆಯಿಂದ
ದೇವರು ನಿನ್ನ ಮೇಲೆ ಆರೋಪ ಹೊರಿಸಿ ದಂಡಿಸುವನೇ? ಇಲ್ಲ!
ನಿನ್ನ ಪಾಪವು ಅತಿಯಾಯಿತು!
ಯೋಬನೇ, ನೀನು ಪಾಪಮಾಡುವುದನ್ನು ನಿಲ್ಲಿಸಲೇ ಇಲ್ಲ.
ಯೋಬನೇ, ನೀನು ನಿಷ್ಕಾರಣವಾಗಿ ನಿನ್ನ ಸಹೋದರರ ವಸ್ತುಗಳನ್ನು ಒತ್ತೆಯಿಟ್ಟುಕೊಂಡು ಸಾಲ ಕೊಟ್ಟಿರಬಹುದು.
ಜನರ ಬಟ್ಟೆಗಳನ್ನು ತೆಗೆದುಕೊಂಡು ಅವರನ್ನು ಬೆತ್ತಲೆ ಮಾಡಿರಬಹುದು.
ಆಯಾಸಗೊಂಡವರಿಗೆ ನೀರು ಕೊಡದೆ
ಹಸಿದವರಿಗೆ ಊಟ ಕೊಡದೆಹೋಗಿರಬಹುದು.
ಯೋಬನೇ, ಬಲಿಷ್ಠನಾಗಿದ್ದ ನಿನ್ನಲ್ಲಿ ಬೇಸಾಯಕ್ಕೆ ಬಹಳ ಭೂಮಿಯಿದೆ.
ಅಲ್ಲದೆ ಜನರು ಸಹ ನಿನ್ನನ್ನು ಗೌರವಿಸುತ್ತಿದ್ದರು.
ಆದರೆ ವಿಧವೆಯರಿಗೆ ದಾನಮಾಡದೆ ಅವರನ್ನು ನೀನು ಕಳುಹಿಸಿಬಿಟ್ಟಿರಬಹುದು.
ಒಂದುವೇಳೆ ನೀನು ಅನಾಥರಿಗೆ ಮೋಸಮಾಡಿರಬಹುದು.
10 ಆದಕಾರಣ ನಿನ್ನ ಸುತ್ತಲೆಲ್ಲಾ ಉರುಲುಗಳಿವೆ;
ಫಕ್ಕನೆ ಬರುವ ವಿಪತ್ತು ನಿನ್ನನ್ನು ಭಯಗೊಳಿಸುವುದು.
11 ಆದಕಾರಣ ನಿನಗೆ ಏನೂ ಕಾಣಲಾಗದಷ್ಟು ಕತ್ತಲಾಗಿದೆ,
ಪ್ರವಾಹದ ನೀರು ನಿನ್ನನ್ನು ಆವರಿಸಿಕೊಂಡಿದೆ.
 
12 “ದೇವರು ಅತ್ಯುನ್ನತವಾದ ಪರಲೋಕದಲ್ಲಿ ವಾಸಿಸುತ್ತಾನೆ.
ಆತನು ಅತ್ಯಂತ ಎತ್ತರದಲ್ಲಿರುವ ನಕ್ಷತ್ರಗಳನ್ನು ಬಗ್ಗಿ ನೋಡುವನು.
ನಕ್ಷತ್ರಗಳು ಎಷ್ಟು ಎತ್ತರದಲ್ಲಿವೆ ಎಂಬುದನ್ನು ನೀನು ನೋಡಬಲ್ಲೆ.
13 ನೀನಾದರೋ, ‘ದೇವರಿಗೆ ಗೊತ್ತಿರುವುದೇನು?
ಕಾರ್ಮೋಡಗಳ ಆಚೆಯಿಂದ ನಮಗೆ ನ್ಯಾಯತೀರಿಸಬಲ್ಲನೇ?
14 ದಟ್ಟವಾದ ಮೋಡಗಳು ಆತನನ್ನು ಮುಚ್ಚಿಕೊಂಡಿವೆ.
ಆಕಾಶದ ಮೇಲ್ಗಡೆಯಲ್ಲಿ ನಡೆದಾಡುವ ಆತನು ನಮ್ಮನ್ನು ಕಾಣಲಾರನು’ ಎಂದು ಹೇಳುತ್ತಿರುವೆ.
 
15 “ಯೋಬನೇ, ದುಷ್ಟರು ನಡೆಯುವ ಹಳೆದಾರಿಯ ಮೇಲೆ
ನೀನು ನಡೆಯುತ್ತಲೇ ಇರುವಿಯೋ?
16 ಆ ದುಷ್ಟರಿಗೆ ಅಕಾಲಮರಣವು ಬಂದಿತು.
ಪ್ರವಾಹದಲ್ಲಿನ ಕಟ್ಟಡದಂತೆ ಅವರು ಕೊಚ್ಚಿಕೊಂಡು ಹೋದರು.
17 ಅವರು ದೇವರಿಗೆ, ‘ನಮ್ಮಿಂದ ತೊಲಗಿಹೋಗು;
ಸರ್ವಶಕ್ತನಾದ ದೇವರು ನಮಗೇನೂ ಮಾಡಲಾರನು!’ ಎಂದು ಹೇಳಿದ್ದರು.
18 ಆದರೆ ದೇವರು ಅವರ ಮನೆಗಳನ್ನು ಐಶ್ವರ್ಯದಿಂದ ತುಂಬಿಸಿದನು.
ಅಬ್ಬಾ! ದುಷ್ಟರ ಆಲೋಚನೆಯನ್ನು ನಾನು ಅನುಸರಿಸಲಾರೆ.
19 ದುಷ್ಟರ ನಾಶನವನ್ನು ಕಂಡು ನೀತಿವಂತರು ಸಂತೋಷಪಡುವರು.
ನಿರಪರಾಧಿಗಳು ದುಷ್ಟರನ್ನು ಕಂಡು ನಗುತ್ತಾ,
20 ‘ನಮ್ಮ ಶತ್ರುಗಳು ನಾಶವಾದರು!
ಬೆಂಕಿಯು ಅವರ ಐಶ್ವರ್ಯವನ್ನು ಸುಟ್ಟುಹಾಕಿತು!’ ಎಂದು ಹೇಳುವರು.
 
21 “ಯೋಬನೇ, ಈಗಲಾದರೊ ನಿನ್ನನ್ನು ದೇವರಿಗೆ ಒಪ್ಪಿಸಿಕೊಟ್ಟು ಆತನೊಂದಿಗೆ ಸಮಾಧಾನ ಮಾಡಿಕೊ,
ಆಗ ನೀನು ಆಶೀರ್ವಾದವನ್ನು ಹೊಂದಿಕೊಂಡು ಅಭಿವೃದ್ಧಿಯಾಗುವೆ.
22 ಆತನ ಉಪದೇಶವನ್ನು ಸ್ವೀಕರಿಸಿಕೊ.
ಆತನ ವಾಕ್ಯಗಳನ್ನು ನಿನ್ನ ಹೃದಯದಲ್ಲಿಟ್ಟುಕೊ.
23 ಯೋಬನೇ, ನೀನು ಸರ್ವಶಕ್ತನಾದ ದೇವರಿಗೆ ಅಭಿಮುಖನಾಗಿ
ನಿನ್ನ ಮನೆಯಲ್ಲಿರುವ ಪಾಪವನ್ನು ನಿರ್ಮೂಲಮಾಡಿದರೆ ಉದ್ಧಾರವಾಗುವೆ.
24 ನೀನು ಚಿನ್ನವನ್ನು ಧೂಳೆಂದು ಪರಿಗಣಿಸಬೇಕು.
ನೀನು ಓಫೀರ್ ದೇಶದ ಚಿನ್ನವನ್ನು ನದಿಗಳ ದಂಡೆಯ ಮೇಲಿರುವ ಕಲ್ಲುಗಳಂತೆ ಪರಿಗಣಿಸಬೇಕು.
25 ಆಗ ಸರ್ವಶಕ್ತನಾದ ದೇವರು ನಿನ್ನ ಪಾಲಿಗೆ
ಬಂಗಾರವಾಗಿಯೂ ಬೆಳ್ಳಿಯ ರಾಶಿಗಳಾಗಿಯೂ ಇರುವನು.
26 ನೀನು ಸರ್ವಶಕ್ತನಾದ ದೇವರಲ್ಲಿ ಆನಂದಿಸುವೆ.
ದೇವರ ಕಡೆಗೆ ಕಣ್ಣೆತ್ತಿ ನೋಡುವೆ.
27 ನೀನು ಪ್ರಾರ್ಥಿಸುವೆ, ಆತನು ನಿನಗೆ ಕಿವಿಗೊಡುವನು;
ಆತನಿಗೆ ನಿನ್ನ ಹರಕೆಗಳನ್ನು ಸಲ್ಲಿಸುವೆ.
28 ನಿನ್ನ ಕಾರ್ಯಗಳೆಲ್ಲಾ ಜಯಪ್ರಧವಾಗುವುದು;
ನಿನ್ನ ಭವಿಷ್ಯತ್ತು ಪ್ರಕಾಶಮಾನವಾಗುವುದು;
29 ದೇವರು ಅಹಂಕಾರಿಗಳನ್ನು ನಾಚಿಕೆಗೀಡುಮಾಡುವನು,
ದೀನರಿಗಾದರೋ ಸಹಾಯಮಾಡುವನು.
30 ನಿರಪರಾಧಿಗಳನ್ನು ರಕ್ಷಿಸುವನು.
ನೀನು ಪರಿಶುದ್ಧನಾಗಿರುವುದರಿಂದ ನಿನ್ನ ಪ್ರಾರ್ಥನೆಗೆ ಉತ್ತರವಾಗಿ ಆತನು ಅವರನ್ನು ಕ್ಷಮಿಸುವನು.”