36
ಎಲೀಹು ಮಾತನ್ನು ಮುಂದುವರಿಸಿ ಹೀಗೆಂದನು:
 
“ಯೋಬನೇ, ಇನ್ನು ಸ್ವಲ್ಪಹೊತ್ತು ನನ್ನೊಂದಿಗೆ ತಾಳ್ಮೆಯಿಂದಿರು.
ದೇವರ ಪರವಾಗಿ ಹೇಳಬೇಕಾಗಿರುವ ಇನ್ನೂ ಕೆಲವು ಮಾತುಗಳಿವೆ.
ನಾನು ಜ್ಞಾನವನ್ನು ಬಹುದೂರದಿಂದ ಪಡೆದುಕೊಂಡಿದ್ದೇನೆ.
ನನ್ನ ಸೃಷ್ಟಿಕರ್ತನಾದ ದೇವರು ನ್ಯಾಯವಂತನೆಂದು ನಿರೂಪಿಸುವೆ.
ಯೋಬನೇ, ನಾನು ಹೇಳುವ ಪ್ರತಿಯೊಂದು ಮಾತೂ ಸತ್ಯ.
ನಿನ್ನ ಬಳಿಯಲ್ಲಿ ಜ್ಞಾನಪೂರ್ಣನೊಬ್ಬನು ಇದ್ದಾನೆ.
 
“ದೇವರು ಮಹಾ ಶಕ್ತಿಶಾಲಿಯಾಗಿದ್ದರೂ ಜನರನ್ನು ತಿರಸ್ಕರಿಸುವುದಿಲ್ಲ.
ದೇವರು ಮಹಾ ಬಲಶಾಲಿಯೂ ಹೌದು, ಮಹಾ ಜ್ಞಾನಿಯೂ ಹೌದು!
ದೇವರು ದುಷ್ಟರನ್ನು ಜೀವಿಸಲು ಅವಕಾಶ ಕೊಡುವುದಿಲ್ಲ.
ಆತನು ಬಡಜನರಿಗೆ ಯಾವಾಗಲೂ ನ್ಯಾಯದೊರಕಿಸುವನು.
ನೀತಿವಂತರನ್ನು ದೇವರು ಪರಿಪಾಲಿಸುವನು;
ಆತನು ಒಳ್ಳೆಯವರನ್ನು ಅಧಿಪತಿಗಳನ್ನಾಗಿ ನೇಮಿಸುವನು;
ಅವರಿಗೆ ಸದಾಕಾಲ ಗೌರವ ದೊರೆಯುವಂತೆ ಮಾಡುವನು.
ಅವರು ಒಂದುವೇಳೆ ದಂಡನೆಗೆ ಒಳಗಾಗಿ ಸರಪಣಿಗಳಿಂದ ಬಂಧಿಸಲ್ಪಟ್ಟು
ಸಂಕಟಪಡುತ್ತಿದ್ದರೆ,
ಆತನು ಅವರ ದುಷ್ಕೃತ್ಯವನ್ನೂ ಪಾಪವನ್ನೂ ಗರ್ವವನ್ನೂ
ಅವರಿಗೆ ತಿಳಿಯಪಡಿಸುವನು.
10 ಇದಲ್ಲದೆ ತನ್ನ ಎಚ್ಚರಿಕೆಯ ಮಾತಿಗೆ ಕಿವಿಗೊಡುವಂತೆ ಬಲವಂತ ಮಾಡುವನು;
ಪಾಪಮಾಡಕೂಡದೆಂದು ಆಜ್ಞಾಪಿಸುವನು.
11 ಅವರು ದೇವರಿಗೆ ಕಿವಿಗೊಟ್ಟು ಆತನಿಗೆ ವಿಧೇಯರಾದರೆ,
ಆತನು ಅವರನ್ನು ಅಭಿವೃದ್ಧಿಪಡಿಸುವನು; ಆಗ ಅವರ ಜೀವನವು ಸುಖಕರವಾಗುವುದು.
12 ಆದರೆ ಅವರು ದೇವರಿಗೆ ವಿಧೇಯರಾಗದಿದ್ದರೆ ನಾಶವಾಗುವರು;
ಮೂಢರಂತೆ ಸಾಯುವರು.
 
13 “ದೇವರ ಬಗ್ಗೆ ಲಕ್ಷಿಸದವರು ಯಾವಾಗಲೂ ಕೋಪದಿಂದಿರುವರು.
ದೇವರು ಅವರನ್ನು ದಂಡಿಸಿದರೂ ಅವರು ದೇವರಿಗೆ ಮೊರೆಯಿಡುವುದಿಲ್ಲ.
14 ಅವರು ಯೌವನ ಪ್ರಾಯದಲ್ಲೇ
ಪುರುಷಗಾಮಿಗಳಂತೆ ಸಾಯುವರು.
15 ಆದರೆ ದೇವರು ದೀನರನ್ನು ವಿಪತ್ತುಗಳಿಂದ ಬಿಡಿಸುವನು.
ಆ ವಿಪತ್ತುಗಳಿಂದ ದೇವರು ಜನರನ್ನು ಎಚ್ಚರಗೊಳಿಸಿ ತನಗೆ ಕಿವಿಗೊಡುವಂತೆ ಮಾಡುವನು.
 
16 “ಯೋಬನೇ, ದೇವರು ನಿನ್ನನ್ನು ಕೇಡಿನಿಂದ ತಪ್ಪಿಸಿ
ಸುರಕ್ಷಿತವೂ ಅಭಿವೃದ್ಧಿಕರವೂ ಆಗಿರುವ ಸ್ಥಳಕ್ಕೆ ಕರೆದುಕೊಂಡು ಬಂದು
ನಿನಗೆ ಊಟವನ್ನು ಯಥೇಚ್ಛವಾಗಿ ಬಡಿಸಲು ಇಷ್ಟಪಡುತ್ತಾನೆ.
17 ಯೋಬನೇ, ಈಗಲಾದರೋ ನೀನು ದೋಷಿಯೆಂದು ನಿರ್ಣಯಿಸಲ್ಪಟ್ಟಿರುವೆ; ದುಷ್ಟನಂತೆ ದಂಡಿಸಲ್ಪಟ್ಟಿರುವೆ.
18 ಯೋಬನೇ, ಕೋಪವು ನಿನ್ನನ್ನು ಮೋಸಗೊಳಿಸದಿರಲಿ;
ಹಣವು ನಿನ್ನ ಮನಸ್ಸನ್ನು ಮಾರ್ಪಡಿಸದಿರಲಿ, ನಿನ್ನನ್ನು ನಾಶನಕ್ಕೆ ನಡೆಸದಿರಲಿ.
19 ನಿನ್ನ ಎಲ್ಲಾ ಹಣವು ಈಗ ನಿನಗೆ ಸಹಾಯ ಮಾಡಲಾರದು;
ನಿನ್ನಲ್ಲಿರುವ ಶಕ್ತಿಸಾಮರ್ಥವು ಸಹ ನಿನಗೆ ಸಹಾಯ ಮಾಡಲಾರದು.
20 ಜನಾಂಗಗಳು ಇದ್ದಕ್ಕಿದ್ದಂತೆ
ಕಾಣೆಯಾಗುವ ರಾತ್ರಿಗಾಗಿ ಬಯಸಬೇಡ.
21 ಯೋಬನೇ, ನೀನು ಬಹಳ ಸಂಕಟಪಟ್ಟಿರುವೆ. ಆದ್ದರಿಂದ ಕೆಡುಕನ್ನು
ಆರಿಸಿಕೊಳ್ಳಬೇಡ; ತಪ್ಪು ಮಾಡದಂತೆ ಎಚ್ಚರಿಕೆಯಾಗಿರು.
 
22 “ಇಗೋ, ದೇವರು ತನ್ನ ಶಕ್ತಿಯಿಂದ ಮಹಾಕಾರ್ಯವನ್ನು ಮಾಡುವನು!
ಆತನು ಎಲ್ಲರಿಗೂ ಅತ್ಯಂತ ದೊಡ್ಡ ಉಪದೇಶಕನಾಗಿದ್ದಾನೆ.
23 ದೇವರಿಗೆ ಕೆಲಸವನ್ನು ನೇಮಿಸಲು ಯಾರಿಗೆ ಸಾಧ್ಯ?
ಆತನಿಗೆ, ‘ನೀನು ತಪ್ಪನ್ನು ಮಾಡಿರುವೆ’ ಎಂದು ಹೇಳಲು ಯಾರಿಗೆ ಸಾಧ್ಯ?
24 ದೇವರನ್ನು ಆತನ ಕಾರ್ಯಗಳಿಗಾಗಿ ಕೊಂಡಾಡಲು ಮರೆಯಬೇಡ.
ಜನರು ಆತನನ್ನು ಕುರಿತು ಅನೇಕ ಸುತ್ತಿಗೀತೆಗಳನ್ನು ಬರೆದಿದ್ದಾರೆ.
25 ಪ್ರತಿಯೊಬ್ಬನೂ ದೇವರ ಕಾರ್ಯವನ್ನು ನೋಡಬಲ್ಲನು.
ದೂರದೇಶಗಳ ಜನರು ಸಹ ಆತನು ಕಾರ್ಯವನ್ನು ನೋಡಬಲ್ಲರು.
26 ಹೌದು, ದೇವರೇ ಮಹೋನ್ನತನು. ಆತನ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳಲಾರೆವು.
ಆತನು ಎಂದಿನಿಂದ ಜೀವಿಸಿರುವನೋ ನಮಗೆ ತಿಳಿಯದು.
 
27 “ದೇವರು ಭೂಮಿಯ ನೀರನ್ನು ಹಬೆಯ ರೂಪದಲ್ಲಿ ಮೇಲಕ್ಕೆ ಕೊಂಡೊಯ್ದು
ಅದನ್ನು ಮಂಜನ್ನಾಗಿಯೂ ಮಳೆಯನ್ನಾಗಿಯೂ ಪರಿವರ್ತಿಸುತ್ತಾನೆ.
28 ಆದ್ದರಿಂದ ಮೋಡಗಳು ನೀರನ್ನು ಸುರಿಯಮಾಡುತ್ತವೆ;
ಅನೇಕರ ಮೇಲೆ ಮಳೆಯು ಸುರಿಯುತ್ತದೆ.
29 ದೇವರು ಮೋಡಗಳನ್ನು ಹರಡುವ ಬಗೆಯನ್ನಾಗಲಿ
ಆಕಾಶದಲ್ಲಿ ಗುಡುಗು ಗರ್ಜಿಸುವ ಬಗೆಯನ್ನಾಗಲಿ ಯಾವನೂ ಅರ್ಥಮಾಡಿಕೊಳ್ಳಲಾರನು.
30 ಇಗೋ, ದೇವರು ತನ್ನ ಪ್ರಕಾಶವನ್ನು ಆಕಾಶದಲ್ಲೆಲ್ಲಾ ಹರಡಿ
ಸಮುದ್ರದ ಆಳವಾದ ಭಾಗಗಳನ್ನು ಬೆಳಕಿನಿಂದ ತುಂಬಿಸಿದ್ದಾನೆ.
31 ಜನಾಂಗಗಳನ್ನು ಹತೋಟಿಯಲ್ಲಿಡುವುದಕ್ಕಾಗಿಯೂ
ಬೇಕಾದಷ್ಟು ಆಹಾರವನ್ನು ಕೊಡುವುದಕ್ಕಾಗಿಯೂ ದೇವರು ಅವುಗಳನ್ನು ಉಪಯೋಗಿಸುವನು.
32 ದೇವರು ತನ್ನ ಕೈಗಳಲ್ಲಿ ಸಿಡಿಲನ್ನು ಹಿಡಿದುಕೊಂಡು ಅದಕ್ಕೆ ಆಜ್ಞಾಪಿಸಲು
ಅದು ಆತನ ಚಿತ್ತಕ್ಕನುಸಾರವಾಗಿ ಹೊಡೆಯುವುದು.
33 ಬಿರುಗಾಳಿಯು ಬರುತ್ತಿದೆಯೆಂದು ಗುಡುಗು ಎಚ್ಚರಿಕೆ ನೀಡುತ್ತದೆ;
ಬಿರುಗಾಳಿ ಬರುತ್ತಿರುವುದು ದನಕರುಗಳಿಗೂ ಸಹ ಗೊತ್ತಾಗುವುದು.