3
ಯೆಹೂದದ ವೈರಿಗೆ ಯೆಹೋವನ ಶಿಕ್ಷೆಯ ವಾಗ್ದಾನ
“ಆ ಸಮಯದಲ್ಲಿ ನಾನು ಯೆಹೂದ ಮತ್ತು ಜೆರುಸಲೇಮನ್ನು ಸೆರೆಯಿಂದ ಹಿಂದಕ್ಕೆ ತರಿಸುವೆನು. ಮತ್ತು ಎಲ್ಲಾ ಜನಾಂಗಗಳನ್ನು ನಾನು ಒಟ್ಟುಗೂಡಿಸುವೆನು. ಆ ದೇಶಗಳನ್ನು ಯೆಹೋಷಾಫಾಟ್ ತಗ್ಗಿಗೆ* ಯೆಹೋಷಾಫಾಟ್ ತಗ್ಗು ಈ ಹೆಸರಿನ ಅರ್ಥ “ಯೆಹೋವನು ನ್ಯಾಯತೀರಿಸುತ್ತಾನೆ.” ಕರೆತರುವೆನು. ಅಲ್ಲಿ ಅವರಿಗೆ ನ್ಯಾಯತೀರಿಸುವೆನು. ಆ ದೇಶಗಳವರು ನನ್ನ ಜನರಾದ ಇಸ್ರೇಲರನ್ನು ಚದರಿಸಿದ್ದರು. ಅವರನ್ನು ಪರದೇಶಗಳಲ್ಲಿ ವಾಸಿಸುವಂತೆ ಮಾಡಿದರು. ಆದ್ದರಿಂದ ಆ ದೇಶಗಳವರನ್ನು ನಾನು ಶಿಕ್ಷಿಸುವೆನು. ಆ ದೇಶದವರು ನನ್ನ ದೇಶವನ್ನು ವಿಭಜಿಸಿದರು. ನನ್ನ ಜನರಿಗಾಗಿ ಚೀಟು ಹಾಕಿದರು. ಅವರು ಹುಡುಗರನ್ನು ಮಾರಿ ಸೂಳೆಯನ್ನು ಕೊಂಡುಕೊಂಡರು; ಹುಡುಗಿಯರನ್ನು ಮಾರಿ ದ್ರಾಕ್ಷಾರಸವನ್ನು ಕೊಂಡುಕೊಂಡರು.
“ತೂರೇ, ಸೀದೋನೇ, ಫಿಲಿಷ್ಟಿಯ ದೇಶಗಳೇ, ನೀವು ನನಗೆ ಎಷ್ಟರವರು? ನಾನು ಮಾಡಿದುದಕ್ಕೆ ನೀವು ನನ್ನನ್ನು ಶಿಕ್ಷಿಸುತ್ತೀರಾ? ನೀವು ಒಂದುವೇಳೆ ನನ್ನನ್ನು ಶಿಕ್ಷಿಸುತ್ತಿದ್ದೀರಿ ಎಂದು ನೆನಸಬಹುದು. ಆದರೆ ನಾನು ಬೇಗನೇ ನಿಮ್ಮನ್ನು ಶಿಕ್ಷಿಸುವೆನು. ನೀವು ನನ್ನ ಬೆಳ್ಳಿಬಂಗಾರವನ್ನು ಕದ್ದುಕೊಂಡು ಹೋದಿರಿ. ನನ್ನ ಅಮೂಲ್ಯವಾದ ಸಂಪತ್ತನ್ನು ಕೊಂಡು ಹೋಗಿ ನಿಮ್ಮ ಪೂಜಾಸ್ಥಳಗಳಲ್ಲಿ ಇಟ್ಟಿರಿ.
“ನೀವು ಯೆಹೂದ ಮತ್ತು ಜೆರುಸಲೇಮಿನ ಜನರನ್ನು ಗ್ರೀಕರಿಗೆ ಮಾರಿಬಿಟ್ಟಿರಿ. ಆ ರೀತಿಯಾಗಿ ಅವರನ್ನು ಅವರ ದೇಶದಿಂದ ಬಹಳ ದೂರ ತೆಗೆದುಬಿಟ್ಟಿರಿ. ಆ ದೂರದ ಸ್ಥಳಗಳಿಗೆ ನನ್ನ ಜನರನ್ನು ಕಳುಹಿಸಿದಿರಿ, ಆದರೆ ನಾನು ಅವರನ್ನು ಹಿಂದೆ ತರುವೆನು. ಮತ್ತು ನೀವು ಮಾಡಿದ ಕೃತ್ಯಕ್ಕೆ ನಾನು ನಿಮ್ಮನ್ನು ಶಿಕ್ಷಿಸುವೆನು. ನಿಮ್ಮ ಗಂಡು ಹೆಣ್ಣುಮಕ್ಕಳನ್ನು ನಾನು ಯೆಹೂದದ ಜನರಿಗೆ ಮಾರುವೆನು. ಅವರು ಅವರನ್ನು ಬಹುದೂರದಲ್ಲಿ ಶೆಬದ ಜನರಿಗೆ ಮಾರಿಬಿಡುವರು.” ಇದು ಯೆಹೋವನ ನುಡಿ.
ಯುದ್ಧಕ್ಕೆ ತಯಾರಾಗು
ಜನಾಂಗದವರಿಗೆ ಇದನ್ನು ಪ್ರಕಟಿಸು:
ಯುದ್ಧಕ್ಕೆ ತಯಾರಾಗಿರಿ!
ಶೂರರನ್ನು ಎಚ್ಚರಿಸಿರಿ!
ಯುದ್ಧ ವೀರರು ಹತ್ತಿರಕ್ಕೆ ಬರಲಿ; ಅವರು ಬರಲಿ!
10 ನಿಮ್ಮ ನೇಗಿಲ ಗುಳಗಳನ್ನು ಕತ್ತಿಯನ್ನಾಗಿ ಮಾಡಿರಿ.
ಕುಡುಗೋಲುಗಳಿಂದ ಬರ್ಜಿಯನ್ನು ಮಾಡಿರಿ.
ನಿಮ್ಮ ಬಲಹೀನನಾದ ಸೈನಿಕನು,
“ನಾನು ಬಲಶಾಲಿ” ಅನ್ನಲಿ.
11 ಎಲ್ಲಾ ಜನಾಂಗದವರೇ, ತ್ವರೆಪಡಿರಿ.
ಆ ಸ್ಥಳದಲ್ಲಿ ಒಟ್ಟುಸೇರಿರಿ.
ಯೆಹೋವನೇ, ನಿನ್ನ ಬಲಶಾಲಿಯಾದ ಸೈನಿಕರನ್ನು ಬರಮಾಡು.
12 ಜನಾಂಗಗಳೇ, ಎಚ್ಚರಗೊಳ್ಳಿರಿ!
ಯೆಹೋಷಾಫಾಟ್ ತಗ್ಗಿಗೆ ಬನ್ನಿರಿ.
ಸುತ್ತಲಿರುವ ಜನಾಂಗಗಳಿಗೆ ತೀರ್ಪುಕೊಡಲು
ನಾನು ಅಲ್ಲಿ ಕುಳಿತುಕೊಳ್ಳುವೆನು.
13 ಬೆಳೆಯು ಪಕ್ವವಾಗಿದೆ;
ಕುಡುಗೋಲನ್ನು ತನ್ನಿರಿ.
ಬನ್ನಿ, ದ್ರಾಕ್ಷಿಯನ್ನು ಆಲೆಯಲ್ಲಿ ತುಳಿಯಿರಿ,
ಯಾಕೆಂದರೆ ಆಲೆಯು ತುಂಬಿಹೋಗಿದೆ.
ಪಿಪಾಯಿಗಳು ತುಂಬಿತುಳುಕುತ್ತಿವೆ,
ಯಾಕೆಂದರೆ ಅವರ ದುಷ್ಟತ್ವವು ವಿಪರೀತವಾಗಿದೆ!
14 ತೀರ್ಮಾನದ ತಗ್ಗಿನಲ್ಲಿ ಅನೇಕರು ಸೇರಿದ್ದಾರೆ.
ಯೆಹೋವನ ವಿಶೇಷ ದಿನವು ತೀರ್ಮಾನದ ತಗ್ಗಿನ ಹತ್ತಿರ ಬಂದಿದೆ.
15 ಸೂರ್ಯಚಂದ್ರರು ಕತ್ತಲಾಗುವರು,
ನಕ್ಷತ್ರಗಳು ಹೊಳೆಯುವುದಿಲ್ಲ.
16 ಚೀಯೋನಿನಿಂದ ದೇವರಾದ ಯೆಹೋವನು ಆರ್ಭಟಿಸುವನು.
ಜೆರುಸಲೇಮಿನಿಂದ ಆತನು ಗರ್ಜಿಸುವನು.
ಆಗ ಭೂಮ್ಯಾಕಾಶಗಳು ನಡುಗುವವು.
ಆದರೆ ಯೆಹೋವನ ಜನರಿಗೆ ಆತನೇ ಆಶ್ರಯ ಸ್ಥಳವಾಗುವನು.
ಆತನು ಇಸ್ರೇಲರಿಗೆ ಸುರಕ್ಷಿತ ಸ್ಥಳವಾಗುವನು.
17 “ಆಗ ನಾನು ನಿಮ್ಮ ದೇವರಾದ ಯೆಹೋವನು ಎಂದು ಅರಿತುಕೊಳ್ಳುವಿರಿ.
ನಾನು ನನ್ನ ಪವಿತ್ರ ಪರ್ವತವಾದ ಚೀಯೋನಿನಲ್ಲಿ ವಾಸಿಸುವೆನು.
ಜೆರುಸಲೇಮ್ ಪರಿಶುದ್ಧವಾಗುವದು.
ಪರದೇಶಿಗಳು ಇನ್ನು ಮುಂದೆ ಅದನ್ನು ದಾಟಿಹೋಗುವುದಿಲ್ಲ.
ಯೆಹೂದಕ್ಕೆ ಒಂದು ಹೊಸ ಜೀವಿತದ ವಾಗ್ದಾನ
18 “ಆ ದಿವಸ ಸಿಹಿ ದ್ರಾಕ್ಷಾರಸವು ಬೆಟ್ಟಗಳಿಂದ ಹರಿಯುವುದು.
ಬೆಟ್ಟಗಳಲ್ಲಿ ಹಾಲು ಹರಿಯುವುದು.
ಮತ್ತು ಯೆಹೂದದ ಬತ್ತಿದ ನದಿಗಳಲ್ಲಿ ನೀರು ತುಂಬಿ ಹರಿಯುವದು.
ಯೆಹೋವನ ಆಲಯದಿಂದ ಬುಗ್ಗೆಯು ಹೊರಡುವದು.
ಅಕಾಸಿಯ ಕಣಿವೆಗೆ ನೀರನ್ನು ಕೊಡುವದು.
19 ಈಜಿಪ್ಟ್ ಬರಿದಾಗುವದು.
ಎದೋಮು ಬೆಂಗಾಡಾಗುವದು.
ಯಾಕೆಂದರೆ ಅವರು ಯೆಹೂದದ ಜನರೊಂದಿಗೆ ಕ್ರೂರ ರೀತಿಯಲ್ಲಿ ವರ್ತಿಸಿದರು.
ಅವರ ದೇಶಗಳಲ್ಲಿ ನಿರಪರಾಧಿಗಳನ್ನು ಕೊಂದರು.
20 ಆದರೆ ಯೆಹೂದದಲ್ಲಿ ಯಾವಾಗಲೂ ಜನರು ವಾಸಿಸುವರು.
ಅನೇಕ ತಲೆಮಾರಿನವರೆಗೆ ಜನರು ಜೆರುಸಲೇಮಿನಲ್ಲಿ ವಾಸಿಸುವರು.
21 ಆ ಜನರು ನನ್ನ ಜನರನ್ನು ಕೊಂದರು.
ಆದ್ದರಿಂದ ನಾನು ನಿಜವಾಗಿಯೂ ಅವರನ್ನು ಶಿಕ್ಷಿಸುವೆನು.”
 
ಯಾಕೆಂದರೆ ದೇವರಾದ ಯೆಹೋವನು ಚೀಯೋನಿನಲ್ಲಿ ವಾಸಿಸುವನು.

*3:2: ಯೆಹೋಷಾಫಾಟ್ ತಗ್ಗು ಈ ಹೆಸರಿನ ಅರ್ಥ “ಯೆಹೋವನು ನ್ಯಾಯತೀರಿಸುತ್ತಾನೆ.”