24
ಬಿಳಾಮನ ಮೂರನೆಯ ಸಂದೇಶ
ಇಸ್ರೇಲರನ್ನು ಆಶೀರ್ವದಿಸುವುದೇ ಯೆಹೋವನ ಆಸೆಯೆಂದು ಬಿಳಾಮನು ತಿಳಿದುಕೊಂಡನು. ಆದ್ದರಿಂದ ಬಿಳಾಮನು ಮೊದಲಿನಂತೆ ಶಕುನ ನೋಡುವುದಕ್ಕೆ ಹೋಗದೆ ಮರುಭೂಮಿಯ ಕಡೆಗೆ ಮುಖವನ್ನು ತಿರುಗಿಸಿಕೊಂಡನು. ಬಿಳಾಮನು ಕಣ್ಣೆತ್ತಿ ನೋಡಿದಾಗ ಇಸ್ರೇಲರೆಲ್ಲರನ್ನು ಕಂಡನು. ಅವರು ತಮ್ಮ ಕುಲಗಳ ಪ್ರಕಾರ ಡೇರೆಗಳನ್ನು ಹಾಕಿಕೊಂಡಿದ್ದರು. ಆಗ ಅವನು ದೇವರಾತ್ಮ ಪ್ರೇರಿತನಾಗಿ ಹೀಗೆಂದನು:
 
“ಬೆಯೋರನ ಮಗನಾದ ಬಿಳಾಮನ ಸಂದೇಶವಿದು.
ನನ್ನ ಕಣ್ಣುಗಳು ತೆರೆಯಲ್ಪಟ್ಟಿವೆ. ನಾನು ನೋಡುವುದನ್ನೇ ಹೇಳುತ್ತೇನೆ.
ನಾನು ಈ ಸಂದೇಶವನ್ನು ದೇವರಿಂದ ಕೇಳಿದೆನು.
ಸರ್ವಶಕ್ತನಾದ ದೇವರು ತೋರಿಸಿದವುಗಳನ್ನು ನೋಡಿದೆನು.
ನಾನು ಸ್ಪಷ್ಟವಾಗಿ ನೋಡುವುದನ್ನು ದೀನತೆಯಿಂದ ತಿಳಿಸುತ್ತೇನೆ.
 
“ಯಾಕೋಬ್ಯರೇ, ನಿಮ್ಮ ಡೇರೆಗಳು ಬಹಳ ಸುಂದರವಾಗಿವೆ!
ಇಸ್ರೇಲರೇ, ನೀವು ವಾಸಿಸುವ ಸ್ಥಳಗಳು ಬಹಳ ರಮ್ಯವಾಗಿವೆ!
ನಿಮ್ಮ ಗುಡಾರಗಳು ಕಣಿವೆಗಳಂತೆ ಹರಡಿಕೊಂಡಿವೆ.
ನಿಮ್ಮ ಗುಡಾರಗಳು ನದಿಯ ಬಳಿಯಿರುವ ತೋಟಗಳಂತಿವೆ.
ನಿಮ್ಮ ಗುಡಾರಗಳು ಯೆಹೋವನು ನೆಟ್ಟ ಸುವಾಸನೆಯ ಪೊದೆಗಳಂತೆಯೂ
ನೀರಿನ ಬಳಿಯಿರುವ ದೇವದಾರಿನ ಮರಗಳಂತೆಯೂ ಇವೆ.
ನಿಮಗೆ ಯಾವಾಗಲೂ ಬೇಕಾದಷ್ಟು ನೀರು ಇರುವುದು;
ನೀವು ಬಿತ್ತಿದ ಬೀಜಗಳು ಬೆಳೆಯಲು ಸಾಕಷ್ಟು ನೀರು ಇರುವುದು.
ನಿಮ್ಮ ಅರಸನು ಆಗಾಗ್ ಎಂಬವನಿಗಿಂತಲೂ ದೊಡ್ಡವನಾಗಿದ್ದಾನೆ.
ನಿಮ್ಮ ರಾಜ್ಯವು ಬಹಳ ಬಲಿಷ್ಠವಾಗಿರುವುದು.
 
“ದೇವರು ಆ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು.
ಅವರು ಕಾಡುಕೋಣದಂತೆ ಬಲಿಷ್ಠರಾಗಿದ್ದಾರೆ.
ಅವರು ತಮ್ಮೆಲ್ಲಾ ಶತ್ರುಗಳನ್ನು ಸೋಲಿಸುವರು.
ಅವರು ತಮ್ಮ ವೈರಿಗಳ ಮೂಳೆಗಳನ್ನು ಮುರಿದುಹಾಕುವರು. ಅವರ ಬಾಣಗಳು ಅವರ ವೈರಿಗಳನ್ನು ಕೊಲ್ಲುವವು.
ಅವರು ಅಡಗಿಕೊಂಡಿರುವರು;
ಇಸ್ರೇಲರು ಸಿಂಹದಂತೆಯೂ
ಹೆಣ್ಣು ಸಿಂಹದಂತೆಯೂ ವಿಶ್ರಮಿಸುವರು.
ಅದನ್ನು ಎಬ್ಬಿಸಲು ಯಾರಿಗೆ ಧೈರ್ಯವಿದೆ?
ನಿಮ್ಮನ್ನು ಆಶೀರ್ವದಿಸುವವನು ಆಶೀರ್ವದಿಸಲ್ಪಡುವನು.
ನಿಮ್ಮನ್ನು ಶಪಿಸುವವನು ಶಪಿಸಲ್ಪಡುವನು.”
 
10 ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು, ಚಪ್ಪಾಳೆ ಹೊಡೆದು, “ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಸಿದೆನು. ಆದರೆ ನೀನು ಅವರನ್ನು ಮೂರು ಸಾರಿಯೂ ಆಶೀರ್ವದಿಸಿದೆ. 11 ಆದ್ದರಿಂದ ನೀನೀಗ ನೇರವಾಗಿ ಮನೆಗೆ ಹೋಗಿಬಿಡು. ನಿನಗೆ ಹೆಚ್ಚು ಹಣ ಕೊಡುವುದಾಗಿ ಆಲೋಚಿಸಿದ್ದೆನು. ಆದರೆ ನೀನು ನಿನ್ನ ಬಹುಮಾನವನ್ನು ಕಳೆದುಕೊಳ್ಳುವಂತೆ ಯೆಹೋವನು ಮಾಡಿದನು” ಎಂದು ಹೇಳಿದನು.
12-13 ಅದಕ್ಕೆ ಬಿಳಾಮನು ಬಾಲಾಕನಿಗೆ, “ಬಾಲಾಕನು, ಬೆಳ್ಳಿಬಂಗಾರಗಳಿಂದ ತುಂಬಿದ ತನ್ನ ಅರಮನೆಯನ್ನು ಕೊಟ್ಟರೂ ನಾನು ಯೆಹೋವನ ಆಜ್ಞೆಯನ್ನು ಮೀರಿ ನನಗೆ ಇಷ್ಟಬಂದಂತೆ ಕೆಟ್ಟದ್ದನ್ನಾಗಲಿ ಒಳ್ಳೆಯದನ್ನಾಗಲಿ ನಾನು ಮಾಡಲಾರೆನು; ಆದರೆ ಯೆಹೋವನು ಆಜ್ಞಾಪಿಸುವುದನ್ನೇ ಮಾತಾಡುವೆನೆಂದು ನೀನು ನನ್ನ ಬಳಿಗೆ ಕಳುಹಿಸಿದ ದೂತರಿಗೆ ಹೇಳಲಿಲ್ಲವೇ? 14 ಆಗಲಿ, ನಾನು ನನ್ನ ಸ್ವಜನರ ಬಳಿಗೆ ಹೋಗುತ್ತೇನೆ. ಆದರೆ ಮುಂದೆ ಆ ಜನರು ನಿನ್ನ ಜನರಿಗೆ ಏನು ಮಾಡುವರೋ ಅದನ್ನು ನಿನಗೆ ತಿಳಿಸುತ್ತೇನೆ, ಕೇಳು” ಎಂದು ಹೇಳಿದನು.
ಬಿಳಾಮನ ಕೊನೆಯ ಸಂದೇಶ
15 ಆಗ ಬಿಳಾಮನು ಹೀಗೆಂದನು:
 
“ಬೆಯೋರನ ಮಗನಾದ ಬಿಳಾಮನ ಸಂದೇಶವಿದು:
ನಾನು ಸ್ಪಷ್ಟವಾಗಿ ನೋಡುತ್ತಿರುವ ಸಂಗತಿಗಳ ಬಗ್ಗೆ ಮಾತಾಡುತ್ತಿದ್ದೇನೆ.
16 ನಾನು ದೇವರ ಮುಂದೆ ಅಡ್ಡಬೀಳುತ್ತೇನೆ,
ಆದರೆ ನನ್ನ ಕಣ್ಣುಗಳು ಮುಚ್ಚಲ್ಪಟ್ಟಿಲ್ಲ.
ನಾನು ದೇವರ ವಾಕ್ಯಗಳನ್ನು ಕೇಳುತ್ತಿದ್ದೇನೆ.
ನಾನು ಮಹೋನ್ನತನಾದ ದೇವರಿಂದ ಜ್ಞಾನವನ್ನು ಹೊಂದಿಕೊಳ್ಳುತ್ತಿದ್ದೇನೆ.
ಸರ್ವಶಕ್ತನಾದ ದೇವರು ತೋರಿಸುವ ಸಂಗತಿಗಳನ್ನು
ನಾನು ನೋಡುತ್ತಿದ್ದೇನೆ.
 
17 “ಬರುತ್ತಿರುವ ಒಬ್ಬನನ್ನು ನೋಡುತ್ತಿದ್ದೇನೆ.
ಆದರೆ ಈಗಲ್ಲ. ಬರುತ್ತಿರುವ ಒಬ್ಬನನ್ನು ನೋಡುತ್ತಿದ್ದೇನೆ, ಆದರೆ ಬೇಗನೆ ಅಲ್ಲ.
ಯಾಕೋಬನ ವಂಶದಿಂದ ನಕ್ಷತ್ರವೊಂದು ಬರುವುದು.
ಇಸ್ರೇಲರಿಂದ ಅರಸನೊಬ್ಬನು ಬರುವನು.
ಅವನು ಮೋವಾಬ್ಯರ ತಲೆಯನ್ನು ಜಜ್ಜುವನು.
ಆ ಅರಸನು ಶೇತನ ಪುತ್ರರೆಲ್ಲರ ತಲೆಗಳನ್ನು ಜಜ್ಜುವನು.
18 ಇಸ್ರೇಲರು ಬಲಿಷ್ಠರಾಗುವರು.
ಅವರು ಎದೋಮ್ ದೇಶವನ್ನು ಪಡೆಯುವರು.
ಅವರು ತಮ್ಮ ವೈರಿಯಾದ ಸೇಯೀರನ ದೇಶವನ್ನು ಪಡೆಯುವರು.
 
19 “ಯಾಕೋಬನ ವಂಶದಿಂದ ಹೊಸ ಅರಸನೊಬ್ಬನು ಬರುವನು.
ಆ ಅರಸನು ಆ ಪಟ್ಟಣದಲ್ಲಿ ಉಳಿದವರನ್ನು ನಾಶಮಾಡುವನು.”
 
20 “ತರುವಾಯ ಬಿಳಾಮನು ಅಮಾಲೇಕ್ಯರನ್ನು ನೋಡಿ ಹೀಗೆಂದನು:
 
“ಅಮಾಲೇಕ್ಯರು ಎಲ್ಲಾ ಜನಾಂಗಗಳಲ್ಲಿ ಬಲಿಷ್ಠರು; ಅಮಾಲೇಕ್ಯರು ಎಲ್ಲಾ ಜನಾಂಗಗಳಲ್ಲಿ ಮೊದಲನೆಯವರು;
ಆದರೆ ಕೊನೆಯಲ್ಲಿ ಅವರು ನಾಶವಾಗುವರು.”
 
21 ಆಗ ಬಿಳಾಮನು ಕೇನ್ಯರನ್ನು ನೋಡಿ ಹೀಗೆಂದನು:
 
“ನಿಮ್ಮ ಮನೆಯು ಬೆಟ್ಟದ ತುದಿಯಲ್ಲಿರುವ ಪಕ್ಷಿಯ ಗೂಡಿನಂತೆ* ಗೂಡು ಹೀಬ್ರೂ ಭಾಷೆಯಲ್ಲಿ ಈ ಪದವು “ಕೇನ್ಯರು” ಎಂಬ ಉಚ್ಛಾರಣೆಯನ್ನು ಹೊಂದಿದೆ.
ಸುರಕ್ಷಿತವಾಗಿದೆಯೆಂದು ನೀವು ನಂಬುತ್ತೀರಿ.
22 ಆದರೆ ಕೇನ್ಯರೇ, ಅಶ್ಶೂರ್ಯವು ನಿಮ್ಮನ್ನು ಸೆರೆ ಒಯ್ಯುವಾಗ
ಅದು ನಾಶವಾಗುವುದು.”
 
23 ಆಗ ಬಿಳಾಮನು ಹೀಗೆಂದನು:
 
“ದೇವರು ಇದನ್ನು ಮಾಡುವಾಗ ಯಾರೂ ಉಳಿಯರು.
24 ಸೈಪ್ರಸ್‌ನ ತೀರಗಳಿಂದ ಹಡಗುಗಳು ಬರುವವು.
ಅವರು ಅಶ್ಶೂರ್ಯವನ್ನೂ ಏಬೆರವನ್ನೂ ಸೋಲಿಸುವರು;
ಆದರೆ ಅವರು ಸಹ ನಾಶವಾಗುವರು.”
 
25 ಆಗ ಬಿಳಾಮನು ಎದ್ದು ತನ್ನ ಸ್ಥಳಕ್ಕೆ ಹಿಂತಿರುಗಿ ಹೋದನು. ಬಾಲಾಕನೂ ಸಹ ಹೊರಟುಹೋದನು.

*24:21: ಗೂಡು ಹೀಬ್ರೂ ಭಾಷೆಯಲ್ಲಿ ಈ ಪದವು “ಕೇನ್ಯರು” ಎಂಬ ಉಚ್ಛಾರಣೆಯನ್ನು ಹೊಂದಿದೆ.