6
ನಾಲ್ಕು ರಥಗಳು
ನಾನು ತಿರುಗಿ ಮೇಲಕ್ಕೆ ನೋಡಿದಾಗ ನಾಲ್ಕು ರಥಗಳು ನಾಲ್ಕು ಹಿತ್ತಾಳೆಯ ಪರ್ವತಗಳ ಮಧ್ಯೆ ಓಡುವುದನ್ನು ಕಂಡೆನು. ಮೊದಲನೇ ರಥವನ್ನು ಕೆಂಪು ಕುದುರೆಗಳು ಎಳೆಯುತ್ತಿದ್ದವು. ಎರಡನೇ ರಥವನ್ನು ಕಪ್ಪು ಕುದುರೆಗಳು ಎಳೆಯುತ್ತಿದ್ದವು. ಬಿಳಿ ಕುದುರೆಗಳು ಮೂರನೇ ರಥವನ್ನೂ ಕೆಂಪು ಮಚ್ಚೆಗಳುಳ್ಳ ಕುದುರೆಗಳು ನಾಲ್ಕನೇ ರಥವನ್ನೂ ಎಳೆಯುತ್ತಿದ್ದವು. “ಇವು ಏನನ್ನು ಸೂಚಿಸುತ್ತವೆ?” ಎಂದು ನನ್ನೊಡನೆ ಮಾತನಾಡುತ್ತಿದ್ದ ದೂತನೊಡನೆ ವಿಚಾರಿಸಿದೆನು.
ದೇವದೂತನು ಹೇಳಿದ್ದೇನೆಂದರೆ, “ಇವು ನಾಲ್ಕು ಗಾಳಿಗಳು. ಅವು ಭೂಲೋಕದ ಒಡೆಯನ ಬಳಿಯಿಂದ ಈಗ ತಾನೇ ಬಂದವು. ಕಪ್ಪು ಕುದುರೆಗಳು ಉತ್ತರದಿಕ್ಕಿಗೆ ಹೋಗುವವು. ಕೆಂಪು ಕುದುರೆಗಳು ಪೂರ್ವದಿಕ್ಕಿಗೆ ಹೋಗುವವು. ಬಿಳಿ ಕುದುರೆಗಳು ಪಶ್ಚಿಮಕ್ಕೂ ಮಚ್ಚೆಯಿರುವ ಕುದುರೆಗಳು ದಕ್ಷಿಣ ದಿಕ್ಕಿಗೂ ಹೋಗುವವು.”
ಕೆಂಪು ಮಚ್ಚೆ ಇರುವ ಕುದುರೆಗಳು ತಮಗೆ ನೇಮಕವಾದ ಜಾಗಕ್ಕೆ ಹೋಗಿ ಅದನ್ನು ನೋಡಲು ಆತುರಗೊಂಡಿದ್ದವು. ಆಗ ದೂತನು ಅವುಗಳಿಗೆ, “ಹೋಗಿ, ಭೂಮಿಯ ಮೇಲೆ ಹೋಗಿ ಬನ್ನಿ” ಎಂದು ಹೇಳಿದಾಗ ಅವುಗಳು ಹೋಗಿ ತಮ್ಮ ಪ್ರಾಂತ್ಯದಲ್ಲಿ ನಡೆದಾಡಿದವು.
ಆಗ ಯೆಹೋವನು ನನ್ನನ್ನು ಗಟ್ಟಿಯಾಗಿ ಕರೆದು, “ನೋಡು, ಆ ಉತ್ತರ ದಿಕ್ಕಿಗೆ ಹೋಗುತ್ತಿದ್ದ ಆ ಕುದುರೆಗಳು ತಮ್ಮ ಕೆಲಸವನ್ನು ಬಾಬಿಲೋನಿನಲ್ಲಿ ಮುಗಿಸಿವೆ. ಅವು ನನ್ನ ಆತ್ಮವನ್ನು ಶಾಂತಗೊಳಿಸಿವೆ. ಈಗ ನಾನು ಕೋಪಗೊಂಡಿಲ್ಲ.” ಎಂದು ಹೇಳಿದನು.
ಪ್ರಧಾನ ಯಾಜಕನಾದ ಯೆಹೋಶುವನು ಕಿರೀಟ ಹೊಂದುವನು
ಆಗ ತಿರುಗಿ ನಾನು ಯೆಹೋವನಿಂದ ಸಂದೇಶವನ್ನು ಪಡಕೊಂಡೆನು. 10 ಆತನು ಹೇಳಿದ್ದೇನೆಂದರೆ, “ಹೆಲ್ದಾಯ, ತೋಬೀಯ ಮತ್ತು ಯೆದಾಯ ಇವರು ಬಾಬಿಲೋನಿನಿಂದ ಸೆರೆಯಾಳುಗಳಾಗಿ ಬಂದಿರುತ್ತಾರೆ. ಅವರಿಂದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ಚೆಫನ್ಯನ ಮಗನಾದ ಯೋಷೀಯನ ಮನೆಗೆ ಹೋಗಿರಿ. 11 ಆ ಬೆಳ್ಳಿಬಂಗಾರಗಳಿಂದ ಒಂದು ಕಿರೀಟವನ್ನು ಮಾಡಿ ಯೆಹೋಶುವನ ತಲೆಯ ಮೇಲಿಟ್ಟು ಅವನಿಗೆ ಹೀಗೆ ಹೇಳಿರಿ: (ಯೆಹೋಶುವನು ಪ್ರಧಾನ ಯಾಜಕನಾಗಿದ್ದನು. ಇವನ ತಂದೆ ಯೆಹೋಜಾದಾಕನು.) 12 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ,
 
“ಕೊಂಬೆ ಎಂಬ ಒಬ್ಬಾತನು ಇದ್ದಾನೆ.
ಆತನು ಬೆಳೆದು ಬಲಿಷ್ಠನಾಗುವನು.
ಆತನು ದೇವಾಲಯವನ್ನು ಕಟ್ಟುವನು.
13 ಆತನು ದೇವಾಲಯವನ್ನು ಕಟ್ಟುವನು
ಮತ್ತು ಗೌರವವನ್ನು ಹೊಂದುವನು.
ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ರಾಜ್ಯವನ್ನು ಆಳುವನು.
ಒಬ್ಬ ಯಾಜಕನು ಆತನ ಸಿಂಹಾಸನದ ಬಳಿಯಲ್ಲಿ ನಿಂತುಕೊಂಡಿರುವನು.
ಅವರಿಬ್ಬರೂ ಸಮಾಧಾನದಿಂದ ಕೆಲಸ ಮಾಡುವರು.
 
14 ಜನರು ಸ್ಮರಿಸಿಕೊಳ್ಳುವಂತೆ ಅವರು ಆ ಕಿರೀಟವನ್ನು ಆಲಯದೊಳಗೆ ಇಡುವರು. ಅದು ಹೆಲ್ದಾಯ, ತೋಬೀಯ, ಯೆದಾಯ ಮತ್ತು ಚೆಫನ್ಯನ ಮಗನಾದ ಹೇನ್‌ನಿಗೆ ಘನತೆಯನ್ನು ತರುವುದು.”
15 ದೂರದಲ್ಲಿ ವಾಸಿಸುವ ಜನರು ಬಂದು ಆಲಯವನ್ನು ಕಟ್ಟುವರು. ಆಗ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ನೀವು ತಿಳಿಯುವಿರಿ. ಯೆಹೋವನು ಹೇಳಿದಂತೆ ನೀವು ಮಾಡಿದರೆ ಇವೆಲ್ಲಾ ನೆರವೇರುವುದು.