2
ಜನರ ಜೀವಿತವನ್ನು ಮಾರ್ಪಡಿಸಲು ದೇವರ ಕರೆ
ನಾಚಿಕೆಗೆಟ್ಟವರೇ, ನಿಮ್ಮ ಜೀವಿತವನ್ನು ಬದಲಾಯಿಸಿರಿ. ನೀವು ಒಣಗಿ, ಸತ್ತ ಹೂವಿನೋಪಾದಿಯಾಗುವ ಮೊದಲೇ ನಿಮ್ಮ ಜೀವಿತವನ್ನು ಮಾರ್ಪಡಿಸಿರಿ. ಬಿಸಿಲೇರಿದಾಗ ಹೂವು ಬಾಡಿಹೋಗಿ ಒಣಗುತ್ತದೆ. ಅದೇ ಪ್ರಕಾರ ಯೆಹೋವನು ತನ್ನ ಕೋಪವನ್ನು ಪ್ರದರ್ಶಿಸುವಾಗ ನೀವು ಹಾಗೆ ಆಗುವಿರಿ. ಆದ್ದರಿಂದ ಯೆಹೋವನ ಕೋಪದ ದಿನವು ನಿಮ್ಮ ಮೇಲೆ ಬರುವುದಕ್ಕಿಂತ ಮೊದಲೇ ನಿಮ್ಮ ಜೀವಿತವನ್ನು ಬದಲಾಯಿಸಿರಿ. ದೀನರೇ, ಯೆಹೋವನ ಬಳಿಗೆ ಬನ್ನಿರಿ. ಆತನ ನಿಯಮಗಳಿಗೆ ಒಳಗಾಗಿರಿ, ಒಳ್ಳೇದನ್ನು ಮಾಡಿರಿ, ದೀನರಾಗಿರಿ. ಯೆಹೋವನು ತನ್ನ ಕೋಪಾಗ್ನಿಯನ್ನು ಪ್ರದರ್ಶಿಸುವ ದಿವಸದಲ್ಲಿ ನೀವು ರಕ್ಷಿಸಲ್ಪಡಬಹುದು.
ಇಸ್ರೇಲರ ನೆರೆಯವರನ್ನು ಯೆಹೋವನು ಶಿಕ್ಷಿಸುವನು
ಗಾಜದಲ್ಲಿ ಯಾರೂ ಉಳಿಯರು. ಅಷ್ಕೆಲೋನ್ ನಾಶವಾಗುವದು. ಮಧ್ಯಾಹ್ನದೊಳಗಾಗಿ ಅಷ್ಡೋದನ್ನು ಬಿಟ್ಟು ಹೋಗುವಂತೆ ಬಲವಂತ ಮಾಡಲಾಗುವುದು. ಎಕ್ರೋನ್ ನಿರ್ಜನವಾಗುವುದು. ಫಿಲಿಷ್ಟಿಯ ಜನರೇ, ಕರಾವಳಿ ಪ್ರದೇಶದಲ್ಲಿ ವಾಸಿಸುವ ಜನರೇ, ಯೆಹೋವನಿಂದ ಬಂದ ಸಂದೇಶ ನಿಮಗಾಗಿಯೇ. ಕಾನಾನ್ ದೇಶವೇ, ಪಾಲೆಸ್ತೀನ್ ದೇಶವೇ, ನೀವು ನಾಶಗೊಳ್ಳುವಿರಿ. ನಿಮ್ಮಲ್ಲಿ ಯಾರೂ ವಾಸಿಸರು. ಕರಾವಳಿಯಲ್ಲಿರುವ ನಿಮ್ಮ ಪ್ರಾಂತ್ಯವು ಕುರುಬರಿಗೆ ತಮ್ಮ ಕುರಿಗಳನ್ನು ಮೇಯಿಸುವ ಬಯಲಾಗುವದು. ಆ ದೇಶವು ಯೆಹೂದದಲ್ಲಿ ಅಳಿದುಳಿದವರಿಗೆ ಆಗುವದು. ಯೆಹೂದದಲ್ಲಿರುವ ಜನರನ್ನು ಯೆಹೋವನು ನೆನಪುಮಾಡುವನು. ಅವರು ಸೆರೆಯಾಳುಗಳಾಗಿ ಅನ್ಯದೇಶದಲ್ಲಿರುವರು. ಆದರೆ ಯೆಹೋವನು ಅವರನ್ನು ಹಿಂದಕ್ಕೆ ತರುವನು. ಆಗ ಯೆಹೂದದ ಜನರು ಆ ಬಯಲಿನಲ್ಲಿ ತಮ್ಮ ಕುರಿಮಂದೆಗಳನ್ನು ಮೇಯಿಸುವರು. ಸಾಯಂಕಾಲ ಬರಿದಾದ ಅಷ್ಕೆಲೋನಿನ ಮನೆಗಳಲ್ಲಿ ತಂಗುವರು.
ಯೆಹೋವನು ಹೀಗೆನ್ನುತ್ತಾನೆ, “ಮೋವಾಬ್ಯರೂ ಅಮ್ಮೋನ್ಯರೂ ಏನು ಮಾಡಿದ್ದಾರೆಂದು ನನಗೆ ಗೊತ್ತಿದೆ. ಅವರು ನನ್ನ ಜನರನ್ನೂ ಕೆಣಕಿದರು. ಅವರ ಪ್ರದೇಶಗಳನ್ನು ಎಳೆದುಕೊಂಡು ತಮ್ಮ ರಾಜ್ಯಗಳನ್ನು ವಿಸ್ತರಿಸಿದರು. ನನ್ನ ಜೀವದಾಣೆ, ಮೋವಾಬ್ಯರೂ ಅಮ್ಮೋನ್ಯರೂ ಸೊದೋಮ್ ಗೊಮೋರದವರಂತೆ ನಾಶವಾಗುವರು. ನಾನು ಸರ್ವಶಕ್ತನಾದ ಇಸ್ರೇಲರ ದೇವರಾಗಿರುವೆನು. ನಾನು ವಾಗ್ದಾನ ಮಾಡುವದೇನೆಂದರೆ, ಆ ರಾಜ್ಯಗಳು ಸಂಪೂರ್ಣವಾಗಿ ನಾಶವಾಗುವವು. ಅವರ ಭೂಮಿಯು ಕಳೆಗಳಿಂದ ತುಂಬಿಹೋಗುವದು. ಅದು ಮೃತ್ಯುಸಮುದ್ರದ ಉಪ್ಪಿನಿಂದ ತುಂಬಿಹೋದಂತಿರುವದು. ನನ್ನ ಜನರಲ್ಲಿ ಉಳಿದವರು ಅವರ ದೇಶವನ್ನೂ ಅಲ್ಲಿ ಉಳಿದಿರುವ ವಸ್ತುಗಳನ್ನೂ ತಮ್ಮ ವಶಮಾಡಿಕೊಳ್ಳುವರು.”
10 ಸರ್ವಶಕ್ತನಾದ ಯೆಹೋವನ ಜನರನ್ನು ಮೋವಾಬ್ಯರು ಮತ್ತು ಅಮ್ಮೋನ್ಯರು ಕ್ರೂರವಾಗಿ ಕಂಡು ಅವರನ್ನು ಪರಿಹಾಸ್ಯಮಾಡಿದ್ದರಿಂದಲೂ ಈ ಸಂಗತಿಗಳು ಅವರಲ್ಲಿ ನೆರವೇರುವವು. 11 ಅವರು ಯೆಹೋವನಿಗೆ ಭಯಪಡುವರು. ಯಾಕೆಂದರೆ ಆತನು ಅವರ ದೇವರುಗಳನ್ನು ನಾಶಮಾಡಿದ್ದಾನೆ. ಆಗ ದೂರದಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸುವರು. 12 ಇಥಿಯೋಪ್ಯದ ಜನರೇ, ಇದರಲ್ಲಿ ನೀವೂ ಸೇರಿರುವಿರಿ. ಯೆಹೋವನ ಕತ್ತಿಯು ನಿಮ್ಮ ಜನರೆಲ್ಲರನ್ನು ಕೊಲ್ಲುವದು. 13 ದೇವರು ಆಮೇಲೆ ಉತ್ತರಕ್ಕೆ ಮುಖಮಾಡಿ ಅಶ್ಶೂರವನ್ನು ಶಿಕ್ಷಿಸುವನು. ಆತನು ನಿನೆವೆ ಪಟ್ಟಣವನ್ನು ಶಿಕ್ಷಿಸಿದಾಗ ಅದು ನಿರ್ಜನವಾದ ಮರುಭೂಮಿಯಾಗುವದು. 14 ಆಮೇಲೆ ಆ ಹಾಳುಬಿದ್ದ ನಗರದಲ್ಲಿ ಕಾಡುಪ್ರಾಣಿಗಳೂ ಕುರಿಗಳೂ ವಾಸಮಾಡುವವು. ಕಾಗೆಗಳೂ ಗೂಬೆಗಳೂ ಪಟ್ಟಣದ ಸ್ತಂಭಗಳ ಮೇಲೆ ಕುಳಿತುಕೊಂಡು ಒಂದನ್ನೊಂದು ಕರೆಯುವವು. ಬಾಗಿಲ ಹೊಸ್ತಿಲಲ್ಲಿ ಕಾಗೆಗಳು ಕುಳಿತುಕೊಳ್ಳುವವು. ಕಪ್ಪುಪಕ್ಷಿಗಳು ನಿರ್ಜನವಾದ ಮನೆಗಳ ಮೇಲೆ ಕುಳಿತುಕೊಳ್ಳುವವು. 15 ಈ ನಿನೆವೆಯು ಸಂತೋಷಭರಿತ ನಗರಿಯಾಗಿದೆ. ಅದರ ನಿವಾಸಿಗಳು ತಾವು ಸುರಕ್ಷಿತರಾಗಿದ್ದೇವೆಂದು ತಿಳಿದಿದ್ದಾರೆ. ನಿನೆವೆಯು ಲೋಕದಲ್ಲಿ ಅತ್ಯಂತ ಮಹತ್ವಪೂರ್ಣ ಸ್ಥಳವೆಂದು ತಿಳಿದಿದ್ದಾರೆ. ಅವರು ಬಹಳ ಗರ್ವಪಡುತ್ತಾರೆ. ಆದರೆ ಆ ನಗರವು ನಾಶವಾಗುವದು. ಕಾಡುಮೃಗಗಳ ಹಕ್ಕೆಯಾಗುವದು. ದಾಟಿಹೋಗುವ ಜನರು, ತಮ್ಮ ಆಶ್ಚರ್ಯವನ್ನು ಸಿಳ್ಳುಹಾಕಿ ತಲೆಯಾಡಿಸಿ “ಎಂಥಾ ದುರ್ಗತಿ” ಎಂದು ಉದ್ಗರಿಸುವರು.