೨೯
ದಾವೀದನೂ ಮತ್ತು ಪ್ರಧಾನರೂ ದೇವಾಲಯಕ್ಕಾಗಿ ಕೊಟ್ಟ ಕಾಣಿಕೆ
೧ ತರುವಾಯ ಅರಸನಾದ ದಾವೀದನು, “ದೇವರು ನನ್ನ ಮಗನಾದ ಸೊಲೊಮೋನನನ್ನೇ ದೇವಾಲಯ ಕಟ್ಟಲು ಆರಿಸಿಕೊಂಡಿದ್ದಾನೆ. ಆದರೆ ಅವನು ಇನ್ನೂ ಎಳೇ ಪ್ರಾಯದವನು. ಮಾಡತಕ್ಕ ಕೆಲಸವೋ ವಿಶೇಷವಾದದ್ದು. ಕಟ್ಟತಕ್ಕ ಮಂದಿರವು ದೇವರಾದ ಯೆಹೋವನಿಗಾಗಿಯೇ ಹೊರತು ಮನುಷ್ಯನಿಗಾಗಿಯಲ್ಲ. ೨ ನಾನು ನನ್ನಿಂದಾಗುವಷ್ಟು ಪ್ರಯಾಸಪಟ್ಟು ಬಂಗಾರದ ಕೆಲಸಕ್ಕಾಗಿ ಬೇಕಾಗುವ ಬಂಗಾರ, ಬೆಳ್ಳಿಯ ಕೆಲಸಕ್ಕಾಗಿ ಬೇಕಾಗುವ ಬೆಳ್ಳಿ, ತಾಮ್ರದ ಕೆಲಸಕ್ಕಾಗಿ ಬೇಕಾಗುವ ತಾಮ್ರ, ಕಬ್ಬಿಣದ ಕೆಲಸಕ್ಕಾಗಿ ಬೇಕಾಗುವ ಕಬ್ಬಿಣ, ಮರದ ಕೆಲಸಕ್ಕಾಗಿ ಬೇಕಾಗುವ ಮರ ಇವುಗಳನ್ನೂ, ಗೋಮೇಧಿಕ ರತ್ನ, ಕೆತ್ತುವುದಕ್ಕೆ ಬೇಕಾಗುವ ರತ್ನ, ಕೆಂಪು ಹರಳು, ವಿಚಿತ್ರ ವರ್ಣದ ಕಲ್ಲು, ಎಲ್ಲಾ ತರದ ಮಣಿ, ಚಂದ್ರಕಾಂತಶಿಲೆ ಇವುಗಳನ್ನೂ ನನ್ನ ದೇವರ ಮಂದಿರಕ್ಕೋಸ್ಕರ ರಾಶಿ ರಾಶಿಯಾಗಿ ಸಂಗ್ರಹಿಸಿದ್ದೇನೆ. ೩ ನಾನು ಪವಿತ್ರಾಲಯಕ್ಕೆ ಇವುಗಳನ್ನೆಲ್ಲಾ ಸಂಗ್ರಹಿಸಿದ್ದಲ್ಲದೆ ನನ್ನ ದೇವರ ಆಲಯದ ಮೇಲಣ ಅನುರಾಗದಿಂದ ಅದಕ್ಕೊಸ್ಕರ ನನ್ನ ಸ್ವಂತ ಸೊತ್ತಿನಿಂದ ೪ ಮೂರು ಸಾವಿರ ತಲಾಂತು ಓಫೀರ್ ದೇಶದ ಬಂಗಾರವನ್ನೂ, ಏಳು ಸಾವಿರ ತಲಾಂತು ಚೊಕ್ಕ ಬೆಳ್ಳಿಯನ್ನೂ ಕೊಡುತ್ತೇನೆ. ಈ ಬೆಳ್ಳಿ ಬಂಗಾರದಿಂದ ಆಲಯದ ಗೋಡೆಗಳನ್ನು ಹೊದಿಸಬೇಕು. ೫ ಅಕ್ಕಸಾಲಿಗರು ಮಾಡಬಹುದಾದ ಎಲ್ಲಾ ತರದ ಬೆಳ್ಳಿ ಬಂಗಾರದ ಸಾಮಾನುಗಳನ್ನು ಮಾಡಿಸಬೇಕು. ಈ ಹೊತ್ತು ಉದಾರಹಸ್ತದಿಂದ ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸುವುದಕ್ಕೆ ಯಾರಿಗೆ ಮನಸ್ಸಿದೆಯೋ ಅವರು ಮುಂದೆ ಬರಲಿ” ಎಂದು ನೆರೆದ ಸಭೆಗೆ ಹೇಳಿದನು. ೬ ಆಗ ಇಸ್ರಾಯೇಲ್ ಗೋತ್ರಕುಟುಂಬಗಳ ಪ್ರಧಾನರೂ, ಸಹಸ್ರಾಧಿಪತಿಗಳೂ, ಅರಸನ ಕೆಲಸದವರ ಮುಖ್ಯಸ್ಥರೂ, ದೇವಾಲಯದ ಕೆಲಸಕ್ಕೋಸ್ಕರ ಸ್ವ ಇಚ್ಛೆಯಿಂದ ೭ ಐದು ಸಾವಿರ ತಲಾಂತು, ಹತ್ತು ಸಾವಿರ ಪವನು ಬಂಗಾರವನ್ನೂ, ಹತ್ತು ಸಾವಿರ ತಲಾಂತು ಬೆಳ್ಳಿಯನ್ನೂ, ಹದಿನೆಂಟು ಸಾವಿರ ತಲಾಂತು ತಾಮ್ರವನ್ನೂ, ಒಂದು ಲಕ್ಷ ತಲಾಂತು ಕಬ್ಬಿಣವನ್ನೂ ಕೊಟ್ಟರು. ೮ ರತ್ನಗಳನ್ನು ಹೊಂದಿದ್ದವರು ಅವುಗಳನ್ನು ಯೆಹೋವನ ಆಲಯದ ಭಂಡಾರಕ್ಕೋಸ್ಕರ ಗೇರ್ಷೋನ್ಯನಾದ ಯೆಹೀಯೇಲನ ವಶಕ್ಕೆ ಕೊಟ್ಟರು. ೯ ಅವರು ಪೂರ್ಣಮನಸ್ಸಿನಿಂದಲೂ, ಸ್ವ ಇಚ್ಛೆಯಿಂದಲೂ ಯೆಹೋವನಿಗೆ ಕಾಣಿಕೆ ನೀಡಿದ್ದನ್ನು ನೋಡಿ ಜನರೆಲ್ಲರೂ ಸಂತೋಷಪಟ್ಟರು. ಅರಸನಾದ ದಾವೀದನಿಗೂ ಬಹಳ ಸಂತೋಷವಾಯಿತು.
ದಾವೀದನ ಪ್ರಾರ್ಥನೆ
೧೦ ಅನಂತರ ದಾವೀದನು ನೆರೆದ ಸಭೆಯ ಮುಂದೆ ಯೆಹೋವನನ್ನು ಸ್ತುತಿಸಿ ಹೇಳಿದ್ದೇನೆಂದರೆ, “ನಮ್ಮ ಪಿತೃವಾದ ಇಸ್ರಾಯೇಲಿನ ದೇವರೇ. ಯೆಹೋವನೇ, ಯುಗಯುಗಾಂತರಗಳಲ್ಲಿ ನಿನಗೆ ಕೊಂಡಾಟವಾಗಲಿ. ೧೧ ಯೆಹೋವನೇ, ಎಲ್ಲಾ ಮಹಿಮೆ, ವೈಭವ, ಪರಾಕ್ರಮ, ಪ್ರಭಾವ, ಪ್ರತಾಪ, ಪ್ರತಿಭೆ ಎಲ್ಲವೂ ನಿನ್ನವೆ. ಭೂಮ್ಯಾಕಾಶಗಳಲ್ಲಿ ಇರುವದೆಲ್ಲಾ ನಿನ್ನದೇ. ಯೆಹೋವನೇ ರಾಜ್ಯವು ನಿನ್ನದು. ನೀನು ಮಹೋನ್ನತನಾಗಿ ಸರ್ವವನ್ನು ಆಳುವವನಾಗಿರುತ್ತೀ. ೧೨ ಪ್ರಭಾವ ಐಶ್ವರ್ಯಗಳು ನಿನ್ನ ಸನ್ನಿಧಿಯಿಂದ ಬರುತ್ತವೆ. ನೀನು ಸರ್ವಾಧಿಕಾರಿಯು. ಬಲಪರಾಕ್ರಮಗಳು ನಿನ್ನ ಹಸ್ತದಲ್ಲಿರುತ್ತವೆ. ಎಲ್ಲಾ ಮಹಿಮೆಗೂ, ಶಕ್ತಿಗೂ ನೀನೇ ಮೂಲನು. ೧೩ ಆದುದರಿಂದ ನಮ್ಮ ದೇವರೇ ನಾವು ನಿನಗೆ ಕೃತಜ್ಞತಾಸ್ತುತಿಮಾಡುತ್ತಾ, ನಿನ್ನ ಪ್ರಭಾವವುಳ್ಳ ನಾಮವನ್ನು ಕೀರ್ತಿಸುತ್ತೇವೆ. ೧೪ ನಾವು ಸ್ವ ಇಚ್ಛೆಯಿಂದ ನಿನಗೆ ಕಾಣಿಕೆಗಳನ್ನು ಸಮರ್ಪಿಸಲು ನಾನಾಗಲಿ, ನನ್ನ ಪ್ರಜೆಗಳಾಗಲಿ ಸಮರ್ಥರಲ್ಲ. ಸಮಸ್ತವೂ ನಿನ್ನಿಂದಲೇ ಸಾಧ್ಯವಾಯಿತು, ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು. ೧೫ ನಾವು ನಿನ್ನ ದೃಷ್ಟಿಯಲ್ಲಿ ಪರದೇಶಿಗಳೂ, ನಮ್ಮ ಪಿತೃಗಳೆಲ್ಲರಂತೆ ಪ್ರವಾಸಿಗಳೂ ಆಗಿದ್ದೇವೆ. ನಮ್ಮ ಆಯುಷ್ಕಾಲವು ನೆರಳಿನಂತಿದೆ. ನಮಗೆ ಯಾವ ನಿರೀಕ್ಷೆಯೂ ಇಲ್ಲ. ೧೬ ನಮ್ಮ ದೇವರಾದ ಯೆಹೋವನೇ, ನಿನ್ನ ಪರಿಶುದ್ಧ ನಾಮಕ್ಕೋಸ್ಕರ ಆಲಯಕಟ್ಟಿಸಬೇಕೆಂದು ಸಂಗ್ರಹಿಸಿಟ್ಟಿರುವ ಈ ಎಲ್ಲಾ ವಸ್ತುಗಳು ನಿನ್ನಿಂದಲೇ ನಮಗೆ ದೊರಕಿದವು. ಇವೆಲ್ಲಾ ನಿನ್ನವೇ. ೧೭ ನನ್ನ ದೇವರೇ, ನೀನು ಹೃದಯವನ್ನು ಶೋಧಿಸುವವನೂ, ಯಥಾರ್ಥಚಿತ್ತರನ್ನು ಮೆಚ್ಚುವವನೂ ಆಗಿದ್ದಿ ಎಂಬುದನ್ನು ಬಲ್ಲೆನು. ನಾನಂತೂ ಯಥಾರ್ಥಮನಸ್ಸಿನಿಂದಲೂ, ಸ್ವ ಇಚ್ಛೆಯಿಂದಲೂ ಇದನ್ನೆಲ್ಲಾ ಕೊಟ್ಟಿದ್ದೇನೆ. ಇಲ್ಲಿ ಕೂಡಿರುವ ನಿನ್ನ ಪ್ರಜೆಗಳೂ ಸ್ವ ಇಚ್ಛೆಯಿಂದಲೇ ಕಾಣಿಕೆಯನ್ನು ಅರ್ಪಿಸಿದ್ದಾರೆ ಎಂದು ನೋಡಿ ಸಂತೋಷಿಸುತ್ತೇನೆ. ೧೮ ನಮ್ಮ ಪಿತೃಗಳಾದ ಅಬ್ರಹಾಮ್, ಇಸಾಕ್ ಮತ್ತು ಇಸ್ರಾಯೇಲರ ದೇವರೇ, ಯೆಹೋವನೇ, ನಿನ್ನ ಪ್ರಜೆಗಳಲ್ಲಿ ಇಂಥಾ ಮನಸ್ಸು ಯಾವಾಗಲೂ ಇರುವಂತೆ ಮಾಡು. ನಿನ್ನಲ್ಲಿ ಭಯಭಕ್ತಿ ಉಳ್ಳವರಾಗಿರುವುದಕ್ಕೆ ಅವರಿಗೆ ಸ್ಥಿರಚಿತ್ತವನ್ನು ಅನುಗ್ರಹಿಸು. ೧೯ ನನ್ನ ಮಗನಾದ ಸೊಲೊಮೋನನು ನಿನ್ನ ಆಜ್ಞಾವಿಧಿಗಳನ್ನು ಕೈಕೊಳ್ಳುತ್ತಿರುವಂತೆಯೂ, ನಾನು ಯಾವ ಮಂದಿರಕ್ಕೊಸ್ಕರ ಇಷ್ಟನ್ನೆಲ್ಲಾ ಸಿದ್ಧಪಡಿಸಿರುತ್ತೇನೋ ಆ ನಿನ್ನ ಮಂದಿರವನ್ನು ಅವನು ಯಥಾರ್ಥಮನಸ್ಸಿನಿಂದ ಕಟ್ಟಿಸಿ ತೀರಿಸುವಂತೆಯೂ ದಯಪಾಲಿಸು” ಎಂದು ಪ್ರಾರ್ಥಿಸಿದನು.
೨೦ ತರುವಾಯ ದಾವೀದನು ನೆರೆದ ಸಭೆಯವರಿಗೆಲ್ಲಾ, “ನಿಮ್ಮ ದೇವರಾದ ಯೆಹೋವನನ್ನು ಸ್ತುತಿಸಿರಿ” ಎಂದು ಹೇಳಲು ಸಮೂಹದವರೆಲ್ಲರೂ ತಮ್ಮ ಪಿತೃಗಳ ದೇವರಾದ ಯೆಹೋವನನ್ನು ಸ್ತುತಿಸುತ್ತಾ ತಲೆಬಾಗಿ ದೇವರಿಗೂ ಮತ್ತು ಅರಸನಿಗೂ ನಮಸ್ಕರಿಸಿದರು.
೨೧ ಮರುದಿನ ಅವರು ಯೆಹೋವನಿಗೆ ಯಜ್ಞಗಳನ್ನೂ, ಸರ್ವಾಂಗಹೋಮಗಳನ್ನೂ ಸಮರ್ಪಿಸಿದರು. ಅವರು ಆ ದಿನದ ಯಜ್ಞಕ್ಕಾಗಿ ಸಾವಿರ ಹೋರಿಗಳನ್ನೂ, ಸಾವಿರ ಟಗರುಗಳನ್ನೂ, ಸಾವಿರ ಕುರಿಮರಿಗಳನ್ನೂ ವಧಿಸಿದರು. ಇವುಗಳೊಡನೆ ಅರ್ಪಿಸತಕ್ಕ ಪಾನದ್ರವ್ಯಗಳನ್ನೂ ಇಸ್ರಾಯೇಲರೆಲ್ಲರಿಗೆ ಸಾಕಾಗುವಷ್ಟು ಸಮಾಧಾನಯಜ್ಞಗಳನ್ನೂ ಸಮರ್ಪಿಸಿ, ಯೆಹೋವನ ಸನ್ನಿಧಿಯಲ್ಲಿ ಮಹಾ ಸಂತೋಷದಿಂದ ಅನ್ನಪಾನಗಳನ್ನು ತೆಗೆದುಕೊಂಡರು.
ಸೊಲೊಮೋನನ ಪಟ್ಟಾಭಿಷೇಕ, ದಾವೀದನ ಮರಣ
೨೨ ಜನರು ದಾವೀದನ ಮಗನಾದ ಸೊಲೊಮೋನನ್ನು ಪುನಃ ಅರಸನನ್ನಾಗಿ ಆರಿಸಿಕೊಂಡು ಅವನನ್ನು ರಾಜನನ್ನಾಗಿಸಿವುದಕ್ಕೂ, ಚಾದೋಕನನ್ನು ಯಾಜಕನಾಗುವುದಕ್ಕೂ ಅಭಿಷೇಕಿಸಿ ಯೆಹೋವನಿಗೋಸ್ಕರ ಪ್ರತಿಷ್ಠಿಸಿದರು. ೨೩ ಅಂದಿನಿಂದ ಸೊಲೊಮೋನನು ತನ್ನ ತಂದೆಯಾದ ದಾವೀದನಿಗೆ ಬದಲು ಅರಸನಾಗಿ ಯೆಹೋವನ ಸಿಂಹಾಸನದಲ್ಲಿ ಕುಳಿತುಕೊಂಡು ವೃದ್ದಿಯಾಗುತ್ತಾ ಬಂದನು. ಅರಸನಾದ ಸೊಲೊಮೋನನಿಗೆ ಇಸ್ರಾಯೇಲರೆಲ್ಲರೂ ವಿಧೇಯರಾಗಿ ನಡೆಯುವವರಾದರು. ೨೪ ಎಲ್ಲಾ ಅಧಿಪತಿಗಳೂ ದಂಡಿನವರೂ ಅರಸನಾದ ದಾವೀದನ ಎಲ್ಲಾ ಮಕ್ಕಳೂ ಅವನಿಗೆ ಅಧೀನರಾದರು. ೨೫ ಯೆಹೋವನು ಇಸ್ರಾಯೇಲರೆಲ್ಲರಿಗೆ ಗೊತ್ತಾಗುವಂತೆ ಸೊಲೊಮೋನನ್ನು ಅಭಿವೃದ್ಧಿಪಡಿಸಿ ಅವನಿಗಿಂತ ಮೊದಲು ಇಸ್ರಾಯೇಲರನ್ನು ಆಳಿದ ಎಲ್ಲಾ ಅರಸರ ವೈಭವಕ್ಕಿಂತಲೂ ಹೆಚ್ಚಿನ ವೈಭವವನ್ನು ಅವನಿಗೆ ಅನುಗ್ರಹಿಸಿದನು.
೨೬ ಹೀಗೆ ಇಷಯನ ಮಗನಾದ ದಾವೀದನು ಇಸ್ರಾಯೇಲರೆಲ್ಲರ ಅರಸನಾಗಿ ಆಳ್ವಿಕೆ ಮಾಡಿದನು. ೨೭ ಅವನು ಹೆಬ್ರೋನಿನಲ್ಲಿ ಏಳು ವರುಷವೂ, ಯೆರೂಸಲೇಮಿನಲ್ಲಿ ಮೂವತ್ತ್ಮುರು ವರುಷವೂ ಒಟ್ಟಿಗೆ ನಲ್ವತ್ತು ವರುಷ ಆಳಿದನು. ೨೮ ಅವನು ಐಶ್ವರ್ಯ, ಮಾನ, ದೀರ್ಘಾಯುಷ್ಯ ಇವುಗಳನ್ನು ಅನುಭವಿಸಿದ ನಂತರ ತುಂಬಾ ವೃದ್ಧನಾಗಿ ಮರಣ ಹೊಂದಿದನು. ಅವನಿಗೆ ಬದಲಾಗಿ ಅವನ ಮಗನಾದ ಸೊಲೊಮೋನನು ಅರಸನಾದನು.
೨೯ ದಾವೀದನ ಪೂರ್ವೋತ್ತರಚರಿತ್ರೆ ಅವನ ಆಳ್ವಿಕೆ, ಪರಾಕ್ರಮ ಅವನಿಗೂ ಇಸ್ರಾಯೇಲರಿಗೂ, ಸುತ್ತಣ ರಾಜ್ಯಗಳಿಗೂ ಸಂಭವಿಸಿದ ಸುಖದುಃಖ ಇವುಗಳ ವೃತ್ತಾಂತ. ೩೦ ದೇವದರ್ಶಿಯಾದ ಸಮುವೇಲ, ಪ್ರವಾದಿಯಾದ ನಾತಾನ, ದೇವದರ್ಶಿಯಾದ ಗಾದ ಇವರ ಚರಿತ್ರೆಗಳಲ್ಲಿಯೂ ಬರೆದಿರುತ್ತದೆ.