ಮಂಜೂಷವನ್ನು ಚೀಯೋನಿನಿಂದ ತಂದದ್ದು ಮತ್ತು ಪ್ರತಿಷ್ಠಾಪಿಸಿದ್ದು
೧ ಅನಂತರ ಅರಸನಾದ ಸೊಲೊಮೋನನು ದಾವೀದ ನಗರವಾದ ಚೀಯೋನಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರುವುದಕ್ಕಾಗಿ ಇಸ್ರಾಯೇಲರ ಹಿರಿಯರೂ ಕುಲಾಧಿಪತಿಗಳು ಇವರೇ ಮೊದಲಾದ ಇಸ್ರಾಯೇಲ್ ಪ್ರಧಾನಪುರುಷರನ್ನು ಯೆರೂಸಲೇಮಿಗೆ ತನ್ನ ಹತ್ತಿರಕ್ಕೆ ಕರೆಯಿಸಿಕೊಂಡನು. ೨ ಇಸ್ರಾಯೇಲರೆಲ್ಲರೂ ಏಳನೇಯ ತಿಂಗಳಾದ ಆಶ್ವೀಜ ಮಾಸದಲ್ಲಿ ಜಾತ್ರೆಗೋಸ್ಕರ ಅರಸನಾದ ಸೊಲೊಮೋನನ ಬಳಿಗೆ ಕೂಡಿಬಂದರು. ೩ ಇಸ್ರಾಯೇಲರ ಎಲ್ಲಾ ಹಿರಿಯರು ಒಟ್ಟಾಗಿ ಬಂದಾಗ ಯಾಜಕರು ಯೆಹೋವನ ಮಂಜೂಷವನ್ನು ಹೊತ್ತುಕೊಂಡರು. ೪ ಉಳಿದ ಯಾಜಕರೂ ಮತ್ತು ಲೇವಿಯರೂ ದೇವದರ್ಶನದ ಗುಡಾರ, ಅದರಲ್ಲಿದ್ದ ಪರಿಶುದ್ಧವಸ್ತು ಇವುಗಳನ್ನು ಹೊತ್ತುಕೊಂಡರು. ೫ ಅರಸನಾದ ಸೊಲೊಮೋನನು ಅಲ್ಲಿ ಕೂಡಿ ಬಂದಿದ್ದ ಎಲ್ಲಾ ಇಸ್ರಾಯೇಲರೂ ಮಂಜೂಷದ ಮುಂದೆ ಅಸಂಖ್ಯವಾದ ಕುರಿದನಗಳನ್ನು ಯಜ್ಞಮಾಡಿದರು. ೬ ಯಾಜಕರು ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತೆಗೆದುಕೊಂಡು ಬಂದು ಮಹಾಪರಿಶುದ್ಧ ಸ್ಥಳವೆನಿಸಿಕೊಳ್ಳುವ ಗರ್ಭಗೃಹದಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗೆ ಅದಕ್ಕೆ ನೇಮಕವಾದ ಸ್ಥಳದಲ್ಲಿ ಇಟ್ಟರು. ೭ ಕೆರೂಬಿಗಳ ರೆಕ್ಕೆಗಳು ಮಂಜೂಷವಿದ್ದ ಸ್ಥಳದ ಮೇಲೆ ಚಾಚಿದವುಗಳಾಗಿದ್ದುದರಿಂದ ಮಂಜೂಷವೂ ಅದರ ಕೋಲುಗಳೂ ಪೂರ್ಣವಾಗಿ ಅವುಗಳ ನೆರಳಿನಲ್ಲಿದ್ದವು. ೮ ಆ ಕೋಲುಗಳು ಬಹಳ ಉದ್ದವಾಗಿದ್ದುದರಿಂದ ಅವುಗಳ ತುದಿಗಳು ಗರ್ಭಗೃಹದ ಎದುರಿನಲ್ಲಿರುವ ಪರಿಶುದ್ಧ ಸ್ಥಳದಲ್ಲಿ ನಿಂತವರಿಗೆ ಕಾಣಿಸಿದರೂ ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ. ಅವು ಇಂದಿನವರೆಗೂ ಅಲ್ಲೇ ಇವೆ. ೯ ಮಂಜೂಷದಲ್ಲಿ ಎರಡು ಕಲ್ಲಿನ ಹಲಿಗೆಗಳ ಹೊರತಾಗಿ ಬೇರೇನೂ ಇರಲಿಲ್ಲ. ಯೆಹೋವನು ಐಗುಪ್ತದಿಂದ ಬಂದ ಇಸ್ರಾಯೇಲರೊಡನೆ ಹೋರೇಬ್ ಬೆಟ್ಟದ ಬಳಿಯಲ್ಲಿ ಒಡಂಬಡಿಕೆ ಮಾಡಿಕೊಂಡ ಮೇಲೆ ಮೋಶೆಯು ಅವುಗಳನ್ನು ಅದರಲ್ಲಿರಿಸಿದನು. ೧೦ ಯಾಜಕರು ಪರಿಶುದ್ಧ ಸ್ಥಳದಿಂದ ಹೊರಗೆ ಬಂದ ಕೂಡಲೆ ಮೇಘವು ಯೆಹೋವನ ಆಲಯವನ್ನು ತುಂಬಿಕೊಂಡಿತು. ೧೧ ಯೆಹೋವನ ತೇಜಸ್ಸಿನಿಂದ ವ್ಯಾಪಿಸಿಕೊಂಡ ಮೇಘವು ಆಲಯವನ್ನು ತುಂಬಿಕೊಂಡದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲು ಆಗಲಿಲ್ಲ.
೧೨ ತರುವಾಯ ಸೊಲೊಮೋನನು, “ಯೆಹೋವನೇ, ಕಾರ್ಗತ್ತಲಲ್ಲಿ ವಾಸಿಸುತ್ತೇನೆಂದು ಹೇಳಿದ್ದೀ. ೧೩ ನಾನು ನಿನಗೋಸ್ಕರ ಒಂದು ಮಂದಿರವನ್ನು ಕಟ್ಟಿಸಿದ್ದೇನೆ. ಅದು ನಿನಗೆ ಶಾಶ್ವತವಾದ ವಾಸಸ್ಥಳವಾಗಿರಲಿ” ಎಂದು ಪ್ರಾರ್ಥನೆಮಾಡಿದನು.
ಸೊಲೊಮೋನನ ಭಾಷಣ
೧೪ ಇದಾದ ಮೇಲೆ ಅರಸನು ಎದ್ದು ನಿಂತು ಇಸ್ರಾಯೇಲ್ ಸಮೂಹದವರ ಕಡೆಗೆ ತಿರುಗಿಕೊಂಡು ಅವರನ್ನು ಆಶೀರ್ವದಿಸಿ, ೧೫ “ಇಸ್ರಾಯೇಲ್ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ನನ್ನ ತಂದೆಯಾದ ದಾವೀದನಿಗೆ ಆತನ ಬಾಯಿ ನುಡಿದಿದ್ದನ್ನು ಆತನ ಹಸ್ತವು ಈಗ ನೆರವೇರಿಸಿದೆ. ೧೬ ಆತನು, ‘ನಾನು ನನ್ನ ಜನರಾದ ಇಸ್ರಾಯೇಲರನ್ನು ಐಗುಪ್ತದಿಂದ ಬರಮಾಡಿದಂದಿನಿಂದ ನನ್ನ ಪ್ರಜೆಗಳಾದ ಇಸ್ರಾಯೇಲರನ್ನು ಆಳುವುದಕ್ಕೋಸ್ಕರ ದಾವೀದನನ್ನು ಆರಿಸಿಕೊಂಡೆನೇ ಹೊರತು ನನ್ನ ನಾಮದ ನಿವಾಸಕ್ಕೋಸ್ಕರ ಆಲಯ ಸ್ಥಾನವನ್ನಾಗಿ ಇಸ್ರಾಯೇಲ್ ಕುಲಗಳ ಯಾವ ಪಟ್ಟಣವನ್ನೂ ಆರಿಸಿಕೊಳ್ಳಲಿಲ್ಲ’ ಎಂದು ಹೇಳಿದ್ದನು. ೧೭ ನನ್ನ ತಂದೆಯಾದ ದಾವೀದನು ಇಸ್ರಾಯೇಲ್ ದೇವರಾದ ಯೆಹೋವನ ಹೆಸರಿಗೋಸ್ಕರ ಮನೆಯನ್ನು ಕಟ್ಟಬೇಕೆಂದು ಮನಸ್ಸು ಮಾಡಿದ್ದನು. ೧೮ ಆಗ ಯೆಹೋವನು ಅವನಿಗೆ, ‘ನೀನು ನನ್ನ ಹೆಸರಿಗೋಸ್ಕರ ಒಂದು ಮನೆಯನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದು ಒಳ್ಳೇದೆ ಸರಿ. ಆದರೂ ನೀನು ಅದನ್ನು ಕಟ್ಟಬಾರದು. ೧೯ ನಿನ್ನಿಂದ ಹುಟ್ಟುವ ಮಗನು ನನ್ನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಬೇಕು’ ಎಂದು ಹೇಳಿದನು. ೨೦ ಯೆಹೋವನು ತಾನು ಕೊಟ್ಟ ಮಾತನ್ನು ನೆರವೇರಿಸಿದನು. ಆತನ ವಾಗ್ದಾನದಂತೆ ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಇಸ್ರಾಯೇಲ್ ಸಿಂಹಾಸನದ ಮೇಲೆ ಅರಸನಾಗಿ ಕುಳಿತುಕೊಂಡು ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಈ ಆಲಯವನ್ನು ಕಟ್ಟಿದೆನು. ೨೧ ಇದಲ್ಲದೆ ಐಗುಪ್ತದೇಶದಿಂದ ಬಿಡುಗಡೆ ಹೊಂದಿದ ನಮ್ಮ ಪಿತೃಗಳಿಗೆ ಯೆಹೋವನಿಂದ ದೊರಕಿದ ನಿಬಂಧನಾಶಾಸನಗಳಿರುವ ಮಂಜೂಷಕ್ಕೆ ಸ್ಥಳವನ್ನು ಪ್ರತ್ಯೇಕಿಸಿ ಅಲ್ಲಿ ಅದನ್ನು ಇರಿಸಿದೆನು” ಎಂದು ಹೇಳಿದನು.
ಸೊಲೊಮೋನನ ಪ್ರಾರ್ಥನೆ
೨೨ ತರುವಾಯ ಸೊಲೊಮೋನನು ಎಲ್ಲಾ ಇಸ್ರಾಯೇಲರ ಎದುರಿನಲ್ಲಿ ಯೆಹೋವನ ಯಜ್ಞವೇದಿಯ ಮುಂದೆ ನಿಂತು ಆಕಾಶದ ಕಡೆಗೆ ಕೈಗಳನ್ನೆತ್ತಿ ಹೀಗೆ ಪ್ರಾರ್ಥಿಸಿದನು, ೨೩ “ಇಸ್ರಾಯೇಲ್ ದೇವರಾದ ಯೆಹೋವನೇ, ಭೂಲೋಕದಲ್ಲಿಯೂ, ಪರಲೋಕದಲ್ಲಿಯೂ ನಿನಗೆ ಸಮಾನನಾದ ದೇವರಿಲ್ಲ. ಪೂರ್ಣಮನಸ್ಸಿನಿಂದ ನಿನಗೆ ನಡೆದುಕೊಳ್ಳುವಂಥ ಸೇವಕರ ವಿಷಯದಲ್ಲಿ ನೀನು ನಿನ್ನ ಒಡಂಬಡಿಕೆಯನ್ನೂ, ಕೃಪೆಯನ್ನೂ ನೆರವೇರಿಸುವವನು. ೨೪ ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ಕೊಟ್ಟ ಮಾತನ್ನು ನೆರವೇರಿಸಿರುವೆ. ನಿನ್ನ ಬಾಯಿ ನುಡಿದಿದ್ದನ್ನು ನಿನ್ನ ಹಸ್ತವು ಈಗ ನೆರವೇರಿಸಿದೆ. ೨೫ ಇಸ್ರಾಯೇಲ್ ದೇವರಾದ ಯೆಹೋವನೇ, ನೀನು ನನ್ನ ತಂದೆಯಾದ ದಾವೀದನಿಗೆ, ‘ನಿನ್ನ ಸಂತಾನದವರು ನಿನ್ನಂತೆ ಜಾಗರೂಕತೆಯಿಂದ ನನ್ನ ಮಾರ್ಗದಲ್ಲೇ ನಡೆದುಕೊಳ್ಳುವುದಾದರೆ, ಅವರು ತಪ್ಪದೆ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು’ ಎಂಬುದಾಗಿ ವಾಗ್ದಾನ ಮಾಡಿದಿಯಲ್ಲಾ ಅದನ್ನು ನೆರವೇರಿಸು. ೨೬ ಇಸ್ರಾಯೇಲ್ ದೇವರೇ, ನೀನು ನಿನ್ನ ಸೇವಕನೂ, ನನ್ನ ತಂದೆಯೂ ಆದ ದಾವೀದನಿಗೆ ನುಡಿದಿದ್ದೆಲ್ಲವೂ ಸಾರ್ಥಕವಾಗಲಿ.
೨೭ “ದೇವರು ನಿಜವಾಗಿ ಭೂಲೋಕದಲ್ಲಿ ವಾಸಿಸುವನೋ? ಆಕಾಶವೂ ಉನ್ನತೋನ್ನತವಾದ ಆಕಾಶವೂ ನಿನ್ನ ವಾಸಕ್ಕೆ ಸಾಲದು. ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ಸಾಕಾದೀತು? ೨೮ ಆದರೂ ನನ್ನ ದೇವರೇ, ಯೆಹೋವನೇ, ನಿನ್ನ ಸೇವಕನ ಪ್ರಾರ್ಥನೆಗೂ, ವಿಜ್ಞಾಪನೆಗೂ ಕಿವಿಗೊಡು. ಈ ಹೊತ್ತು ನಿನ್ನನ್ನು ಪ್ರಾರ್ಥಿಸುತ್ತಿರುವ ನಿನ್ನ ಸೇವಕನ ಮೊರೆಯನ್ನು ಲಾಲಿಸು. ೨೯ ಈ ಸ್ಥಳವನ್ನು ಕುರಿತು, ‘ನನ್ನ ನಾಮಪ್ರಭಾವವು ಇಲ್ಲಿ ವಾಸಿಸುವುದು’ ಎಂದು ಹೇಳಿದವನೇ, ನಿನ್ನ ಕಟಾಕ್ಷವು ಹಗಲಿರುಳು ಈ ಮಂದಿರದ ಮೇಲಿರಲಿ. ಇಲ್ಲಿ ನಿನ್ನ ಸೇವಕರು ನಿನ್ನನ್ನು ಪ್ರಾರ್ಥಿಸುವಾಗೆಲ್ಲಾ ಅವರಿಗೆ ಸದುತ್ತರವನ್ನು ದಯಪಾಲಿಸು. ೩೦ ನಿನ್ನ ಸೇವಕನಾದ ನಾನಾಗಲಿ ನಿನ್ನ ಪ್ರಜೆಗಳಾದ ಇಸ್ರಾಯೇಲರಾಗಲಿ ಈ ಸ್ಥಳದ ಕಡೆಗೆ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸುವುದಾದರೆ, ನಿನ್ನ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹವನ್ನು ಕೇಳಿ, ಕ್ಷಮೆಯನ್ನು ಅನುಗ್ರಹಿಸು.
೩೧ “ನೆರೆಯವನಿಗೆ ವಿರೋಧವಾಗಿ ತಪ್ಪುಮಾಡಿದವನೆಂಬ ಸಂಶಯಕ್ಕೆ ಗುರಿಯಾದ ಮನುಷ್ಯನು ತಾನು ನಿರ್ದೋಷಿಯೆಂದು ಪ್ರಮಾಣಮಾಡಬೇಕಾದಾಗ ಅಂಥವನು ಈ ಆಲಯಕ್ಕೆ ಬಂದು ನಿನ್ನ ಈ ಯಜ್ಞವೇದಿಯ ಮುಂದೆ ನಿಂತು ಪ್ರಮಾಣಮಾಡುವುದಾದರೆ, ೩೨ ಪರಲೋಕದಲ್ಲಿರುವ ನೀನು ಅದನ್ನು ಕೇಳಿ ನಿನ್ನ ಸೇವಕರ ವ್ಯಾಜ್ಯವನ್ನು ತೀರಿಸು. ದುಷ್ಟನಿಗೆ ಅವನ ದುಷ್ಟತ್ವವನ್ನು ಅವನ ತಲೆಯ ಮೇಲೆಯೇ ಬರಮಾಡಿ, ಅವನು ಅಪರಾಧಿಯೆಂದು ತೋರಿಸು. ನೀತಿವಂತನಿಗೆ ಅವನ ನೀತಿಯ ಫಲವನ್ನು ಅನುಗ್ರಹಿಸಿ ಅವನು ನೀತಿವಂತನೆಂದೂ ತೋರಿಸಿಕೊಡು.
೩೩ “ತಮ್ಮ ಪಾಪಗಳ ಫಲವಾಗಿ ಶತ್ರುಗಳಿಂದ ತಗ್ಗಿಸಲ್ಪಟ್ಟ ನಿನ್ನ ಪ್ರಜೆಗಳಾದ ಇಸ್ರಾಯೇಲರು ನಿನ್ನ ಕಡೆಗೆ ತಿರುಗಿಕೊಂಡು ನಿನ್ನ ನಾಮವನ್ನು ಸ್ತುತಿಸಿ ಈ ಆಲಯದಲ್ಲಿ ನಿನಗೆ ವಿಜ್ಞಾಪನೆಯನ್ನು ಮತ್ತು ಪ್ರಾರ್ಥನೆಯನ್ನೂ ಮಾಡುವುದರೆ, ೩೪ ಪರಲೋಕದಲ್ಲಿರುವ ನೀನು ಅದನ್ನು ಆಲಿಸಿ, ಅವರ ಪಾಪಗಳನ್ನು ಕ್ಷಮಿಸಿ, ಅವರ ಪಿತೃಗಳಿಗೆ ನೀನು ಕೊಟ್ಟ ದೇಶಕ್ಕೆ ಅವರನ್ನು ಮರಳಿ ಬರುವಂತೆಮಾಡು.
೩೫ “ಅವರ ಪಾಪಗಳ ನಿಮಿತ್ತವಾಗಿ ಆಕಾಶವು ಮಳೆಗರೆಯದಂತೆ ಮುಚ್ಚಿಕೊಂಡಾಗ ಅವರು ತಮ್ಮ ಪಾಪಗಳನ್ನು ಬಿಟ್ಟು ತಮ್ಮನ್ನು ತಗ್ಗಿಸಿದವನು ನೀನೇ ಎಂದು ನಿನ್ನ ನಾಮವನ್ನು ಸ್ತುತಿಸಿ ಈ ಆಲಯದ ಕಡೆಗೆ ತಿರುಗಿಕೊಂಡು ಪ್ರಾರ್ಥಿಸುವುದಾದರೆ, ೩೬ ಪರಲೋಕದಲ್ಲಿರುವ ನೀನು ಆಲಿಸಿ, ನಿನ್ನ ಸೇವಕರೂ ಪ್ರಜೆಗಳೂ ಆದ ಇಸ್ರಾಯೇಲರ ಪಾಪಗಳನ್ನು ಕ್ಷಮಿಸಿ ಅವರು ನಡೆಯಬೇಕಾದ ಮಾರ್ಗವನ್ನು ತೋರಿಸಿ, ನಿನ್ನ ಪ್ರಜೆಗೆ ಸ್ವಾಸ್ತ್ಯವಾಗಿ ಕೊಟ್ಟ ದೇಶಕ್ಕೆ ಮಳೆಯನ್ನು ಅನುಗ್ರಹಿಸು.
೩೭ “ದೇಶಕ್ಕೆ ಕ್ಷಾಮ, ಘೋರವ್ಯಾಧಿ, ಬಿಸಿಗಾಳಿ, ಜೊಳ್ಳು, ಮಿಡತೆ, ಜಿಟ್ಟೇಹುಳ, ಪಟ್ಟಣಗಳಿಗೆ ಶತ್ರುಗಳ ಮುತ್ತಿಗೆ, ಅಂತು ಯಾವ ಉಪದ್ರವದಿಂದಾಗಲಿ, ವ್ಯಾಧಿಯಿಂದಾಗಲಿ ಬಾಧೆ ಉಂಟಾಗುವಾಗ, ೩೮ ಮನಸ್ಸಾಕ್ಷಿ ಪೀಡಿತರಾದ ಎಲ್ಲಾ ಇಸ್ರಾಯೇಲರಾಗಲಿ, ಅವರಲ್ಲಿ ಒಬ್ಬನಾಗಲಿ ಈ ಆಲಯದ ಕಡೆಗೆ ಕೈಯೆತ್ತಿ ಸ್ತುತಿಸಿ ನಿನಗೆ ಪ್ರಾರ್ಥನೆಯನ್ನೂ, ವಿಜ್ಞಾಪನೆಯನ್ನು ಮಾಡುವುದಾದರೆ, ೩೯ ಮನುಷ್ಯರ ಹೃದಯಗಳನ್ನು ಬಲ್ಲಂಥ ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಲಾಲಿಸಿ, ಅವರಿಗೆ ಪಾಪಪರಿಹಾರವನ್ನು ಅನುಗ್ರಹಿಸು. ನೀನೊಬ್ಬನೇ ಎಲ್ಲಾ ಮನುಷ್ಯರ ಹೃದಯಗಳನ್ನು ಬಲ್ಲವನಾಗಿರುವುದರಿಂದ ಪ್ರತಿಯೊಬ್ಬನಿಗೂ ಅವನವನು ಹಿಡಿಯುವ ಮಾರ್ಗಕ್ಕೆ ತಕ್ಕ ಹಾಗೆ ಫಲವನ್ನು ಕೊಡು. ೪೦ ಆಗ ನಮ್ಮ ಪಿತೃಗಳಿಗೆ ನೀನು ಕೊಟ್ಟ ದೇಶದಲ್ಲಿ ಅವರು ವಾಸಿಸುವ ಕಾಲದಲ್ಲೆಲ್ಲಾ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿರುವರು.
೪೧ “ನಿನ್ನ ಪ್ರಜೆಗಳಾದ ಇಸ್ರಾಯೇಲನಲ್ಲದ ಒಬ್ಬ ಪರದೇಶದವನು ನಿನ್ನ ನಾಮಸ್ತುತಿಗೋಸ್ಕರ ದೂರದೇಶದಿಂದ ಬರುವಾಗ ೪೨ ಅಲ್ಲಿ ನಿನ್ನ ನಾಮಮಹತ್ತು, ಭುಜಬಲ, ಶಿಕ್ಷಾಹಸ್ತ ಇವುಗಳ ವರ್ತಮಾನವು ಪರರಾಜ್ಯಗಳವರಿಗೂ ಗೊತ್ತಾಗುವುದು. ಅವನು ಈ ಆಲಯದ ಮುಂದೆ ನಿಂತು ನಿನ್ನನ್ನು ಪ್ರಾರ್ಥಿಸುವುದಾದರೆ, ೪೩ ನಿನ್ನ ನಿವಾಸವಾಗಿರುವ ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ, ಅವನು ಬೇಡಿಕೊಂಡದ್ದನ್ನು ಅನುಗ್ರಹಿಸು. ಆಗ ಪರರಾಜ್ಯದವರೂ, ಲೋಕದ ಎಲ್ಲಾ ಜನರು ನಿನ್ನ ನಾಮಮಹತ್ತನ್ನು ತಿಳಿದು, ನಿನ್ನ ಜನರಾದ ಇಸ್ರಾಯೇಲರಂತೆ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿ, ನಾನು ನಿನ್ನ ಹೆಸರಿಗಾಗಿ ಈ ಆಲಯವನ್ನು ಕಟ್ಟಸಿದ್ದೇನೆಂದು ತಿಳಿದುಕೊಳ್ಳುವರು. ೪೪ ನೀನು ನಿನ್ನ ಜನರನ್ನು ಶತ್ರುಗಳೊಡನೆ ಯುದ್ಧಮಾಡುವುದಕ್ಕೋಸ್ಕರ ಎಲ್ಲಿಗಾದರು ಕಳುಹಿಸಿದಾಗ ಅವರು ಅಲ್ಲಿಂದ ನೀನು ಆರಿಸಿಕೊಂಡ ಪಟ್ಟಣದ ಕಡೆಗೂ, ನಾನು ನಿನ್ನ ಹೆಸರಿಗಾಗಿ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು ಯೆಹೋವನಾದ ನಿನ್ನನ್ನು ಪ್ರಾರ್ಥಿಸುವುದಾದರೆ ೪೫ ಪರಲೋಕದಲ್ಲಿರುವ ನೀನು ವಿಜ್ಞಾಪನೆಯನ್ನು ಮತ್ತು ಪ್ರಾರ್ಥನೆಯನ್ನೂ ಕೇಳಿ, ಅವರ ನ್ಯಾಯವನ್ನು ಸ್ಥಾಪಿಸು.
೪೬ “ಅವರು ನಿನಗೆ ವಿರುದ್ಧವಾಗಿ ಪಾಪ ಮಾಡಬಹುದು. ಪಾಪಮಾಡದ ಮನುಷ್ಯನು ಒಬ್ಬನೂ ಇಲ್ಲ. ನೀನು ಅವರ ಮೇಲೆ ಕೋಪಗೊಂಡು ಅವರನ್ನು ಶತ್ರುಗಳ ಕೈಗೆ ಒಪ್ಪಿಸಿದಾಗ ಮತ್ತು ಆ ಶತ್ರುಗಳು ಅವರನ್ನು ಸೆರೆಹಿಡಿದು ದೂರದಲ್ಲಾಗಲಿ, ಸಮೀಪದಲ್ಲಾಗಲಿ ಇರುವ ತಮ್ಮ ದೇಶಕ್ಕೆ ಅವರನ್ನು ಒಯ್ದಾಗ, ೪೭ ಸೆರೆಯವರಾಗಿ ಬಿದ್ದುಕೊಂಡಿರುವ ದೇಶದಲ್ಲಿ ಅವರು ಪಶ್ಚಾತ್ತಾಪಪಟ್ಟು, ನಿನ್ನ ಅನುಗ್ರಹದಿಂದ ತಮ್ಮ ಪಿತೃಗಳಿಗೆ ದೊರಕಿದ ದೇಶದ ಕಡೆಗೂ, ನೀನು ಆರಿಸಕೊಂಡ ಪಟ್ಟಣದ ಕಡೆಗೂ, ನಾನು ನಿನ್ನ ಹೆಸರಿಗೋಸ್ಕರ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು, ೪೮ ‘ನಾವು ನಿನ್ನ ಆಜ್ಞೆಗಳನ್ನು ಮೀರಿ ಪಾಪಮಾಡಿ ದ್ರೋಹಿಗಳಾದೆವು’ ಎಂದು ಒಪ್ಪಿ ಪೂರ್ಣಮನಸ್ಸಿನಿಂದ ನಿನ್ನನ್ನು ಪ್ರಾರ್ಥಿಸುವುದಾದರೆ, ೪೯ ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಅವರ ಪ್ರಾರ್ಥನೆಯನ್ನು ಲಾಲಿಸಿ ಅವರ ನ್ಯಾಯವನ್ನು ಸ್ಥಾಪಿಸು. ೫೦ ಕಬ್ಬಿಣ ಕರಗಿಸುವ ಕುಲುಮೆಯೋಪಾದಿಯಲ್ಲಿದ್ದ ಐಗುಪ್ತ ದೇಶದಿಂದ ನೀನು ಬಿಡಿಸಿದ ಈ ಜನರು ನಿನ್ನ ಸ್ವಕೀಯ ಜನರಾಗಿದ್ದಾರೆಂಬುದನ್ನು ನೆನಪುಮಾಡಿಕೊ. ೫೧ ಅವರು ನಿನಗೆ ವಿರುದ್ದವಾಗಿ ಮಾಡಿದ ಎಲ್ಲಾ ಅಪರಾಧ ದ್ರೋಹಗಳನ್ನು ಕ್ಷಮಿಸಿ ಅವರನ್ನು ಸೆರೆಯೊಯ್ದವರ ಮನಸ್ಸಿನಲ್ಲಿ ಅವರ ಮೇಲೆ ದಯೆಹುಟ್ಟಿಸು. ೫೨ ನಿನ್ನ ಸೇವಕನ ಮೇಲೆಯೂ, ನಿನ್ನ ಪ್ರಜೆಗಳಾದ ಇಸ್ರಾಯೇಲರ ಮೇಲೆಯೂ ಕಟಾಕ್ಷವಿಟ್ಟು ಅವರು ಪ್ರಾರ್ಥಿಸುವಾಗೆಲ್ಲಾ ಅವರ ವಿಜ್ಞಾಪನೆಗಳನ್ನು ಲಾಲಿಸು. ೫೩ ಕರ್ತನೇ, ಯೆಹೋವನೇ, ನೀನು ನಮ್ಮ ಪಿತೃಗಳನ್ನು ಐಗುಪ್ತದೇಶದಿಂದ ಬಿಡಿಸುವಾಗ ಅವರಿಗೆ ನಾನು ನಿಮ್ಮನ್ನು ಎಲ್ಲಾ ಜನಾಂಗಗಳೊಳಗಿಂದ ಪ್ರತ್ಯೇಕಿಸಿ, ಸ್ವಕೀಯಜನರನ್ನಾಗಿ ಮಾಡಿಕೊಂಡಿದ್ದೇನೆಂದು ಮೋಶೆಯ ಮುಖಾಂತರವಾಗಿ ಹೇಳಿದಿಯಲ್ಲವೇ” ಎಂದು ದೇವರನ್ನು ಪ್ರಾರ್ಥಿಸಿದನು.
ಸೊಲೊಮೋನನು ಇಸ್ರಾಯೇಲ್ ಸಮೂಹವನ್ನು ಆಶೀರ್ವದಿಸಿದ್ದು
೫೪ ಸೊಲೊಮೋನನು ಆಕಾಶದ ಕಡೆಗೆ ಕೈಯೆತ್ತಿ ಯೆಹೋವನ ಯಜ್ಞವೇದಿಯ ಮುಂದೆ ಮೊಣಕಾಲೂರಿ ಯೆಹೋವನನ್ನು ಪ್ರಾರ್ಥಿಸಿದ ನಂತರ ಎದ್ದು ನಿಂತು ೫೫ ಇಸ್ರಾಯೇಲ್ ಸರ್ವಸಮೂಹದವರನ್ನು ಆಶೀರ್ವದಿಸಿ ಗಟ್ಟಿಯಾಗಿ ಹೇಳಿದ್ದೇನಂದರೆ, ೫೬ “ತಾನು ವಾಗ್ದಾನ ಮಾಡಿದಂತೆ ತನ್ನ ಪ್ರಜೆಗಳಾದ ಇಸ್ರಾಯೇಲರಿಗೆ ವಿಶ್ರಾಂತಿಯನ್ನು ಅನುಗ್ರಹಿಸಿದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ತನ್ನ ಸೇವಕನಾದ ಮೋಶೆಯ ಮುಖಾಂತರವಾಗಿ ಮಾಡಿದ ಅತಿ ಶ್ರೇಷ್ಠ ವಾಗ್ದಾನಗಳಲ್ಲಿ ಒಂದೂ ತಪ್ಪಿ ಹೋಗಲಿಲ್ಲ. ೫೭ ನಮ್ಮ ದೇವರಾದ ಯೆಹೋವನು ನಮ್ಮ ಪಿತೃಗಳ ಸಂಗಡ ಇದ್ದ ಹಾಗೆ ನಮ್ಮ ಸಂಗಡಲೂ ಇರಲಿ, ಆತನು ನಮ್ಮನ್ನು ಕೈಬಿಡದಿರಲಿ, ನಿರಾಕರಿಸದಿರಲಿ. ೫೮ ನಾವು ನಮ್ಮ ಪಿತೃಗಳಿಗೆ ಕೊಡಲ್ಪಟ್ಟ ಆಜ್ಞಾನಿಯಮವಿಧಿಗಳನ್ನು ಕೈಕೊಂಡು ಆತನ ಮಾರ್ಗದಲ್ಲಿ ನಡೆಯುವಂತೆ ನಮ್ಮ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿಕೊಳ್ಳಿಲಿ. ೫೯ ನಾನು ಈಗ ನಮ್ಮ ದೇವರಾದ ಯೆಹೋವನಿಗೆ ಮಾಡಿದ ವಿಜ್ಞಾಪನೆಯು ಹಗಲಿರುಳು ಆತನ ಜ್ಞಾಪಕದಲ್ಲಿರಲಿ. ೬೦ ಭೂಲೋಕದ ಜನರೆಲ್ಲರೂ ಯೆಹೋವನ ಹೊರತು ಬೇರೆ ದೇವರಿಲ್ಲವೆಂಬುದನ್ನು ತಿಳಿದುಕೊಳ್ಳುವಂತೆ ಆತನು ಅಗತ್ಯವಿರುವಾಗೆಲ್ಲಾ ತನ್ನ ಸೇವಕನ ಮತ್ತು ಪ್ರಜೆಗಳಾದ ಇಸ್ರಾಯೇಲರ ನ್ಯಾಯವನ್ನು ಸ್ಥಾಪಿಸುತ್ತಾ ಬರಲಿ. ೬೧ ನೀವಾದರೋ ಈಗಿನಂತೆ ಮುಂದೆಯೂ ನಮ್ಮ ದೇವರಾದ ಯೆಹೋವನಲ್ಲಿ ಪೂರ್ಣ ಭಯಭಕ್ತಿಯುಳ್ಳವರಾಗಿ, ಆತನ ವಿಧಿಗಳನ್ನು ಅನುಸರಿಸಿ, ಆತನ ಆಜ್ಞೆಗಳನ್ನು ಕೈಕೊಳ್ಳಿರಿ” ಎಂಬದೇ.
ದೇವಾಲಯದ ಪ್ರತಿಷ್ಠೆ
೬೨ ಆನಂತರ ಅರಸನೂ, ಎಲ್ಲಾ ಇಸ್ರಾಯೇಲರೂ ಯೆಹೋವನ ಸನ್ನಿಧಿಯಲ್ಲಿ ಯಜ್ಞಮಾಡಿದರು. ೬೩ ಸೊಲೊಮೋನನು ಯೆಹೋವನಿಗೋಸ್ಕರ ಮಾಡಿದ ಸಮಾಧಾನಯಜ್ಞಕ್ಕಾಗಿ ವಧಿಸಿದ ಹೋರಿಗಳು ಇಪ್ಪತ್ತೆರಡು ಸಾವಿರ ಮತ್ತು ಕುರಿಗಳು ಲಕ್ಷದ ಇಪ್ಪತ್ತು ಸಾವಿರ, ಈ ಪ್ರಕಾರ ಅರಸನೂ ಎಲ್ಲಾ ಇಸ್ರಾಯೇಲರೂ ಯೆಹೋವನ ಆಲಯವನ್ನು ಪ್ರತಿಷ್ಠೆ ಮಾಡಿದರು. ೬೪ ಯೆಹೋವನ ಆಲಯದ ಮುಂದಿರುವ ತಾಮ್ರದ ಯಜ್ಞವೇದಿಯು ಈ ಎಲ್ಲಾ ಸರ್ವಾಂಗಹೋಮ ದ್ರವ್ಯಗಳನ್ನೂ, ಧಾನ್ಯ ನೈವೇದ್ಯಗಳನ್ನೂ ಸಮಾಧಾನಯಜ್ಞದ ಕೊಬ್ಬನ್ನೂ ಹಿಡಿಯಲಾರದಷ್ಟು ಚಿಕ್ಕದಾಗಿದ್ದುದರಿಂದ ಸೊಲೊಮೋನನು ಆ ದಿನ ದೇವಾಲಯದ ಮುಂದಿನ ಪ್ರಾಕಾರದ ಮಧ್ಯಸ್ಥಳವನ್ನು ಪ್ರತಿಷ್ಠಿಸಿ, ಅಲ್ಲಿ ಅವುಗಳನ್ನೆಲ್ಲಾ ಸಮರ್ಪಿಸಿದನು. ೬೫ ಈ ರೀತಿಯಾಗಿ ಸೊಲೊಮೋನನು ಹಮಾತಿನ ದಾರಿಯಿಂದ ಐಗುಪ್ತದ ಹಳ್ಳದ ವರೆಗಿರುವ ಪ್ರಾಂತ್ಯಗಳಿಂದ ಮಹಾ ಸಮೂಹವಾಗಿ ಕೂಡಿಬಂದಿದ್ದ ಎಲ್ಲಾ ಇಸ್ರಾಯೇಲರೂ ಎರಡು ವಾರ ಅಂದರೆ ಹದಿನಾಲ್ಕು ದಿವಸಗಳ ವರೆಗೆ ತಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಹಬ್ಬಮಾಡಿದರು. ೬೬ ಎಂಟನೆಯ ದಿನ ಜನರಿಗೆ ಹೋಗುವುದಕ್ಕೆ ಅಪ್ಪಣೆಯಾಗಲು ಅವರು ಅರಸನನ್ನು ವಂದಿಸಿ ಯೆಹೋವನು ತನ್ನ ಸೇವಕನಾದ ದಾವೀದನಿಗೂ ತನ್ನ ಪ್ರಜೆಗಳಾದ ಇಸ್ರಾಯೇಲರಿಗೂ ಮಾಡಿದ ಸರ್ವೋಪಕಾರಗಳನ್ನು ನೆನದು ಆನಂದಚಿತ್ತರಾಗಿ, ಹರ್ಷಿಸುತ್ತಾ ತಮ್ಮ ತಮ್ಮ ನಿವಾಸಗಳಿಗೆ ತೆರಳಿದರು.