೧೪
ಯೆಹೂದದ ಅರಸನಾದ ಅಮಚ್ಯನು
೧ ಇಸ್ರಾಯೇಲರ ಅರಸನಾದ ಯೆಹೋವಾಹಾಜನ ಮಗನಾದ ಯೋವಾಷನ ಆಳ್ವಿಕೆಯ ಎರಡನೆಯ ವರುಷದಲ್ಲಿ ಯೆಹೂದದ ಅರಸನಾದ ಯೆಹೋವಾಷನ ಮಗ ಅಮಚ್ಯ ಎಂಬವನು ಅರಸನಾದನು. ೨ ಅವನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಇಪ್ಪತ್ತೊಂಬತ್ತು ವರುಷ ಆಳಿದನು. ಯೆರೂಸಲೇಮಿನವಳಾದ ಯೆಹೋವದ್ದೀನ್ ಎಂಬಾಕೆಯು ಇವನ ತಾಯಿ. ೩ ಇವನು ತನ್ನ ತಂದೆಯಾದ ಯೆಹೋವಾಷನ ಮಾರ್ಗದಲ್ಲಿ ತಪ್ಪದೆ ನಡೆದು ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾದನು, ಆದರೂ ತನ್ನ ಪೂರ್ವಿಕನಾದ ದಾವೀದನಷ್ಟು ಉತ್ತಮನಾಗಿರಲಿಲ್ಲ.
೪ ಇವನ ಕಾಲದಲ್ಲಿ ಪೂಜಾಸ್ಥಳಗಳು ಇನ್ನೂ ತೆಗೆಯಲ್ಪಟ್ಟಿರಲಿಲ್ಲ, ಆದ್ದರಿಂದ ಜನರು ಅವುಗಳಲ್ಲಿ ಯಜ್ಞಧೂಪಗಳನ್ನು ಅರ್ಪಿಸುತ್ತಿದ್ದರು. ೫ ಅವನು ರಾಜ್ಯವನ್ನು ಭದ್ರಪಡಿಸಿಕೊಂಡ ಕೂಡಲೇ ತನ್ನ ತಂದೆಯನ್ನು ಕೊಂದ ಸೇವಕರಿಗೆ ಮರಣದಂಡನೆವಿಧಿಸಿದನು.
೬ ಮೋಶೆಯ ಧರ್ಮನಿಯಮಗ್ರಂಥದಲ್ಲಿರುವ ಯೆಹೋವನ ಅಪ್ಪಣೆಯಂತೆ, “ಮಕ್ಕಳ ಪಾಪದ ದೆಸೆಯಿಂದ ತಂದೆಗೂ, ತಂದೆಯ ಪಾಪದ ದೆಸೆಯಿಂದ ಮಕ್ಕಳಿಗೂ ಮರಣಶಿಕ್ಷೆಯಾಗಬಾರದು; ಪ್ರತಿಯೊಬ್ಬನೂ ತನ್ನ ಪಾಪದಫಲವನ್ನು ತಾನೇ ಅನುಭವಿಸಬೇಕು” ಎಂಬುದನ್ನು ನೆನಪುಮಾಡಿಕೊಂಡು ಅವರ ಮಕ್ಕಳನ್ನು ಕೊಲ್ಲಿಸಲಿಲ್ಲ. ೭ ಇದಲ್ಲದೆ ಉಪ್ಪಿನ ತಗ್ಗಿನಲ್ಲಿ ಎದೋಮ್ಯರ ಹತ್ತು ಸಾವಿರ ಮಂದಿ ಸೈನಿಕರನ್ನು ಕೊಂದುಹಾಕಿದಲ್ಲದೆ, ಅವರಿಂದ ಸೆಲ ದುರ್ಗವನ್ನ ಹೋರಾಡ ಕಿತ್ತುಕೊಂಡು ಅದಕ್ಕೆ ಯೊಕ್ತೆಯೇಲ್ ಎಂಬ ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಇದೇ ಹೆಸರಿರುತ್ತದೆ.
೮ ಅನಂತರ ಅಮಚ್ಯನು ಯೇಹುವಿನ ಮೊಮ್ಮಗನೂ, ಯೆಹೋವಾಹಾಜನ ಮಗನೂ, ಇಸ್ರಾಯೇಲರ ಅರಸನಾದ ಯೆಹೋವಾಷನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನಾವು ಒಬ್ಬರನ್ನೊಬ್ಬರು ಒಂದುಕೈನೋಡೋಣಬಾ” ಎಂದು ಹೇಳಿದನು. ೯ ಆಗ ಇಸ್ರಾಯೇಲರ ಅರಸನಾದ ಯೆಹೋವಾಷನು ಯೆಹೂದದ ಅರಸನಾದ ಅಮಚ್ಯನಿಗೆ, “ಲೆಬನೋನಿನ ಮುಳ್ಳು ಗಿಡವು ಅಲ್ಲಿನ ದೇವದಾರುಮರಕ್ಕೆ, ‘ನನ್ನ ಮಗನಿಗೆ ನಿನ್ನ ಮಗಳನ್ನು ಕೊಡು’ ಎಂದು ಹೇಳಿ ಕಳುಹಿಸಿತು. ಸ್ವಲ್ಪ ಹೊತ್ತಾದ ಮೇಲೆ ಲೆಬನೋನಿನ ಒಂದು ಕಾಡು ಮೃಗವು ಅಲ್ಲಿಂದ ಹಾದುಹೋಗುತ್ತಿರುವಾಗ ಅದನ್ನು ತುಳಿದುಬಿಟ್ಟಿತು. ೧೦ ನೀನು ಎದೋಮ್ಯರನ್ನು ಸೋಲಿಸಿದರಿಂದ ಬಹಳವಾಗಿ ಉಬ್ಬಿಕೊಂಡಿದ್ದೀ; ಆ ಕೀರ್ತಿಯು ಸಾಕೆಂದು ನೆನದು ಸುಮ್ಮನೆ ಮನೆಯಲ್ಲಿ ಕುಳಿತುಕೋ. ನನ್ನನ್ನು ಕೆಣಕಿ ನಿನ್ನ ಮೇಲೆಯೂ, ನಿನ್ನ ರಾಜ್ಯವಾದ ಯೆಹೂದದ ಮೇಲೆಯೂ ಯಾಕೆ ಕೇಡನ್ನು ಬರಮಾಡಿಕೊಳ್ಳುತ್ತೀ?” ಎಂದು ಉತ್ತರ ಕೊಟ್ಟುಕಳುಹಿಸಿದನು.
೧೧ ಅಮಚ್ಯನು ಇದನ್ನು ಗಮನಕ್ಕೆ ತೆಗೆದುಕೊಳ್ಳದೆ ಇದ್ದುದರಿಂದ ಇಸ್ರಾಯೇಲರ ಅರಸನಾದ ಯೆಹೋವಾಷನು ಯುದ್ಧಕ್ಕೆ ಹೊರಟನು. ಅವರು ಯೆಹೂದ ಪ್ರಾಂತ್ಯದ ಬೇತ್ಷೆಮೆಷಿನಲ್ಲಿ ಒಬ್ಬರನ್ನೊಬ್ಬರು ಎದುರುಗೊಂಡರು. ೧೨ ಯೆಹೂದ್ಯರು ಇಸ್ರಾಯೇಲರಿಂದ ಸೋಲಿಸಲ್ಪಟ್ಟು ತಮ್ಮ ತಮ್ಮ ನಿವಾಸಗಳಿಗೆ ಓಡಿಹೋದರು.
೧೩ ಇಸ್ರಾಯೇಲರ ಅರಸನಾದ ಯೋವಾಷನೂ, ಅಹಜ್ಯನ ಮೊಮ್ಮಗನೂ, ಯೆಹೋವಾಷನ ಮಗನೂ ಯೆಹೂದದ ಅರಸನೂ ಆದ ಅಮಚ್ಯನನ್ನು ಇಸ್ರಾಯೇಲರ ಅರಸನಾದ ಯೆಹೊವಾಷನು ಬೇತ್ಷೆಮೆಷಿನಲ್ಲಿ ಹಿಡಿದು ಅವನನ್ನು ಯೆರೂಸಲೇಮಿಗೆ ಕರೆದುಕೊಂಡು ಬಂದು, ಎಫ್ರಾಯೀಮ್ ಬಾಗಿಲಿನಿಂದ ಮೂಲೆಯ ಬಾಗಿಲಿನವರೆಗೂ ಇದ್ದ ಯೆರೂಸಲೇಮಿನ ನಾನೂರು ಮೊಳ ಗೋಡೆಯನ್ನು ಕೆಡವಿ ಬಿಟ್ಟನು. ೧೪ ಇದಲ್ಲದೆ ಅವನು ಯೆಹೋವನ ಆಲಯದ ಮತ್ತು ರಾಜನ ಅರಮನೆಯ ಭಂಡಾರಗಳಲ್ಲಿ ಸಿಕ್ಕಿದ ಎಲ್ಲಾ ಬೆಳ್ಳಿ ಬಂಗಾರವನ್ನೂ, ಪಾತ್ರೆಗಳನ್ನೂ ತೆಗೆದುಕೊಂಡು ಒತ್ತೆಯಾಳಾಗಿ ಕೆಲವರನ್ನು ಸೆರೆಹಿಡಿದು ಸಮಾರ್ಯಕ್ಕೆ ಹಿಂದಿರುಗಿದನು. ೧೫ ಯೆಹೋವಾಷನ ಉಳಿದ ಚರಿತ್ರೆಯೂ, ಅವನ ಶೂರ ಕೃತ್ಯಗಳೂ ಮತ್ತು ಯೆಹೂದ ರಾಜನಾದ ಅಮಚ್ಯನೊಡನೆ ನಡಿಸಿದ ಯುದ್ಧದ ವಿವರವೂ ಇಸ್ರಾಯೇಲರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ. ೧೬ ಯೆಹೋವಾಷನು ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ಸಮಾರ್ಯದೊಳಗೆ ಇಸ್ರಾಯೇಲರ ರಾಜಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಯಾರೊಬ್ಬಾಮನು ಅರಸನಾದನು.
೧೭ ಇಸ್ರಾಯೇಲರ ಅರಸನೂ, ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತನಂತರ ಯೆಹೂದದ ಅರಸನೂ ಯೆಹೋವಾಷನ ಮಗನೂ ಆದ ಅಮಚ್ಯನು ಇನ್ನೂ ಹದಿನೈದು ವರುಷ ಬದುಕಿದ್ದನು. ೧೮ ಅಮಚ್ಯನ ಉಳಿದ ಚರಿತ್ರೆಯು ಯೆಹೂದರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತದೆ. ೧೯ ಯೆರೂಸಲೇಮಿನವರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿದ್ದರಿಂದ ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಅಲ್ಲಿಗೆ ಆಳುಗಳನ್ನು ಕಳುಹಿಸಿ ಅವನನ್ನು ಕೊಲ್ಲಿಸಿದರು.
೨೦ ಅವನ ಜನರು ಅವನ ಶವವನ್ನು ಕುದುರೆಗಳ ಮೇಲೆ ಯೆರೂಸಲೇಮಿಗೆ ತಂದು ದಾವೀದನಗರದೊಳಗೆ ಅವನ ಪಿತ್ರುಗಳಸ್ಮಶಾನ ಭೂಮಿಯಲ್ಲಿ ಸಮಾಧಿ ಮಾಡಿದರು. ೨೧ ಅಮಚ್ಯನ ಮರಣದ ನಂತರ ಎಲ್ಲಾ ಯೆಹೂದ್ಯರು ಸೇರಿ ಹದಿನಾರು ವರುಷದವನಾದ ಅಜರ್ಯನನ್ನುಅರಸನನ್ನಾಗಿ ಮಾಡಿದರು. ೨೨ ಅರಸನಾದ ಅಮಚ್ಯನು ಪಿತೃಗಳ ಬಳಿಗೆ ಸೇರಿದ ಮೇಲೆ ಉಜ್ಜೀಯನು ಏಲತ್ ಎಂಬ ಪಟ್ಟಣವನ್ನು ಪುನಃ ಯೆಹೂದರಾಜ್ಯಕ್ಕೆ ಸೇರಿಸಿ ಭದ್ರಪಡಿಸಿದನು.
ಇಸ್ರಾಯೇಲರ ಅರಸನಾದ ಯಾರೊಬ್ಬಾಮನು
೨೩ ಯೆಹೂದದ ಅರಸನೂ, ಯೆಹೋವಾಷನ ಮಗನೂ ಆದ ಅಮಚ್ಯನ ಆಳ್ವಿಕೆಯ ಹದಿನೈದನೆಯ ವರುಷದಲ್ಲಿ ಇಸ್ರಾಯೇಲರ ಅರಸನಾದ ಯೋವಾಷನ ಮಗನಾದ ಯಾರೊಬ್ಬಾಮನು ಅರಸನಾಗಿ ಸಮಾರ್ಯದಲ್ಲಿ ನಲ್ವತ್ತೊಂದು ವರುಷ ಆಳಿದನು. ೨೪ ಇವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು. ೨೫ ಇಸ್ರಾಯೇಲರ ದೇವರಾದ ಯೆಹೋವನ ವಾಕ್ಯದ ಮೂಲಕ ತನ್ನ ಸೇವಕನೂ ಗತ್ ಹೇಫೆರಿನವನಾದ ಅಮಿತ್ತೈಯನ ಮಗನೂ ಆದ ಯೋನಾ ಎಂಬ ಪ್ರವಾದಿಯ ಮುಖಾಂತರವಾಗಿ ಮುಂತಿಳಿಸಿದಂತೆ ಹಮಾತಿನ ದಾರಿಯಿಂದ ಅರಾಬಾ ತಗ್ಗಿನ ಸಮುದ್ರದವರೆಗಿದ್ದ ಇಸ್ರಾಯೇಲರ ಮೇರೆಯನ್ನು ಪುನಃ ವಶಪಡಿಸಿಕೊಂಡವನು ಇವನೇ ಆಗಿದ್ದನು.
೨೬ ಇಸ್ರಾಯೇಲರು ಯೆಹೋವನಿಗೆ ಅವಿಧೇಯರಾಗಿ ಘೋರಕಷ್ಟವನ್ನು ಅನುಭವಿಸುತ್ತಿದ್ದರು. ಅವರಲ್ಲಿ ಸ್ವತಂತ್ರರೂ, ಪರತಂತ್ರರೂ ನಾಶವಾಗುತ್ತಿದ್ದರೆ, ಅವರನ್ನು ರಕ್ಷಿಸುವವನು ಒಬ್ಬನೂ ಇರಲಿಲ್ಲ. ೨೭ ಯೆಹೋವನು ಇದನ್ನು ನೋಡಿ ಇಸ್ರಾಯೇಲರನ್ನು ಭೂಲೋಕದಿಂದ ನಿರ್ನಾಮ ಮಾಡುವುದಕ್ಕೆ ಮನಸ್ಸಿಲ್ಲದೆ ಯೋವಾಷನ ಮಗನಾದ ಯಾರೊಬ್ಬಾಮನ ಮುಖಾಂತರವಾಗಿ ಅವರನ್ನು ರಕ್ಷಿಸಿದನು.
೨೮ ಯಾರೊಬ್ಬಾಮನ ಉಳಿದ ಚರಿತ್ರೆಯೂ ಅವನು ಯುದ್ಧದಲ್ಲಿ ನಡಿಸಿದ ಶೂರಕೃತ್ಯಗಳೂ, ಯೆಹೂದ್ಯರ ಸ್ವಾಧೀನದಲ್ಲಿದ್ದ ದಮಸ್ಕ, ಹಮಾತ್ ಎಂಬ ಪಟ್ಟಣಗಳು ಅವನಿಂದ ಇಸ್ರಾಯೇಲ್ ರಾಜ್ಯಕ್ಕೆ ಸೇರಿಸಲ್ಪಟ್ಟ ವಿವರಗಳೆಲ್ಲವೂ ಇಸ್ರಯೇಲರ ರಾಜಕಾಲವೃತ್ತಾಂತ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಲಾಗಿದೆ. ೨೯ ಯಾರೊಬ್ಬಾಮನು ಇಸ್ರಾಯೇಲರ ರಾಜರಾಗಿದ್ದ ತನ್ನ ಪಿತೃಗಳ ಬಳಿಗೆ ಸೇರಲು ಅವನ ನಂತರ ಅವನ ಮಗನಾದ ಜೆಕರ್ಯನು ಅರಸನಾದನು.