೨೦
ಶೆಬನ ದಂಗೆ
೧ ಅಕಸ್ಮಾತಾಗಿ ಬೆನ್ಯಾಮೀನ ಕುಲದವನೂ, ಬಿಕ್ರೀಯ ಮಗನೂ ಆದ ಶೆಬನೆಂಬ ಒಬ್ಬ ದುಷ್ಟಮನುಷ್ಯನು ಅಲ್ಲಿ ಹೇಗೋ ಬಂದಿದ್ದನು. ಅವನು ಕಹಳೆಯನ್ನು ಊದಿ, “ಇಸ್ರಾಯೇಲರೇ, ದಾವೀದನಲ್ಲಿ ನಮಗೆ ಪಾಲಿಲ್ಲ. ಇಷಯನ ಮಗನಲ್ಲಿ ನಮಗೆ ಸ್ವಾಸ್ಥ್ಯವಿಲ್ಲ. ಪ್ರತಿಯೊಬ್ಬನೂ ನಮ್ಮ ನಮ್ಮ ನಿವಾಸಗಳಿಗೆ ಹೋಗೋಣ” ಎಂದನು. ೨ ಆಗ ಇಸ್ರಾಯೇಲರೆಲ್ಲರೂ ದಾವೀದನನ್ನು ಬಿಟ್ಟು, ಬಿಕ್ರೀಯ ಮಗನಾದ ಶೆಬನನ್ನು ಹಿಂಬಾಲಿಸಿದರು. ಆದರೆ ಯೆಹೂದ್ಯರು ತಮ್ಮ ಅರಸನನ್ನು ಅಂಟಿಕೊಂಡು ಯೋರ್ದನ್ ತಗ್ಗಿನಿಂದ ಯೆರೂಸಲೇಮಿನ ವರೆಗೂ ಅವನ ಜೊತೆಯಲ್ಲಿ ಹೋದರು.
೩ ಅರಸನಾದ ದಾವೀದನು ಯೆರೂಸಲೇಮಿಗೆ ಬಂದ ಮೇಲೆ ತಾನು ಅರಮನೆ ಕಾಯುವುದಕ್ಕೋಸ್ಕರ ಇಟ್ಟಿದ್ದ ತನ್ನ ಹತ್ತು ಮಂದಿ ಉಪಪತ್ನಿಯರನ್ನು ಪ್ರತ್ಯೇಕವಾಗಿ ಒಂದು ಮನೆಯಲ್ಲಿಟ್ಟು, ಅವರಿಗೆ ಅನ್ನವಸ್ತ್ರ ಕೊಡುತ್ತಿದ್ದನು. ಆದರೆ ಅವರನ್ನು ತಿರುಗಿ ಸಂಗಮಿಸಲಿಲ್ಲ. ಅವರು ಜೀವದಿಂದಿರುವವರೆಗೂ ವಿಧೆವೆಯರಂತಿದ್ದು ಕಾವಲಲ್ಲಿ ಇರಬೇಕಾಯಿತು.
ಅಮಾಸನ ಕೊಲೆ
೪ ಅನಂತರ ಅರಸನು ಅಮಾಸನಿಗೆ, “ನೀನು ಮೂರು ದಿನಗಳೊಳಗೆ ಯೆಹೂದ್ಯರನ್ನು ಕೂಡಿಸಿಕೊಂಡು ಇಲ್ಲಿ ಸಿದ್ಧವಾಗಿರು” ಎಂದು ಆಜ್ಞಾಪಿಸಿದನು. ೫ ಅಮಾಸನು ಹೋಗಿ ಯೆಹೂದ್ಯರನ್ನು ಕೂಡಿಸಿದನು. ಆದರೆ ಅವನು ನೇಮಕವಾದ ಸಮಯಕ್ಕೆ ಬಾರದೆ ತಡಮಾಡಿದ್ದರಿಂದ ೬ ಅರಸನು ಅಬೀಷೈಗೆ, “ಅಬ್ಷಾಲೋಮನಿಗಿಂತ ಬಿಕ್ರೀಯ ಮಗನಾದ ಶೆಬನು ನಮಗೆ ಹೆಚ್ಚಿನ ಕೇಡು ಮಾಡುವಂತಿದೆ. ಆದುದರಿಂದ ನೀನು ನನ್ನ ಸ್ವಂತ ಆಳುಗಳನ್ನು ಕರೆದುಕೊಂಡು ಹೋಗಿ ಅವನನ್ನು ಬೆನ್ನಟ್ಟಿಜಡಿಸು. ಇಲ್ಲವಾದರೆ ಅವನು ನಮ್ಮ ಕಣ್ಣಿಗೆ ಮರೆಯಾಗಿ ಹೋಗಿ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಸೇರಿಕೊಂಡಾನು” ಎಂದನು. ೭ ಆಗ ಅವನು ಯೋವಾಬನ ಸೈನಿಕರನ್ನೂ, ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲು ದಂಡುಗಳನ್ನೂ ಎಲ್ಲಾ ಶೂರರನ್ನೂ ಕರೆದುಕೊಂಡು ಬಿಕ್ರೀಯ ಮಗನಾದ ಶೆಬನನ್ನು ಬೆನ್ನಟ್ಟುವುದಕ್ಕೋಸ್ಕರ ಯೆರೂಸಲೇಮಿನಿಂದ ಹೊರಟರು.
೮ ಅವರು ಗಿಬ್ಯೋನಿನಲ್ಲಿದ್ದ ದೊಡ್ಡ ಕಲ್ಲನ್ನು ಸಮೀಪಿಸಿದಾಗ ಅಮಾಸನು ಅವನೆದುರು ಬಂದನು. ಯುದ್ಧವಸ್ತ್ರಗಳನ್ನು ಧರಿಸಿಕೊಂಡಿದ್ದ ಯೋವಾಬನೂ ಅವನನ್ನು ವಧಿಸುವುದಕ್ಕೆ ಹೋಗುತ್ತಿರುವಾಗ ಅವನ ಸೊಂಟಕ್ಕೆ ಕಟ್ಟಿದ ಕತ್ತಿಯೂ ಒರೆಯಿಂದ ಕೆಳಗೆ ಬಿದ್ದಿತು. ೯ ಅವನು ಅಮಾಸನನ್ನು, “ಸಹೋದರನೇ ಕ್ಷೇಮವೋ” ಎಂದು ಕೇಳಿ ಮುದ್ದಿಡುವುದಕ್ಕೋಸ್ಕರವೋ ಎಂಬಂತೆ ಬಲಗೈಯಿಂದ ಅವನ ಗಡ್ಡವನ್ನು ಹಿಡಿದು, ೧೦ ಕೈಯಲ್ಲಿದ್ದ ಕತ್ತಿಯನ್ನು ಗಮನಿಸದಿದ್ದ ಅಮಾಸನ ಹೊಟ್ಟೆಯೊಳಗೆ ತಿವಿದನು. ಅದರಿಂದ ಅವನ ಕರಳುಗಳೆಲ್ಲಾ ಹೊರಗೆ ಬಂದವು. ಎರಡನೆಯ ಸಾರಿ ತಿವಿಯಲಿಲ್ಲ. ಅಷ್ಟಕ್ಕೆ ಅವನು ಸತ್ತನು. ಯೋವಾಬನೂ ಅವನ ತಮ್ಮನಾದ ಅಬೀಷೈಯೂ ಮತ್ತು ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟುವುದಕ್ಕೋಸ್ಕರ ಮುಂದೆ ನಡೆದಾಗ, ೧೧ ಯೋವಾಬನ ಆಳುಗಳಲ್ಲೊಬ್ಬನು ಅಮಾಸನ ಹತ್ತಿರ ನಿಂತು, “ದಾವೀದ ಹಾಗೂ ಯೋವಾಬರ ಕಡೆಯವರು ಯೋವಾಬನನ್ನು ಹಿಂಬಾಲಿಸಲಿ” ಎಂದು ಕೂಗಿದನು ೧೨ ಮಾರ್ಗದ ಮಧ್ಯದಲ್ಲಿ ರಕ್ತದಲ್ಲಿ ಹೊರಳಾಡುತ್ತಿದ್ದ ಅಮಾಸನನ್ನು ನೋಡುತ್ತಾ ಎಲ್ಲಾ ಜನರು ನಿಂತರು. ಬಂದವರೆಲ್ಲರೂ ಅಲ್ಲೇ ನಿಲ್ಲುವುದನ್ನು ಕಂಡ ಆ ಆಳು ಅಮಾಸನ ಶವವನ್ನು ದಾರಿಯಿಂದ ಎಳೆದು, ಹೊಲದಲ್ಲಿ ಹಾಕಿ, ಅದನ್ನು ಬಟ್ಟೆಯಿಂದ ಮುಚ್ಚಿದನು. ೧೩ ಶವವನ್ನು ಆಚೆ ಹಾಕಿದನಂತರ ಜನರೆಲ್ಲರೂ ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟುವುದಕ್ಕೊಸ್ಕರ ಯೋವಾಬನನ್ನು ಹಿಂಬಾಲಿಸಿದರು.
ಶೆಬನ ಕೊಲೆ
೧೪ ಶೆಬನು ಇಸ್ರಾಯೇಲರ ಪ್ರಾಂತ್ಯಗಳಲ್ಲಿ ಸಂಚರಿಸುತ್ತಾ ಆಬೇಲ್, ಬೇತ್ಮಾಕಾಕ್ಕೂ ಬಂದನು. ಬೇರಿಯರೆಲ್ಲರೂ ಸೇರಿಕೊಂಡು ಅವನೊಡನೆ ಆ ಊರನ್ನು ಸೇರಿದರು. ೧೫ ಯೋವಾಬನ ಕಡೆಯವರು ಬೇತ್ಮಾಕಾಕ್ಕೆ ಸೇರಿದ ಆಬೇಲ್ ಊರಿಗೆ ಮುತ್ತಿಗೆ ಹಾಕಿ ಅದಕ್ಕೆ ಎದುರಾಗಿ ಊರು ಗೋಡೆಗೆ ಹತ್ತಿರ ಒಂದು ಮಣ್ಣಿನ ದಿಬ್ಬವನ್ನು ಮಾಡಿ, ಗೋಡೆಯನ್ನು ಕೆಡವಿಬಿಡುವುದಕ್ಕೆ ಪ್ರಯತ್ನಿಸಿದರು. ೧೬ ಆಗ ಆ ಊರಿನ ಬುದ್ದಿವಂತೆಯಾದ ಒಬ್ಬಳು ಹೆಂಗಸು ಅವರಿಗೆ, “ಕೇಳಿರಿ, ದಯವಿಟ್ಟು ಕೇಳಿರಿ. ಯೋವಾಬನೊಂದಿಗೆ ನಾನು ಮಾತನಾಡುವುದಕ್ಕಾಗಿ ನನ್ನ ಬಳಿಗೆ ಬರಬೇಕೆಂದು ಹೇಳಿ” ಎಂದು ಕೂಗಿದಳು. ೧೭ ಯೋವಾಬನು ಬರಲು ಆ ಸ್ತ್ರೀಯು, “ನೀನು ಯೋವಾಬನೋ?” ಎಂದು ಅವನನ್ನು ಕೇಳಲು ಅವನು “ಹೌದು ನಾನೇ” ಎಂದು ಉತ್ತರ ಕೊಟ್ಟನು. ಆಕೆಯು, “ನಿನ್ನ ದಾಸಿಯ ಮಾತನ್ನು ಕೇಳು” ಅನ್ನಲು ಅವನು, “ಕೇಳುತ್ತೇನೆ” ಎಂದನು. ೧೮ ಆಗ ಆಕೆಯು, “ಪೂರ್ವಕಾಲದಲ್ಲಿ ಜನರು ಆಬೇಲಿನವರ ಆಲೋಚನೆಯನ್ನು ಕೇಳೋಣ ಅಂದುಕೊಂಡು ಅವರ ಆಲೋಚನೆಯ ಮೇರೆಗೆ ತೀರ್ಮಾನವನ್ನು ತೆಗೆದುಕೊಳ್ಳುತ್ತಿದ್ದರು. ೧೯ ನಮ್ಮ ಪಟ್ಟಣವು ಇಸ್ರಾಯೇಲರಲ್ಲಿ ಸಮಾಧನವುಳ್ಳದ್ದೂ, ರಾಜನಿಷ್ಠೆಯುಳ್ಳದ್ದೂ ಆಗಿದೆ. ನೀನು ಇಸ್ರಾಯೇಲರ ಪಟ್ಟಣಗಳಲ್ಲಿ ತಾಯಿಯೆಂದು ಹೆಸರುಗೊಂಡ ಈ ಪಟ್ಟಣವನ್ನು ಹಾಳುಮಾಡಬೇಕೆಂದಿರುವೆ. ನೀನು ಯೆಹೋವನ ಸ್ವಾಸ್ಥ್ಯವನ್ನು ನುಂಗಿಬಿಡುವುದೇಕೆ?” ಎಂದಳು.
೨೦ ಅದಕ್ಕೆ ಯೋವಾಬನು, “ನುಂಗಿಬಿಡುವುದಾಗಲಿ, ಹಾಳುಮಾಡುವುದಾಗಲಿ ನನಗೆ ದೂರವಾಗಿರಲಿ ಅಂಥದ್ದು ಬೇಡವೇ ಬೇಡ. ೨೧ ಎಫ್ರಾಯೀಮಿನ ಪರ್ವತಪ್ರದೇಶದ ಬಿಕ್ರೀಯ ಮಗನಾದ ಶೆಬನೆಂಬುವವನು ಅರಸನಾದ ದಾವೀದನಿಗೆ ವಿರೋಧವಾಗಿ ಕೈಯೆತ್ತಿದ್ದಾನೆ. ಅವನ್ನನ್ನೇ ಒಪ್ಪಿಸಿರಿ, ನಾನು ಊರನ್ನು ಬಿಟ್ಟು ಹೋಗುತ್ತೇನೆ” ಎಂದು ಹೇಳಿದನು. ಆ ಸ್ತ್ರೀಯು ಯೋವಾಬನಿಗೆ, “ನೋಡು ಈಗಲೇ ಅವನ ತಲೆಯು ಗೋಡೆಯ ಕಿಂಡಿಯಿಂದ ನಿನ್ನ ಕಡೆಗೆ ಒಗೆಯಲ್ಪಡುವುದು” ಎಂದು ಉತ್ತರ ಕೊಟ್ಟು, ೨೨ ತನ್ನ ಜನರ ಬಳಿಗೆ ಹೋಗಿ ಅವರಿಗೆ ವಿವೇಕದೊಡನೆ ಈ ಸಂಗತಿಯನ್ನು ತಿಳಿಸಿದಳು. ಅವರು ಬಿಕ್ರೀಯ ಮಗನಾದ ಶೆಬನ ತಲೆಯನ್ನು ಕತ್ತರಿಸಿ ಯೋವಾಬನಿದ್ದಲ್ಲಿಗೆ ಎಸೆದರು. ಕೂಡಲೆ ಅವನು ಕಹಳೆಯನ್ನು ಊದಿಸಿದನು. ಜನರು ಆ ಪಟ್ಟಣವನ್ನು ಬಿಟ್ಟು ತಮ್ಮ ತಮ್ಮ ನಿವಾಸಗಳಿಗೆ ಹೋದರು. ಯೋವಾಬನು ಹಿಂದಿರುಗಿ ಯೆರೂಸಲೇಮಿನಲ್ಲಿದ್ದ ಅರಸನ ಬಳಿಗೆ ಹೋದನು.
ದಾವೀದನ ಆಸ್ಥಾನಿಕರು
೨೩ ಯೋವಾಬನು ಇಸ್ರಾಯೇಲರ ಮುಖ್ಯ ಸೇನಾಧಿಪತಿ. ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲುದಂಡುಗಳ ಅಧಿಪತಿ. ೨೪ ಅದೋರಾಮನು ಬಿಟ್ಟೀಕೆಲಸ ಮಾಡಿಸುವವನು. ಅಹೀಲೂದನ ಮಗನಾದ ಯೆಹೋಷಾಫಾಟನು ಮುಖ್ಯ ದಾಖಲೆಮಾಡುವ ಲೇಖಕ. ೨೫ ಶೆವನು ಕಾರ್ಯದರ್ಶಿ, ಚಾದೋಕ್ ಮತ್ತು ಎಬ್ಯಾತಾರರು ಯಾಜಕರು. ೨೬ ಯಾಯೀರಿನವನಾದ ಈರನೂ ದಾವೀದನ ಯಾಜಕನು.