ಅದ್ಭುತ ಪ್ರತಿಮೆಯ ಕನಸು
೧ ನೆಬೂಕದ್ನೆಚ್ಚರನು ತನ್ನ ಆಳ್ವಿಕೆಯ ಎರಡನೆಯ ವರುಷದಲ್ಲಿ ಕನಸು ಕಂಡು ತತ್ತರಗೊಂಡನು, ಅವನಿಗೆ ನಿದ್ರೆ ತಪ್ಪಿತು. ೨ ಆಗ ರಾಜನು ತನ್ನ ಕನಸುಗಳ ಅಭಿಪ್ರಾಯವನ್ನು ತಿಳಿದುಕೊಳ್ಳಲು ಜೋಯಿಸರನ್ನೂ, ಮಂತ್ರವಾದಿಗಳನ್ನೂ, ಮಾಟಗಾರರನ್ನೂ, ಪಂಡಿತರನ್ನೂ ಕರೆಯಿಸಲು ಅವರು ಸನ್ನಿಧಿಗೆ ಬಂದು ರಾಜನ ಮುಂದೆ ನಿಂತುಕೊಂಡರು.
೩ ರಾಜನು ಅವರಿಗೆ, “ನಾನು ಕನಸುಕಂಡೆನು, ಅದರ ಅರ್ಥವೇನೋ ಎಂದು ನನ್ನ ಮನಸ್ಸು ತತ್ತರಿಸುತ್ತದೆ” ಎಂಬುದಾಗಿ ಹೇಳಿದನು. ೪ ಆಗ ಆ ಪಂಡಿತರು ಅರಮಾಯ ಭಾಷೆಯಲ್ಲಿ ರಾಜನಿಗೆ, “ಅರಸನೇ, ಚಿರಂಜೀವಿಯಾಗಿರು; ಆ ಕನಸನ್ನು ನಿನ್ನ ದಾಸರಿಗೆ ಹೇಳು; ಅದರ ತಾತ್ಪರ್ಯವನ್ನು ತಿಳಿಸುವೆವು” ಎಂದು ಅರಿಕೆಮಾಡಿದರು.
೫ ಆಗ ರಾಜನು ಪಂಡಿತರಿಗೆ ಪ್ರತ್ಯುತ್ತರವಾಗಿ, “ನನ್ನ ಮಾತು ಖಂಡಿತ; ನೀವೇ ಆ ಕನಸನ್ನೂ, ಅದರ ಅರ್ಥವನ್ನೂ ನನಗೆ ತಿಳಿಸದಿದ್ದರೆ ನಿಮ್ಮನ್ನು ತುಂಡುತುಂಡಾಗಿ ಕತ್ತರಿಸುವೆನು, ನಿಮ್ಮ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಿಬಿಡುವೆನು. ೬ ನೀವು ಆ ಕನಸನ್ನೂ, ಅದರ ಅರ್ಥವನ್ನೂ ತಿಳಿಸಿದರೆ ನನ್ನಿಂದ ನಿಮಗೆ ದಾನ ಮತ್ತು ಬಹುಮಾನಗಳೂ, ವಿಶೇಷ ಸನ್ಮಾನಗಳೂ ಲಭಿಸುವವು. ಆದಕಾರಣ ಆ ಕನಸನ್ನೂ, ಅದರ ಅಭಿಪ್ರಾಯವನ್ನೂ ನನಗೆ ತಿಳಿಸಿರಿ” ಎಂದು ಹೇಳಿದನು.
೭ ಪಂಡಿತರು ಉತ್ತರವಾಗಿ, “ರಾಜನು ತನ್ನ ದಾಸರಿಗೆ ಕನಸನ್ನು ತಿಳಿಸಲಿ, ನಾವು ಅದರ ತಾತ್ಪರ್ಯವನ್ನು ವಿವರಿಸುವೆವು” ಎಂಬ ಉತ್ತರವನ್ನೇ ಪುನಃ ಕೊಟ್ಟರು. ೮ ಅದಕ್ಕೆ ರಾಜನು, “ನೀವು ಆ ಕನಸನ್ನು ನನಗೆ ತಿಳಿಸದಿದ್ದರೆ ಮರಣದಂಡನೆಯ ನಿಯಮವೇ ನಿಮಗೆ ಗತಿಯಾಗುವುದು ಎಂಬ ನನ್ನ ಮಾತು ಖಂಡಿತವೆಂದು ನೀವು ತಿಳಿದುಕೊಂಡು ಕಾಲಹರಣ ಮಾಡುತ್ತಿದ್ದೀರಿ, ಇದು ನನಗೆ ಚೆನ್ನಾಗಿ ಗೊತ್ತು. ೯ ಕಾಲಾಂತರವನ್ನು ನಿರೀಕ್ಷಿಸಿಕೊಂಡೇ ನನ್ನ ಮುಂದೆ ಕೆಟ್ಟ ಸುಳ್ಳುಗಳನ್ನು ಆಡುತ್ತಿರಬೇಕೆಂದು ಒಪ್ಪಂದ ಮಾಡಿಕೊಂಡಿದ್ದೀರಿ; ಅಂತು ಆ ಕನಸನ್ನು ತಿಳಿಸಬೇಕು; ಆದುದರಿಂದ ನೀವು ಅದರ ಅರ್ಥವನ್ನೂ ವಿವರಿಸಬಲ್ಲಿರೆಂದು ತಿಳಿದುಕೊಳ್ಳುವೆನು” ಎಂದು ಹೇಳಿದನು.
೧೦ ಆಗ ಆ ಪಂಡಿತರು ರಾಜನ ಸನ್ನಿಧಿಯ ಮುಂದೆ, “ರಾಜನು ಕೇಳಿದ ಸಂಗತಿಯನ್ನು ತಿಳಿಸಬಲ್ಲವನು ಲೋಕದಲ್ಲಿ ಯಾರೂ ಇಲ್ಲ; ಎಷ್ಟೇ ಬಲಿಷ್ಠನು, ಎಷ್ಟೇ ಪ್ರಬಲನು ಆದ ಯಾವ ಅರಸನೂ ಜೋಯಿಸರನ್ನಾಗಲಿ, ಮಾಟಗಾರನನ್ನಾಗಲಿ, ಪಂಡಿತನನ್ನಾಗಲಿ, ಇಂಥ ಸಂಗತಿಯನ್ನು ಎಂದೂ ಕೇಳಿದ್ದಿಲ್ಲ. ೧೧ ರಾಜನು ಕೇಳುವ ಸಂಗತಿಯು ಅತಿ ಕಷ್ಟವಾದದ್ದು. ನರಜನ್ಮದವರ ಮಧ್ಯೆ ವಾಸಿಸುವ ದೇವರುಗಳೇ ಹೊರತು ಇನ್ಯಾರೂ ರಾಜನ ಸಮ್ಮುಖದಲ್ಲಿ ಅದನ್ನು ತಿಳಿಸಲಾರರು” ಎಂದು ಉತ್ತರಕೊಟ್ಟರು.
೧೨ ಇದನ್ನು ಕೇಳಿ, ರಾಜನು ಉಗ್ರರೋಷವುಳ್ಳವನಾಗಿ ಬಾಬೆಲಿನ ಸಕಲ ವಿದ್ವಾಂಸರನ್ನು ಕೊಲ್ಲಬೇಕೆಂದು ಆಜ್ಞಾಪಿಸಿದನು. ೧೩ ಕೂಡಲೆ ಆ ಆಜ್ಞೆಯು ಪ್ರಕಟವಾಯಿತು. ವಿದ್ವಾಂಸರು ಪ್ರಾಣಾಪಾಯಕ್ಕೆ ಗುರಿಯಾದರು; ದಾನಿಯೇಲನನ್ನೂ, ಅವನ ಸ್ನೇಹಿತರನ್ನೂ ಕೊಲ್ಲುವುದಕ್ಕೆ ಹುಡುಕಿದರು.
೧೪ ರಾಜನ ಮೈಗಾವಲಿನವರ ದಳವಾಯಿಯಾದ ಅರ್ಯೋಕನು ಬಾಬೆಲಿನ ವಿದ್ವಾಂಸರ ಸಂಹಾರಕ್ಕೆ ಹೊರಟಾಗ, ದಾನಿಯೇಲನು ಬುದ್ಧಿವಿವೇಕಗಳಿಂದ ಅವನ ಸಂಗಡ ಮಾತನಾಡಿ, ೧೫ “ಈ ರಾಜಾಜ್ಞೆಯು ಏಕೆ ಇಷ್ಟು ಉಗ್ರವಾಗಿದೆ?” ಎಂದು ಕೇಳಲು ಅರ್ಯೋಕನು ನಡೆದ ಸಂಗತಿಯನ್ನು ದಾನಿಯೇಲನಿಗೆ ತಿಳಿಸಿದನು. ೧೬ ಆ ಮೇಲೆ ದಾನಿಯೇಲನು ಅರಮನೆಗೆ ಬಂದು, “ನನಗೆ ಸಮಯವನ್ನು ಕೊಟ್ಟರೆ ನಾನು ಆ ಕನಸಿನ ಅರ್ಥವನ್ನು ರಾಜನಿಗೆ ವಿವರಿಸುವೆನು” ಎಂದು ಅರಿಕೆ ಮಾಡಿದನು.
೧೭ ಬಳಿಕ ದಾನಿಯೇಲನು ತನ್ನ ಮನೆಗೆ ಹೋಗಿ ಹನನ್ಯ, ಮೀಶಾಯೇಲ, ಅಜರ್ಯ ಎಂಬ ತನ್ನ ಸ್ನೇಹಿತರಿಗೆ, ೧೮ “ದಾನಿಯೇಲನು ಆ ಸಮಾಚಾರವನ್ನು ತಿಳಿಸಿ, ನಾವು ಬಾಬೆಲಿನ ಇತರ ವಿದ್ವಾಂಸರೊಂದಿಗೆ ನಾಶವಾಗದಂತೆ ಪರಲೋಕ ದೇವರು ಈ ರಹಸ್ಯದ ವಿಷಯವಾಗಿ ಕೃಪೆತೋರಿಸಲು ಆತನನ್ನು ಬೇಡಿಕೊಳ್ಳೋಣ” ಎಂದನು.
೧೯ ಆಗ ಆ ರಹಸ್ಯವು ರಾತ್ರಿಯ ಸ್ವಪ್ನದಲ್ಲಿ ದಾನಿಯೇಲನಿಗೆ ಪ್ರಕಟವಾಯಿತು. ಕೂಡಲೆ ದಾನಿಯೇಲನು ಪರಲೋಕ ದೇವರನ್ನು ಹೀಗೆ ಸ್ತುತಿಸಿದನು,
೨೦ “ದೇವರ ನಾಮಕ್ಕೆ ಯುಗಯುಗಾಂತರಗಳಲ್ಲಿಯೂ ಸ್ತುತಿಸ್ತೋತ್ರ ಉಂಟಾಗಲಿ!
ಜ್ಞಾನ ತ್ರಾಣಗಳು ಆತನವುಗಳೇ.
೨೧ ಕಾಲ ಸಮಯಗಳನ್ನು ಮಾರ್ಪಡಿಸುತ್ತಾನೆ,
ರಾಜರನ್ನು ಕಡೆಗಣಿಸುತ್ತಾನೆ, ನೆಲೆಸುವಂತೆ ಮಾಡುತ್ತಾನೆ;
ಜ್ಞಾನಿಗಳ ಜ್ಞಾನವು,
ವಿವೇಕಿಗಳ ವಿವೇಕವು ಆತನ ವರವೇ.
೨೨ ಆತನು ಅಗಾಧವಿಷಯಗಳನ್ನೂ ಗೂಢಾರ್ಥಗಳನ್ನೂ ಬಯಲಿಗೆ ತರುತ್ತಾನೆ;
ಕಗ್ಗತ್ತಲೆಯಲ್ಲಿ ಅಡಗಿರುವುದೂ ಆತನಿಗೆ ಗೋಚರವಾಗುವುದು;
ತೇಜಸ್ಸು ಆತನಲ್ಲೇ ನೆಲೆಗೊಂಡಿದೆ.
೨೩ ನನ್ನ ಪಿತೃಗಳ ದೇವರೇ, ನಿನ್ನನ್ನು ಸ್ತುತಿಸುತ್ತೇನೆ, ಕೊಂಡಾಡುತ್ತೇನೆ,
ನೀನು ನನಗೆ ಜ್ಞಾನತ್ರಾಣಗಳನ್ನು ದಯಪಾಲಿಸಿ ನಾವು ಬೇಡಿದ್ದನ್ನು ನನಗೆ ತೋರ್ಪಡಿಸಿದ್ದಿಯಲ್ಲಾ;
ಹೌದು, ರಾಜನ ರಹಸ್ಯವನ್ನು ನಮಗೆ ಪ್ರಕಟಪಡಿಸಿರುವೆ” ಎಂದನು.
೨೪ ನಂತರ ದಾನಿಯೇಲನು ಬಾಬೆಲಿನ ವಿದ್ವಾಂಸರನ್ನು ಕೊಲ್ಲುವುದಕ್ಕೆ ರಾಜನು ನೇಮಿಸಿದ ಅರ್ಯೋಕನ ಬಳಿಗೆ ಹೋಗಿ ಅವನಿಗೆ, “ಬಾಬೆಲಿನ ವಿದ್ವಾಂಸರನ್ನು ಕೊಲ್ಲಬೇಡ; ನನ್ನನ್ನು ರಾಜನ ಸನ್ನಿಧಿಗೆ ಬಿಡು; ನಾನು ಕನಸಿನ ಅಭಿಪ್ರಾಯವನ್ನು ರಾಜನಿಗೆ ತಿಳಿಸುವೆನು” ಎಂದು ಹೇಳಿದನು.
೨೫ ಕೂಡಲೆ ಅರ್ಯೋಕನು ದಾನಿಯೇಲನನ್ನು ರಾಜನ ಬಳಿಗೆ ಶೀಘ್ರವಾಗಿ ಕರೆದುಕೊಂಡು ಹೋಗಿ, “ರಾಜನೇ, ಕನಸಿನ ಅಭಿಪ್ರಾಯವನ್ನು ನಿನಗೆ ತಿಳಿಸಬಲ್ಲವನೊಬ್ಬನು ಯೆಹೂದದಿಂದ ಸೆರೆಯಾಗಿ ತಂದವರಲ್ಲಿ ನನಗೆ ಸಿಕ್ಕಿದ್ದಾನೆ” ಎಂದು ಅರಿಕೆಮಾಡಿದನು. ೨೬ ರಾಜನು ಬೇಲ್ತೆಶಚ್ಚರನೆಂಬ ಅಡ್ಡಹೆಸರಿನ ದಾನಿಯೇಲನನ್ನು, “ನಾನು ಕಂಡ ಕನಸನ್ನೂ, ಅದರ ಅರ್ಥವನ್ನೂ ನನಗೆ ತಿಳಿಸಬಲ್ಲೆಯಾ?” ಎಂದು ಕೇಳಿದನು.
೨೭ ಅದಕ್ಕೆ ದಾನಿಯೇಲನು ರಾಜನನ್ನು ಕುರಿತು, “ರಾಜನು ಕೇಳುವ ರಹಸ್ಯವನ್ನು ವಿದ್ವಾಂಸರಾಗಲಿ, ಮಾಟಗಾರರಾಗಲಿ, ಜೋಯಿಸರಾಗಲಿ, ಶಕುನದವರಾಗಲಿ ಯಾರೂ ರಾಜನಿಗೆ ತಿಳಿಸಲಾರರು. ೨೮ ಆದರೆ ರಹಸ್ಯಗಳನ್ನು ಪ್ರಕಟಗೊಳಿಸುವ ಒಬ್ಬನಿದ್ದಾನೆ, ಆತನು ದೇವರು, ಆತನು ಪರಲೋಕದಲ್ಲಿದ್ದಾನೆ. ಮುಂದೆ ನಡೆಯತಕ್ಕದ್ದನ್ನು ಆತನೇ ರಾಜನಾದ ನೆಬೂಕದ್ನೆಚ್ಚರನಿಗೆ ತಿಳಿಯಪಡಿಸಿದ್ದಾನೆ. ನಿನ್ನ ಕನಸು, ಹಾಸಿಗೆಯ ಮೇಲೆ ನಿನ್ನ ಮನಸ್ಸಿನಲ್ಲಿ ಬಿದ್ದ ಸ್ವಪ್ನಗಳು ಇವೇ.
೨೯ “ರಾಜನೇ, ನೀನು ಹಾಸಿಗೆಯ ಮೇಲೆ ಮಲಗಿರುವಾಗ ಮುಂದೆ ಏನಾಗುವುದೋ? ಎಂಬ ಯೋಚನೆಯು ನಿನ್ನಲ್ಲಿ ಹುಟ್ಟಿತಲ್ಲಾ; ರಹಸ್ಯಗಳನ್ನು ವ್ಯಕ್ತಗೊಳಿಸುವಾತನು ಮುಂದೆ ಸಂಭವಿಸುವುದನ್ನು ನಿನಗೆ ಗೋಚರಮಾಡಿದ್ದಾನೆ. ೩೦ ನಾನೇ ಎಲ್ಲಾ ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತನಲ್ಲ, ಕನಸಿನ ಅಭಿಪ್ರಾಯವು ರಾಜನಿಗೆ ಗೋಚರವಾಗಿ ನಿನ್ನ ಮನಸ್ಸಿನ ಯೋಚನೆಯ ವಿಷಯವು ನಿನಗೆ ತಿಳಿದು ಬರಲಿ ಎಂದು ಈ ರಹಸ್ಯವು ನನಗೂ ಪ್ರಕಟವಾಗಿದೆ.
೩೧ “ರಾಜನೇ, ನೀನು ಕಂಡದ್ದು ಆಹಾ, ಅದ್ಭುತಪ್ರತಿಮೆ; ಥಳಥಳನೆ ಹೊಳೆಯುವ ಆ ದೊಡ್ಡ ಪ್ರತಿಮೆಯು ನಿನ್ನೆದುರಿಗೆ ನಿಂತಿತ್ತು; ಭಯಂಕರವಾಗಿ ಕಾಣಿಸಿತು. ೩೨ ಆ ಪ್ರತಿಮೆಯ ತಲೆಯು ಅಪರಂಜಿ, ಎದೆತೋಳುಗಳು ಬೆಳ್ಳಿ, ಹೊಟ್ಟೆಸೊಂಟಗಳು ತಾಮ್ರ, ೩೩ ಕಾಲುಗಳು ಕಬ್ಬಿಣ, ಪಾದಗಳು ಕಬ್ಬಿಣ ಮತ್ತು ಮಣ್ಣು.
೩೪ “ನೀನು ನೋಡುತ್ತಿರಲಾಗಿ ಬೆಟ್ಟದೊಳಗಿಂದ ಒಂದು ಗುಂಡು ಬಂಡೆಯು ಕೈಯಿಲ್ಲದೆ ಒಡೆಯಲ್ಪಟ್ಟು, ಸಿಡಿದು ಬಂದು ಆ ಪ್ರತಿಮೆಯ ಕಬ್ಬಿಣ ಮಣ್ಣಿನ ಪಾದಗಳಿಗೆ ಬಡಿದು, ಚೂರುಚೂರು ಮಾಡಿತು. ೩೫ ಆಗ ಕಬ್ಬಿಣ, ಮಣ್ಣು, ತಾಮ್ರ, ಬೆಳ್ಳಿ ಬಂಗಾರಗಳೆಲ್ಲವೂ ಪುಡಿಪುಡಿಯಾಗಿ ಸುಗ್ಗಿಯ ಕಣಗಳ ಹೊಟ್ಟಿನಂತಾದವು; ಗಾಳಿಯು ತೂರಿಕೊಂಡು ಹೋಗಲು ಅವುಗಳಿಗೆ ನೆಲೆಯೇ ಇಲ್ಲವಾಯಿತು; ಪ್ರತಿಮೆಗೆ ಬಡಿದ ಆ ಬಂಡೆಯು ಮಹಾ ಪರ್ವತವಾಗಿ ಲೋಕದಲ್ಲೆಲ್ಲಾ ತುಂಬಿಕೊಂಡಿತು.
೩೬ “ಕನಸು ಇದೇ; ಇದರ ಅರ್ಥವನ್ನೂ ನಿನ್ನಲ್ಲಿ ಅರಿಕೆಮಾಡುತ್ತೇನೆ. ೩೭ ಅರಸನೇ, ನೀನು ರಾಜಾಧಿರಾಜ, ಪರಲೋಕ ದೇವರು ನಿನಗೆ ರಾಜ್ಯಬಲ, ಪರಾಕ್ರಮ, ವೈಭವಗಳನ್ನು ದಯಪಾಲಿಸಿದ್ದಾನೆ. ೩೮ ನರಜಾತಿಯವರು ವಾಸಿಸುವ ಸಕಲ ಪ್ರಾಂತ್ಯಗಳಲ್ಲಿ ಆಕಾಶಪಕ್ಷಿಗಳನ್ನೂ, ಭೂಜಂತುಗಳನ್ನೂ ನಿನ್ನ ಕೈಗೆ ಒಪ್ಪಿಸಿ ನೀನು ಅವುಗಳನ್ನೆಲ್ಲಾ ಆಳುವಂತೆ ಮಾಡಿದ್ದಾನೆ; ನೀನೇ ಆ ಬಂಗಾರದ ತಲೆ.
೩೯ “ನಿನ್ನ ಕಾಲವಾದ ಮೇಲೆ ನಿನಗಿಂತ ಬಿಳುಪಾದ (ಬೆಳ್ಳಿ) ಮತ್ತೊಂದು ರಾಜ್ಯವು ಉಂಟಾಗುವುದು. ಅನಂತರ ಬೇರೊಂದು ಮೂರನೆಯ ರಾಜ್ಯವು ತಾಮ್ರದ್ದಾಗಿ ತಲೆದೋರಿ ಭೂಮಂಡಲವನ್ನೆಲ್ಲಾ ಆಳುವುದು.
೪೦ “ನಾಲ್ಕನೆಯ ರಾಜ್ಯವು ಕಬ್ಬಿಣದಷ್ಟು ಗಟ್ಟಿ; ಕಬ್ಬಿಣವು ಎಲ್ಲಾ ವಸ್ತುಗಳನ್ನು ಚೂರುಚೂರಾಗಿ ಒಡೆದು ಹಾಕುತ್ತದಷ್ಟೆ; ಸಕಲವನ್ನೂ ಧ್ವಂಸಮಾಡುವ ಕಬ್ಬಿಣದಂತೆಯೇ ಅದು ಚೂರುಚೂರಾಗಿ ಧ್ವಂಸಮಾಡುವುದು.
೪೧ “ಪಾದಗಳಲ್ಲಿ ಮತ್ತು ಬೆರಳುಗಳಲ್ಲಿ ಒಂದಂಶವು ಕುಂಬಾರನ ಮಣ್ಣೂ, ಒಂದಂಶವು ಕಬ್ಬಿಣವೂ ಆಗಿದ್ದುದನ್ನು ನೀನು ನೋಡಿದ ಪ್ರಕಾರ ಆ ರಾಜ್ಯವು ಭಿನ್ನ ಭಿನ್ನವಾಗಿರುವುದು; ಜೇಡಿಮಣ್ಣಿನೊಂದಿಗೆ ಕಬ್ಬಿಣವು ಮಿಶ್ರವಾಗಿದ್ದದ್ದನ್ನು ನೀನು ನೋಡಿದಂತೆ ಆ ರಾಜ್ಯದಲ್ಲಿ ಕಬ್ಬಿಣದ ಬಲವು ಸೇರಿರುವುದು. ೪೨ ಕಾಲ್ಬೆರಳುಗಳ ಒಂದಂಶವು ಕಬ್ಬಿಣ, ಒಂದಂಶವು ಮಣ್ಣು ಆಗಿದ್ದ ಹಾಗೆ ಆ ರಾಜ್ಯದ ಒಂದಂಶವು ಗಟ್ಟಿ, ಒಂದಂಶವು ಜೊಂಡಾಗಿರುವುದು. ೪೩ ಕಬ್ಬಿಣವು ಜೇಡಿಮಣ್ಣಿನೊಂದಿಗೆ ಬೆರೆತಿರುವುದನ್ನು ನೀನು ನೋಡಿದ ಮೇರೆಗೆ, ಆ ರಾಜ್ಯಾಗಳ ಸಂತತಿ ಸಂಬಂಧದಿಂದ ಬೆರೆತುಕೊಳ್ಳುವವು. ಆದರೆ ಕಬ್ಬಿಣವು ಮಣ್ಣಿನೊಂದಿಗೆ ಹೇಗೆ ಕೂಡಿಕೊಳ್ಳುವುದಿಲ್ಲವೋ ಹಾಗೆ ಅವು ಒಂದಕ್ಕೊಂದು ಹೊಂದಿಕೊಳ್ಳುವುದಿಲ್ಲ.
೪೪ “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು. ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವುದು. ೪೫ ಬೆಟ್ಟದೊಳಗಿಂದ ಒಂದು ಗುಂಡು ಬಂಡೆಯು ಕೈಯಿಲ್ಲದೆ ಒಡೆಯಲ್ಪಟ್ಟು ಕಬ್ಬಿಣ, ತಾಮ್ರ, ಮಣ್ಣು, ಬೆಳ್ಳಿಬಂಗಾರಗಳನ್ನು ಚೂರುಚೂರು ಮಾಡಿದ್ದು ನಿನ್ನ ಕಣ್ಣಿಗೆ ಬಿತ್ತಲ್ಲಾ. ಇದರಿಂದ ಪರಲೋಕದೇವರು ಮುಂದೆ ನಡೆಯುವ ವಿಷಯಗಳನ್ನು ರಾಜನಿಗೆ ತಿಳಿಯಪಡಿಸಿದ್ದಾನೆ. ಕನಸು ನಿಜ, ಅದರ ಅರ್ಥವು ನಂಬತಕ್ಕದು” ಎಂದು ಹೇಳಿದನು.
೪೬ ಆಗ ರಾಜನಾದ ನೆಬೂಕದ್ನೆಚ್ಚರನು ಅಡ್ಡಬಿದ್ದು, “ದಾನಿಯೇಲನನ್ನು ಪೂಜಿಸಿ, ಅವನಿಗೆ ನೈವೇದ್ಯಮಾಡಿ ಧೂಪ ಹಾಕಬೇಕು” ಎಂದು ಆಜ್ಞಾಪಿಸಿದನು. ೪೭ ಅರಸನು ದಾನಿಯೇಲನಿಗೆ ಪ್ರತ್ಯುತ್ತರವಾಗಿ, “ನೀನು ಈ ರಹಸ್ಯವನ್ನು ಬಯಲಿಗೆ ತರಲು ಸಮರ್ಥನಾದ ಕಾರಣ ನಿಮ್ಮ ದೇವರು ದೇವಾಧಿದೇವನೂ, ರಾಜರ ಒಡೆಯನೂ, ರಹಸ್ಯಗಳನ್ನು ವ್ಯಕ್ತಗೊಳಿಸುವವನೂ ಆಗಿದ್ದಾನೆ ಎಂಬುವುದು ನಿಶ್ಚಯ” ಎಂದು ಹೇಳಿದನು.
೪೮ ಬಳಿಕ ರಾಜನು ದಾನಿಯೇಲನನ್ನು ಸನ್ಮಾನಿಸಿ, ಅವನಿಗೆ ಅಮೂಲ್ಯವಾದ ಅನೇಕ ಬಹುಮಾನಗಳನ್ನೂ ದಾನಗಳನ್ನು ಕೊಟ್ಟು, ಬಾಬೆಲ್ ಸಂಸ್ಥಾನವನ್ನೆಲ್ಲಾ ಅಧೀನಪಡಿಸಿ, ಬಾಬೆಲಿನ ವಿದ್ವಾಂಸರ ಸಕಲ ಮುಖ್ಯಸ್ಥರಿಗೂ ಅವನನ್ನು ಮುಖ್ಯಸ್ಥನನ್ನಾಗಿ ನೇಮಿಸಿದನು. ೪೯ ದಾನಿಯೇಲನು ಬಿನ್ನಹ ಮಾಡಲು ರಾಜನು ಶದ್ರಕ್, ಮೇಷಕ್, ಅಬೇದ್ನೆಗೋ ಎಂಬುವವರಿಗೆ ಬಾಬೆಲ್ ಸಂಸ್ಥಾನದ ಕಾರ್ಯಭಾರವನ್ನು ವಹಿಸಿದನು. ದಾನಿಯೇಲನು ಅರಮನೆಯಲ್ಲಿ ಉಳಿದನು.