೩೨
೧ ಆಕಾಶಮಂಡಲವೇ, ನನ್ನ ಮಾತುಗಳಿಗೆ ಕಿವಿಗೊಡು.
ಭೂಮಂಡಲವೇ, ನಾನು ಹೇಳುವುದನ್ನು ಕೇಳು.
೨ ನನ್ನ ಉಪದೇಶವು ಹಸಿಹುಲ್ಲಿನ ಮೇಲೆ ಮೆಲ್ಲಗೆ ಸುರಿಯುವ ಮಳೆಯ ತುಂತುರುಗಳಂತೆ ತಣ್ಣಗಿರುವುದು;
ನನ್ನ ಬೋಧನೆಯು ಮಂಜಿನಂತೆಯೂ ಮತ್ತು ಕಾಯಿಪಲ್ಯಗಳ ಮೇಲೆ ಬೀಳುವ ಹದಮಳೆಯಂತೆಯೂ ಹಿತವಾಗಿರುವುದು.
೩ ನಾನು ಯೆಹೋವನ ನಾಮಮಹತ್ವವನ್ನು ಪ್ರಕಟಿಸುವೆನು; ನಮ್ಮ ದೇವರನ್ನು ಮಹಾಮಹಿಮೆಯುಳ್ಳವನೆಂದು ಕೊಂಡಾಡುವೆನು.
೪ ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡೆಸುವುದೆಲ್ಲಾ ನ್ಯಾಯ;
ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಮತ್ತು ಯಥಾರ್ಥನೂ ಆಗಿದ್ದಾನೆ.
೫ ಆದರೆ ಅವರು ದ್ರೋಹಿಗಳೇ, ಮಕ್ಕಳಲ್ಲ; ಇದು ಅವರ ದೋಷವು; ಅವರು ವಕ್ರಬುದ್ಧಿಯುಳ್ಳ ಮೂರ್ಖಜಾತಿಯವರು.
೬ ದುರಾಚಾರಿಗಳಿರಾ, ಅವಿವೇಕಿಗಳಿರಾ, ಯೆಹೋವನ ವಿಷಯದಲ್ಲಿ ಈ ರೀತಿಯಾಗಿ ವರ್ತಿಸಬಹುದೇ?
ಆತನು ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೇ; ನಿಮ್ಮನ್ನು ಜನಾಂಗವನ್ನಾಗಿ ಮಾಡಿ ಸ್ಥಾಪಿಸಿದನಲ್ಲವೇ.
೭ ಪೂರ್ವಕಾಲವನ್ನು ನೆನಪಿಗೆ ತಂದುಕೊಳ್ಳಿರಿ; ನಿಮ್ಮ ಪೂರ್ವಜರ ಚರಿತ್ರೆಯನ್ನು ಆಲೋಚಿಸಿರಿ.
ನಿಮ್ಮ ನಿಮ್ಮ ತಂದೆಗಳನ್ನು ವಿಚಾರಿಸಿದರೆ ಅವರು ತಿಳಿಸುವರು; ಹಿರಿಯರನ್ನು ಕೇಳಿದರೆ ಅವರು ವಿವರಿಸುವರು.
೮ ಹೇಗೆಂದರೆ, “ಪರಾತ್ಪರನಾದ ದೇವರು ಜನಾಂಗಗಳನ್ನು ಬೇರೆ ಬೇರೆ ಮಾಡಿ ಅವರವರಿಗೆ ಸ್ವದೇಶಗಳನ್ನು ನೇಮಿಸಿಕೊಟ್ಟಾಗ
ಇಸ್ರಾಯೇಲರ ಸಂಖ್ಯೆಗೆ ತಕ್ಕಂತೆ ಆಯಾ ಜನಾಂಗಕ್ಕೆ ಒಂದೊಂದು ಪ್ರದೇಶವನ್ನು ಗೊತ್ತು ಮಾಡಿದನು.
೯ ಇಸ್ರಾಯೇಲರು ಮಾತ್ರ ಯೆಹೋವನ ಸ್ವಂತ ಜನರಾದರು. ಯಾಕೋಬನ ವಂಶಸ್ಥರು ಆತನಿಗೆ ಸ್ವಕೀಯ ಪ್ರಜೆಯಾದರು.
೧೦ ಆತನು ಶೂನ್ಯವೂ ಮತ್ತು ಭಯಂಕರವೂ ಆಗಿರುವ
ಮರಳುಗಾಡಿನಲ್ಲಿ ಅವರನ್ನು ಕಂಡು ಗುರಾಣಿಯಂತೆ ಆವರಿಸಿಕೊಂಡನು.
ಪ್ರೀತಿಯಿಂದ ಪರಾಂಬರಿಸಿದ ಹಾಗೂ ಕಣ್ಣುಗುಡ್ದೆಯಂತೆ ಕಾಪಾಡಿದನು.
೧೧ ಹದ್ದು ತನ್ನ ಮರಿಗಳನ್ನು ಗೂಡಿನೊಳಗಿಂದ ಹೊರಡಿಸಿ,
ಅವುಗಳ ಬಳಿಯಲ್ಲಿ ಹಾರಾಡುವಂತೆ ಯೆಹೋವನು ತನ್ನ ರೆಕ್ಕೆಗಳನ್ನು ಚಾಚಿ ಇಸ್ರಾಯೇಲರನ್ನು ಹೊತ್ತುಕೊಂಡು ಅವರನ್ನು ಸಂರಕ್ಷಿಸಿದನು.
೧೨ ಯಾವ ಅನ್ಯದೇವರೂ ಇಲ್ಲ ಯೆಹೋವನೊಬ್ಬನೇ ಅವರನ್ನು ನಡಿಸಿಕೊಂಡು ಬಂದನು.
೧೩ ಆತನು ಅವರನ್ನು ಭೂಮಿಯ ಎತ್ತರವಾದ ಪ್ರದೇಶಗಳ ಮೇಲೆ ಹತ್ತಿಸಿ
ಅವರಿಗೆ ವ್ಯವಸಾಯವೃದ್ಧಿಯನ್ನು ಉಂಟುಮಾಡಿ,
ಬಂಡೆಯಿಂದ ಜೇನೂ ಮತ್ತು ಗಿರಿಯಿಂದ ಎಣ್ಣೆಯೂ ದೊರೆಯುವಂತೆ ಮಾಡಿದನು.
೧೪ ಆಹಾರಕ್ಕಾಗಿ ಆಕಳಿನ ಮೊಸರು, ಆಡು ಕುರಿಗಳ ಹಾಲು, ಕೊಬ್ಬಿದ ಕುರಿ ಟಗರುಗಳ ಮಾಂಸವು,
ಬಾಷಾನ್ ಸೀಮೆಯ ಉತ್ತಮಪಶುಗಳು, ಹೋತಗಳು, ಶ್ರೇಷ್ಠವಾದ ಗೋದಿ ಇವುಗಳನ್ನೂ ಮತ್ತು ಪಾನಕ್ಕಾಗಿ ದ್ರಾಕ್ಷೇಯರಸವನ್ನೂ ಕೊಟ್ಟದ್ದೂ;
ಇದನ್ನೆಲ್ಲಾ ನೆನಪಿಗೆ ತಂದುಕೊಳ್ಳಿರಿ.”
೧೫ ಆದರೆ ಯೆಶುರೂನು ಚೆನ್ನಾಗಿ ತಿಂದು, ಕೊಬ್ಬಿ,
ತನ್ನನ್ನು ಸೃಷ್ಟಿಸಿದ ದೇವರನ್ನು ಬಿಟ್ಟು ತನ್ನ ಆಶ್ರಯದುರ್ಗವನ್ನು ತಿರಸ್ಕರಿಸಿದನು.
೧೬ ಅವರು ಅನ್ಯದೇವರುಗಳನ್ನು ಪೂಜಿಸಿ ಆತನನ್ನು ರೇಗಿಸಿದರು;
ನಿಷಿದ್ಧಾಚಾರಗಳನ್ನು ನಡಿಸಿ ಆತನಿಗೆ ಸಿಟ್ಟೇರಿಸಿದರು.
೧೭ ದೇವರೇ ಅಲ್ಲದ ಕ್ಷುದ್ರದೇವತೆಗಳಿಗೂ, ಪಿತೃಗಳು ಭಜಿಸದೆ ಇದ್ದ
ಮತ್ತು ತಮಗೆ ಮೊದಲಿನಿಂದಲೂ ಗೊತ್ತಿಲ್ಲದೆ ಇರುವ
ನೂತನದೇವತೆಗಳಿಗೂ ಬಲಿಯನ್ನರ್ಪಿಸಿದರು.
೧೮ ಇಸ್ರಾಯೇಲರೇ, ನಿಮ್ಮನ್ನು ಹುಟ್ಟಿಸಿದ ತಂದೆಯಂತಿರುವ ಶರಣನನ್ನು ನೀವು ಸ್ಮರಿಸಲಿಲ್ಲ;
ಹೆತ್ತ ತಾಯಿಯಂತಿರುವ ದೇವರನ್ನು ಮರೆತುಬಿಟ್ಟಿರಿ.
೧೯ ಯೆಹೋವನು ಇದನ್ನು ಕಂಡು ಅವರ ವಿಷಯದಲ್ಲಿ ಬೇಸರಗೊಂಡನು;
ತನ್ನ ಕುಮಾರ ಕುಮಾರ್ತೆಯರ ವಿಷಯದಲ್ಲಿ ವ್ಯಥೆಪಟ್ಟನು.
೨೦ ಆತನು ಅವರ ವಿಷಯದಲ್ಲಿ ಹೀಗೆ ಅಂದುಕೊಂಡನು,
“ನಾನು ಅವರಿಗೆ ವಿಮುಖನಾಗಿ ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು.
ಅವರು ಸತ್ಯವನ್ನು ತಿಳಿದೂ ಅದನ್ನು ಅನುಸರಿಸದೆ, ದ್ರೋಹಿಗಳಾದ ಮಕ್ಕಳಾಗಿದ್ದಾರೆ.
೨೧ ಅವರು ದೇವರಲ್ಲದವುಗಳ ಮೂಲಕ ನನ್ನನ್ನು ರೇಗಿಸಿದ್ದರಿಂದ ನಾನು ಜನಾಂಗವಲ್ಲದವರ ಮೂಲಕ ಅವರಲ್ಲಿ ಕೋಪಹುಟ್ಟಿಸುವೆನು.
ಅವರು ನಿಷ್ಪ್ರಯೋಜಕವಾದ ವಿಗ್ರಹಗಳ ಮೂಲಕ ನನ್ನನ್ನು ಸಿಟ್ಟಿಗೆಬ್ಬಿಸಿದ್ದರಿಂದ
ನಾನು ಸದಾಚಾರವಿಲ್ಲದ ಜನರ ಮೂಲಕ ಅವರನ್ನು ಸಿಟ್ಟಿಗೆಬ್ಬಿಸುವೆನು.
೨೨ ನನ್ನ ಕೋಪಾಗ್ನಿ ಪ್ರಜ್ವಲಿಸುತ್ತದೆ; ಅದು ಪಾತಾಳದ ವರೆಗೂ ವ್ಯಾಪಿಸಿ
ಬೆಳೆಯ ಸಹಿತವಾಗಿ ಭೂಮಿಯನ್ನೂ ಬುಡಸಹಿತವಾಗಿ ಬೆಟ್ಟಗಳನ್ನೂ ದಹಿಸಿಬಿಡುವುದು.
೨೩ ಅವರಿಗೆ ಒಂದರ ಮೇಲೊಂದಾಗಿ ವಿಪತ್ತುಗಳನ್ನು ಬರಮಾಡುವೆನು;
ನನ್ನ ಎಲ್ಲಾ ಬಾಣಗಳನ್ನೂ ಅವರಿಗೆ ವಿರುದ್ಧವಾಗಿ ಪ್ರಯೋಗಿಸುವೆನು.
೨೪ ಅವರು ಬರದಿಂದ ಕ್ಷೀಣವಾಗುವರು, ತಾಪದಿಂದಲೂ ಅಂಟುರೋಗದಿಂದಲೂ ಸಾಯುವರು;
ಅದಲ್ಲದೆ ನಾನು ದುಷ್ಟ ಮೃಗಗಳನ್ನೂ ಮತ್ತು ವಿಷಸರ್ಪಗಳನ್ನೂ ಅವರ ಮೇಲೆ ಬರಮಾಡುವೆನು.
೨೫ ಮನೆಯ ಹೊರಗೆ ಕತ್ತಿಯೂ, ಒಳಗೆ ಭಯವೂ ಇರುವುದು.
ಯೌವನಸ್ಥರು, ಕನ್ಯೆಯರು, ಮೊಲೆಕೂಸುಗಳು, ನರೇತಲೆಯವರು
ಇವರೆಲ್ಲರೂ ಕತ್ತಿಯಿಂದ ಕೊಲ್ಲಲ್ಪಡುವರು.
೨೬ ಅವರನ್ನು ಸಂಪೂರ್ಣವಾಗಿ ನಾಶಮಾಡುತ್ತಿದ್ದೆನು,
ಅವರು ಮನುಷ್ಯರ ಜ್ಞಾಪಕದಲ್ಲೂ ಇಲ್ಲದಂತೆ ಮಾಡುತ್ತಿದ್ದೆನು.
೨೭ ಆದರೆ ಅವರ ವಿರುಧಿಗಳ ಹಮ್ಮಿನಿಂದ ತಪ್ಪಾದ ಭಾವನೆ ಮಾಡಿಕೊಂಡು,
‘ಇದು ನಮ್ಮ ಭುಜಬಲದಿಂದಲೇ ಹೊರತು ಯೆಹೋವನಿಂದ ಆಗಲಿಲ್ಲ ಅಂದುಕೊಳ್ಳುವರು’ ಎಂದು ನಾನು ಹಿಂದೆಗೆದೆನು” ಎಂಬುದೇ.
೨೮ ಅವರು ವಿವೇಚನೆಯಿಲ್ಲದ ಜನರು; ಅವರಿಗೆ ಸ್ವಲ್ಪವಾದರೂ ವಿವೇಕವಿಲ್ಲ.
೨೯ ಅವರಿಗೆ ಜ್ಞಾನವಿದ್ದರೆ ಈ ಸಂಗತಿಗಳನ್ನೆಲ್ಲಾ ಗ್ರಹಿಸುತ್ತಿದ್ದರು; ತಮಗೆ ಅಂತ್ಯದಲ್ಲಿ ದುರವಸ್ಥೆ ಪ್ರಾಪ್ತವಾಗುವುದೆಂದು ತಿಳಿದುಕೊಳ್ಳುತ್ತಿದ್ದರು!
೩೦ ಅವರ ಆಶ್ರಯದುರ್ಗವಾದ ಯೆಹೋವನು ಅವರನ್ನು ಶತ್ರಗಳಿಗೆ ಒಪ್ಪಿಸಿಕೊಡದಿದ್ದರೆ
ಒಬ್ಬನಿಂದ ಸಾವಿರ ಜನರು ಹೇಗೆ ಸೋತುಹೋಗುತ್ತಿದ್ದರು?
ಯೆಹೋವನು ಅವರನ್ನು ಕೈಬಿಡದಿದ್ದರೆ ಇಬ್ಬರಿಗೆ ಹೆದರಿ ಹತ್ತು ಸಾವಿರ ಜನರು ಹೇಗೆ ಓಡಿಹೋಗುತ್ತಿದ್ದರು?
೩೧ ನಮ್ಮ ಆಶ್ರಯದುರ್ಗ ಅವರ ಆಶ್ರಯದುರ್ಗದಂತಲ್ಲಾ, ನಮ್ಮ ಅಶ್ರಯದಾತನಿಗೆ ಯಾರು ಸಮಾನರಲ್ಲವೆಂದು ನಮ್ಮ ಶತ್ರುಗಳೇ ಒಪ್ಪಿಕೊಳ್ಳುತ್ತಾರೆ.
೩೨ ಅವರು ಸೊದೋಮ್ಯರೆಂಬ ದ್ರಾಕ್ಷೇಲತೆಯ ಒಂದು ಬಳ್ಳಿಯಂತಿದ್ದಾರೆ;
ಮತ್ತು ಅದು ಗೊಮೋರ ಪಟ್ಟಣದ ತೋಟಗಳಲ್ಲಿ ಬೆಳೆಯುವ ಜಾತಿ.
ಅದರ ದ್ರಾಕ್ಷೇಹಣ್ಣು ವಿಷದ ದ್ರಾಕ್ಷೇಹಣ್ಣು;
ಅದರ ಗೊಂಚಲು ಕಹಿ.
೩೩ ಅದರ ದ್ರಾಕ್ಷಾರಸವು ಸರ್ಪದಂತೆಯೂ ಮತ್ತು ಕ್ರೂರ ವಿಷಸರ್ಪದಂತೆ ಮರಣಕರವಾದದ್ದು.
೩೪ ಇದನ್ನೆಲ್ಲಾ ನಾನು ಮುದ್ರೆಹಾಕಿ ನನ್ನ ಉಗ್ರಾಣದಲ್ಲಿಟ್ಟುಕೊಂಡಿದ್ದೇನೆ ಅಲ್ಲವೇ?
೩೫ ಪ್ರತೀಕಾರಮಾಡಿ ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ;
ಅವರು ಜಾರಿ ಬೀಳುವ ಸಮಯ ಬರುವುದು. ಅವರಿಗೆ ಆಪತ್ಕಾಲವು ಸಮೀಪಿಸಿತು;
ಅವರಿಗೋಸ್ಕರ ಸಿದ್ಧವಾಗಿರುವ ದುರ್ಗತಿ ಬೇಗ ಬರುವುದು.
೩೬ ಆಗ ಯೆಹೋವನು ತನ್ನ ಜನರಿಗಾಗಿ ನ್ಯಾಯತೀರಿಸುವನು.
ಪರತಂತ್ರರಾಗಲಿ ಅಥವಾ ಸ್ವತಂತ್ರರಾಗಲಿ ಅವರೆಲ್ಲರೂ ನಿರಾಶ್ರಿತರಾಗಿ
ನಿಶ್ಶೇಷರಾದುದ್ದನ್ನು ಆತನು ತಿಳಿದು ತನ್ನ ಸೇವಕರ ವಿಷಯದಲ್ಲಿ ಕನಿಕರ ಪಡುವನು.
೩೭ ಯೆಹೋವನು ಅವರ ವಿಷಯದಲ್ಲಿ ಹೇಳುವುದು ಏನೆಂದರೆ,
“ಅವರು ಪೂಜಿಸುತ್ತಿದ್ದ ದೇವರುಗಳು ಎಲ್ಲಿ ಹೋದರು?
ಅವರು ಆಶ್ರಯಿಸಿಕೊಂಡಿದ್ದ ಆಶ್ರಯದುರ್ಗನು ಎಲ್ಲಿದ್ದಾನೆ?
೩೮ ಅವರ ನೈವೇದ್ಯಗಳ ಕೊಬ್ಬನ್ನು ತಿಂದು ಮತ್ತು ಅವರು
ಸಮರ್ಪಿಸಿದ ಪಾನದ್ರವ್ಯಗಳನ್ನು ಕುಡಿದ ದೇವತೆಗಳು ಎಲ್ಲಿ?
ಅವರೇ ನಿಮ್ಮ ಸಹಾಯಕ್ಕೆ ಬರಲಿ; ಅವರೇ ನಿಮ್ಮನ್ನು ಕಾಯಲಿ.
೩೯ ನಾನೇ, ನಾನೊಬ್ಬನೇ ದೇವರಾಗಿರಲಾಗಿ
ನನ್ನ ಹೊರತು ಯಾವ ದೇವರೂ ಇಲ್ಲವೆಂದು ಈಗಲಾದರೂ ತಿಳಿದುಕೊಳ್ಳಿರಿ.
ಬದುಕಿಸುವವನೂ ಹಾಗೂ ಕೊಲ್ಲುವವನೂ ನಾನೇ; ಗಾಯಪಡಿಸುವವನೂ ಮತ್ತು ವಾಸಿಮಾಡುವವನೂ ನಾನೇ;
ನನ್ನ ಕೈಯಿಂದ ತಪ್ಪಿಸಲು ಶಕ್ತನು ಯಾವನೂ ಇಲ್ಲ.
೪೦ ನಾನು ಆಕಾಶದ ಕಡೆಗೆ ಕೈಯೆತ್ತಿ ನಾನು ಸದಾಕಾಲ
ಜೀವಿಸುವವನೆಂಬುದು ಎಷ್ಟು ನಿಶ್ಚಯ ಎಂದು ಖಂಡಿತವಾಗಿ ಪ್ರಮಾಣಮಾಡುವೆನು,
೪೧ ‘ಥಳಥಳಿಸುವ ನನ್ನ ಕತ್ತಿಯನ್ನು ನಾನು ಹದಮಾಡಿ,
ನಾನು ಕೈ ಚಾಚಿ ನ್ಯಾಯವನ್ನು ಸ್ಥಾಪಿಸುವುದಕ್ಕೆ ಮುನ್ನುಗ್ಗಿ ನನ್ನ ಶತ್ರುಗಳಿಗೆ ಮುಯ್ಯಿತೀರಿಸುವೆನು,
ನನ್ನನ್ನು ದ್ವೇಷಿಸಿದವರಿಗೆ ಪ್ರತಿದಂಡನೆ ಮಾಡುವೆನು;
೪೨ ನನ್ನ ಬಾಣಗಳು ರಕ್ತವನ್ನು ಕುಡಿದು ಮತ್ತವಾಗುವವು;
ನನ್ನ ಕತ್ತಿಯು ಕೊಲ್ಲಲ್ಪಟ್ಟವರ ಮತ್ತು ಸೆರೆಹಿಡಿದವರ ರಕ್ತಮಾಂಸಗಳನ್ನು ಭಕ್ಷಿಸಿ
ಶತ್ರುಗಳಲ್ಲಿರುವ ವೀರರ ತಲೆಗಳನ್ನು ಚೆಂಡಾಡುವುದು’ ಎಂಬುದೇ.
೪೩ ಜನಾಂಗಳಿರಾ, ದೇವರ ಜನರನ್ನು ಹೊಗಳಿರಿ.
ತನ್ನ ಸೇವಕರ ರಕ್ತವನ್ನು ಚೆಲ್ಲಿದ ಶತ್ರುಗಳಿಗೆ ಯೆಹೋವನು ಪ್ರತಿದಂಡನೆ ಮಾಡುತ್ತಾನೆ; ಅವರಿಗೆ ಮುಯ್ಯಿತೀರಿಸುತ್ತಾನೆ;
ತನ್ನ ಜನರಿಗೋಸ್ಕರವೂ ಮತ್ತು ದೇಶಕ್ಕೋಸ್ಕರವೂ ದೋಷ ಪರಿಹಾರಮಾಡುತ್ತಾನೆ.
೪೪ ಮೋಶೆ ಮತ್ತು ನೂನನ ಮಗನಾದ ಯೆಹೋಶುವನೂ ಈ ಪದ್ಯದ ಮಾತುಗಳನ್ನೆಲ್ಲಾ ಜನರಿಗೆ ಕೇಳಿಸುವಂತೆ ಹೇಳಿದರು.”
ಮೋಶೆಯ ಕಡೇಯ ಬೋಧನೆ
೪೫ ಮೋಶೆ ಈ ಮಾತುಗಳನ್ನೆಲ್ಲಾ ಇಸ್ರಾಯೇಲರಿಗೆ ಹೇಳಿ ಮುಗಿಸಿದನಂತರ, ೪೬ ಅವರಿಗೆ, “ನಾನು ಈಗ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಿರಿ, ಮತ್ತು ನಿಮ್ಮ ಸಂತತಿಯವರಿಗೆ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸಿರಿಸಬೇಕೆಂದು ಆಜ್ಞಾಪಿಸಿರಿ. ೪೭ ಇದು ನಿರರ್ಥಕವೆಂದು ಭಾವಿಸಬಾರದು; ಇದರಿಂದ ನೀವು ಬಾಳುವಿರಿ; ನೀವು ಯೊರ್ದನ್ ನದಿಯನ್ನು ದಾಟಿ ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ಇದನ್ನು ಅನುಸರಿಸುವುದರಿಂದಲೇ ಬಹುಕಾಲ ಇರುವಿರಿ” ಎಂದು ಹೇಳಿದನು.
ಮೋಶೆಗೆ ಯೆಹೋವನ ಆಜ್ಞೆ
೪೮ ಆದೇ ದಿನ ಯೆಹೋವನು ಮೋಶೆಗೆ, ೪೯ “ನೀನು ಈ ಅಬಾರೀಮ್ ಬೆಟ್ಟಗಳನ್ನು ಅಂದರೆ ಮೋವಾಬ್ಯರ ದೇಶದಲ್ಲಿ ಯೆರಿಕೋ ಪಟ್ಟಣಕ್ಕೆ ಎದುರಾಗಿರುವ ನೆಬೋ ಬೆಟ್ಟವನ್ನು ಹತ್ತಿ, ನಾನು ಇಸ್ರಾಯೇಲರಿಗೆ ಸ್ವದೇಶವಾಗುವುದಕ್ಕೆ ಕೊಡುವ ಕಾನಾನ್ ದೇಶವನ್ನು ನೋಡು. ೫೦ ಅನಂತರ ನಿನ್ನ ಅಣ್ಣನಾದ ಆರೋನನು ಹೇಗೆ ಹೋರೆಬ್ ಎಂಬ ಬೆಟ್ಟದಲ್ಲಿ ದೇಹವನ್ನು ಬಿಟ್ಟು ತನ್ನ ಪಿತೃಗಳಲ್ಲಿ ಸೇರಿದನೋ ಹಾಗೆಯೇ ನೀನೂ ಈ ಬೆಟ್ಟದಲ್ಲಿ ದೇಹವನ್ನು ಬಿಟ್ಟು ಪಿತೃಗಳಲ್ಲಿ ಸೇರಬೇಕು. ೫೧ ನೀವಿಬ್ಬರೂ ಚಿನ್ ಅರಣ್ಯದ ಕಾದೇಶಿನ ಮೆರೀಬಾದಲ್ಲಿ ನೀರು ಹೊರಟ ಸ್ಥಳದ ಬಳಿಯಲ್ಲಿದ್ದಾಗ, ಇಸ್ರಾಯೇಲರ ಮಧ್ಯದಲ್ಲಿ ನೀನು ನನಗೆ ವಿರುದ್ಧವಾಗಿ ದ್ರೋಹಮಾಡಿ ಅವರ ಮುಂದೆ ನನ್ನ ಗೌರವವನ್ನು ಕಾಪಾಡದೆಹೋದುದರಿಂದ ಹೀಗೆ ಆಗಬೇಕು. ೫೨ ನಾನು ಇಸ್ರಾಯೇಲರಿಗೆ ಕೊಡುವ ದೇಶವನ್ನು ನೀನು ದೂರದಿಂದ ನೋಡಬಹುದೇ ಹೊರತು ಅದರಲ್ಲಿ ಪ್ರವೇಶಿಸಕೂಡದು” ಎಂದು ಆಜ್ಞಾಪಿಸಿದನು.