ದಬ್ಬಾಳಿಕೆ, ಶ್ರಮೆ, ವೈರತ್ವ
೧ ಆ ಮೇಲೆ ಪುನಃ ದೃಷ್ಟಿಸಿ ಸೂರ್ಯನ ಕೆಳಗೆ ನಡೆಯುತ್ತಿರುವ ಹಿಂಸೆಗಳನ್ನೆಲ್ಲಾ ನೋಡಿದೆನು.
ಆಹಾ! ಹಿಂಸೆಗೊಂಡವರ ಕಣ್ಣೀರನ್ನು ನೋಡು.
ಅವರನ್ನು ಸಂತೈಸುವವರು ಯಾರೂ ಇಲ್ಲ. ಅವರನ್ನು ಹಿಂಸಿಸುವವರಿಗೆ ಬಹಳ ಬಲ ಇದೆ.
ಹಿಂಸೆಗೊಂಡವರನ್ನು ಸಂತೈಸುವವರು ಒಬ್ಬರೂ ಇಲ್ಲ.
೨ ಇದನ್ನು ನೋಡಿ ಇನ್ನೂ ಜೀವದಿಂದಿದ್ದು ಬದುಕುವವರಿಗಿಂತ ಸತ್ತವರೇ ಮೇಲೆಂದು ಹೊಗಳಿದೆನು.
೩ ಹೌದು, ಈ ಇಬ್ಬರಿಗಿಂತಲೂ ಇನ್ನೂ ಹುಟ್ಟದೇ,
ಲೋಕದಲ್ಲಿ ನಡೆಯುತ್ತಿರುವ ಅಧರ್ಮವನ್ನು ನೋಡದೆ ಇರುವುದೇ ಒಳ್ಳೆಯದೆಂದು ತಿಳಿದುಕೊಂಡೆನು.
೪ ಆಗ ಸಮಸ್ತ ಪ್ರಯಾಸವನ್ನು, ಕೈಗೂಡುವ ಸಕಲ ಕಾರ್ಯವನ್ನು ನೋಡಿ ಇವು ಪರಸ್ಪರ ಮತ್ಸರಕ್ಕೆ ಆಸ್ಪದವೆಂದು ಗ್ರಹಿಸಿಕೊಂಡೆನು. ಇದು ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೇ.
೫ ಮೂಢನು ತನ್ನ ಕೈಗಳನ್ನು ಮುಚ್ಚಿಕೊಂಡು ಯಾವ ಕೆಲಸವನ್ನು ಮಾಡದೆ,
ತನ್ನ ಮಾಂಸವನ್ನು ತಾನೇ ತಿನ್ನುವನು.
೬ ಗಾಳಿಯನ್ನು ಹಿಂದಟ್ಟುವ ಹಾಗೇ ಪ್ರಯಾಸದಿಂದ ತುಂಬಿದ ಎರಡು ಕೈಗಳಿಂದ ಮಾಡಿದ ಕೆಲಸಕ್ಕಿಂತ
ನೆಮ್ಮದಿಯಾಗಿ ಒಂದು ಕೈಯಿಂದ ಮಾಡಿದ ಕೆಲಸವೇ ಲೇಸು.
೭ ಆಗ ನಾನು ಲೋಕದಲ್ಲಿ ಮತ್ತೊಂದು ವ್ಯರ್ಥ ವಿಷಯವನ್ನು ಕಂಡೆನು.
೮ ಒಬ್ಬಂಟಿಗನಾದ ಒಬ್ಬ ಮನುಷ್ಯನಿದ್ದಾನೆ.
ಅವನಿಗೆ ಅಣ್ಣತಮ್ಮಂದಿರು ಇಲ್ಲ, ಮಕ್ಕಳೂ ಇಲ್ಲ.
ಆದರೂ ಅವನ ಪ್ರಯಾಸಕ್ಕೆ ಅಂತ್ಯವಿಲ್ಲ,
ಐಶ್ವರ್ಯದಿಂದ ಅವನ ಕಣ್ಣಿಗೆ ತೃಪ್ತಿಯಿಲ್ಲ.
ಅವನು, “ನಾನು ಸುಖವನ್ನು ತೊರೆದು
ಯಾರಿಗೋಸ್ಕರ ಪ್ರಯಾಸ ಪಡುತ್ತಾ ಇದ್ದೇನೆ?” ಅಂದುಕೊಳ್ಳುವನು.
ಇದೂ ಸಹ ವ್ಯರ್ಥವೇ. ಕೇವಲ ಪ್ರಯಾಸದ ಕೆಲಸವೇ ಸರಿ.
೯ ಒಬ್ಬನಿಗಿಂತ ಇಬ್ಬರು ಕೆಲಸ ಮಾಡುವುದು ಒಳ್ಳೆಯದು.
ಅವರ ಪ್ರಯಾಸಕ್ಕೆ ಒಳ್ಳೆಯ ಲಾಭವನ್ನು ಸಂಪಾದಿಸಬಹುದು.
೧೦ ಒಬ್ಬನು ಬಿದ್ದರೆ, ಇನ್ನೊಬ್ಬನು ತನ್ನ ಸ್ನೇಹಿತನನ್ನು ಮೇಲಕ್ಕೆ ಏಬ್ಬಿಸುವನು.
ಒಬ್ಬನು ಒಬ್ಬಂಟ್ಟಿಗನಾಗಿ ಬಿದ್ದರೆ, ಅವನನ್ನು ಮೇಲಕ್ಕೆ ಏಬ್ಬಿಸುವವನು ಯಾರೂ ಇಲ್ಲ,
ಅವನ ಗತಿ ದುರ್ಗತಿಯೇ.
೧೧ ಮತ್ತು ಇಬ್ಬರು ಜೊತೆಯಲ್ಲಿ ಮಲಗಿಕೊಂಡರೆ ಅವರಿಗೆ ಬೆಚ್ಚಗಾಗುತ್ತದೆ,
ಆದರೆ ಒಬ್ಬನು ಹೇಗೆ ಬೆಚ್ಚಗಿರುತ್ತಾನೆ?
೧೨ ಒಬ್ನನನ್ನು ಮತ್ತೊಬ್ಬನು ಜಯಿಸಬಹುದು, ಆದರೆ
ಗೆದ್ದವನನ್ನು ಇಬ್ಬರು ಎದುರಿಸಿ ನಿಲ್ಲಿಸಬಹುದು.
ಮೂರು ಹುರಿಯ ಹಗ್ಗ ಬೇಗನೆ ಕಿತ್ತುಹೋಗುವುದಿಲ್ಲ.
೧೩ ಎಚ್ಚರಿಕೆಯ ಮಾತಿಗೆ ಕಿವಿಗೊಡದ ಮುದಕನೂ, ಮೂಢನೂ ಆದ ಅರಸನಿಗಿಂತ ಜ್ಞಾನಿಯಾದ ಬಡ ಯುವಕನೇ ಮೇಲು. ೧೪ ಇಂಥ ಯುವಕನೊಬ್ಬನು ರಾಜನಾಗಲು ಸೆರೆಮನೆಯಿಂದ ಬಂದಿರಬಹುದು ಅಥವಾ ತನ್ನ ರಾಜ್ಯದಲ್ಲಿ ಬಡ ಪ್ರಜೆಯಾಗಿ ಹುಟ್ಟಿರಬಹುದು.
೧೫ ಸೂರ್ಯನ ಕೆಳಗೆ ಜೀವಿಸಿ ಮತ್ತು ನಡೆದಾಡಿದವರೆಲ್ಲರೂ ಅರಸನ ಉತ್ತರಾಧಿಕಾರಿಯಾದ ಯುವಕನ ಪಕ್ಷವಹಿಸುವುದನ್ನು ನಾನು ನೋಡಿದೆನು. ೧೬ ಇವನ ಅಧಿಪತ್ಯಕ್ಕೆ ಒಳಪಟ್ಟ ಎಲ್ಲಾ ಜನರ ಸಂಖ್ಯೆಯು ಅಪಾರ. ಅವನ ಆಳ್ವಿಕೆಯ ನಂತರ ಇವನಲ್ಲಿ ಆನಂದಿಸುವುದಿಲ್ಲ. ಇದೂ ಸಹ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವಾಗಿದೆ.